ಮಕ್ಕಿ ಶಾಸ್ತಾವು ಹಬ್ಬದ ಆಚರಣೆಯ ವೈವಿಧ್ಯತೆ ಹೇಗಿರುತ್ತೆ ಗೊತ್ತಾ?
ಮಡಿಕೇರಿ, ಮೇ 02: ಕೊಡಗಿನಲ್ಲಿ ನಡೆಯುವ ಹಬ್ಬದ ಆಚರಣೆಗಳು ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಅದರಲ್ಲೂ ಜಿಲ್ಲೆಯಾದ್ಯಂತ ನೆಲೆಗೊಂಡಿರುವ ವಿವಿಧ ದೇಗುಲಗಳಲ್ಲಿ ನಡೆಯುವ ಹಬ್ಬಗಳು ಕೂಡ ವೈಶಿಷ್ಟ್ಯಪೂರ್ಣವಾಗಿರುತ್ತದೆ. ಇಲ್ಲಿರುವ ದೇಗುಲಗಳು ಕೂಡ ತನ್ನದೇ ಆದ ದೈವಶಕ್ತಿಯ ಜೊತೆಗೆ ಆಚರಣೆಯಲ್ಲಿಯೂ ವೈವಿಧ್ಯತೆಯನ್ನು ಹೊಂದಿರುತ್ತವೆ. ಹೀಗಾಗಿ ಎಲ್ಲೆಡೆ ಓಡಾಡಿ ನೋಡಿದರೂ ದೇಗುಲಗಳು ಮತ್ತು ಅಲ್ಲಿನ ಆಚರಣೆಗಳು ಒಂದರಂತೆ ಮತ್ತೊಂದು ಇರದೆ ಭಿನ್ನವಾಗಿರುವುದು ಕಾಣಿಸುತ್ತದೆ. ಇಂತಹ ದೇಗುಲಗಳ ಪೈಕಿ ಮಕ್ಕಿ ಶಾಸ್ತಾವು ದೇಗುಲವೂ ಒಂದಾಗಿದೆ.
ಈ ದೇಗುಲದ ಬಳಿಗೆ ಹೋದವರಿಗೆ ಅಚ್ಚರಿಯಾಗುತ್ತದೆ. ಸಾಮಾನ್ಯವಾಗಿ ದೇಗುಲವೆಂದರೆ ಗುಡಿ, ಗೋಪುರ ಎಲ್ಲವೂ ಇರುತ್ತದೆ ಆದರೆ ಮಕ್ಕಿ ಶಾಸ್ತಾವು ದೇಗುಲ ವಿಭಿನ್ನವಾಗಿದೆ. ಇಲ್ಲಿ ಯಾವುದೇ ಗುಡಿಗೋಪುರವಿಲ್ಲದೆ ನಿಸರ್ಗ ನಿರ್ಮಿತ ದೇಗುಲವಾಗಿದೆ. ಹೀಗಾಗಿಯೇ ಇದು ಭಿನ್ನವಾಗಿ ಗೋಚರಿಸುತ್ತದೆ. ಈ ದೇಗುಲದಲ್ಲೀಗ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಸುತ್ತಮುತ್ತಲಿನ ಊರಿನವರಲ್ಲದೆ ವಿವಿಧ ಕಡೆಗಳಿಂದಲೂ ಭಕ್ತರು ಆಗಮಿಸಿ ದೇವರ ಪೂಜಾ ಕೈಂಕರ್ಯಗಳಲ್ಲಿ ತೊಡಗಿಸಿ ಕೊಳ್ಳುತ್ತಿದ್ದಾರೆ.

ಮೂರು ದಿನಗಳ ಕಾಲ ನಡೆಯುವ ಹಬ್ಬಾಚರಣೆಯಲ್ಲಿ ಹಲವು ರೀತಿಯ ಧಾರ್ಮಿಕ ಕೈಂಕರ್ಯಗಳು ನಡೆಯುತ್ತವೆ. ಈ ದೇಗುಲದಲ್ಲಿ ದಿನ ನಿತ್ಯ ಪೂಜಾ ಕೈಂಕರ್ಯಗಳು ನಡೆಯುವುದರೊಂದಿಗೆ ವರ್ಷದಲ್ಲಿ ಡಿಸೆಂಬರ್ ಮತ್ತು ಮೇ ತಿಂಗಳಲ್ಲಿ ಎರಡು ಬಾರಿ ಹಬ್ಬ ನಡೆಯುತ್ತದೆ. ಮೇ ತಿಂಗಳಲ್ಲಿ ನಡೆಯುವ ಹಬ್ಬವನ್ನು ಡೊಡ್ಡ ಹಬ್ಬವೆಂದೇ ಕರೆಯಲಾಗುತ್ತದೆ. ಈ ದೊಡ್ಡ ಹಬ್ಬದ ವಿಶೇಷತೆಗಳು ಏನೆಂದರೆ, ಮೇ 2ರಂದು ಹಬ್ಬ ಆರಂಭವಾಗಲಿದ್ದು, ರಾತ್ರಿ 9ಗಂಟೆಗೆ ದೇವರ ಕೊಟ್ಟಿ ಹಾಡುವ ಕಾರ್ಯಕ್ರಮ ಶ್ರೀ ದೇವರ ಕೊಟ್ಟಿ ಹಾಡುವುದು ನಡೆದರೆ ಮೇ 3ರಂದು ಬೆಳಿಗ್ಗೆ 11.30ಕ್ಕೆ ಎತ್ತು ಪೋರಾಟ ನಡೆಯಲಿದ್ದು ರಾತ್ರಿ 9.30ರಿಂದ ಶಾಸ್ತಾವು ದೇವರ ಅಂದಿ ಬೊಳಕು(ದೀಪಾರಾಧನೆ) ನಡೆಯಲಿದೆ.
ಹಬ್ಬದ ಮುಕ್ತಾಯ ಮೇ 4ರಂದು ಆಗಲಿದ್ದು ಅಂದು ಬೆಳಿಗ್ಗೆ 9.30ಗಂಟೆಗೆ ಶ್ರೀ ಕಲ್ಯಾಟ ಅಜ್ಜಪ್ಪ ದೇವರ ಕೋಲ ಮತ್ತು 12.30ಕ್ಕೆ ಮಹಾ ಅನ್ನದಾನ ಮಧ್ಯಾಹ್ನ 1ಗಂಟೆಗೆ ಶ್ರೀ ವಿಷ್ಣು ಮೂರ್ತಿ ಕೋಲ ನಡೆಯಲಿದೆ. ಅಲ್ಲಿಗೆ ಈ ವರ್ಷದ ದೊಡ್ಡ ಹಬ್ಬಕ್ಕೆ ತೆರೆ ಬೀಳಲಿದೆ. ಇನ್ನು ಈ ದೇವಾಲಯದ ಹೇಳಬೇಕೆಂದರೆ ಇದು ದಿಬ್ಬದ ಮೇಲೆ ನಿರ್ಮಾಣವಾಗಿದ್ದು ರಸ್ತೆಯಿಂದಲೇ ಸಿಗುವ ಮೆಟ್ಟಿಲುಗಳನ್ನೇರಿ ಮೇಲ್ಭಾಗಕ್ಕೆ ಬಂದರೆ ಸಮತಟ್ಟಾದ ಜಾಗದಲ್ಲಿ ಸುಮಾರು ಐದು ಅಡಿ ಎತ್ತರದ ವೃತ್ತಾಕಾರದ ಕಟ್ಟೆಯೊಂದು ಎದುರಾಗುತ್ತದೆ.
ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಾಸ್ತಾವು ದೇವರ ಮೂರ್ತಿಯಿದೆ. ಅಲ್ಲದೆ ದೇವರಿಗೆ ಆಶ್ರಯವಾಗಿ ಒಂದು ಹಲಸಿನ ಮರವಿದ್ದು ಸುತ್ತಲೂ ಹರಕೆಯಾಗಿ ಅರ್ಪಿಸಿದ ಮಣ್ಣಿನ ನಾಯಿಗಳಿವೆ. ಈ ದೇವಾಲಯದ ಹಲಸಿನ ಮರದಲ್ಲೊಂದು ಕಬ್ಬಿಣದ ಸರಪಳಿ ಸಿಕ್ಕಿಹಾಕಿಕೊಂಡಿರುವುದು ಕಾಣಸಿಗುತ್ತದೆ. ಇದರ ಬಗ್ಗೆ ಪ್ರಚಲಿತದಲ್ಲೊಂದು ಕಥೆಯಿದೆ.

ಆ ಕಥೆಯನ್ನು ಆಧರಿಸಿ ಹೇಳುವುದಾದರೆ, ಹಿಂದಿನ ಕಾಲದಲ್ಲಿ ಹಬ್ಬದ ಸಂದರ್ಭ ದೇವರು ಆವಾಹನೆಗೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ಯಾವುದೋ ಕಾರಣಕ್ಕೆ ಬಂಧಿಸಲಾಗಿತ್ತಂತೆ. ಆದರೆ ಹಬ್ಬದ ಸಂದರ್ಭ ಮಂತ್ರಘೋಷ ಮೇಳೈಸುತ್ತಿದ್ದಂತೆಯೇ ಆ ವ್ಯಕ್ತಿಯ ಮೇಲೆ ದೇವರು ಅವಾಹನೆಯಾಗಿ ಬಂಧನದಿಂದ ತಪ್ಪಿಸಿಕೊಂಡು ಬಂದು ದೇವರ ಸನ್ನಿಧಿಯಲ್ಲಿ ಕೈ ಕೊಡವಿದಾಗ ಕೈಯ್ಯಲ್ಲಿದ್ದ ಸರಪಳಿ ತುಂಡಾಗಿ ಹಲಸಿನ ಮರದಲ್ಲಿ ಸಿಲುಕಿತು ಎಂದು ಹೇಳಲಾಗುತ್ತಿದೆ.
ಇನ್ನು ಮಕ್ಕಿ ಶಾಸ್ತಾವು ದೇವಾಲಯವು ಕಾನನ ಹಾಗೂ ಕಾಫಿ ತೋಟಗಳ ನಡುವೆ ನೆಲೆನಿಂತಿದ್ದು, ನಿಶದ್ಧ ತಾಣವಾಗಿ ಗಮನಸೆಳೆಯುತ್ತದೆ. ಇಲ್ಲಿರುವ ಪುಟ್ಟ ಕೊಳವು ಕೂಡ ಹಲವು ವೈಶಿಷ್ಟ್ಯತೆಯನ್ನು ಹೊಂದಿದೆ. ಹಬ್ಬದ ವೇಳೆ ನಡೆಯುವ ಎತ್ತು ಪೋರಾಟ ಗಮನಾರ್ಹವಾಗಿದೆ. ಇದು ಹೇಗೆ ನಡೆಯುತ್ತದೆ ಎಂದರೆ ಹಬ್ಬದ ದಿನ ಮಧ್ಯಾಹ್ನ ಗ್ರಾಮಸ್ಥರು ಎತ್ತುಗಳನ್ನು ಸಿಂಗರಿಸಿ ಅವುಗಳ ಬೆನ್ನ ಮೇಲೆ ಶ್ವೇತವಸ್ತ್ರದಲ್ಲಿ ಹರಕೆಯ ಅಕ್ಕಿಯನ್ನು ಕಟ್ಟಿ ದೇವಾಲಯಕ್ಕೆ ಕರೆತರುತ್ತಾರೆ. ಬಳಿಕ ಚಂಡೆ ವಾದ್ಯದೊಂದಿಗೆ ಅವುಗಳನ್ನು ದೇವಾಲಯದ ಕಟ್ಟೆಯ ಸುತ್ತ ಓಡಿಸಲಾಗುತ್ತದೆ. ಇದುವೇ ಎತ್ತು ಪೋರಾಟವಾಗಿದೆ.
ದೇವಾಲಯದ ನಿರ್ದಿಷ್ಟ ಸ್ಥಳದಲ್ಲಿ ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು ನಡೆಯುತ್ತವೆ. ತಿರುವಳನಿಗೆ ತೆಂಗಿನಗರಿಗಳಿಂದ ಮಾಡಿದ ಅಲಂಕೃತ ಪೋಷಾಕನ್ನು ಧರಿಸಲಾಗುತ್ತದೆ. ಬಳಿಕ ಚಂಡೆ ವಾದ್ಯ ಮೊಳಗುತ್ತಿದ್ದಂತೆಯೇ ತಿರುವಳನ ಮೇಲೆ ದೇವರು ಅವಾಹನೆಗೊಂಡು ನರ್ತಿಸುತ್ತಾ ಸಾಗುತ್ತವೆ. ಈ ಸಂದರ್ಭದ ದೃಶ್ಯ ನೆರೆದವರಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಮಧ್ಯಾಹ್ನ ಕೆಂಡದ ರಾಶಿಯ ಮೇಲೆ ಕೋಲಗಳು ಬೀಳುವ ಮೇಲೇರಿ ಕಾರ್ಯಕ್ರಮಗಳು ನಡೆಯುತ್ತವೆ. ಆ ನಂತರ ಬೆಳ್ಳಿಯ ಮುಖವಾಡ ಧರಿಸಿ ದೇವಾಲಯದ ಪ್ರಾಂಗಣಕ್ಕೆ ಬಂದು ಭಕ್ತರ ಇಷ್ಟಾರ್ಥಗಳು ನೆರವೇರಲಿ ಎಂದು ಹರಸುತ್ತದೆ. ಈ ಸಂದರ್ಭ ಭಕ್ತರು ತಮ್ಮ ಕಷ್ಟ ಸುಖಗಳನ್ನು ಹೇಳಿಕೊಂಡು ದೇವರಿಂದ ಪರಿಹಾರ ಪಡೆಯುತ್ತಾರೆ.

ವರ್ಷದಲ್ಲಿ ಹಬ್ಬದ ಸಂದರ್ಭ ಮಾತ್ರ ಜನ ಸೇರುತ್ತಾರೆ. ಉಳಿದಂತೆ ದಿನನಿತ್ಯ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆಯಾದರೂ ಸದಾ ನೀರವ ಮೌನ ಇಲ್ಲಿ ನೆಲೆಸಿರುತ್ತದೆ. ಮಕ್ಕಿ ಶಾಸ್ತಾವು ದೇಗುಲವು ಕೊಡಗಿನ ನಾಪೋಕ್ಲು ಬಳಿಯ ಮಕ್ಕಿ ಗ್ರಾಮದಲ್ಲಿದೆ. ಇಲ್ಲಿಗೆ ಬರುವವರು ಕೊಡಗಿನ ಮಡಿಕೇರಿ ಅಥವಾ ವೀರಾಜಪೇಟೆಗೆ ಬಂದರೆ ಅಲ್ಲಿಂದ ನಾಪೋಕ್ಲುಗೆ ತೆರಳಿದರೆ ಅಲ್ಲಿನ ಬೇತು ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ ಸಾಗಿದರೆ ಮಕ್ಕಿ ಶಾಸ್ತಾವು ದೇಗುಲವನ್ನು ತಲುಪಬಹುದಾಗಿದೆ. ಇದೊಂದು ಸುಂದರ ತಾಣವಾಗಿದ್ದು, ಇತರೆ ದಿನಗಳಲ್ಲಿಯೂ ಇಲ್ಲಿಗೆ ತೆರಳಬಹುದಾಗಿದೆ. ಭಾಗಮಂಡಲ, ತಲಕಾವೇರಿ, ಪಾಡಿಇಗ್ಗುತ್ತಪ್ಪ ಸೇರಿದಂತೆ ಈ ವ್ಯಾಪ್ತಿಯ ಪ್ರವಾಸಿ ತಾಣಗಳಿಗೆ ತೆರಳುವವರು ಮಕ್ಕಿದೇಗುಲಕ್ಕೂ ಭೇಟಿ ನೀಡಬಹುದಾಗಿದೆ.
-
ಮಾರ್ಚ್ 3, 2026 – ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಕೇತುಗ್ರಸ್ತ ಮಹಾ ಚಂದ್ರಗ್ರಹಣ: ದ್ವಾದಶ ರಾಶಿಗಳ ಫಲಿತಾಂಶ -
Gold Rate Today: ಆಭರಣ ಪ್ರಿಯರ ಗಮನಕ್ಕೆ: ಬೆಂಗಳೂರಿನಲ್ಲಿ ಇಂದು ಚಿನ್ನ-ಬೆಳ್ಳಿ ದರ ಹೇಗಿದೆ? ಇಲ್ಲಿದೆ ಮಾಹಿತಿ -
National Highway: ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿಯ ಮಹತ್ವದ ಅಪ್ಡೇಟ್ -
ಹರ್ಮೂಜ್ ಜಲಸಂಧಿ ಬಂದ್: ಭಾರತಕ್ಕೆ ತಟ್ಟಲಿದೆ ತೈಲ ದರದ ಬಿಸಿ, ಆರ್ಥಿಕತೆಗೂ ಭಾರಿ ಹೊಡೆತ -
ಅಮೆರಿಕಕ್ಕೆ ಸೆಡ್ಡು ಹೊಡೆದು 16,800 ಕೋಟಿ ರೂ ಒಪ್ಪಂದ ಕಡಿದುಕೊಂಡ ಆಂತ್ರೋಪಿಕ್: ಬೆಂಗಳೂರು ಟೆಕ್ಕಿ ಮೆಚ್ಚುಗೆ -
Horoscope March 1: ಈ ರಾಶಿಯವರ ವ್ಯಾಪಾರ, ಆರೋಗ್ಯ ವೃದ್ಧಿ, ಇಂದಿನ ದಿನ ಭವಿಷ್ಯ ಇಲ್ಲಿದೆ. -
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಜೋಡಿಯಿಂದ ಕರ್ನಾಟಕ ಸೇರಿ ದೇಶದ ಪ್ರಮುಖ ದೇವಸ್ಥಾನಗಳಲ್ಲಿ ಅನ್ನದಾನ ಸೇವೆ -
ಮದುವೆ ಪೋಸ್ಟ್ನಲ್ಲಿ ರಶ್ಮಿಕಾ ವಿಶೇಷ ಸಾಲುಗಳು: ಕೊಡಗಿನ ಬೆಡಗಿಯ ವಿದ್ಯಾರ್ಹತೆ ಬಗ್ಗೆ ನಿಮಗೆಷ್ಟು ಗೊತ್ತು? -
Ali Khamenei: ಇರಾನ್ ಸುಪ್ರೀಂ ನಾಯಕ ಖಮೇನಿ ಭೇಟಿ ನೀಡಿದ್ದ ಚಿಕ್ಕಬಳ್ಳಾಪುರದ ಅಲೀಪುರ ಗ್ರಾಮದ ವಿಶೇಷವೇನು -
ಮಧ್ಯಪ್ರಾಚ್ಯದಲ್ಲಿ ವಿಮಾನಗಳ ಸಂಚಾರ ವ್ಯತ್ಯಯ: ಕರ್ನಾಟಕದ ನಾಗರಿಕರಿಗೆ ಸರ್ಕಾರ ನೆರವು -
ಬೇರೆ ದೇಶಗಳಂತೆ ಭಾರತೀಯರಿಗೆ ಭಯದಿಂದ ನಿದ್ರಿಸುವ ಪರಿಸ್ಥಿತಿ ಅಲ್ಲ: ನಿವೃತ್ತ ಸೇನಾಧಿಕಾರಿ ಸುನೀಲ್ ಕುಮಾರ್ ಶಾಸ್ತ್ರಿ -
Lunar Eclipse: ಮಾರ್ಚ್ 3 ಹುಣ್ಣಿಮೆ: ವರ್ಷದ ಮೊದಲ ಮಹಾ ಚಂದ್ರ ಗ್ರಹಣ – ನಾಲ್ಕು ರಾಶಿಗಳಿಗೆ ಮಹಾ ಶುಭ ಫಲ












Click it and Unblock the Notifications