ಪ್ರತ್ಯೇಕ ರಾಜ್ಯದ ಬೇಡಿಕೆ ತಳ್ಳಿ ಹಾಕಿದ ಒನ್ಇಂಡಿಯಾ ಕನ್ನಡ ಓದುಗರು
ಬೆಂಗಳೂರು, ಜುಲೈ 30 : ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿ ಮಾಡಬೇಕು ಎಂಬ ಕೂಗು ಎದ್ದಿದೆ. ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಆಗಸ್ಟ್ 2ರಂದು ಉತ್ತರ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೊತಂಬರಿ ಅವರು ಆಗಸ್ಟ್ 2ರಂದು ಉತ್ತರ ಕರ್ನಾಟಕದ 13 ಜಿಲ್ಲೆಗಳ ಬಂದ್ಗೆ ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಉತ್ತರ ಕರ್ನಾಟಕ ಬಂದ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಒನ್ ಇಂಡಿಯಾ ಕನ್ನಡ 'ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕರ್ನಾಟಕ ಬಂದ್ ಸರಿಯೇ?' ಎಂಬ ಪ್ರಶ್ನೆಯನ್ನು ಓದುಗರ ಮುಂದಿಟ್ಟಿತ್ತು. ನಮ್ಮ ಓದುಗರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಎಲ್ಲರೂ ಒಗ್ಗಟಾಗಿರೋಣ ಎಂದು ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ತಳ್ಳಿ ಹಾಕಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಹ ಪ್ರತ್ಯೇಕ ರಾಜ್ಯದ ಹೋರಾಟದ ಅಗತ್ಯವಿಲ್ಲ ಎಂದು ಹೇಳಿದ್ದು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸದಸ್ಯರ ಸಭೆಯನ್ನು ಜುಲೈ 31ರಂದು ಕರೆದಿದ್ದಾರೆ. ನಮ್ಮ ಓದುಗರು ನೀಡಿದ ಫಲಿತಾಂಶ, ಮಂಡಿಸಿದ ಅಭಿಪ್ರಾಯಗಳ ವಿವರ ಚಿತ್ರಗಳಲ್ಲಿ ಇದೆ...

ಎಲ್ಲರೂ ಒಗ್ಗಟಾಗಿರೋಣ
'ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕರ್ನಾಟಕ ಬಂದ್ ಸರಿಯೇ?' ಎಂಬ ಪ್ರಶ್ನೆಯನ್ನು ಮುಂದಿಡಲಾಗಿತ್ತು.
* ಪ್ರತ್ಯೇಕ ರಾಜ್ಯ ನಿರ್ಮಾಣವಾಗಬೇಕು
* ಬಂದ್ ಮಾಡುವುದು ತಪ್ಪು
* ಎಲ್ಲರೂ ಒಗ್ಗಟ್ಟಾಗಿರಬೇಕು ಎಂಬ ಮೂರು ಆಯ್ಕೆಗಳನ್ನು ನೀಡಲಾಗಿತ್ತು.
ಶೇ 27.26ರಷ್ಟು ಜನರು ಪ್ರತ್ಯೇಕ ರಾಜ್ಯ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಬಂದ್ ಮಾಡುವುದು ತಪ್ಪು ಎಂದು 14.19ರಷ್ಟು ಜನರು ಹೇಳಿದ್ದಾರೆ. ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು 58.55ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

ಸ್ವಲ್ಪ ಸಮಯವನ್ನು ಕೊಡಿ
5 ವರ್ಷ ಬಿಜೆಪಿ 5 ವರ್ಷ ಕಾಂಗ್ರೆಸ್ ಸರ್ಕಾರ ಇದ್ದಾಗ ಯಾಕೆ ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡಿಲ್ಲ. ಎಚ್.ಡಿ.ಕುಮಾರಸ್ವಾಮಿ ಬಂದು ಕೇವಲ 2 ತಿಂಗಳು ಆಗಿದೆ. 10 ವರ್ಷ ಆಗದಿರುವುದು 2 ತಿಂಗಳಿನಲ್ಲಿ ಆಗುತ್ತಾ?. ಸ್ವಲ್ಪ ಸಮಯ ಕೊಡಿ ಸ್ವಾರ್ಥಕ್ಕಾಗಿ ರಾಜಕೀಯ ಮಾಡುವುದನ್ನು ಬಿಡಿ ಎಂದು ಅರ್ಜುನ್ ಎಂಬ ಓದುಗಳು ಅಭಿಪ್ರಾಯಪಟ್ಟಿದ್ದಾರೆ.

ಸರಿಯಾಗಿ ಕನ್ನಡ ಕಲಿಯಲಿ
ಸರಿಯಾಗಿ ಕನ್ನಡ ಮಾತನಾಡಲು ಬರದ ಅಜ್ಞಾನಿಗಳಿಗೆ ಪ್ರತ್ಯೇಕ ರಾಜ್ಯ ಬೇಕಂತೆ. ಕನ್ನಡ ಮೊದಲು ಸರಿಯಾಗಿ ಕಲಿಯಲಿ. ಈಗಾಗಲೇ ಅಧಿಕಾರದಲ್ಲಿ ಇದ್ದಾಗ ಗುಡಿಸಿ ಗುಂಡಾಂತರ ಮಾಡಿದ್ದು ಸಾಕಾಗಲಿಲ್ಲವೇನೋ? ಎಂದು ಮೊಹಮ್ಮದ್ ನೌಷಧ್ ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಕರ್ನಾಟಕಕ್ಕೆ ನಷ್ಟ
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಉತ್ತರ ಕರ್ನಾಟಕಕ್ಕೆ ನಷ್ಟ. ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬೇಕು ಎಂದು ಓದುಗರು ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯನ್ನು ಬಿಟ್ಟುಬಿಡಿ
ನಮ್ಮ ಉತ್ತರ ಕನ್ನಡ ಜಿಲ್ಲೆಯನ್ನು ತೆಗೆದು ನೀವ್ ಎನ್ ಬೇಕಾದ್ರು ಮಾಡಿಕೊಳ್ಳಿ ಎಂದು ಓದುಗರು ಕಮೆಂಟ್ ಮಾಡಿದ್ದಾರೆ.

ಪ್ರತ್ಯೇಕ ರಾಜ್ಯವಾಗಬೇಕು
ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿ ಮಾಡಿ ದಕ್ಷಿಣ ಕರ್ನಾಟಕದ ಸ್ವಾರ್ಥ ನಾಯಕರಿಗೆ ತಕ್ಕಪಾಠ ಕಲಿಸಿ ಅಭಿವೃದ್ದಿಗೆ ಅಣಿಯಾಗಬೇಕು ಎಂದು ಓದುಗರು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ಕರ್ನಾಟಕ ಅಂದ್ರೆ ಒಂದೇ
ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಇದ್ಯಾವುದೂ ನಡೆಯಲ್ಲ ಆಕಸ್ಮಾತ್ ಕರ್ನಾಟಕ ಇಷ್ಟ ಇಲ್ಲ ಅಂದ್ರೆ ಗಂಟು ಮೂಟೆ ಕಟ್ಕೊಂಡ್ ಹೋಗ್ತಾ ಇರಬಹುದು ಎಂಬ ಸಾಮಾಜಿಕ ಜಾಲತಾಣದ ಚರ್ಚೆಯ ಚಿತ್ರವೂವನ್ನು ಓದುಗರು ಹಂಚಿಕೊಂಡಿದ್ದಾರೆ.












Click it and Unblock the Notifications