ಗೋಹತ್ಯೆ, ಬಹುಪತ್ನಿತ್ವ ನಿಷೇಧಿಸಿ:ರಾಮಾ ಜೋಯಿಸ್
ಈ ದೇಶದ ಅತಿ ಹೆಚ್ಚು ಸಂಖ್ಯೆಯ ಜನರು ಗೋಮಾತೆಯನ್ನು ಅತಿ ಪವಿತ್ರ ಎಂದು ಭಾವಿಸಿದ್ದು ಆಕೆಯನ್ನು ತಾಯಿಯ ಮಟ್ಟಕ್ಕೆ ಏರಿಸಿ ಪೂಜಿಸುತ್ತಿದ್ದಾರೆ. ಯುವಕರು ಮದ್ಯಪಾನದ ಚಟಕ್ಕೆ ಬೀಳುವುದನ್ನು ತಡೆಯಬೇಕು ಎಂಬ ಬೇಡಿಕೆಯೂ ಸಹ ಮಹಾತ್ಮ ಗಾಂಧಿಯವರ ನೇತೃತ್ವದ ಸ್ವಾತಂತ್ರ್ಯ ಚಳವಳಿಯ ಕಾಲದಿಂದಲೂ ಇದೆ. ಈ ದುಶ್ಚಟದ ಮೂಲೋತ್ಪಾಟನೆಯಾಗದ ಹೊರತು ಹಿಂದುಳಿದ ವರ್ಗಗಳ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನರ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ಸಾಧ್ಯವಾಗದು.
ಹಾಗಾಗಿ ಮದ್ಯಪಾನದ ಅಂಗಡಿಗಳ ಬಹಿಷ್ಕಾರ ಸ್ವಾತಂತ್ರ್ಯ ಚಳವಳಿಯ ಭಾಗವೂ ಆಗಿತ್ತು. ಈ ದೃಷ್ಟಿಯಿಂದ ಸಂವಿಧಾನದಲ್ಲಿ 48ನೇ ವಿಧಿಯನ್ನು ಪರಿಚಯಿಸಲಾಯಿತು. ಇದು ಗೋವು ಹಾಗೂ ಅದರ ಸಂತತಿಯ ಹತ್ಯೆಯನ್ನು ನಿಷೇಸಲು ಸೂಕ್ತ ಕಾನೂನು ರೂಪಿಸುವ ಅಧಿಕಾರವನ್ನು ಸರಕಾರಕ್ಕೆ ನೀಡುತ್ತದೆ. ಇದೇ ರೀತಿ, ಸಂವಿಧಾನದ 47 ನೇ ವಿಧಿ, ಔಷಧೀಯ ಉದ್ದೇಶದ ಹೊರತಾಗಿ ಮತ್ತು ಬರಿಸುವ ಪೇಯಗಳ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸುವ ನಿರ್ದೇಶನವನ್ನು ಹೊರಡಿಸುವ ಅಧಿಕಾರವನ್ನು ಸರಕಾರಕ್ಕೆ ನೀಡುತ್ತದೆ.
ಇದೇ ರೀತಿ ಸಂವಿಧಾನ ನಿರ್ಮಾಪಕರು 14, 15 ಮತ್ತು 16 ನೇ ವಿಧಿಗಳ ಅನ್ವಯ, ಸಮಾನತೆಯ ಹಕ್ಕಿನ ಜತೆಗೆ ಜಾತಿ, ಧರ್ಮ ಮತ್ತು ಲಿಂಗದ ಆಧಾರದ ಮೇಲೆ ತಾರತಮ್ಯ ತೋರುವುದರ ವಿರುದ್ಧ ನಿಷೇಧದ ಅಧಿಕಾರವನ್ನು ಸಹ ಒದಗಿಸಿದರು. ಈ ಸಮಾನತೆಯ ಹಕ್ಕು ಮತ್ತು ತಾರತಮ್ಯ ನಿಷೇಧ ಕೇವಲ ಲಿಂಗ ಮತ್ತು ಧರ್ಮದ ಆಧಾರದ ಮೇಲೆ ಮಾತ್ರ ಇದ್ದ ಕಾರಣ 44 ನೇ ವಿಧಿಯನ್ನು ಪರಿಚಯಿಸಲಾಯಿತು. ಇದು, ಎಲ್ಲ ನಾಗರಿಕರನ್ನು ಸಮಾನವಾಗಿ ಪರಿಗಣಿಸುವ ಮತ್ತು ವಿಶೇಷವಾಗಿ ವಿವಾಹ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದಂತೆ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲು ಸರಕಾರಕ್ಕೆ ನಿರ್ದೇಶನ ನೀಡಿತು.
ದುರದೃಷ್ಟವಶಾತ್ ಸಂವಿಧಾನದ 4ನೇ ಭಾಗದಲ್ಲಿ ಅಳವಡಿಕೆಯಾದ ಈ ಮೂರು ಕಲಮುಗಳು , ಈ ಪೈಕಿ 6ನೇ ಕಲಮುವಿನಲ್ಲಿ ನೀಡಲಾದ 37ನೇ ಕಲಮಿನ ಅನ್ವಯ ಇವು ದೇಶದ ಆಡಳಿತದಲ್ಲಿ ಮೂಲಭೂತವಾಗಿದ್ದರೂ ನ್ಯಾಯಾಲಯದಲ್ಲಿ ಜಾರಿಯಾಗುವಂತೆಯೇ ಇಲ್ಲ. ಇದರ ಪರಿಣಾಮವಾಗಿ ಕೇಂದ್ರ ಅಥವಾ ರಾಜ್ಯ ಸರಕಾರಗಳಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾಗುವ ವ್ಯಕ್ತಿಗಳು, ತಾವು ಸಂವಿಧಾನದ ನಿಯಮಗಳಿಗೆ ಬದ್ಧರಾಗಿರುವುದಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಈ ವಿಧಿಗಳು ಜಾರಿಯಾಗಿಲ್ಲ.
ಹೀಗಾಗಿ ರಾಜ್ಯಸಭಾ ಸದಸ್ಯನಾಗಿರುವ ನಾನು ಈ ನಿರ್ದೇಶನಗಳನ್ನು ಸಂವಿಧಾನದ 15ಎ, 17ಎ ಮತ್ತು 17ಬಿ ವಿಧಿಗಳ ಅನ್ವಯ ಮೂಲಭೂತ ಹಕ್ಕುಗಳಾಗಿಸುವ ನಿಟ್ಟಿನಲ್ಲಿ ಡಿಸೆಂಬರ್ 12ರಂದು ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಮಂಡಿಸಿದ್ದೇನೆ. ಉದ್ದೇಶಿತ ಸಂವಿಧಾನ ತಿದ್ದುಪಡಿ ವಿಧೇಯಕಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಬೆಂಬಲ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ.