BWSSB: ಜಲ ನಿರ್ವಹಣೆ, ಆಡಳಿತದಲ್ಲಿ AI ತಂತ್ರಜ್ಞಾನಕ್ಕೆ ಕರ್ನಾಟಕ ಸರ್ಕಾರ ಒತ್ತು: ಶಾಲಿನಿ ರಜನೀಶ್
ಬೆಂಗಳೂರು: ಹವಾಮಾನ ಬದಲಾವಣೆ, ನಗರೀಕರಣ, ಅಂತರ್ಜಲ ಕುಸಿತ ಹಾಗೂ ಮೂಲಸೌಕರ್ಯಗಳ ಮೇಲಿನ ಒತ್ತಡದಂತಹ ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ತಂತ್ರಜ್ಞಾನಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಎಐ ಆಧಾರಿತ ನಗರ ಜಲ ಆಡಳಿತದಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕವನ್ನು ಎಐನ ಸಕ್ರಿಯ ರಾಜ್ಯವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ತಿಳಿಸಿದರು.
ಎಲೆಟ್ಸ್ ಮತ್ತು ಕೆಪಿಎಂಜಿ ಜಂಟಿ ಸಹಕಾರದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ (BWSSB) ಮಂಡಳಿ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಹಮ್ಮಿಕೊಂಡಿದ್ದ 'ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026' ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ ಮತ್ತು ಬೆಳಗಾವಿಯಂತಹ ನಗರಗಳ ಮೇಲೆ ನೀರಿನ ಒತ್ತಡ ಹೆಚ್ಚಾಗುತ್ತಿದೆ. ದಕ್ಷ, ಪಾರದರ್ಶಕ ಮತ್ತು ಜವಾಬ್ದಾರಿಯುತ ಸಾರ್ವಜನಿಕ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನ ಆಧಾರಿತ ಇಂಟಲಿಜೆಂಟ್ ಆಡಳಿತ ವ್ಯವಸ್ಥೆಗಳು ಅತ್ಯಗತ್ಯವಾಗಿವೆ ಎಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ತಿಳಿಸಿದರು.
"ನಗರದ ನೀರು ಸರಬರಾಜು ಮಂಡಳಿಗಳಿಗೆ ಎಐ ಮತ್ತು ಡಿಜಿಟಲ್ ಇಂಟೆಲಿಜೆನ್ಸ್ ಇನ್ನು ಮುಂದೆ ಕೇವಲ ಐಚ್ಛಿಕ ಸಾಧನಗಳಾಗಿ ಉಳಿದಿಲ್ಲ. ನೈಜ-ಸಮಯದ ಮೇಲ್ವಿಚಾರಣೆ, ಪ್ರಿಡಿಕ್ಟಿವ್ ಅನಾಲಿಟಿಕ್ಸ್ , ನೀರಿನ ಬೇಡಿಕೆಯ ಮುನ್ಸೂಚನೆ ಹಾಗೂ ದತ್ತಾಂಶ ಆಧಾರಿತ ಆಡಳಿತವು ಭವಿಷ್ಯದ ಜಲ ನಿರ್ವಹಣೆಯನ್ನು ನಿರ್ಧರಿಸಲಿವೆ. ಎಐ ಕೇವಲ ತಂತ್ರಜ್ಞಾನವಾಗಿ ಉಳಿಯದೇ ಜನರ ಮೇಲೆ ಆಡಳಿತ, ಜವಾಬ್ದಾರಿ, ಸೇವೆ, ಪಾರದರ್ಶಕತೆ, ಜವಾಬ್ದಾರಿ ರೂಪದಲ್ಲಿ ಪ್ರಭಾವ ಬೀರಲಿದೆ ಎಂದು ಹೇಳಿದರು.
ಕರ್ನಾಟಕವು ಈಗಾಗಲೇ ಎಐ ಉತ್ಕೃಷ್ಟತಾ ಕೇಂದ್ರಗಳನ್ನು (AI Centres of Excellence) ಸ್ಥಾಪಿಸಿದೆ ಹಾಗೂ ಡಿಜಿಟಲ್ ಸಂಗ್ರಹಣೆ, ಡೇಟಾ ಹಂಚಿಕೆ ಮತ್ತು ಕಾರ್ಯಕ್ಷಮತೆ-ಆಧಾರಿತ ಆಡಳಿತ ವ್ಯವಸ್ಥೆಗಳನ್ನು ಬೆಂಬಲಿಸುವ ನೀತಿ ಚೌಕಟ್ಟುಗಳನ್ನು ಪರಿಚಯಿಸಿದೆ. ಡಿಜಿಟಲ್ ರೂಪಾಂತರದ ಕೇಂದ್ರಬಿಂದುವಾಗಿ ಹೊಣೆಗಾರಿಕೆಗೂ ಆದ್ಯತೆ ನೀಡಬೇಕು ಅವರು ಕರೆ ನೀಡಿದರು. ದತ್ತಾಂಶವು ಅಂತಿಮವಾಗಿ ಅಳೆಯಬಹುದಾದ ಆಡಳಿತಾತ್ಮಕ ಫಲಿತಾಂಶಗಳಿಗೆ ಕಾರಣವಾಗಬೇಕು. ತಂತ್ರಜ್ಞಾನವು ಸಾರ್ವಜನಿಕರ ವಿಶ್ವಾಸ ಮತ್ತು ಸಾಂಸ್ಥಿಕ ದಕ್ಷತೆ ಬಲಪಡಿಸಬೇಕು ಎಂದರು.
ಎಐ, ತಂತ್ರಜ್ಞಾನ ಜಲಮಂಡಳಿಗೆ ಅಗತ್ಯ
ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಬೆಂಗಳೂರಿನ ವಿಸ್ತಾರ ಮತ್ತು ಸಂಕೀರ್ಣತೆಯು ಸಾಂಪ್ರದಾಯಿಕ ನಿರ್ವಹಣಾ ಕಾರ್ಯಾಚರಣೆಗಳಿಂದ ಮುನ್ಸೂಚಕ ಮತ್ತು ಬುದ್ಧಿವಂತ ನಿರ್ವಹಣಾ ವ್ಯವಸ್ಥೆಗಳತ್ತ ಬದಲಾಗುತ್ತಿದೆ. ಬೆಂಗಳೂರು ಜಲಮಂಡಳಿಯು ಇಂದು 14 ದಶಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಸೇವೆ ಸಲ್ಲಿಸುತ್ತಿದೆ. ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾದ ಬೆಂಗಳೂರಿನ ನೀರಿನ ನಿರ್ವಹಣೆಗೆ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಆಧಾರಿತ ಆಡಳಿತದ ಅಗತ್ಯವಿದೆ. ಈಗಾಗಲೇ ಎಐ ಬಳಕೆ ಕುರಿತು ವಿವರಿಸಿದರು.
ತಂತ್ರಜ್ಞಾನದಿಂದ ಭಾರೀ ಪ್ರಮಾಣದಲ್ಲಿ ನೀರು ಉಳಿತಾಯ
ಡಿಜಿಟಲ್ ರೂಪಾಂತರದ ಭಾಗವಾಗಿ ಜಲಮಂಡಳಿಯು ಈಗಾಗಲೇ ಏಷ್ಯಾದ ಅತಿದೊಡ್ಡ ನಗರ-ಮಟ್ಟದ ಸ್ಕಾಡಾ (SCADA) ವ್ಯವಸ್ಥೆ, ಜಿಐಎಸ್ (GIS) ಆಧಾರಿತ ಮ್ಯಾಪಿಂಗ್, ಐಒಟಿ (IoT) ಮೇಲ್ವಿಚಾರಣೆ, ಸ್ವಯಂಚಾಲಿತ ಸೋರಿಕೆ ಪತ್ತೆ ವ್ಯವಸ್ಥೆಗಳು ಮತ್ತು ಸ್ಮಾರ್ಟ್ ಮೀಟರಿಂಗ್ ಪ್ರಾಯೋಗಿಕ ಯೋಜನೆ ಅಳವಡಿಸಿಕೊಂಡಿದೆ. ಜಲಮಂಡಳಿಯು ಇಂತಹ ತಂತ್ರಜ್ಞಾನಗಳ ನೆರವಿನಿಂದ ನಾನ್ ರೆವಿನ್ಯೂ ವಾಟರ್ ಪ್ರಮಾಣವನ್ನು ಶೇ. 50 ರಿಂದ ಶೇ. 26.5 ಕ್ಕೆ ಇಳಿಸಿದೆ, ಇದರ ಪರಿಣಾಮವಾಗಿ ಪ್ರತಿದಿನ ಸುಮಾರು 200 ದಶಲಕ್ಷ ಲೀಟರ್ (MLD) ನೀರು ಉಳಿತಾಯವಾಗುತ್ತಿದೆ ಎಂದು ತಂತ್ರಜ್ಞಾನ ಬಳಕೆಯಿಂದಾದ ಉಪಯೋಗದ ಮಾಹಿತಿ ನೀಡಿದರು.
ಜಲಮಂಡಳಿಯ ಎಐ-ಚಾಲಿತ ಎನರ್ಜಿ ಆಪ್ಟಿಮೈಸೆಷನ್ ಪಂಪ್ ಗಳಿಂದ ವಾರ್ಷಿಕವಾಗಿ ಪೋಲಾಗುತ್ತಿದ್ದ ಸುಮಾರು 42 ಕೋಟಿ ರೂ. ಮೌಲ್ಯದ ವಿದ್ಯುತ್ ವೆಚ್ಚವನ್ನು ಉಳಿತಾಯ ಮಾಡಲು ನೆರವಾಗಿವೆ. ಎಐ ಎಂದರೆ ಕೇವಲ ಡ್ಯಾಶ್ಬೋರ್ಡ್ಗಳಲ್ಲ. ಇದು ಮುನ್ಸೂಚಕ ಆಡಳಿತ, ಹೊಣೆಗಾರಿಕೆ ಮತ್ತು ಅಳೆಯಬಹುದಾದ ಫಲಿತಾಂಶಗಳ ಬಗ್ಗೆಯಾಗಿದೆ. ನಾವು ರಿಯಾಕ್ಟಿವ್ ಕಾರ್ಯಾಚರಣೆಗಳಿಂದ ಇಂಟಲಿಜೆನ್ಟ್ ಯುಟಿಲಿಟಿ ನಿರ್ವಹಣೆಯತ್ತ ಸಾಗುತ್ತಿದ್ದೇವೆ ಎಂದು ಹೇಳಿದರು.
ಜಲಮಂಡಳಿಯು ಮುಂದಿನ ಐದು ವರ್ಷಗಳಲ್ಲಿ ನಗರದಾದ್ಯಂತ ಸ್ಮಾರ್ಟ್ ಮೀಟರಿಂಗ್ ಅಳವಡಿಸುವ, ಆದಾಯ ತರದ ನೀರನ್ನು (NRW) ಮತ್ತಷ್ಟು ಕಡಿಮೆ ಮಾಡುವ ಮತ್ತು ಇಂಟಲಿಜೆಂಟ್ ನಗರ ಯುಟಿಲಿಟಿಗಳಿಗಾಗಿ ರಾಷ್ಟ್ರೀಯ ಮಾದರಿಯಾಗಿ ಹೊರಹೊಮ್ಮುವ ಗುರಿ ಹೊಂದಿದೆ ಎಂದರು.














Click it and Unblock the Notifications