Get Updates
Get notified of breaking news, exclusive insights, and must-see stories!

ದೇಗುಲ ದರ್ಶನ : ಕಡಿಯಾಳಿಯ ಮಹಿಷಮರ್ಧಿನಿ

Kadiyali Mahishamardini, Udupi
ಇಡೀ ಉಡುಪಿ ಜಿಲ್ಲೆಯೇ ದೇವಾಲಯಗಳ ಆಗರ. ಪ್ರವಾಸೋದ್ಯಮದಿಂದ ಈ ದೇವಾಲಯಗಳಿಗೆ ಅಂತಹ ಲಾಭವಾಗದಿದ್ದರೂ ಪುರಾಣ, ಇತಿಹಾಸದಿಂದಾಗಿ ಇಲ್ಲಿನ ದೇವಾಲಯಗಳು ಸಾಕಷ್ಟು ಹೆಸರನ್ನು ಪಡೆದಿವೆ. ಶತಮಾನಗಳಷ್ಟು ಹಳೆಯದಾದ ಈ ದೇಗುಲಗಳನ್ನು ನೋಡುವುದೇ ಒಂದು ಸಂತಸದ ಸಂಗತಿ. ಪ್ರವಾಸೋದ್ಯಮ ಇಲ್ಲಿ ಸಾಕಷ್ಟು ಸವಲತ್ತುಗಳನ್ನು ಕಲ್ಪಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಿದೆ. ಇಂತಹ ದೇಗುಲಗಳಲ್ಲಿ 8ನೇ ಶತಮಾನದ ಕಡಿಯಾಳಿ ಮಹಿಷಮರ್ಧಿನಿ ಗುಡಿಯೂ ಮಹತ್ವದ್ದು.

ಕ್ರಿ.ಶ. 8 - 9ನೇ ಶತಮಾನದ ಶಾಸನಗಳಲ್ಲಿ ಶಿವವಳ್ಳಿ - ಶಿವಳ್ಳಿ ಎಂಬ ಉಲ್ಲೇಖವಿದೆ. ಶಿವನ ಊರು ಶಿವಳ್ಳಿ. ಈ ಶಿವಳ್ಳಿಯಲ್ಲಿನ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾದ ಕಡಿಯಾಳಿ ದೇವಾಲಯ ಕ್ರಿ.ಶ. 7 - 8ನೇ ಶತಮಾನದಿಂದ ಸನ್ನಿಹಿತಳಾಗಿ ಭಕ್ತರನ್ನು ರಕ್ಷಿಸುತ್ತಿದ್ದಾಳೆ ಎನ್ನುವುದು ನಂಬಿಕೆ. ಕಡೆಯಹಳ್ಳಿ, ಕುಡುಹಳ್ಳಿ ಇದ್ದಿದ್ದು ಕಡಿಯಾಳಿ ಆಯಿತೆಂದು ಅಂಬೋಣ.

ಕಡಿಯಾಳಿಯ ಮಹಿಷಮರ್ಧಿನಿ ತಾಯಿಯ ವಿಗ್ರಹದಲ್ಲಿ ಪ್ರಾಚೀನ ಇತಿಹಾಸವನ್ನು ಕಾಣಬಹುದು. ವಿಗ್ರಹವು ಕ್ರಿ.ಶ. 600 - 750ರವರೆಗಿನ ಶಿಲ್ಪಶೈಲಿಯನ್ನು ಹೊಂದಿದೆ. ಬಾದಾಮಿ ಚಾಲುಕ್ಯರ ಶಿಲ್ಪ ಲಕ್ಷಣವನ್ನು ವಿಗ್ರಹ ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಸುಮಾರು 30 ಇಂಚು ಎತ್ತರದ ವಿಗ್ರಹದಲ್ಲಿ ಪ್ರಸನ್ನತೆ ಮತ್ತು ವಿಜಯದ ಮಂದಹಾಸವಿದೆ. ಮೇಲಿನ ಎರಡು ಕೈಗಳಲ್ಲಿ ಶಂಖ, ಚಕ್ರ, ಕೆಳಗಿನ ಬಲಗೈಯಲ್ಲಿ ತ್ರಿಶೂಲವಿದೆ. ತ್ರಿಶೂಲದ ಕೆಳಬದಿ ತಾಯಿಯ ಕಾಲ ಬುಡದಲ್ಲಿ ಸತ್ತು ಬಿದ್ದಿರುವ ಮಹಿಷನ ತಲೆಯನ್ನು ಒತ್ತಿ ಹಿಡಿದಿದೆ. ಹಿಂಗಾಲು ಎತ್ತಿ ಮುಗ್ಗರಿಸಿ ಬಿದ್ದ ಮಹಿಷನ ಬಾಲ ದೇವಿಯ ಎಡಗೈಯಲ್ಲಿದೆ. ಕ್ಷೇತ್ರದ ದುರ್ಗೆ ನಿರಾಭರಣ ಸುಂದರಿ. ಕಿರೀಟ, ಕುಂಡಲ, ಕೊರಳಲ್ಲಿ ಒಂದು ತಾಳಿ ಮತ್ತು ಸೊಂಟದಲ್ಲಿ ಒಂದು ಉದ್ಯಾಣ ಎಷ್ಟೋ ಅಷ್ಟೇ.

ಇತಿಹಾಸ : ತೌಳವ ರಾಜಮಂಡಲದ ರಾಜನಾಗಿದ್ದ ರಾಮಭೋಜ ಸಂತಾನವಾಗಬೇಕಂದು ಪುತ್ರಕಾಮೇಷ್ಠಿ ಯಾಗ ಮಾಡಿಸಿದ. ಯಾಗಭೂಮಿಯನ್ನು ನೇಗಿಲಿಂದ ಉಳುವಾಗ ಒಂದು ಸರ್ಪ ನೇಗಿಲಿಗೆ ಸಿಕ್ಕು ಸತ್ತು ಹೋಯಿತು. ಆ ಸರ್ಪದ ಹತ್ಯೆಯ ಪ್ರಾಯಶ್ಚಿತ್ತಕ್ಕಾಗಿ ನಾರಾಯಣನ ವಿಶೇಷ ಸನ್ನಿಧಾನವುಳ್ಳ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ. ಅದು ಅನಂತೇಶ್ವರ ದೇವಾಲಯ. ಅಲ್ಲದೆ ಅನಂತೇಶ್ವರ ದೇವಾಲಯದ ಸುತ್ತಮುತ್ತ ನಾಲ್ಕು ದುರ್ಗೆಯ ದೇವಾಲಯವನ್ನು ಸ್ಥಾಪಿಸಿದ, ಅದರಲ್ಲಿ ಒಂದು ಕಡಿಯಾಳಿ ಮಹಿಷಮರ್ಧಿನಿ ದೇವಾಲಯ ಎನ್ನುವುದು ಪ್ರತೀತಿ. ಉಳಿದ ಮೂರು ದುರ್ಗೆಯ ದೇವಾಲಯವೆಂದರೆ ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಬೈಲೂರು ಮಹಿಷಾಸುರಮರ್ಧಿನಿ ದೇವಾಲಯ, ಕನ್ನರ್ಪಾಡಿ ಜಯದುರ್ಗೆ, ಪುತ್ತೂರು ದುರ್ಗಾಪರಮೇಶ್ವರಿ ದೇವಾಲಯ.

ಉಡುಪಿ ಶ್ರೀಕೃಷ್ಣ ಮಠಕ್ಕೂ ಕಡಿಯಾಳಿ ದೇವಾಲಯಕ್ಕೂ ನಿಕಟವಾದ ಸಂಬಂಧವಿದೆ. ಉಡುಪಿ ಪರ್ಯಾಯ ಪೀಠವನ್ನು ಏರುವ ಸ್ವಾಮಿಗಳು ತಾಯಿಗೆ ಬಂದು ಮೊದಲು ಪ್ರಾರ್ಥನೆ ಸಲ್ಲಿಸುವುದು ಸಂಪ್ರದಾಯ. ಅಲ್ಲದೆ ಪ್ರತಿ ಶುಕ್ರವಾರ 12 ಸುವಾಸಿನಿಯರ ಸಮಾರಾಧನೆಯನ್ನು ಈ ದೇವಾಲಯದಲ್ಲಿ ನಡೆಸಿಕೊಂಡು ಬಂದಿದ್ದಾರೆ. ಮುಖ ಮಂಟಪದ ಕಂಭದಲ್ಲಿ ಕೊರೆದ ಗಣಪತಿ ವಿಗ್ರಹವಿದೆ. ದೇವಾಲಯದ ಒಂದು ಕಡೆಯಲ್ಲಿ ಧೂಮಾವತಿ ದೈವದ ಮಣೆಯಿದೆ. ಹೊರಗಡೆ ಮರದ ನಂದಿ, ವಾಯವ್ಯ ದಿಕ್ಕಿನಲ್ಲಿ ಸುಬ್ರಮಣ್ಯಸ್ವಾಮಿ ದೇವಾಲಯ ಮತ್ತು ಈಶಾನ್ಯ ಮೂಲೆಯಲ್ಲಿ ವ್ಯಾಘ್ರ ಚಾಮುಂಡಿ ಗುಡಿಯಿದೆ.

ಉಡುಪಿಯ ಬಸ್ ನಿಲ್ದಾಣದಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿದೆ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನ.

ವಿಳಾಸ
ಶ್ರೀ ಕಡಿಯಾಳಿ ಮಹಿಷಮರ್ಧಿನಿ ದೇವಾಲಯ,
ಕಡಿಯಾಳಿ, ಉಡುಪಿ - 576102
ದೂ: 0820 - 2521937

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+