DK Shivakumar: ಕನಕಪುರ ಬಂಡೆ ಖ್ಯಾತಿಯ ಡಿಕೆಶಿ ರಾಜಕೀಯ ಹಾದಿ ಹೇಗಿತ್ತು, ಬಿಜೆಪಿ ದಾಳ ಎದುರಿಸಿದ್ದು ಹೇಗೆ ?
DK Shivakumar: ಡಿ.ಕೆ ಶಿವಕುಮಾರ್ ಕರ್ನಾಟಕ ರಾಜಕೀಯದಲ್ಲಿ ಪ್ರಮುಖ ಒಕ್ಕಲಿಗ ನಾಯಕ, ಕನಕಪುರ ಬಂಡೆ ಎಂದೇ ಖ್ಯಾತಿ ಗಳಿಸಿದ್ದಾರೆ. ಡಿ.ಕೆ ಶಿವಕುಮಾರ್ ರಾಜಕೀಯ ಹಾದಿಯು ಭಿನ್ನವಾಗಿದೆ. ಇದೀಗ ಕರ್ನಾಟಕ ಕಾಂಗ್ರೆಸ್ನ ಪ್ರಭಾವಿ ರಾಜಕಾರಣಿಯಾಗಿರುವ ಡಿ.ಕೆ ಶಿವಕುಮಾರ್ (64) ಅವರು ಇದೀಗ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಬಹು ದಿನಗಳ ಕನಸು ನನಸಾಗುವ ಸಮಯ ಸಮೀಪಿಸುತ್ತಿದೆ ಎಂದೇ ಹೇಳಲಾಗುತ್ತಿದೆ. ಡಿ.ಕೆ ಶಿವಕುಮಾರ್ ಅವರು ಕಾಲೇಜು ದಿನಗಳಲ್ಲೇ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ನಾನು ಬೆಂಗಳೂರಿಗೆ ಬಂದಿದ್ದೇ ರಾಜಕೀಯ ಮಾಡುವುದಕ್ಕೆ ಎಂದು ಡಿಕೆಶಿ ಹಲವು ಬಾರಿ ಹೇಳಿರುವುದು ಇದೆ. ಇನ್ನೇನು ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದಕ್ಕೆ ಒಂದೇ ಹೆಜ್ಜೆ ಬಾಕಿ ಇದೆ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಡಿ.ಕೆ ಶಿವಕುಮಾರ್ ರಾಜಕೀಯ ಪ್ರವೇಶ ಮಾಡಿದ್ದು ಹೇಗೆ, ಬಿಜೆಪಿಯ ಸವಾಲು - ಕಾಂಗ್ರೆಸ್ನಲ್ಲೇ ನಡೆದ ತಂತ್ರಗಳನ್ನು ಮಣಿಸಿದ್ದು ಹೇಗೆ ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಡಿಕೆಶಿ ಅವರ ಪೂರ್ಣ ಹೆಸರು ದೊಡ್ಡ ಆಲದಹಳ್ಳಿ ಕೆಂಪೇಗೌಡ ಶಿವಕುಮಾರ್. ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ದೊಡ್ಡ ಆಲದಹಳ್ಳಿ ದೊಡ್ಡ ಜಮೀನ್ದಾರರ ಕುಟುಂಬದಲ್ಲಿ ಇವರು ಜನಿಸಿದರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಶಿವಕುಮಾರ್ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬಂದಿದ್ದು ಬೆಂಗಳೂರಿಗೆ. ಇದೇ ಅವರ ರಾಜಕೀಯ ಜೀವನದ ಬಹುದೊಡ್ಡ ತಿರುವಿಗೆ ಕಾರಣವಾಯಿತು.

ಕಾಲೇಜು ದಿನಗಳಲ್ಲೇ ರಾಜಕೀಯ ಪ್ರವೇಶ
ಡಿ.ಕೆ ಶಿವಕುಮಾರ್ ಅವರು ಕಾಲೇಜು ದಿನಗಳಲ್ಲೇ ರಾಜಕೀಯ ಪ್ರವೇಶ ಮಾಡಿದ್ದರು. ಎನ್ಎಸ್ಯುಐ ಮೂಲಕ ಅವರು ರಾಜಕೀಯಕ್ಕೆ ಬಂದರು. ಬೆಂಗಳೂರಿನ ಆರ್. ಸಿ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಅವರು, 1983ರಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದರು. ಮುಂದೆ ಬೆಂಗಳೂರು ಜಿಲ್ಲಾ ಪರಿಷತ್ನಲ್ಲಿ ಕೆಲಸ ಮಾಡಿದರು. ಡಿ.ಕೆ ಶಿವಕುಮಾರ್ ಅವರು ಮೊಟ್ಟ ಮೊದಲ ಬಾರಿ ಚುನಾವಣೆ ಎದುರಿಸುವ ಸಮಯದಲ್ಲಿ ಅವರ ವಯಸ್ಸು ಕೇವಲ 25 ವರ್ಷ ಮಾತ್ರ. ಸಾತನೂರಿನಿಂದ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಡಿ.ಕೆ ಶಿವಕುಮಾರ್ ಪ್ರಾರಂಭದ ಹಂತದಲ್ಲೇ ದೊಡ್ಡ ಸವಾಲುಗಳನ್ನು ಎದುರಿಸಿದ್ದರು. ಮೊದಲ ಸ್ಪರ್ಧೆಯಲ್ಲಿ ಅವರು ಭಾರತದ ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡ ಅವರ ವಿರುದ್ಧ ಸ್ಪರ್ಧೆ ಮಾಡಿದ್ದರು. ಈ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್ ಅವರು ಸೋತಿದ್ದರು.
ಸಾತನೂರಿನಿಂದ ಪ್ರಾರಂಭವಾಯ್ತು ರಾಜಕೀಯ ಜೀವನ
ಡಿ.ಕೆ ಶಿವಕುಮಾರ್ ತಮ್ಮ ರಾಜಕೀಯ ಜೀವನವನ್ನು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದಲ್ಲೇ ಕಳೆದಿದ್ದಾರೆ. ನಾನು ಕಾಂಗ್ರೆಸ್ಮ್ಯಾನ್ ಎನ್ನುವುದು ಅವರ ಪ್ರಸಿದ್ಧ ಡೈಲಾಗ್. 1989ರಲ್ಲಿ ತಮ್ಮ 30ನೇ ವಯಸ್ಸಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾತನೂರಿನಿಂದ ಡಿ.ಕೆ ಶಿವಕುಮಾರ್ ಸ್ಪರ್ಧಿಸಿದ್ದರು. ಒಂದೇ ವರ್ಷದ ಅವಧಿಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸಚಿವ ಸಂಪುಟದಲ್ಲಿ ಬಂಧೀಖಾನೆ ಸಚಿವರಾಗಿ ಡಿಕೆಶಿ ಕೆಲಸ ಮಾಡಿದ್ದರು. ಕ್ಷೇತ್ರ ಪುನರ್ ವಿಂಗಡಣೆಯಾಗಿ ಕನಕಪುರ ಕ್ಷೇತ್ರದಿಂದ ಸತತವಾಗಿ ಡಿ.ಕೆ ಶಿವಕುಮಾರ್ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. 1999ರಲ್ಲಿ ಅಂದಿನ ಎಸ್. ಎಂ. ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಸಹಕಾರ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಕಾರ್ಯನಿರ್ವಹಿಸಿದ್ದರು.
ದೇವೇಗೌಡರಿಂದ ಪ್ರಬಲ ವಿರೋಧ
ಇನ್ನು ರಾಜಕೀಯವಾಗಿ ಡಿ.ಕೆ ಶಿವಕುಮಾರ್ ಅವರು ಹಲವು ಸವಾಲುಗಳನ್ನು ಎದುರಿಸಿದ್ದಾರೆ. 2004ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಧರ್ಮಸಿಂಗ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರ ಸೇರ್ಪಡೆಗೆ ಎಚ್.ಡಿ ದೇವೇಗೌಡ ಅವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ಡಿ.ಕೆ ಶಿವಕುಮಾರ್ ಅವರಿಗೆ ಆಗ ಸಚಿವ ಸ್ಥಾನ ತಪ್ಪಿತ್ತು. ಸುದೀರ್ಘ 10 ವರ್ಷಗಳ ಕಾಲ ಅಧಿಕಾರದಿಂದ ಡಿ.ಕೆ ಶಿವಕುಮಾರ್ ಅವರು ದೂರ ಉಳಿದರು. ಆರ್.ವಿ. ದೇಶಪಾಂಡೆ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಡಿಕೆಶಿ ಕಾರ್ಯಾಧ್ಯಕ್ಷರಾಗಿದ್ದರು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಆರಂಭದಲ್ಲಿ ಸಂಪುಟ ಸೇರ್ಪಡೆಗೆ ಅವಕಾಶ ಸಿಕ್ಕಿರಲಿಲ್ಲ. 6 ತಿಂಗಳ ನಂತರ ಹೈಕಮಾಂಡ್ ಆದೇಶದ ಮೇಲೆ ಡಿ.ಕೆ ಶಿವಕುಮಾರ್ ಸಚಿವರಾಗಿದ್ದರು.

ಸುದೀರ್ಘ ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿರುವ ಖ್ಯಾತಿಯೂ ಡಿ.ಕೆ ಶಿವಕುಮಾರ್ ಅವರಿಗೆ ಇದೆ. 7 ಬಾರಿ ಶಾಸಕರಿಗೆ ಆಯ್ಕೆಯಾಗಿರುವ ಡಿಕೆಶಿ ಕನಕಪುರದ ಬಂಡೆ ಎಂದೇ ರಾಜಕೀಯದಲ್ಲಿ ಹೆಸರುವಾಸಿ.
ಜೈಲುವಾಸ ಅನುಭವಿಸಿದ್ದ ಡಿಕೆಶಿ
ಕರ್ನಾಟಕ ರಾಜಕೀಯದಲ್ಲಿ ಜೈಲು ಸೇರಿದ ಪ್ರಮುಖ ರಾಜಕಾರಣಿಗಳಲ್ಲಿ ಡಿ.ಕೆ ಶಿವಕುಮಾರ್ ಸಹ ಒಬ್ಬರು. ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಅವರು ಜೈಲಿವಾಸವೂ ಅನುಭವಿಸಿದ್ದರು.
ಕಾಂಗ್ರೆಸ್ ಹೈಕಮಾಂಡ್ಗೆ ಅಚ್ಚುಮೆಚ್ಚು
ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್ಗೆ ಅಚ್ಚುಮುಚ್ಚಿನ ನಾಯಕರಾಗಿದ್ದಾರೆ. ದೇಶದ ಯಾವುದೇ ರಾಜ್ಯದ ಕಾಂಗ್ರೆಸ್ನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಯಾದರೂ, ಡಿ.ಕೆ ಶಿವಕುಮಾರ್ ಅವರು ಅಲ್ಲಿರುತ್ತಾರೆ. ಈಚೆಗೆ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆ - ಕೇರಳಂ ವಿಧಾನಸಭೆ ಚುನಾವಣೆಯಲ್ಲೂ ಡಿ.ಕೆ ಶಿವಕುಮಾರ್ ಅವರು ಪ್ರಮುಖ ಪಾತ್ರ ವಹಿಸಿದ್ದರು.













Click it and Unblock the Notifications