ಬೆಂಗಳೂರಿನ ಅಂತರ್ಜಲ ಕುಸಿತ: ತಮಿಳುನಾಡಿನ ಈ IAS ಆಫೀಸರಿನಂತೆ ಮಾಡಿದ್ರೆ ಸಮಸ್ಯೆಗೇ ಮುಕ್ತಿ
ಈ ಬಾರಿ ಬಿಸಿ ತಾಪಮಾನ ದಾಖಲೆ ಮಟ್ವವನ್ನು ತಲುಪಿತ್ತು. ರಾಜ್ಯದ ಕೆಲವೆಡೆ ಅಲ್ಪ ಸ್ವಲ್ಪ ಮಳೆಯಾಗುತ್ತಿದ್ದರೂ, ಬಿಸಿಲ ಧಗೆಯಿಂದ ಮುಕ್ತಿ ಸಿಕ್ಕಿದೆ ಎನ್ನುವಂತಿಲ್ಲ. ಈ ನಡುವೆ ಬಹುತೇಕ ಜಿಲ್ಲೆಗಳಲ್ಲಿ ನೀರಿನ ಅಭಾವ ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಂತೂ ಅಂತರ್ಜಲ ಮಟ್ಟವು ತೀವ್ರಗತಿಯಲ್ಲಿ ಕುಸಿಯುತ್ತಿದೆ. ವರದಿಗಳ ಪ್ರಕಾರ ಹಿಂದೆ 100 ಅಡಿಗಳಲ್ಲಿದ್ದ ನೀರು ಇದೀಗ 1800 ಅಡಿಗಳಿಗೂ ಹೆಚ್ಚು ಆಳಕ್ಕೆ ಇಳಿದಿದೆ. ನಗರದ ಸುಮಾರು 65 ವಾರ್ಡ್ಗಳಲ್ಲಿ ಅಂತರ್ಜಲ ಸಮಸ್ಯೆ ಕಾಣಿಸಿಕೊಂಡಿದೆ. ಇದು ಆತಂಕಕ್ಕೆ ಕಾರಣವಾಗಿದೆ.
ಕುಸಿಯುತ್ತಿದೆ ಅಂತರ್ಜಲ:
ಹೀಗೆ ಅಂತರ್ಜಲದ ಮಟ್ಟ ಕುಸಿಯುತ್ತಿರುವುದಕ್ಕೆ ಕಾರಣಗಳು ಹಲವಾರು. ನಗರೀಕರಣ ಮತ್ತು ಕಾಂಕ್ರಿಟೀಕರಣದ ಭರಾಟೆಯಲ್ಲಿ ನೈಸರ್ಗಿಕ ಕೆರೆ, ಜಲಾನಯನ ಪ್ರದೇಶಗಳನ್ನೇ ಮುಚ್ಚಲಾಗುತ್ತಿದೆ. ಎಲ್ಲೆಡೆ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಜೊತೆಗೆ ಕೊಳವೆ ಬಾವಿಗಳ ಅತಿಯಾದ ಬಳಕೆ ಕೂಡಾ ಅಂತರ್ಜಲ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಅಂತರ್ಜಾಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕೊಳವೆಬಾವಿಗಳು ಸಂಪೂರ್ಣ ಒಣಗಿದ್ದು ನಿಷ್ಪ್ರಯೋಜಕವಾಗುತ್ತಿವೆ.

ಐಎಎಸ್ ಅಧಿಕಾರಿಯ ಹೊಸ ಕ್ರಾಂತಿ:
ಬೆಂಗಳೂರಿನಲ್ಲಿ ಅಂತರ್ಜಲ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವ ನಡುವೆಯೇ ತಮಿಳುನಾಡಿನ ಐಎಎಸ್ ಅಧಿಕಾರಿಯೊಬ್ಬರು, ಹೊಸ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಐಎಎಸ್ ಅಧಿಕಾರಿ ಪ್ರತಾಪ್ ಎಂ, ಬತ್ತಿ ಹೋಗಿರುವ 1,200 ಬೋರ್ವೆಲ್ಗಳಲ್ಲಿ ಮತ್ತೆ ನೀರು ಹರಿಯುವಂತೆ ಮಾಡಿದ್ದಾರೆ. ಕೊಳವೆಬಾವಿ ಬತ್ತಿ ಹೋಗಿದೆ ಎಂದು ಅವುಗಳನ್ನು ಮುಚ್ಚುವ ಬದಲು, ಮಳೆನೀರು ಕೊಯ್ಲು ರಚನೆಗಳಾಗಿ ಅವುಗಳನ್ನು ಪರಿವರ್ತಿಸಿದ್ದಾರೆ. ಇದರಿಂದಾಗಿ ಮಾನ್ಸೂನ್ ನೀರು ಭೂಗತ ಜಲಚರಗಳಿಗೆ ಮತ್ತೆ ಹರಿಯಲು ಅವಕಾಶ ಮಾಡಿಕೊಟ್ಟಂತಾಗಿದೆ. ಈ ಮೂಲಕ ತಮಿಳುನಾಡಿನಾದ್ಯಂತ ಒಣಗಿ ಹೋಗಿರುವ ಕೊಳವೆ ಬಾವಿಗಳನ್ನು ಪುನರುಜ್ಜೀವನಗೊಳಿಸುವಂತೆ ಮಾಡಿದ್ದಾರೆ.
ಒಂದೇ ಮಳೆಗಾಲದಲ್ಲಿ ಗೋಚರಿಸಿದ ಫಲಿತಾಂಶ:
ಪ್ರತಾಪ ಅವರು ಈ ರೀತಿ ಮಾಡಿದ ನಂತರ ಹಲವಾರು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವು 5 ರಿಂದ 10 ಅಡಿಗಳಷ್ಟು ಏರಿಕೆ ಕಂಡಿದೆ ಎಂದು ವರದಿಯಾಗಿದೆ. ಇದು ಕೊಳವೆ ಬಾವಿಗಳನ್ನು ಪುನರುಜ್ಜೀವನಗೊಳಿಸಲು ಸಹಾಯವಾಗಿದೆ.ಮಳೆನೀರು ಕೊಯ್ಲು ಮತ್ತು ಬೋರ್ವೆಲ್ಗಳನ್ನು ಮರುಪೂರಣ ಮಾಡುವ ಮೂಲಕ, ಅವುಗಳಲ್ಲಿ ನೀರು ಮತ್ತೆ ಹರಿಯುವಂತೆ ಮಾಡಲಾಗಿದೆ.
ಬೆಂಗಳೂರಿನ ಸಮಸ್ಯೆಗೂ ಸಿಗಬಹುದು ಪರಿಹಾರ:
ತಮಿಳುನಾಡಿನಲ್ಲಿ ಪ್ರತಾಪ್ ಅವರು ಅನುಸರಿಸಿದ ಇದೇ ಮಾದರಿಯನ್ನು ಬೆಂಗಳೂರಿನಲ್ಲಿಯೂ ಅನುಸರಿಸುವುದರಿಂದ ಅಂತರ್ಜಲ ಮಟ್ಟ ಕುಸಿತದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹೇಗೆ ಎಂದು ನೋಡುವುದದರೆ :
1. ಬತ್ತಿ ಹೋದ ಕೊಳವೆಬಾವಿಗಳನ್ನು ಮುಚ್ಚಿಬಿಡುವ ಬದಲು, ಅವುಗಳನ್ನು ಮಳೆನೀರು ಕೊಯ್ಲು ವ್ಯವಸ್ಥೆಗೆ ಸಂಪರ್ಕಿಸಬೇಕು. ಮಳೆ ಬಿದ್ದಾಗ, ನೀರು ಸಾಮಾನ್ಯವಾಗಿ ಚರಂಡಿ, ಮೋರಿಗಳನ್ನು ಸೇರಿ ಮಾಯವಾಗಿ ಬಿಡುತ್ತದೆ. ಇದರ ಬದಲು ಫಿಲ್ಟರ್ಗಳ ಮೂಲಕ ನೀರನ್ನು ಶುದ್ಧೀಕರಿಸಿ ನೇರವಾಗಿ ಕೊಳವೆಬಾವಿಯೊಳಗೆ ಹರಿಯುವಂತೆ ಮಾಡಬಹುದು. ಹೀಗೆ ಮಾಡುವುದರಿಂದ ಅಂತರ್ಜಲ ಮಟ್ಟವು ಕೆಲವೇ ತಿಂಗಳುಗಳಲ್ಲಿ ಗಣನೀಯವಾಗಿ ಹೆಚ್ಚುತ್ತದೆ.
2. ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಮತ್ತು ಮನೆಗಳಲ್ಲಿನ ನಿಷ್ಕ್ರಿಯ ಬೋರ್ವೆಲ್ಗಳನ್ನು ಈ ರೀತಿ ಮರುಬಳಕೆ ಮಾಡಿಕೊಳ್ಳಬಹುದು.
3. ಇದಕ್ಕಾಗಿ ಹೊಸದಾಗಿ ಇಂಗು ಗುಂಡಿಗಳನ್ನು ನಿರ್ಮಿಸುವ ಅಗತ್ಯವಿರುವುದಿಲ್ಲ. ಹೊಸ ಯೋಜನೆ, ದುಬಾರಿ ಸಂಪನ್ಮೂಲಗಳ ಬದಲು ಅಸ್ತಿತ್ವದಲ್ಲಿರುವ, ನಿಷ್ಕ್ರಿಯ ಮೂಲಸೌಕರ್ಯವನ್ನು ಮತ್ತೆ ಬಳಸಿಕೊಳ್ಳುವಂತೆ ಮಾಡಬಹುದು.ಇದರಿಂದ ನಿರ್ವಹಣಾ ವೆಚ್ಚವೂ ಬಹಳ ಕಡಿಮೆಯಾಗುತ್ತದೆ.
4. ಇನ್ನು ಈ ಯೋಜನೆ ಫಲ ನೀಡಲು ಹೆಚ್ಚು ಕಾಯಬೇಕು ಎನ್ನುವ ಅವಶ್ಯಕತೆಯೂ ಇಲ್ಲ. ಕೇವಲ ಒಂದು ಮಳೆಗಾಲದ ನಂತರವೇ, ಹಲವಾರು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟಗಳು 5 ರಿಂದ 10 ಅಡಿಗಳಷ್ಟು ಏರಿಕೆ ಕಾಣಬಹುದು.
ನಮ್ಮ ಸುತ್ತಮುತ್ತ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಸರ್ಕಾರವೇ ಕ್ರಮ ಕೈಗೊಳ್ಳಬೇಕು ಅಥವಾ ಯೋಜನೆ ರೂಪಿಸಬೇಕು ಎಂದು ಯೋಚಿಸುವವರೇ ಹೆಚ್ಚು. ಆದರೆ ವಾಸ್ತವವಾಗಿ ನೋಡಿದರೆ ಎಷ್ಟೋ ಬಾರಿ ನಿಜವಾದ ಬದಲಾವಣೆ ತರಲು ಬೃಹತ್ ಯೋಜನೆಗಳಿಗಾಗಿ ಕಾಯಬೇಕಿಲ್ಲ. ಬುದ್ಧಿವಂತ ಚಿಂತನೆ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications