ಕನ್ನಡದ ಮಕ್ಕಳೆಲ್ಲ ಒಂದಾಗಬನ್ನಿ
ವಿವಾದಿತ ಹೊಗೇನಕಲ್ ಹೋರಾಟದಲ್ಲಿ ಕನ್ನಡಪರ ಸಂಘಟನೆಗಳ ನೇತೃತ್ವವಹಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡರೇ ಒಂದು ಬಾರಿ ಸಂದರ್ಶನವೊಂದರಲ್ಲಿ ಒಗ್ಗಟ್ಟಿಗೆ ಸಂಬಂಧಿಸಿದಂತೆ ತಮಿಳುನಾಡಿನ ಜನತೆಯಿಂದ ಕಲಿಯುವುದು ಸಾಕಷ್ಟಿದೆ ಎಂದು ಒಪ್ಪಿಕೊಂಡಿದ್ದರು.
ಈ ದಿಸೆಯಲ್ಲಿ ಕನ್ನಡ ಶಕ್ತಿ ಗುಂಪುಗಳು ಚಿಲ್ಲರೆ ಬೇಧಭಾವಗಳನ್ನು ಬದಿಗಿಟ್ಟು ಒಮ್ಮನಸ್ಸಿನಿಂದ ಕೈಜೋಡಿಸಬೇಕಾದ ಸವಾಲುಗಳು ಎದುರಾಗಿವೆ. ಇದನ್ನು ಮನಗಂಡಿರುವ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ, ವಾಟಾಳ್ ಪಕ್ಷ, ಗಡಿ ಹಿತರಕ್ಷಣಾ ಸಮಿತಿ, ಹೊಗೇನಕಲ್ ಹೋರಾಟ ಸಮಿತಿ, ಚಂಪಾ, ಪಾಪು ಸೇರಿದಂತೆ ಕನ್ನಡಪರ ಸಂಘಟನೆಗಳು ಒಗ್ಗಟ್ಟಿನಿಂದ ಕರ್ನಾಟಕದ ಜೀವನದಿ ಕಾವೇರಿಯನ್ನು ಉಳಿಸಿಕೊಳ್ಳಲು ಚಳವಳಿಗೆ ಧುಮುಕಿರುವುದು ಸ್ವಾಗತಾರ್ಹ ಬೆಳವಣಿಗೆ. ತನ್ನ ಸ್ವಾರ್ಥಸಾಧನೆಗಾಗಿ ಕರ್ನಾಟಕವನ್ನು ಸದಾ ಪೀಡಿಸುವ ಹಠಮಾರಿ ತಮಿಳುನಾಡು ಸರ್ಕಾರದ ವಿರುದ್ಧ ಸೆಡ್ಡುಹೊಡೆದು ನಿಂತಿವೆ.
ಚುನಾವಣೆ ಹೇಗಿದ್ದರೂ ಹತ್ತಿರ ಬಂದಿದೆ. ಈ ಸಮಯದಲ್ಲೂ ಈ ಹೋರಾಟಕ್ಕೆ ಬೆಂಬಲ ಸೂಚಿಸದಿದ್ದರೆ ಜನ ಮೆಟ್ಟುತೆಗೆದು ಹೊಡೆದಾರೆಂದು ರಾಜಕೀಯ ಪಕ್ಷಗಳೆಲ್ಲ ಸ್ವತಃ ಹೋರಾಟಕ್ಕೆ ಧುಮುಕದಿದ್ದರೂ ಇದ್ದಲ್ಲಿಂದಲೇ ಕನ್ನಡ ಪರವಾಗಿ ಹೇಳಿಕೆಗಳನ್ನು ನೀಡಿವೆ. ಆದರೆ, ತಮಿಳುನಾಡಿನ ಸಮಸ್ತ ಕಲಾವಿದರು, ಮೂಲ ಕನ್ನಡ ನೆಲವದರು ಸೇರಿದಂತೆ ಹೊಗೇನಕಲ್ ಯೋಜನೆಗಾಗಿ ಕೈಕಟ್ಟಿ ನಿಂತಿದ್ದಾರೆ. ತಡವಾದರೆ ಕೆಟ್ಟೀತೆಂದು ಸಾ.ರಾ. ಗೋವಿಂದು ಕೂಡ ಏಪ್ರಿಲ್ ಹತ್ತರಂದು ಕರೆಯಲಾಗಿರುವ ಕರ್ನಾಟಕ ಬಂದ್ಗೆ ಬೆಂಬಲಿಸುವುದಾಗಿ ಗುರುವಾರ ಹೇಳಿಕೆ ನೀಡಿದ್ದಾರೆ. ಅವರನ್ನು ಬಿಟ್ಟರೆ ಉಳಿದ ಯಾವ ಕನ್ನಡ ಕನ್ನಡ ನಟ ನಟಿಯರೂ ಯಾವುದೇ ಬಗೆಯಾದ ಹೇಳಿಕೆ ನೀಡಿಲ್ಲ. ಕಾದು ನೋಡುವ ತಂತ್ರವಿರಬೇಕು!
ಅತ್ತ , ತಮಿಳು ನಿರ್ಮಾಪಕರ ಸಂಘ ಕರೆ ನೀಡಿದ್ದ ಉಪವಾಸ ಸತ್ಯಾಗ್ರಹಕ್ಕೆ ಥೇಟ್ ಫಿಲ್ಮಿ ಸ್ಟೈಲ್ನಲ್ಲಿ ತಮಿಳುನಾಡಿನ ಆರಾಧ್ಯ ನಟ ರಜನಿಕಾಂತ್ ಕುಸೇಲನ್ ಚಿತ್ರೀಕರಣವನ್ನು ಅಲ್ಲಿಗೇ ಬಿಟ್ಟು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವುದಾಗಿ ಹೇಳಿಕೆ ನೀಡಿದ್ದಾರೆ. ಕನ್ನಡ ನೆಲದವರಾದರೂ ತಮಿಳು ಅನ್ನ ತಿಂದು ಬೆಳೆದಿರುವ ರಜನಿ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿರುವುದರಿಂದ ತಮಿಳರ ಹೋರಾಟಕ್ಕೆ ಆನೆಬಲ ಬಂದಂತಾಗಿದೆ. ತಮಿಳಿನ ಮತ್ತೊಬ್ಬ ಸೂಪರ್ ಸ್ಟಾರ್ ಕಮಲ್ ಹಾಸನ್ ತಮ್ಮ ಎಲ್ಲಾ ಶೂಟಿಂಗ್ಗಳನ್ನು ಬದಿಗಿಟ್ಟು ಚಳವಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ತಾವೂ ಭಾಗವಹಿಸುವುದಾಗಿ ಹೇಳಿದ್ದಾರೆ. ಇಬ್ಬರೂ ಸೂಪರ್ ಸ್ಟಾರ್ಗಳು ಭಾಗವಹಿಸುತ್ತಾರೆಂದ ಮೇಲೆ ಉಳಿದವರ ಬಗ್ಗೆ ಕೇಳಬೇಕೆ. ಅರ್ಜುನ್, ಪ್ರಕಾಶ್, ಮುರುಳಿ ಎಲ್ಲ ಧುಮುಕಿಯೇ ಧುಮುಕುತ್ತಾರೆ.
ಇರಲಿ, ಅಲ್ಲಿ ಇಡೀ ನಾಡಿಗೆ ನಾಡೇ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಯ ಜನರ ನೀರಿಗಾಗಿ ಕೈಕೈಹಿಡಿದು ನಿಂತಿರುವಾಗ ನಮ್ಮ ಧೀರೋದಾತ್ತ ನಟರಿಗೇನಾಗಿದೆ? ಹಿಯಾಳಿಸುವುದಕ್ಕೆ ಇದು ಸಕಾಲವಲ್ಲವಾದರೂ ಕೆಲವರನ್ನಾದರೂ ಬಡಿದೆಬ್ಬಿಸಲೇ ಬೇಕಾಗಿದೆ. ಇಡೀ ಚಳವಳಿಯ ಮುಂಚೂಣಿಯನ್ನು ವಹಿಸುವ ಅಗತ್ಯವಿಲ್ಲದಿದ್ದರೂ ಚಿತ್ರರಂಗದ ನೇತೃತ್ವವಹಿಸುವ ಮತ್ತು ತನ್ನ ಹಿಂದೆ ಎಲ್ಲರನ್ನೂ ಕರೆದುಕೊಂಡು ಹೋಗುವ ತಾಕತ್ತಿನ ಒಬ್ಬೇ ಒಬ್ಬ ದಿಗ್ಗಜನಿಲ್ಲವೆ? ಇಲ್ಲೂ ಸಾಕಷ್ಟು ತಮಿಳು ನಟನಟಿಯರು ಕಾಲಿಟ್ಟಿದ್ದಾರೆ. ಅವರೆಲ್ಲರೂ ಕನ್ನಡಪರವಾಗಿ ಹೋರಾಟಕ್ಕೆ ಇಳಿಯಲೇಬೇಕು ಎಂದು ಆರ್ಡರ್ ನೀಡುವ ಧ್ವನಿಗಳು ಎಲ್ಲಿ ಹೋಗಿವೆ?
ಬರೀ ಕನ್ನಡಪರ ಹೋರಾಟಗಾರರು, ನಟನಟಿಯರು ಅಷ್ಟೇ ಏಕೆ ಕನ್ನಡ ನೆಲದ ಗಾಳಿ, ನೀರು ಕುಡಿದು ಅನ್ನ ಉಂಡಿರುವ ನೆರೆ ರಾಜ್ಯದ ಐಟಿ ತಜ್ಞರು ಕನ್ನಡದ ಹೋರಾಟಕ್ಕೆ ಬೆಂಬಲಿಸಿ ರಸ್ತೆಗಿಳಿಯಬೇಕು. ಏರ್ ಕಂಡೀಷನ್ ಕಚೇರಿಗಳಲ್ಲಿ ಕನ್ನಡ ವಿರುದ್ಧವಾಗಿ ಹಾಡು ಹೇಳುತ್ತಾರೆಂದು ಕಚೇರಿಯನ್ನೇ ಧ್ವಂಸ ಮಾಡಿದ ಕರವೇಯವರು ಐಟಿ ತಜ್ಞರನ್ನೂ ಕನ್ನಡ ಹೋರಾಟಕ್ಕೆ ಇಳಿಸಲಿ. ಈ ಹೋರಾಟ ಕನ್ನಡ ಸಂಘಟನೆಗಳು ಮಾತ್ರ ಮಾಡುವ ಹೋರಾಟವಲ್ಲ. ಇದು ಕನ್ನಡ ನಾಡಿನ ನೀರು ಕುಡಿದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ನಮ್ಮ ಹೋರಾಟ ಇಲ್ಲಿಯೇ ಠಿಕಾಣಿ ಹೂಡಿರುವ ಅನ್ಯ ರಾಜ್ಯದವರ ಬಾಯಲ್ಲಿ ತಮಾಷೆಯ ವಸ್ತುವಾಗಬಾರದು.
ಅಸಲಿಗೆ ಬೆಂಗಳೂರು ಕನ್ನಡಿಗರೇ ಕಾಲಿಡದಷ್ಟು ಅನ್ಯ ರಾಜ್ಯದ ಜನತೆಯಿಂದ ತುಂಬಿ ಹೋಗಿದೆ. ಹೊಸೂರು ಬಳಿಯಿಂದ ತಲೆಯ ಮೇಲೆ ಚೀಲವಿಟ್ಟು ಹೆಂಡತಿ ಮಕ್ಕಳೊಂದಿಗೆ ಕಾಲಿರಿಸಿದವರು ಇಲ್ಲಿ ಸೈಟ್ ಸೀಯಿಂಗ್ಗೆ ಬಂದಿರುವುದಿಲ್ಲ. ಇಂಥವರನ್ನು ಇಲ್ಲಿಂದ ಒದ್ದೋಡಿಸದ ಹೊರತು ಕರ್ನಾಟಕ ಉದ್ಧಾರವಾಗುವುದಿಲ್ಲ. ವಿತ್ತ ಮಂತ್ರಿ ಬಜೆಟ್ ಮಂಡಿಸುವಾಗ, ದೇಶದ ಆರ್ಥಿಕ ಸುಧಾರಣೆಯಾಗಬೇಕಾದರೆ ಕೆಲವೊಂದು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದೇ ಗತ್ಯಂತರವಿಲ್ಲವೆಂದೇ ಹೇಳಿ ತೆರಿಗೆಯ ಭಾರ ನಮ್ಮ ಮೇಲೆ ಹೊರೆಸಿರುತ್ತಾರೆ. ಹಾಗೆಯೇ, ಕನ್ನಡಿಗರೂ ಕರ್ನಾಟಕ ಸರ್ಕಾರವೂ ಅನ್ಯ ಭಾಷಿಕರ ವಿಷಯದಲ್ಲಿ ಕೆಲ ಕಠಿಣ ಕ್ರಮ ಕೈಗೊಳ್ಳದಿದ್ದರೆ ಇನ್ನು ಕೆಲ ವರ್ಷಗಳಲ್ಲಿ ಕಾವೇರಿ ಬತ್ತಿ ಹೋಗಿರುತ್ತಾಳೆ.
ಅದಕ್ಕೇ ಇರಬೇಕು ನಾರಾಯಣ ಗೌಡರು ಹೇಳಿದ್ದು, ಅವರಿಂದ ಸಾಕಷ್ಟು ಕಲಿಯಲಿಕ್ಕಿದೆ!












Click it and Unblock the Notifications