ರಾವಣ ಕೆಎಫ್ ಸಿಸಿ ಸಮರ, ಓದುಗರ ಜೈಕಾರ
ಹಿಂದಿ, ತಮಿಳು, ತೆಲುಗು, ಇಂಗ್ಲೀಷ್ ಸೇರಿದಂತೆ ಪರಭಾಷಾ ಚಿತ್ರಗಳಿಗೆ ಕರ್ನಾಟಕ ಪ್ರಾಥಮಿಕ ಮಾರುಕಟ್ಟೆಯಲ್ಲ. ಆ ಕಾರಣದಿಂದಲೇ ಅವುಗಳ ಬಿಡುಗಡೆಯನ್ನು ನಿರ್ದಿಷ್ಟ ಸಂಖ್ಯೆಗೆ ಮಂಡಳಿಯ ನಿಯಮದಂತೆ ಮಿತಿಗೊಳಿಸಲಾಗಿದೆ.
ಆದರೆ ಕನ್ನಡ ಚಿತ್ರಗಳಿಗೆ ಕರ್ನಾಟಕವೇ ಮೂಲ ಮಾರುಕಟ್ಟೆ ಆಗಿದೆ. ಪ್ರತಿ ವಾರ ಬಿಡುಗಡೆಯಾಗುವ ಕನ್ನಡ ಚಿತ್ರಗಳ ಹಿತಾಸಕ್ತಿಯನ್ನು ಕಾಪಾಡುವುದು ಈ ನಿಯಮದ ಮೂಲ ಉದ್ದೇಶವಾಗಿದೆ.ಆದ್ರೆ ಈ ನಿಯಮ ಮೀರೋ ಕೆಲಸ ಆಗಾಗ ಆಗ್ತಾ ಇರುತ್ತೆ. ಪರಭಾಷೆಯ ದೊಡ್ಡ ಚಿತ್ರಗಳು ಬಿಡುಗಡೆ ಆಗೋ ಸಂದರ್ಭದ ಇದು ಮತ್ತಷ್ಟು ತೀವ್ರತೆ ಪಡ್ಕೊಳುತ್ತೆ.
ರಿಲಯನ್ಸ್ ಬಿಗ್ ಪಿಕ್ಚರ್ಸ್ ನವರು ಕೈಟ್ಸ್ ಚಿತ್ರ ಬಿಡುಗಡೆ ಸಂದರ್ಭದಲ್ಲೂ ಇದೇ ರೀತಿ ವರ್ತಿಸಿದ್ದರು, ನಗರ ಮೈಸೂರು ರಸ್ತೆಯಲ್ಲಿನ ಬಿಗ್ ಸಿನಿಮಾಸ್ ಚಿತ್ರಮಂದಿರಕ್ಕೆ ರಾಜ್ಯದ ಸಿನಿ ಕಲಾವಿದರು, ಕೆಎಫ್ ಸಿಸಿ ಅಧಿಕಾರಿಗಳು ಮುತ್ತಿಗೆ ಹಾಕಿ ಶಕ್ತಿ ಪ್ರದರ್ಶನ ಮಾಡದಿದ್ದರೆ, ನಿಯಮಗಳನ್ನು ಗಾಳಿಪಟ ಮಾಡಿ ಆಕಾಶಕ್ಕೆ ತೂರಿ ಬಿಡುತ್ತಿದ್ದರು. ಸದ್ಯಕ್ಕೆ ಹಾಗಾಗಲಿಲ್ಲ. ಕೆಎಫ್ ಸಿಸಿ ಜೊತೆಗೆ ಕಲಾವಿದರು ಒಗ್ಗಟ್ಟಾಗಿ ಸಹಕರಿಸುವುದು ಮುಖ್ಯ
ಹಿಂದೆ ಅನೇಕ ಚಿತ್ರಗಳ ಬಿಡುಗಡೆ ಕಾಲದಲ್ಲಿ ಹೀಗೆ ಜಂಟಲ್ಮನ್ ಅಗ್ರಿಮೆಂಟ್ನ ಧಿಕ್ಕರಿಸೋದು ನಡೆದಿದೆ. ಆದ್ದರಿಂದ ಇನ್ನು ಮುಂದೆಯಾದರೂ ಇಂತಹ ನಿಯಮ ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ. ಇದರಿಂದ ಪರಭಾಷಾ ಚಿತ್ರಗಳ ಹಾವಳಿಯನ್ನು ತಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಇನ್ನಷ್ಟು ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿದೆ.