ಮಠಾಧೀಶರಿಗೆ ಸಂಪುಟದಲ್ಲಿ ಸ್ಥಾನ ಕೊಟ್ಟುಬಿಡಿ
ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುವುದು, ಸರ್ಕಾರ ವಿರುದ್ಧ ಮಾತನಾಡುವುದು ಒಂದು ಜನಾಂಗದ ವಿರೋಧಿಸಿದಂತೆ ಎಂಬ ಅಭಿಪ್ರಾಯವನ್ನು ಸ್ವಾಮೀಜಿಗಳು ಹೊಂದುವುದರಿಂದ ಭಾರತ ದೇಶದಲ್ಲಿ ರಾಜಕಾರಣದಲ್ಲಿರುವ ಪ್ರತಿಯೊಬ್ಬರೂ ಒಂದಲ್ಲ ಒಂದು ಜಾತಿಯವರಾಗಿದ್ದು, ಅಪರಾಧಗಳನ್ನು ಮಾಡಿದಾಗಲೆಲ್ಲಾ ಅವರವರ ಜಾತಿಯ ಮಠಾಧಿಪತಿಗಳು ಅವರವರ ಬೆಂಬಲಕ್ಕೆ ನಿಲ್ಲುತ್ತಾ ಬಂದರೆ ಅಂತಿಮವಾಗಿ ಸತ್ಯವನ್ನು ಹೇಳುವುದಿಲ್ಲ. ಅಂದರೆ ಸತ್ಯ ಸತ್ತು ನ್ಯಾಯಾಲಯಗಳು ಕೆಲಸವಿಲ್ಲದೆ ನೊಣ ಹೊಡೆಯಬೇಕಾಗುತ್ತದೆ.
ರಾಜ್ಯದಲ್ಲಿ ಕೆಲವು ಕೋಮುಗಳಲ್ಲಿ ಮತ್ತು ಹೆಚ್ಚಿನ ಜನಸಂಖ್ಯೆ ಹೊಂದಿರುವ ಜಾತಿಗಳಲ್ಲಿ ವೀರಶೈವವಾಗಿರುವ ಕಾರಣ ಅವರ ಮಠಾಧಿಪತಿಗಳು ಹೆಚ್ಚಾಗಿ ಇರುವುದರಿಂದ ಅವರುಗಳು ಬೇರೆ ಪಕ್ಷದವರನ್ನು ಅಥವಾ ಸರ್ಕಾರದ ವಿರುದ್ಧ ಹೋರಾಡುವವರನ್ನು ಬೆದರಿಸುವ ರೀತಿಯಲ್ಲಿ ತಮ್ಮ ಪಕ್ಷಪಾತದ ಅಭಿಪ್ರಾಯಗಳಿಗೆ ಧರ್ಮದ ಲೇಪನಗಳನ್ನು ಹಚ್ಚುತ್ತಿರುವುದು ಧರ್ಮಕ್ಕೆ ಮಾಡುವ ಅಪಚಾರವಾಗುತ್ತದೆ.
ಸರ್ಕಾರದ ಸಾಧನೆ, ವೈಫಲ್ಯ ಅಥವಾ ತಪ್ಪುಗಳ ಬಗ್ಗೆ ಮಠಾಧಿಪತಿಗಳು ನೀಡುವ ಅಭಿಪ್ರಾಯವೇ ಅಂತಿಮವಾಗುವುದಾದರೆ ಲೋಕಾಯುಕ್ತ ಹೈಕೋರ್ಟ್, ರಾಜ್ಯಪಾಲರು, ವಿರೋಧ ಪಕ್ಷ ಮತ್ತು ಬೇರೆ ನಾಯಕರುಗಳು ಯಾಕೆ ಬೇಕು ?
ಸಚಿವ ಸಂಪುಟದಲ್ಲಿ ಎಲ್ಲರಿಗೂ ಮೀಸಲಾತಿ ಇರುವಂತೆ ಮುಂದೆ ಆಡಳಿತ ಪಕ್ಷಗಳು ತಮ್ಮನ್ನು ಬೆಂಬಲಿಸುವ ತಮ್ಮ ಜಾತಿಯ ಅಥವಾ ತಮ್ಮನ್ನು ಸಮರ್ಥಿಸಿಕೊಳ್ಳುವ ಅನ್ಯ ಜಾತೀಯ ಮಠಾಧಿಪತಿಗಳಿಗೆ ಸಂಪುಟದಲ್ಲಿ ಸ್ಥಾನ ಮಾನ ನೀಡಿ ಸರ್ಕಾರದ ವಕ್ತಾರರಂತೆ ಅವರನ್ನು ನೇಮಕ ಮಾಡಿಕೊಂಡರೆ ಒಳ್ಳೆಯದು.