ರಮೇಶ್ ಕುಮಾರ್ ರನ್ನು ಕಾಂಗ್ರೆಸ್ ಸರಕಾರ ಕೂಗು ಮಾರಿ ಮಾಡದಿರಲಿ
ಆರೋಗ್ಯ ಸಚಿವ ರಮೇಶ್ ಕುಮಾರ್ ರನ್ನು ನೋಡುತ್ತಿದ್ದರೆ ತೀರಾ ಒಂಟಿಯಂತೆ ಕಾಣಿಸುತ್ತಾರೆ. ಕಾಂಗ್ರೆಸ್ ಪಕ್ಷದಲ್ಲೇ ರಮೇಶ್ ಕುಮಾರ್ ರಿಗೆ ಬೆಂಬಲ ಇದ್ದಂತೆ ಕಾಣುವುದಿಲ್ಲ. ಸಚಿವರಿಗೇನೋ ಘನವಾದ ಉದ್ದೇಶ ಹಾಗೂ ಅದನ್ನು ಪಟ್ಟು ಹಿಡಿದು ಸಾಧಿಸಬೇಕು ಎಂಬ ಛಲ ಕಾಣಿಸುತ್ತಿದ್ದರೂ ಆ ಧೋರಣೆಯಿಂದಲೇ ಸಮಸ್ಯೆ ಎಂಬಂತೆ ಚಿತ್ರಿಸಲಾಗುತ್ತಿದೆ.
ಬದಲಾವಣೆಗಳೊಂದಿಗೆ ಸೋಮವಾರ ಕೆಪಿಎಂಇ ಮಸೂದೆ ಮಂಡನೆ: ಸಿಎಂ
ಕಳೆದ ಬಾರಿಯ ವಿಧಾನಸಭೆ ಚುನಾವಣೆ ತಮ್ಮ ಕೊನೆಯ ಚುನಾವಣೆ ಎಂದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ ಯಾಚಿಸಿದ್ದರಂತೆ ರಮೇಶ್ ಕುಮಾರ್. ಆ ಮಾತು ನಿಜವೋ ಇಲ್ಲವೋ ಕಾದು ನೋಡಬೇಕಿದೆ. ಆದರೆ ಏನೋ ದೊಡ್ಡ ಬದಲಾವಣೆ ತಂದುಬಿಡೋಣ ಎಂಬ ಗುರಿಯಿಟ್ಟುಕೊಂಡು ಕೆಲಸ ಮಾಡುತ್ತಿರುವ ಅವರಿಗೆ ಯಾರ ಬೆಂಬಲವೂ ಇದ್ದಂತೆ ಕಾಣುತ್ತಿಲ್ಲ.
ಆದರೆ, ಅವರು ಬಡಪೆಟ್ಟಿಗೆ ಬಗ್ಗುವ ಆಸಾಮಿ ಅಲ್ಲ ಅನ್ನೋದು ಮಾತ್ರ ನಿಜ. ತಾವು ಮಾಡಲು ಹೊರಟ ಕೆಪಿಎಂಇ ಕಾಯ್ದೆ ತಿದ್ದುಪಡಿಗೆ ಈ ಪಾಟಿ ವಿರೋಧ, ಆಕ್ಷೇಪಗಳು ಬರುತ್ತಿದ್ದರೂ ಬಂಡೆಯಂತೆ ತಮ್ಮ ನಿರ್ಧಾರಕ್ಕೆ ಕಟ್ಟುಬಿದ್ದಿರುವ ರಮೇಶ್ ಕುಮಾರ್ ಗೆ ಸ್ವತಃ ಸಿದ್ದರಾಮಯ್ಯನವರಾದರೂ ಬಲವಾಗಿ ಸಮರ್ಥನೆ ಮಾಡಿಕೊಳ್ಳಬೇಕಿತ್ತು.
'ಡಿ.10ರಿಂದ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಸ್ಕ್ಯಾನಿಂಗ್, ಡಯಾಲಿಸಿಸ್'
ನಮ್ಮಂಥ ಜನ ಸಾಮಾನ್ಯರ ಆಲೋಚನೆ ಹೀಗೆಯೇ ಇರುತ್ತದೆ. ಆದರೆ ರಾಜಕೀಯದಲ್ಲಿ ಏನೇನು ಲೆಕ್ಕಾಚಾರಗಳಿರುತ್ತವೋ ಬಲ್ಲವರ್ಯಾರು? ಸರಕಾರಿ ಆಸ್ಪತ್ರೆಯಲ್ಲೇ ಸಕಲ ಸವಲತ್ತು ಇರಲು ಏನೇನು ಬೇಕೋ ಅದಕ್ಕಾಗಿ ಶ್ರಮಿಸುತ್ತೇನೆ, ಜನರ ಅನುಕೂಲಕ್ಕಾಗಿ ಈಗಿನ ತಿದ್ದುಪಡಿ ತರುತ್ತಿದ್ದೇನೆ ಅನ್ನೋದು ರಮೇಶ್ ಕುಮಾರ್ ಮಾತು.
ನಾಟಕ ಬಿಡ್ರೀ ಅನ್ನುವ ಮುನ್ನ
ಆದರೆ, ನಮಗೆ ಈ ರೀತಿ ಮಾತನಾಡುವ, ಕಣ್ಣೀರಿಡುವ ರಾಜಕೀಯ ನಾಯಕರ ಬಗ್ಗೆ ನಂಬಿಕೆ ಬರಲ್ಲ. ಇದೆಲ್ಲ ನಾಟಕ ಬಿಡ್ರೀ ಅಂತಲೇ ಮಾತು ಶುರು ಮಾಡ್ತೀವಿ. ಈ ಮಾತು ರಮೇಶ್ ಕುಮಾರ್ ಕೇಳಿದರೆ ಏನೆಂದು ಕೊಳ್ಳಬಹುದು? ಬಹುಶಃ ಏನನ್ನೂ ಅಂದುಕೊಳ್ಳಲಾರರು. ಏಕೆಂದರೆ ಇಂಥ ಎಷ್ಟು ಮಾತುಗಳನ್ನು, ಅದೆಷ್ಟು ಸಲ ಕೇಳಿರ್ತಾರೋ?
ಖಳನಾಯಕರಂತೆ ಚಿತ್ರಿಸಬಾರದು
ರಮೇಶ್ ಕುಮಾರ್ ಸಿಟ್ಟಾಗಿ ಮಾತನಾಡುವುದನ್ನೇ ಅವರನ್ನು ಖಳ ನಾಯಕನಂತೆ ಚಿತ್ರಿಸಲು ಕಾರಣ ಆಗಬಾರದು. ಕಾಯ್ದೆಗೆ ತಿದ್ದುಪಡಿ ಮಾಡಿರುವುದರಲ್ಲಿ ತೀರಾ ಆಕ್ಷೇಪಾರ್ಹ ಅಂಶ ಇದ್ದರೆ ಅದನ್ನು ಕೈ ಬಿಡುವುದಕ್ಕೆ ಕೇಳಿಕೊಳ್ಳಬಹುದು. ಆದರೆ ಏಕಾಏಕಿ ಕಾಯ್ದೆಗೆ ತಿದ್ದುಪಡಿಯನ್ನೇ ಮಾಡಬಾರದು ಎಂಬ ಧೋರಣೆ ಎಷ್ಟು ಸರಿ?
ಕೆಲವೆಡೆ ಹಣ ಸುಲಿಯುತ್ತಿರುವುದು ಹೌದಲ್ವಾ?
ಖಾಸಗಿ ಆಸ್ಪತ್ರೆಗಳು ಎಲ್ಲರೂ ಸುಲಿಗೆ ಮಾಡುತ್ತಿಲ್ಲ, ಬಾಯಿಗೆ ಬಂದಂತೆ ಹಣಕ್ಕೆ ಬೇಡಿಕೆ ಇಡುತ್ತಿಲ್ಲ ಅನ್ನೋದು ಸರಿ. ಆದರೆ ಕೆಲ ಆಸ್ಪತ್ರೆಗಳಲ್ಲಿ ರೋಗಿಗಳು ಅಕ್ಷರಶಃ ಒತ್ತೆಯಾಳುಗಳಂತೆ ಆಗುತ್ತಿರುವುದು ಹೌದಲ್ವಾ? ಅದಕ್ಕೆ ಪರಿಹಾರ ಏನು? ಕೆಲವು ಕಡೆ ಬಡ ರೋಗಿಗಳನ್ನು ದೋಚುತ್ತಿರುವುದು ನಿಜವಲ್ವಾ? ಅದಕ್ಕೆ ಪರಿಹಾರ ಏನು?
ತಪ್ಪು ಮಾಡದವರಿಗೆ ಕಾಯ್ದೆ- ಕಾನೂನು ಭಯ
ಅದೇನೋ ಕೂಗು ಮಾರಿ ಬರುತ್ತದಂತೆ, ಅದಕ್ಕಾಗಿ ಮನೆ ಮುಂದೆ ನಾಳೆ ಬಾ ಎಂದು ಬರೆದಿರಬೇಕಂತೆ. ಅದನ್ನು ನೋಡಿ ಕೂಗು ಮಾರಿ ವಾಪಸ್ ಹೋಗಿಬಿಡುತ್ತೆ ಎಂದು ಮಾತನಾಡಿಕೊಳ್ಳುತ್ತಾರೆ. ರಮೇಶ್ ಕುಮಾರ್ ರನ್ನು ಸರಕಾರ ಕೂಗು ಮಾರಿ ಮಾಡಬಾರದು. ರಮೇಶ್ ಕುಮಾರ್ ರಿಗೆ ಖಾಸಗಿ ಆಸ್ಪತ್ರೆಗಳ ಮೇಲೆ ವೈಯಕ್ತಿಕ ದ್ವೇಷ ಏಕಿರುತ್ತದೆ? ಹಾಗೂ ಒಂದು ವೇಳೆ ಇದೆ ಎಂದು ವಾದಿಸುವವರಿದ್ದರೆ, ಇಷ್ಟೊಂದು ಮಂದಿಯನ್ನು ಎದುರು ಹಾಕಿಕೊಂಡು ಯಾಕೆ ತಿದ್ದುಪಡಿ ಜಾರಿಗೆ ತರ್ತಾರೆ? ತಪ್ಪು ಮಾಡಲ್ಲ ಅನ್ನೋರಿಗೆ ಕಾಯ್ದೆ -ಕಾನೂನಿನ ಭಯ ಏಕೆ?