ಇಸ್ಲಾಂ ಧರ್ಮ, ಹಂದಿ ಮಾಂಸ ಸೇವನೆ : ಮುಸಲ್ಮಾನರೊಬ್ಬರ ಪತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಂಸದೂಟ ಮಾಡಿದ ಮೇಲೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಹೋದರಂತೆ. ಸೋಮವಾರದ ಬೆಳಗ್ಗೆಯಿಂದ ಈ ಸುದ್ದಿಯೇ ಎಲ್ಲ ಮಾಧ್ಯಮಗಳಲ್ಲಿ ಬರುತ್ತಿದೆ. ಸಿದ್ದರಾಮಯ್ಯ ಅವರು ಜಾತಿಯಿಂದ ಕುರುಬರು. ಹೋಗಿರುವ ದೇವಸ್ಥಾನ ಮಂಜುನಾಥನದು. ಅದರ ಪಾರುಪತ್ಯೆ ವಹಿಸಿಕೊಂಡವರು ಜೈನರು.
ಇಡೀ ಕರ್ನಾಟಕ ಅಷ್ಟೇ ಅಲ್ಲ, ದೇಶ-ವಿದೇಶಗಳವರು ನಡೆದುಕೊಳ್ಳುವ ಮಂಜುನಾಥ ದೇವಸ್ಥಾನಕ್ಕೆ ಮಾಂಸದೂಟ ಮಾಡಿ ಹೋಗಬೇಕೋ ಬೇಡವೋ ಅನ್ನುವುದನ್ನು ಹಿಂದೂ ಧಾರ್ಮಿಕ ಮುಖಂಡರು ಹಾಗೂ ದೇವಸ್ಥಾನದ ಉಸ್ತುವಾರಿ ವಹಿಸಿರುವ ಜೈನ ಧರ್ಮದ ವೀರೇಂದ್ರ ಹೆಗ್ಗಡೆಯವರು ನಿರ್ಧರಿಸಬೇಕು. ಹೌದೋ, ಅಲ್ಲವೋ?
ಅದು ಬಿಟ್ಟು, ಸಿದ್ದರಾಮಯ್ಯ ಅವರು ಮಾಂಸ ತಿಂದು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬಂದಿದ್ದಲ್ಲ. ಅದೇ ರೀತಿ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ ನೋಡೋಣ ಅಂತ ಸವಾಲು ಹಾಕುವವರೇ ಹೆಚ್ಚಾಗಿದ್ದಾರೆ. ನಾಲ್ಕು ಸಲ ಶಾಸಕರಾಗಿದ್ದವರು, ಸಚಿವರಾಗಿದ್ದ ತುಮಕೂರಿನ ಸೊಗಡು ಶಿವಣ್ಣ ಅವರಿಗೆ ಒಂದಿಷ್ಟು ಆಲೋಚನೆ ಬೇಡವೆ?
ಪತ್ರಿಕಾಗೋಷ್ಠಿ ಮಾಡಿದವರು ತಮ್ಮ ಪಕ್ಕದಲ್ಲಿ ಹಿಂದೂ ಧರ್ಮದ ಪಂಡಿತರನ್ನು ಕೂರಿಸಿಕೊಂಡು ಸಿದ್ದರಾಮಯ್ಯ ಅವರಿಗೆ ಹೀಗಲ್ಲ ಹಾಗೆ ಅಂತ ಹೇಳಲಿ. ಏಕೆಂದರೆ ಸಿದ್ದರಾಮಯ್ಯ ಅವರಿಗೆ ಬಂಟ್ವಾಳದಲ್ಲಿ ಮಾಂಸದೂಟ ಬಡಿಸಿದ್ದು ಮುಸ್ಲಿಂ ಅಲ್ಲ. ನೀವು ದೇವಸ್ಥಾನಕ್ಕೆ ಹೋಗಬೇಕು ಅಂತ ಬಲವಂತ ಮಾಡಿದವರೇನೂ ಮುಸ್ಲಿಮರಲ್ಲ. ಹಾಗಿದ್ದ ಮೇಲೆ ಇವರ್ಯಾಕೆ ಸ್ವಾಮಿ ಮುಸ್ಲಿಮರನ್ನು ಎಳೆದು ತರ್ತಾರೆ?

ಧಾರ್ಮಿಕ ಸಲಹೆಗಾರರನ್ನು ನೇಮಿಸಿಕೊಳ್ಳಲಿ
ಇಂಥವರನ್ನೆಲ್ಲ ಯಾರಾದರೂ ನಾಯಕರು ಅಂತಾರ? ಸಿದ್ದರಾಮಯ್ಯ ಅವರಿಗೆ ಹಿಂದೂ ಧಾರ್ಮಿಕ ನಂಬಿಕೆಗಳ ಬಗ್ಗೆ ಅರಿವಿಲ್ಲ ಅಂದರೆ ಅದಕ್ಕೆ ಅಂತಲೇ ಸಲಹೆಗಾರರನ್ನಾಗಿ ಒಬ್ಬ ಪಂಡಿತರನ್ನು ನೇಮಿಸಿಕೊಳ್ಳಲಿ ಅಂತ ಸಲಹೆ ಮಾಡಲಿ. ಆದರೂ ಈ ಸಂದರ್ಭದಲ್ಲಿ ಕೆಲವು ವಿಚಾರ ಸ್ಪಷ್ಟಪಡಿಸಬೇಕಿದೆ ಆದ್ದರಿಂದ ಹೀಗೊಂದು ಪತ್ರ ಬರೆಯಬೇಕಿದೆ.

ಮೆಲುಕು ಹಾಕುವ, ಕಾಲು ಗೊರಸು ಇರುವ ಪ್ರಾಣಿಗಳನ್ನಷ್ಟೇ ಸ್ವೀಕರಿಸಬಹುದು
ಇಸ್ಲಾಮ್ ನಲ್ಲಿ ಹಂದಿ ಮಾತ್ರ ತಿನ್ನಬೇಡಿ ಎಂಬುದಿಲ್ಲ. ಮೆಲುಕು ಹಾಕುವ ಹಾಗೂ ಕಾಲು ಗೊರಸು ಇರುವ ಪ್ರಾಣಿಗಳನ್ನಷ್ಟೇ ಆಹಾರವಾಗಿ ಸ್ವೀಕರಿಸಬೇಕು ಅಂತಿದೆ. ಈ ಧಾರ್ಮಿಕ ವಿಚಾರದ ಬಗ್ಗೆ ಹೇಳುವುದಾದರೆ ಅದರಲ್ಲಿ ಹಂದಿಯೂ ಸೇರುತ್ತದೆ. ಆದ್ದರಿಂದ ಆ ಪ್ರಾಣಿಯನ್ನು ಹಾಗೂ ಅಂಥ ಪ್ರಾಣಿಯನ್ನು ಧಾರ್ಮಿಕ ನಂಬಿಕೆ ಇರುವ ಮುಸ್ಲಿಮರು ಸೇವಿಸುವುದಿಲ್ಲ.

ಬಾಯಿ ವಾಸನೆ ನೋಡಿ ಒಳಗೆ ಬಿಡಬೇಕು ಅಂತ ಎಲ್ಲೂ ಇಲ್ಲ
ಇನ್ನು ಹಂದಿ ತಿಂದು ಮಸೀದಿಗೆ ಹೋಗಲಿ ನೋಡೋಣ ಎಂಬ ಮಾತಿಗೆ, ಹಾಗೆ ತಿಂದು ಬಂದರಾ ಎಂದು ಮಸೀದಿ ಹೊರಗೆ ನಿಂತು ಬಾಯಿ ವಾಸನೆ ನೋಡಿ ಒಳಗೆ ಬಿಡಬೇಕು ಎಂದು ಎಲ್ಲೂ ಹೇಳಿಲ್ಲ. ನಮ್ಮ ನಂಬಿಕೆ ಇದು. ದೇವರಿಗೆ ಪ್ರಿಯವಾದ ವ್ಯಕ್ತಿಯ ಜೀವನ ಪದ್ಧತಿ ಇದು ಎಂದು ಹೇಳುವುದಷ್ಟೇ ನಮ್ಮ ಕರ್ತವ್ಯ. ಅದರ ಹೊರತಾಗಿಯೂ ಅಂಥ ಮಾಂಸ ತಿಂದು ಬಂದರೆ ಅದು ದೇವರಿಗೆ ಬಿಟ್ಟ ವಿಚಾರ.

ಆಪತ್ತಿಗೆ ಪಾಪವಿಲ್ಲ
ಹಿಂದೂ ಧರ್ಮದಲ್ಲಿ ಹೇಳಿರುವಂತೆ ಇಸ್ಲಾಂನಲ್ಲಿಯೂ ಆಪತ್ ಧರ್ಮ ಅಂತ ಹೇಳಿದೆ. ಜೀವ ಉಳಿಸಿಕೊಳ್ಳುವ ಸಲುವಾಗಿ, ಬೇರೇನೂ ಸಿಕ್ಕದಿದ್ದಾಗ ಹಂದಿಯನ್ನೂ ತಿನ್ನಬಹುದು. ಆದರೆ ಅದನ್ನು ಶಿಕ್ಷಾರ್ಹ ಅಪರಾಧ ಎಂದು ಅಲ್ಲಾಹ್ ಏನೂ ಪರಿಗಣಿಸುವುದಿಲ್ಲ ಅಂತ ಇದೆ.

ಬದುಕುವ ವಿಧಾನ ಪಾಲಿಸಿದರೆ ಉತ್ತಮ
ಇಸ್ಲಾಮ್ ನಲ್ಲಿ ಹೇಳಿರುವ ಬದುಕುವ ರೀತಿಯನ್ನು ಅನುಸರಿಸಿದರೆ ಇಡೀ ಜಗತ್ತು ಶಾಂತಿಯುತವಾಗಿರುತ್ತದೆ. ಕುರಾನ್, ಸುನ್ನತ್ ನಲ್ಲಿ ತಿಳಿಸಿರುವಂತೆ ಶೇಕಡಾ ನೂರರಷ್ಟು ಬದುಕುವುದು ಸಾಧ್ಯವಾಗುತ್ತಿಲ್ಲ. ನಾವು ಬಡ್ಡಿ ಹಣ ತೆಗೆದುಕೊಳ್ಳುವಂತಿಲ್ಲ, ಸುಳ್ಳು ಹೇಳುವಂತಿಲ್ಲ, ಮೆದುಳಿನ ಸ್ವಾಸ್ಥ್ಯ ಕೆಡಿಸುವಂತಹ ಪಾನೀಯ, ಪದಾರ್ಥಗಳನ್ನು ಸ್ವೀಕರಿಸುವಂತಿಲ್ಲ...ಹೀಗೆ ಹಲವು ಸೂಚನೆಗಳಿವೆ.

ಇಸ್ಲಾಮ್ ಧರ್ಮವನ್ನೇ ಏಕೆ ಎಳೆದು ತರ್ತೀರಿ?
ಯಾವುದೇ ಧರ್ಮದ ವಿಚಾರ ಬಂದಾಗ ಆಯಾ ಧರ್ಮದ ಬಗ್ಗೆ ಚರ್ಚೆ ಮಾಡಿಕೊಳ್ಳಲಿ. ಸಿಖ್, ಜೈನ್, ಪಾರ್ಸಿ, ಕ್ರಿಶ್ಚಿಯನ್, ಬೌದ್ಧ ಹೀಗೆ ನಾನಾ ಧರ್ಮಗಳಿವೆ. ಅವುಗಳನ್ನೆಲ್ಲ ಬಿಟ್ಟು ಇಸ್ಲಾಮ್ ಅನ್ನೇ ಯಾಕೆ ಎಳೆದು ತರ್ತೀರಿ. ಅವುಗಳ ಪ್ರಸ್ತಾವ ಮಾಡುವುದು ಕೂಡ ತಪ್ಪೇ. ಯಾವುದೇ ರಾಜಕೀಯ ಪಕ್ಷ ಇರಲಿ. ಕೊಡುವ ಉದಾಹರಣೆ ಒಳ್ಳೆಯದೋ ಕೆಟ್ಟದ್ದೋ ಯಾವುದೇ ಇರಲಿ. ಇಸ್ಲಾಮ್, ಮುಸ್ಲಿಂ ವಿಚಾರಗಳನ್ನು ಅನವಶ್ಯಕವಾಗಿ ಎಳೆದು ತರಬೇಡಿ.












Click it and Unblock the Notifications