ತಾಳಗುಪ್ಪ-ಮೈಸೂರು ರೈಲು ವೇಳಾಪಟ್ಟಿ ಪರಿಷ್ಕರಣೆಗೆ ಒತ್ತಾಯ
ಶಿವಮೊಗ್ಗ, ಡಿಸೆಂಬರ್ 19; ಶಿವಮೊಗ್ಗದಿಂದ ಬೆಂಗಳೂರು, ಮೈಸೂರು ಸಂಪರ್ಕಿಸಲು ಹಲವಾರು ರೈಲುಗಳು ಸಂಚಾರ ನಡೆಸುತ್ತವೆ. ಕೆಲವು ರೈಲು ಸಾಗರದ ತಾಳಗುಪ್ಪ ರೈಲು ನಿಲ್ದಾಣದಿಂದ ಹೊರಡುತ್ತವೆ. ಇಂತಹ ಒಂದು ರೈಲಿನ ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿದ್ದರು. ಆಗ ರೈಲು ನಂಬರ್ 16228 ತಾಳಗುಪ್ಪ-ಮೈಸೂರು ಎಕ್ಸ್ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಾತ್ರಿ ಸಂಚಾರ ನಡೆಸುವ ಈ ರೈಲು ಶಿವಮೊಗ್ಗ ಟೌನ್ ನಿಲ್ದಾಣದಿಂದ ರಾತ್ರಿ 11 ಗಂಟೆ ಬದಲಾಗಿ 11.30ಕ್ಕೆ ಹೊರಡುತ್ತದೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಸಂಸದರು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ತಾಳಗುಪ್ಪದಿಂದ ಹೊರಡುವ ರೈಲು ಶಿವಮೊಗ್ಗ ಟೌನ್ ನಿಲ್ದಾಣ ತಲುಪಿದ ಬಳಿಕ ರಾತ್ರಿ 11 ಗಂಟೆಗೆ ಹೊರಟರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಹಿಂದೆ ರೈಲು ರಾತ್ರಿ 11 ಗಂಟೆಗೆ ಶಿವಮೊಗ್ಗ ನಗರದಿಂದ ಹೊರಡುತ್ತಿತ್ತು. ಹಿಂದಿನ ವೇಳಾಪಟ್ಟಿಯಂತೆ ರೈಲು ಸಂಚಾರ ನಡೆಸುವಂತೆ ವೇಳಾಪಟ್ಟಿ ಬದಲಾಯಿಸಬೇಕು ಎಂದು ಮನವಿ ಮಡಿದ್ದಾರೆ.
ಸಂಸದರು ಮುಂದಿಟ್ಟ ಇತರ ಬೇಡಿಕೆಗಳು; ಸಂಸದ ಬಿ. ವೈ. ರಾಘವೇಂದ್ರ ರೈಲ್ವೆ ಸಚಿವರಿಗೆ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ವಿವಿಧ ರೈಲ್ವೆ ಯೋಜನೆಗಳ ಕುರಿತು ಮನವಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಶಿವಮೊಗ್ಗ-ರೇಣಿಗುಂಟ-ಚೆನ್ನೈ ಬೈ ವೀಕ್ಲಿ ರೈಲನ್ನು ಪುನಃ ಆರಂಭಿಸಬೇಕು ಎಂದು ಮನವಿ ಮಾಡಿದ್ದಾರೆ. ಅಕ್ಟೋಬರ್ 1ರಿಂದ ಈ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
ರೈಲು ನಂಬರ್ 12089/ 90 ಬೆಂಗಳೂರು-ಶಿವಮೊಗ್ಗ ಜನಶತಾಬ್ದಿ ಎಕ್ಸ್ಪ್ರೆಸ್ ಮತ್ತು ರೈಲು ನಂಬರ್ 16227/ 16228 ತಾಳಗುಪ್ಪ-ಮೈಸೂರು ನಡುವಿನ ಎಕ್ಸ್ಪ್ರೆಸ್ ರೈಲುಗಳ ಸಾಮಾನ್ಯ ಬೋಗಿ ಹಾಗೂ ಎಸಿ ಕೋಚ್ ತುಂಬಾ ಹಳೆಯದಾಗಿವೆ. ಆದ್ದರಿಂದ ಹೊಸ ಕೋಚ್ ಆಳವಡಿಕೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ರೈಲು ನಿಲ್ದಾಣಗಳ ಅಭಿವೃದ್ಧಿಗೆ ಅಮೃತ್ ಸ್ಟೇಷನ್ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆ ಅನ್ವಯ ಶಿವಮೊಗ್ಗ ಟೌನ್, ಸಾಗರ ಮತ್ತು ತಾಳಗುಪ್ಪ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ. ಭದ್ರಾವತಿ ಪಟ್ಟಣವು ಕೈಗಾರಿಕಾ ಪ್ರದೇಶವಾಗಿದೆ. ಭದ್ರಾವತಿ ನಿಲ್ದಾಣವನ್ನು ಸಹ ಅಭಿವೃದ್ಧಿಗೊಳಿಸುವ ಅವಶ್ಯಕತೆ ಇದೆ. ಆದ್ದರಿಂದ ನಿಲ್ದಾಣವನ್ನು ಈ ಯೋಜನೆಗೆ ಸೇರಿಸಬೇಕು ಎಂದು ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ.
ಶಿವಮೊಗ್ಗ ನಗರಕ್ಕೆ ಇನ್ನೂ ವಂದೇ ಭಾರತ್ ರೈಲು ಸಂಪರ್ಕವಿಲ್ಲ. ಆದ್ದರಿಂದ ಕೆಎಸ್ಆರ್ ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲನ್ನು ಬೀರೂರು ಜಂಕ್ಷನ್ನಲ್ಲಿ ನಿಲುಗಡೆ ಮಾಡಬೇಕು ಎಂದು ಸಂಸದರು ಮನವಿ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 2023ರ ಜೂನ್ 27ರಂದು ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು.
ಸದ್ಯ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲಿಗೆ ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿ ಮೂರು ನಿಲ್ದಾಣಗಳಿವೆ. ಈ ರೈಲಿಗೆ ಬೀರೂರು ಜಂಕ್ಷನ್ನಲ್ಲಿ ನಿಲುಗಡೆ ಕೊಡಿ ಎಂದು ಸಂಸದರು ರೈಲ್ವೆ ಸಚಿವರನ್ನು ಒತ್ತಾಯಿಸಿದ್ದಾರೆ.
ಬಿ. ವೈ. ರಾಘವೇಂದ್ರ ಮೊತ್ತೊಂದು ಮನವಿಯಲ್ಲಿ ಮಲೆನಾಡು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ತಾಳಗುಪ್ಪ-ತಡಸ-ಹೊನ್ನಾವರ-ಶಿರಸಿ-ಹುಬ್ಬಳ್ಳಿ ನೂತನ ರೈಲು ಮಾರ್ಗವನ್ನು ಈ ಹಿಂದೆ ರೈಲ್ವೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಈ ಮಾರ್ಗದ ಅನುಕೂಲತೆಗಳ ಬಗ್ಗೆ ಸಚಿವಾಲಯಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ. ಶೀಘ್ರವೇ ಈ ಮಾರ್ಗ ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದಾರೆ.












Click it and Unblock the Notifications