ಹಳೆ ಚಿತ್ರಗೀತೆ ಪ್ರಸಾರ ಹೆಚ್ಚಲಿ, ಶೋತೃಗಳ ಕೋರಿಕೆ
ಹಳೆ ಚಿತ್ರಗೀತೆ ಪ್ರಸಾರ ಹೆಚ್ಚಲಿ
ಕನ್ನಡ ಚಿತ್ರಗಳಲ್ಲಿ ಸಾಕಷ್ಟು ಉತ್ತಮ ಗೀತೆಗಳು ರಚನೆಗೊಂಡಿವೆ. ಅದೂ ಹಳೆ ಚಿತ್ರಗಳಲ್ಲಿ ಮೂಡಿ ಬಂದಿರುವ ಗೀತೆಗಳಂತೂ ಅರ್ಥಪೂರ್ಣವಾಗಿದೆ. ದುರದೃಷ್ಟವೆಂದರೆ ಇತ್ತೀಚಿನ ದಿನಗಳಲ್ಲಿ ಅವುಗಳನ್ನು ಕೇಳುವುದೇ ಕಷ್ಟ.
'ಮನವೇ ಮಂದಿರಾ.. .. . .ನ್ಯಾಯ ದೇಗುಲಾ... ' ಕವಿ ಜಿ.ವಿ. ನಂಜರಾಜೇಅರಸ್ ರಚಿಸಿ, ವಿಜಯಭಾಸ್ಕರ್ ಸಂಗೀತ ನೀಡಿದ 'ತೂಗುದೀಪ' ಚಿತ್ರದ ಗೀತೆ, 'ಕನ್ಯಾ ರತ್ನ' ದ 'ಎಲ್ಲಿಹರೋ ನಲ್ಲಾ..', 'ಕುಲವಧು' ಚಿತ್ರದ 'ಒಲವಿನ ಪ್ರಿಯಲತೆ...', 'ಕನಕದಾಸ' ಚಿತ್ರದ 'ಶೃಂಗಾರ ಶೀಲಾ.... ಗೀತೆಗಳ ಬಗ್ಗೆ ಯುವ ಜನತೆಯಲ್ಲಿ ಅರಿವು ಇಲ್ಲ .ಹೀಗೆ ಮುಂದುವರೆದರೆ ಮುಂದಿನ ಪೀಳಿಗೆಗೆ ಹಳೆಯ ಗೀತೆಗಳ ಬಗ್ಗೆ ಕಿಂಚಿತ್ತೂ ತಿಳಿವಳಿಕೆ ಇರುವುದಿಲ್ಲ. ಈ ಉದ್ದೇಶದಿಂದ ಹಳೆ ಹಾಡು ಪ್ರಚಾರಕ್ಕೆ ಅವಕಾಶ ಕಲ್ಪಿಸುವುದು ಒಳಿತು.
ಸಾಕಷ್ಟು ಚಿತ್ರಗಳ ಹಾಡುಗಳನ್ನು ರೇಡಿಯೋ ಹಾಗೂ ಟಿವಿಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಆದರೆ ಹಳೆಯ ಗೀತೆಗಳ ಪ್ರಸಾರಕ್ಕೆ ಒತ್ತು ನೀಡುತ್ತಿಲ್ಲ. ಕೋರಿಕೆ ಗೀತೆಗಳಿಗಾಗಿ ದೂರವಾಣಿ ಮೂಲಕಕರೆ ಮಾಡುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಅಂಚೆ ಕಾರ್ಡ್ ಮೂಲಕ ಕಳುಹಿಸಿದರೆ ಅದಕ್ಕೆ ಸ್ಪಂದಿಸುವುದೇ ಇಲ .ಮುಂದೊಂದು ದಿನ ಶೋತೃಗಳ ಕೋರಿಕೆ ಕೇವಲ ದೂರವಾಣಿ ಕರೆಗಳಿಗಷ್ಟೇ ಸೀಮಿತವಾಗಿ ಪತ್ರ ಸಂಸ್ಕೃತಿ ಮೂಲೆಗುಂಪಾದರೂ ಆಶ್ಚರ್ಯವಿಲ್ಲ.
60 ರ ದಶಕದಲ್ಲಿ ತೆರೆಕಂಡ ಭಕ್ತಿ ಪ್ರಧಾನ 'ಶ್ರೀಪುರಂದರ ದಾಸರು" ಚಿತ್ರದ ಸುಮಧುರ ಹಾಡುಗಳು ಇಂಪಾಗಿವೆ. ಈ ಚಿತ್ರಕ್ಕೆ ಸಂಗೀತ ನೀಡಿದವರು ಆರ್. ಪಾಂಡುರಂಗ. ಇವರ ಬಗ್ಗೆ ಯುವ ಪೀಳಿಗೆಯಲ್ಲಿ ಹೆಚ್ಚಿನ ಅರಿವು ಇಲ್ಲ. ಇಂತಹ ಹಲವು ಚಿತ್ರಗಳ ಗೀತೆಗಳು ಉತ್ತಮವಾಗಿವೆ. ಇಂತಹ ಗೀತೆಗಳನ್ನು ಪ್ರಸಾರ ಮಾಡದಿದ್ದರೆ ಅವುಗಳ ಪ್ರಾಮುಖ್ಯ ಯುವ ಜನತೆಗೆ ತಿಳಿಯುವುದೇ ಇಲ್ಲ. ಹೀಗಾಗಿ ಹಳೆ ಚಿತ್ರಗೀತೆಗಳ ಪ್ರಸಾರಕ್ಕೆ ಹೆಚ್ಚು ಒತ್ತು ನೀಡಬೇಕು.
-ಬಿ.ಎಸ್. ರಮೇಶ್, ಭುವನೇಶ್ವರಿ ನಗರ.
ಮಾನ್ಯರೇ,
ಆರ್ ಎನ್ ಜೆ ಚಿತ್ರಗೀತೆಗಳ ವೆಬ್ ಸೈಟ್ ಬರಲಿ
ನಾಲ್ಕು ದಶಕಗಳವರೆಗೆ ಕನ್ನಡ ಚಿತ್ರರಂಗದಲ್ಲಿ ಸಾವಿರಾರು ಸದಭಿರುಚಿಯ ಚಿತ್ರಗೀತೆ(ಧ್ವನಿಸುರಳಿ) ರಚಿಸಿರುವ ಆರ್. ಎನ್. ಜಯಗೋಪಾಲ್ ಇನ್ನಿಲ್ಲ .ಆದರೆ ಜನಪ್ರಿಯ ಚಿತ್ರಗೀತೆ ಹಾಗೂ ಭಕ್ತಿಗೀತಗಳ ಮೂಲಕ ಆರ್. ಎನ್ .ಜೆ ಅಮರರಾಗಿದ್ದಾರೆ.
ಆರ್.ಎನ್.ಜೆ ಅವರ ಪ್ರತಿಭೆ ಗುರುತಿಸುವಲ್ಲಿ ಚಿತ್ರೋದ್ಯಮ ಹಾಗೂ ರಾಜ್ಯ ಸರ್ಕಾರ ಎಡವಿದೆ. ಇನ್ನಾದರೂ ಅವರ ಮಧುರ ಗೀತೆಗಳ ಚಿತ್ರಗೀತೆಗಳನ್ನು ಮುಂದಿನ ಪೀಳಿಗೆಯ ಕೇಳುಗರನ್ನುತಲುಪಿಸುವ ಕಾರ್ಯ ನಡೆಯಲಿ. ಕಾಪಿರೈಟ್ ಇರಬೇಕೆಂದು ರಾಷ್ಟ್ರಮಟ್ಟದಲ್ಲಿ ಆರ್.ಎನ್. ಜಯಗೋಪಾಲ್ ನಡೆಸಿದ ಹೋರಾಟ ಮರೆಯುವಂತಿಲ್ಲ. ಆರ್.ಎನ್.ಜೆ ಯವರ ಕನಸಾಗಿದ್ದ ಕನ್ನಡ ಚಿತ್ರಗೀತೆಗಳ ವೆಬ್ ಸೈಟ್, ಚಿತ್ರಗೀತೆಗಳ ಸಂಗ್ರಹಾಲಯದ ಕನಸನ್ನು ಸರ್ಕಾರ ನನಸು ಮಾಡಲಿ.
-ಕಾಡನೂರು ರಾಮಶೇಷ, ಬನಶಂಕರಿ 1ನೇ ಹಂತ.












Click it and Unblock the Notifications