Mysuru-Chennai Shatabdi; ಶತಾಬ್ದಿ ರೈಲು ಪ್ರಯಾಣಿಕರ ಗಮನಕ್ಕೆ
ಮೈಸೂರು, ಆಗಸ್ಟ್ 22: ಭಾರತೀಯ ರೈಲ್ವೆ ಚೆನ್ನೈ-ಮೈಸೂರು-ಚೆನ್ನೈ ಶತಾಬ್ದಿ ಎಕ್ಸ್ಪ್ರೆಸ್ ರೈಲು ಪ್ರಯಾಣಿಕರಿಗೆ ಪ್ರಮುಖ ಮಾಹಿತಿಯೊಂದನ್ನು ನೀಡಿದೆ. ಈ ಮಾರ್ಗದಲ್ಲಿ ಶತಾಬ್ದಿ ಮತ್ತು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ನಡೆಸುತ್ತಿದ್ದು, ಎರಡೂ ರೈಲುಗಳಿಗೂ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಡಿಸೆಂಬರ್ 20, 2023ರಿಂದ ರೈಲು ನಂಬರ್ 12007/ 12008 ಚೆನ್ನೈ- ಮೈಸೂರು-ಚೆನ್ನೈ ಶತಾಬ್ದಿ ರೈಲು ವಾರದಲ್ಲಿ 6 ದಿನಗಳ ಕಾಲ ಸಂಚಾರ ನಡೆಸಲಿದೆ. ಗುರುವಾರ ಮಾತ್ರ ರೈಲು ಸಂಚಾರ ನಡೆಸುವುದಿಲ್ಲ ಎಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಹೇಳಿದೆ.

ಈ ಹಿಂದೆ ಚೆನ್ನೈ-ಮೈಸೂರು-ಚೆನ್ನೈ ಶತಾಬ್ದಿ ರೈಲು ಸೇವೆ ಬುಧವಾರ ಲಭ್ಯವಿರಲಿಲ್ಲ. ಆದ್ದರಿಂದ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿ ಗುರುವಾರ ಹೊರತುಪಡಿಸಿ ವಾರದ ಉಳಿದ ಎಲ್ಲಾ ದಿನ ರೈಲು ಓಡಿಸಲು ತೀರ್ಮಾನಿಸಲಾಗಿದೆ. ಡಿಸೆಂಬರ್ನಿಂದ ಪರಿಷ್ಕೃತ ವೇಳಾಪಟ್ಟಿ ಜಾರಿಗೆ ಬರದಲಿದೆ.
ಚೆನ್ನೈ-ಮೈಸೂರು-ಚೆನ್ನೈ ಶತಾಬ್ದಿ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಿಷ್ಕೃತ ವೇಳಾಪಟ್ಟಿಯಿಂದ ಉಭಯ ನಗರಗಳ ನಡುವೆ ಸಂಚಾರ ನಡೆಸುವ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.
ಬುಧವಾರ ವಂದೇ ಭಾರತ್ ರೈಲು ಇಲ್ಲ; ಮೈಸೂರು-ಬೆಂಗಳೂರು-ಚೆನ್ನೈ ನಡುವೆ ವಂದೇ ಭಾರತ್ ರೈಲು ಸಹ ಸಂಚಾರ ನಡೆಸುತ್ತದೆ. 2022ರ ನವೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ರೈಲು ಸೇವೆಗೆ ಚಾಲನೆ ನೀಡಿದ್ದರು. ದಕ್ಷಿಣ ಭಾರತದ ಮೊದಲ ಮತ್ತು ಭಾರತದ 5ನೇ ವಂದೇ ಭಾರತ್ ರೈಲು ಇದಾಗಿದೆ.
ಈ ರೈಲು ಸಹ ವಾರದ ಆರು ದಿನ ಮೈಸೂರು, ಬೆಂಗಳೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದ ನಡುವೆ ಸಂಚಾರ ನಡೆಸುತ್ತಿದೆ. ವಂದೇ ಭಾರತ್ ರೈಲು ಬುಧವಾರ ಸಂಚಾರ ನಡೆಸುವುದಿಲ್ಲ. ಇದರ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಭಾರತೀಯ ರೈಲ್ವೆ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಿದಾಗ ಚೆನ್ನೈ-ಮೈಸೂರು-ಚೆನ್ನೈ ಶತಾಬ್ದಿ ರೈಲು ವೇಳಾಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಎರಡು ರೈಲುಗಳಿಗೂ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಇದೆ.
ಭಾರತೀಯ ರೈಲ್ವೆಯ ಮಾಹಿತಿ ಪ್ರಕಾರ ಮೈಸೂರು-ಚೆನ್ನೈ ಬಹು ಬೇಡಿಕೆಯ ಮಾರ್ಗವಾಗಿದೆ. ಆದ್ದರಿಂದಲೇ ಎಲ್ಲಾ ಲೆಕ್ಕಾಚಾರಗಳನ್ನು ಹಾಕಿಯೇ ಈ ಮಾರ್ಗದಲ್ಲಿ ಕರ್ನಾಟಕದ ಮೊದಲ ವಂದೇ ಭಾರತ್ ರೈಲು ಸೇವೆ ಆರಂಭಿಸಲಾಗಿತ್ತು. ವಂದೇ ಭಾರತ್ ಸಂಚಾರ ಆರಂಭವಾದ ಬಳಿಕವೂ ಸಹ ಶತಾಬ್ದಿ ರೈಲಿನ ಪ್ರಯಾಣಿಕರ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲು, ಚೆನ್ನೈ-ಮೈಸೂರು-ಚೆನ್ನೈ ಶತಾಬ್ದಿ ರೈಲು ವೇಳಾಪಟ್ಟಿ ಪರಿಷ್ಕರಣೆ ಬಗ್ಗೆ ಪ್ರಯಾಣಿಕರಿಂದ ಮಾಹಿತಿ ಸಂಗ್ರಹ ಮಾಡುತ್ತೇವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದರು. ಈಗ ಶತಾಬ್ದಿ ರೈಲು ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದ್ದು, ಡಿಸೆಂಬರ್ನಿಂದ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ.
ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲು ಟಿಕೆಟ್ ದರ ದುಬಾರಿಯಾಗಿದೆ. ಆದ್ದರಿಂದ ಹೆಚ್ಚು ಜನರು ಶತಾಬ್ದಿ ರೈಲು ಬಳಕೆ ಮಾಡಲಿದ್ದಾರೆ ಎಂಬ ವಾದ ಮೊದಲು ಇತ್ತು. ಆದರೆ ವಂದೇ ಭಾರತ್ ರೈಲಿಗೆ ಪ್ರಯಾಣಿಕರ ಕೊರತೆ ಕಂಡು ಬಂದಿಲ್ಲ. ವಂದೇ ಭಾರತ್ ಪ್ರಯಾಣಿಕರು ಅದರ ಜೊತೆಗೆ ಇದ್ದಾರೆ. ವಂದೇ ಭಾರತ್ ಆರಂಭವಾದ ಬಳಿಕ ಶತಾಬ್ದಿ ರೈಲಿನ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಕುಸಿತವಾಗಿಲ್ಲ.











Click it and Unblock the Notifications