Amrit Bharat Express: ಬೆಂಗಳೂರು-ಮಾಲ್ಡಾ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ- ದಿನಾಂಕ ಹಾಗೂ ಸಮಯಗಳ ವಿವರ ತಿಳಿಯಿರಿ
ಬೆಂಗಳೂರು, ಜನವರಿ, 01: ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡಾ ನಗರ -ಬೆಂಗಳೂರು ನಡುವಿನ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಗೆ ಹಸಿರು ನಿಶಾನೆ ತೋರಿದ್ದರು. ಹಾಗಾದರೆ ಈ ಮಾರ್ಗಗಗಳಲ್ಲಿ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಯಾವಾಗಿನಿಂದ ಆರಂಭವಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಯು ಮಾಲ್ಡಾ ನಗರ-ಬೆಂಗಳೂರು ನಡುವೆ ಜನವರಿ 7ರಿಂದ ಮತ್ತು ಬೆಂಗಳೂರು-ಮಾಲ್ಡಾ ನಗರ ನಡುವೆ ಜನವರಿ 9ರಿಂದ ಆರಂಭವಾಗಲಿದೆ. ಈ ರೈಲು ಸಂಚಾರ ವಾರಕ್ಕೊಂದು ಬಾರಿ ಮಾತ್ರ ಇರಲಿದೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ.

ಅಮೃತ ಭಾರತ್ ಎಕ್ಸ್ಪ್ರೆಸ್ ಪ್ರತಿ ಭಾನುವಾರ ಬೆಳಗ್ಗೆ 8:50ಕ್ಕೆ ಹೊರಟು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ಗೆ ಆಗಮಿಸುತ್ತದೆ. ಇನ್ನು ಬೆಂಗಳೂರಿನಿಂದ ಈ ರೈಲು ಪ್ರತಿ ಮಂಗಳವಾರ ಮಧ್ಯಾಹ್ನ 1:50ಕ್ಕೆ ಹೊರಟು ಮಾಲ್ಡಾ ನಗರಕ್ಕೆ ಪ್ರತಿ ಗುರುವಾರ ಬೆಳಗ್ಗೆ 11 ಗಂಟೆಗೆ ತಲುಪುತ್ತದೆ. ಇದು ಜಲೇಶ್ವರ್, ಬಾಲಸೋರ್, ಸೋರೊ, ಭದ್ರಕ್, ಕಟಕ್, ಭುವನೇಶ್ವರ, ಖುರ್ದಾ ರೋಡ್ ಮತ್ತು ಬೆರ್ಹಾಂಪುರಗಳಲ್ಲಿ ನಿಲುಗಡೆ ಆಗಲಿದೆ.
ಮಾಲ್ಡಾ ನಗರದಿಂದ ಬೆಂಗಳೂರಿಗೆ ಅಮೃತ್ ಭಾರತ್ನ ಉದ್ಘಾಟನಾ ಪ್ರಯಾಣ ಶುರು ಆಗಿದ್ದು, ಭಾನುವಾರ ಒಡಿಶಾದ ಕಟಕ್ ರೈಲು ನಿಲ್ದಾಣದಲ್ಲಿ ಅಧಿಕಾರಿಗಳು, ಜನರು ಬರಮಾಡಿಕೊಂಡರು. ಈ ಉದ್ಘಾಟನಾ ರೈಲು ಕಟಕ್ಗೆ ರಾತ್ರಿ 10:50ಕ್ಕೆ ಆಗಮಿಸಿತು. ಡಿಸೆಂಬರ್ 31ರಂದು ಬೆಳಗ್ಗೆ 7 ಗಂಟೆಗೆ ನಿಲ್ದಾಣದಿಂದ ಹೊರಟಿದೆ. ಭಾನುವಾರ ಈ ರೈಲು ಭುವನೇಶ್ವರದಿಂದ ಬೆಳಗ್ಗೆ 7:40ಕ್ಕೆ, ಖುರ್ದಾ ರಸ್ತೆಯಿಂದ 8.20ಕ್ಕೆ ಮತ್ತು ಬೆರ್ಹಾಂಪುರದಿಂದ 9:55ಕ್ಕೆ ವಿಶಾಖಪಟ್ಟಣಂ ಕಡೆಗೆ ಹೊರಟಿದೆ. ಅಲ್ಲೂ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲನ್ನು ಅದ್ದೂರಿಯಾಗಿ ಸ್ವಾಗತಿಸಿದ್ದರು.
ದೇಶದ ಸೂಪರ್ಫಾಸ್ಟ್ ಪ್ಯಾಸೆಂಜರ್ ರೈಲುಗಳ ಹೊಸ ಮಾದರಿಯ ರೈಲು ಈ ಅಮೃತ್ ಭಾರತ್ ಎಕ್ಸ್ಪ್ರೆಸ್. ಇದು ಹವಾನಿಯಂತ್ರಿತವಲ್ಲದ (AC) ಕೋಚ್ಗಳನ್ನು ಹೊಂದಿರುವ ಎಲ್ಎಚ್ಬಿ ಪುಶ್ ಪುಲ್ ಆಗಿದೆ. ಉತ್ತಮ ವೇಗವರ್ಧನೆ ಕಾಪಾಡಿಕೊಳ್ಳುವುದಕ್ಕಾಗಿ ಈ ರೈಲಿನ ಎರಡೂ ತುದಿಗಳಲ್ಲಿ ಇಂಜಿನ್ಗಳಿವೆ.
" ಇನ್ನು ಪ್ರಯಾಣಿಕರಿಗಾಗಿ ಸುಂದರ, ಆಕರ್ಷಕ ವಿನ್ಯಾಸದ, ಉತ್ತಮ ಲಗೇಜ್ ರಾಕ್, ಸೂಕ್ತ ಮೊಬೈಲ್ ಹೋಲ್ಡರ್, ಚಾರ್ಜಿಂಗ್ ಪಾಯಿಂಟ್, ಎಲ್ಇಡಿ ದೀಪ, ಸಿಸಿಟಿವಿ, ಸಾರ್ವಜನಿಕ ಮಾಹಿತಿ ವ್ಯವಸ್ಥೆ ಮುಂತಾದ ಸುಧಾರಿತ ಸೌಲಭ್ಯಗಳನ್ನು ಒದಗಿರುವ ರೈಲು ಇದು" ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎರಡು ಅಮೃತ್ ಭಾರತ್ ರೈಲುಗಳನ್ನು ಹೆಮ್ಮೆಯಿಂದ ಫ್ಲ್ಯಾಗ್ ಆಫ್ ಮಾಡಿದ್ದೇವೆ. ದರ್ಭಾಂಗಾದಿಂದ ಅಯೋಧ್ಯೆಗೆ ನವದೆಹಲಿಗೆ (ಆನಂದ್ ವಿಹಾರ್ ಟರ್ಮಿನಲ್) ಮತ್ತು ಮಾಲ್ಡಾ ನಗರದಿಂದ ಬೆಂಗಳೂರಿಗೆ (ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್) ವೇಗವಾಗಿ ಈ ರೈಲುಗಳ ಮೂಲಕ ತಲುಪಬಹುದು. ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು, ಬಿಹಾರ, ಉತ್ತರ ಪ್ರದೇಶ ಮತ್ತು ದೆಹಲಿಯನ್ನು ಸಂಪರ್ಕಿಸುವುದು ಮತ್ತು ಪವಿತ್ರವಾದ ಶ್ರೀ ರಾಮಜನ್ಮ ಭೂಮಿ ತೀರ್ಥ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರವೇಶವನ್ನು ಸುಧಾರಿಸುವುದು ಈ ರೈಲು ಸೇವೆಗಳ ಉದ್ದೇಶವಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications