ಬೆಅಂವಿ ನಿಲ್ದಾಣಕ್ಕೆ ಗಂಗಜ್ಜಿ ಹೆಸರಿಡಿ
ಗಂಗೂಬಾಯಿ ಅವರ ನಿಧಕ್ಕೆ ಸರಕಾರ ತೀವ್ರ ಶೋಕ ವ್ಯಕ್ತಪಡಿಸಿದೆ. ಜೊತೆಗೆ ಹುಬ್ಬಳ್ಳಿಯಲ್ಲಿ ನೂತನವಾಗಿ ಸ್ಥಾಪಿಸಲಾಗುವ ಸಂಗೀತ ವಿಶ್ವವಿದ್ಯಾಲಯಕ್ಕೆ ಗಂಗೂಬಾಯಿ ಅವರ ಹೆಸರಿಡುವ ಕುರಿತು ಚಿಂತನೆ ನಡೆಸಲಾಗಿದೆ. ಹುಬ್ಬಳ್ಳಿ-ಧಾರವಾಡ ವ್ಯಾಪ್ತಿ ಶಿಕ್ಷಣ ಸಂಸ್ಥೆಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿ ಎರಡು ದಿನ ಶೋಕಾಚರಣೆ ಆಚರಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ.
ಗಂಗೂಬಾಯಿ ಹಾನಗಲ್ ಎಂದ ತಕ್ಷಣ ಕರ್ನಾಟಕದ ಹೆಸರು ಬೆನ್ನಹಿಂದೆ ಬಂದು ನಿಲ್ಲಲಿದೆ. ದೇಶ ವಿದೇಶಗಳಲ್ಲಿ ಕನ್ನಡದ ಕಂಪನ್ನು ತಮ್ಮ ಗಾಯನದ ಮೂಲಕ ಹರಿಯುವಂತೆ ಮಾಡಿರುವ ಗಂಗೂಬಾಯಿ ಹಾನಗಲ್ ಅವರ ಹೆಸರನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಸಂಗೀತ ವಿವಿಗೆ ಹೆಸರಿಟ್ಟರೆ ಸಾಲದು. ಅವರು ಒಂದು ಪ್ರದೇಶಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ರಾಜ್ಯ ಹಾಗೂ ದೇಶ ಕಂಡ ಅಪರೂಪದ ಕಲಾವಿದೆ. ಇಂತಹ ಕಲಾವಿದೆಗೆ ಸೂಕ್ತ ಮಾನ ಸನ್ಮಾನಗಳನ್ನು ಮಾಡುವುದು ಸರಕಾರದ ಕರ್ತವ್ಯ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗಂಗೂಬಾಯಿ ಹಾನಗಲ್ ಅವರ ಹೆಸರಿಡುವುದು ಅತ್ಯಂತ ಸೂಕ್ತ. ನಾಡಿನ ಸಮಸ್ತ ನಾಗರಿಕರೂ ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಈ ಕೆಲಸಕ್ಕೆ ಮುಂದಾದರೆ, ಸಂಗೀತ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದ ಮೇರು ಸಾಧಕಿಗೆ ಅಷ್ಟರ ಮಟ್ಟಿಗೆ ಗೌರವಿಸಿದಂತಾಗುತ್ತದೆ. ಪ್ರತಿಪಕ್ಷಗಳು ಈಗಾಗಲೇ ಗಂಗೂಬಾಯಿಗೆ ಭಾರತರತ್ನ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಿ ಎಂದು ದುಂಬಾಲು ಬಿದ್ದಿವೆ. ಇದರ ಜೊತೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಗಂಗೂಬಾಯಿ ಹಾನಗಲ್ ಅವರ ಹೆಸರಿಡಿ ಎಂದು ಒತ್ತಡ ಹೇರುವುದು ಸಕಾಲ.
ಸಿನಿಮಾ ನಟನಟಿಯರು ಎದ್ರು ಒಂದ್ ಹಾಡು, ಬಿದ್ರು ಒಂದ್ ಹಾಡು ಪ್ರಸಾರ ಮಾಡುವ ಕನ್ನಡ ಎಫ್ಎಂಗಳು ಹಿಂದೂಸ್ತಾನಿ ಸಂಗೀತದ ಮೇರು ಶಿಖರದ ಸಂಗೀತಗಳಿಗೆ ಆದ್ಯತೆ ನೀಡಬೇಕಿದೆ. ಅವರ ಗೌರವಾರ್ಥವಾಗಿ ಒಂದು ದಿನದ ಮಟ್ಟಿಗಾದರೂ ಹಿಂದೂಸ್ತಾನಿ ಸಂಗೀತ ರಸದೌತಣವನ್ನು ಅಭಿಮಾನಿಗಳಿಗೆ ನೀಡಬೇಕಿದೆ.