ಬೆಳಗಾವಿ ವಿವಾದದ ಮತ್ತೊಂದು ಮುಖ!
ಮುಂದಾದರೂ ನಮ್ಮ ಅಧಿಕಾರ, ಉದ್ಯೋಗ, ಅಭಿವೃದ್ಧಿ, ಕೇಂದ್ರಿಕರಣಗೊಳ್ಳದೇ ಎಲ್ಲಾ ಪ್ರಾಂತ್ಯಗಳಲ್ಲೂ ಸಮಾನವಾಗಿ ಹಂಚಿಕೆಯಾಗಲಿ. ಸಮಗ್ರ ಕರ್ನಾಟಕ ಒಂದೇ ಎಂಬ ಭಾವನೆ ಪ್ರತಿಯೊಬ್ಬ ಸಾಮಾನ್ಯ ಕನ್ನಡ ಪ್ರಜೆಯಲ್ಲಿ ಮೂಡಲಿ.
ನ.11ರ ಶುಕ್ರವಾರ ಬೆಳಗಾವಿಯಲ್ಲಿ ನಡೆದ ರಕ್ಷಣಾ ವೇದಿಕೆಯ ಕಾರ್ಯಕರ್ತರ ಪ್ರತಿಭಟನೆ, ಇಡೀ ಕರ್ನಾಟಕದ ಕನ್ನಡ ಜನರ ಕಣ್ಣು ಬೆಳಗಾವಿಯ ಕಡೆಗೆ ನೋಡುವಂತೆ ಮಾಡಿದೆ.
ಕನ್ನಡ ಹೋರಾಟಗಾರರ ಪ್ರತಿಭಟನೆ ಕಹಿಯಾಗಿದ್ದರೂ, ಇದಕ್ಕಿಂತ ಭಿನ್ನವಾಗಿ ಕನ್ನಡ ವಿರೋಧಿ ಮಂದಿಗೆ ನಿಜವಾದ ಕನ್ನಡಿಗನ ಸ್ವಾಭಿಮಾನವನ್ನು ತೋರಿಸಲು ಸಾಧ್ಯವಿತ್ತೆ? ಅದು ಈ ಸಮಯದಲ್ಲಿ? ಆದರೆ ಈ ರೀತಿ ಕನ್ನಡಮ್ಮನ ರಕ್ಷಣೆಗೆ ಹೋರಾಡಿದ ಕನ್ನಡ ಹೋರಾಟಗಾರರು ವಿವಿಧ ರೀತಿಯ ಕೇಸುಗಳಡಿ ಫೋಲಿಸರಿಂದ ಬಂಧಿಸಲ್ಪಟ್ಟಿರುವುದು ದುಃಖ ತರುವ ವಿಷಯ. ಹಾಗೆಯೇ ಈ ಪ್ರಕರಣದ ಬಗ್ಗೆ ಎಲ್ಲಾ ವರ್ಗದ ಜನರಿಂದ ಮಿಶ್ರ ಪ್ರತಿಕ್ರಿಯೆ ಬಂದಿರುವುದು ಚಿಂತನೆಗಿಡು ಮಾಡಿರುವುದಂತು ಸತ್ಯ.
ಈ ರೀತಿಯ ಪ್ರತ್ಯೇಕತೆಯ ಕೂಗು ಎಲ್ಲಾ ಗಡಿ ಪ್ರಾಂತ್ಯಗಳಲ್ಲೂ ಕಾಣಿಸುವುದು ಸರ್ವೇಸಾಮಾನ್ಯ. ಇದಕ್ಕೆ ಕಾರಣ ಹಲವಾರು ರೀತಿ ಇರಬಹುದು. ಈ ಬಗೆಯ ಸಮಸ್ಯೆಗಳು ಪ್ರಬಲವಾಗಿ ಬೆಳೆಯದಂತೆ ಮಾಡುವುದು ಆ ರಾಜ್ಯ ಸರ್ಕಾರದ ಕರ್ತವ್ಯ. ಈ ಸಮಸ್ಯೆ ನಮ್ಮ ಸುತ್ತ ಮುತ್ತವಿರುವ ಅವಿಭಕ್ತ ಕುಟುಂಬದಲ್ಲಿಯೇ ಕಾಣಬಹುದು. ಇನ್ನೂ ಸಾವಿರಾರು ಜನರಿರುವ ಇಂಥ ಪ್ರದೇಶಗಳಲ್ಲಿ ತಾವು ವಾಸಿಸುವ ರಾಜ್ಯದ ಸರ್ಕಾರದ ಬಗ್ಗೆ ಆದರ ಧೋರಣೆಯ ಬಗ್ಗೆ ಜನ ಪ್ರತಿನಿಧಿಗಳ ಬಗ್ಗೆ ನಂಬಿಕೆ ಕಳೆದುಕೂಂಡು ಈ ನಂಬಿಕೆಯನ್ನು ಪಕ್ಕದ ರಾಜ್ಯದಲ್ಲಿ ಹರಸುವುದು ಅವರ ಹಕ್ಕಾಗಿಬಿಡುತ್ತದೆ. ಆದರೆ ಈ ರೀತಿಯ ಸಣ್ಣತನವನ್ನು ನಮ್ಮ ನಾಡಿನ ವಿಷಯದಲ್ಲಿ ತರುವುದು ಅಕ್ಷಮ್ಯ ಅಪರಾಧವೇ ಸರಿ. ನಾಡು ಒಗ್ಗಟ್ಟಾಗಿರಬೇಕು. ಆದೇ ನಮಗೆ ಶ್ರೇಯಸ್ಸು.
ಗಡಿನಾಡ ಪ್ರದೇಶಗಳ ಸುದ್ದಿ ಕೇವಲ ಈ ರೀತಿ ಸುದ್ದಿಯಾಗಬಾರದು. ಅಂದರೆ ಆ ಪ್ರದೇಶಗಳ ಅಭಿವೃದ್ಧಿ, ಕ್ಷೇಮ, ಜನರ ಏಳಿಗೆಯ ಬಗ್ಗೆ ಪ್ರಾರಂಭದಿಂದಲೂ ಕಡೆಗಣಿಸಿ, ಈ ರೀತಿಯ ಸಮಸ್ಯೆ ಬೃಹದಾಕಾರವಾಗಿ ಬೆಳೆದಾಗ ಬೆಳಗಾವಿ, ಕೊಡಗು ನಮ್ಮದು ನಮ್ಮ ರಾಜ್ಯಕ್ಕೆ ಸೇರಬೇಕು ಎಂದು ಹೋರಾಡುವ ದೌರ್ಭಾಗ್ಯ ನಮಗೆ ಬರಬಾರದು.
ಈ ಬೆಳಗಾವಿಯ ವಿಷಯಕ್ಕೆ ಬಂದರೆ ಅಲ್ಲಿ ಈಗಾಗಲೇ ಎಮ್.ಇ.ಎಸ್ ಎಂಬ ಸಂಸ್ಥೆಯನ್ನೇ ಹುಟ್ಟುಹಾಕಿಕೊಂಡು ತಮ್ಮನ್ನು ಪೂರ್ತಿಯಾಗಿ ಪ್ರತ್ಯೇಕವಾಗಿ ಇಟ್ಟುಕೊಳ್ಳಲು ದೊಡ್ಡ ಸಂಚು ಮಾಡಿದ್ದಾರೆ. ಮೇಯರಂತಹ ಘನವಾದ ದೊಡ್ಡ ಹುದ್ದೆಯಲ್ಲಿ ಇರುವವರು ಇದರ ರೂವಾರಿಯಾಗಿದ್ದಾರೆಂದರೆ, ಅವರನ್ನು ಆರಿಸಿರುವ ಸದಸ್ಯರು, ಸದಸ್ಯರನ್ನು ಆರಿಸಿರುವ ಜನರು ಎಲ್ಲಾ ಅವರ ಬೆನ್ನ ಹಿಂದೆ ಇದ್ದು ಪೂರ್ಣ ಬೆಂಬಲವನ್ನು ಕೊಡುತ್ತಿದ್ದಾರೆ ಎಂದಾಂತಾಯ್ತು. ಇಲ್ಲಾವಾದರೆ ಅಂದು ಕನ್ನಡಮ್ಮನ ಧ್ವಜಾರೋಹಣ ದಿನ, ಬೇರೆ ಧ್ವಜ ಹಾರಾಟವಾಗಿ ಕನ್ನಡ ಧ್ವಜ ಬೆಂಕಿಗೆ ಆಹುತಿಯಾಗುತ್ತಿರಲಿಲ್ಲ.
ನಮ್ಮ ಕನ್ನಡ ಹೋರಾಟಗಾರರ ಪ್ರತಿಭಟನೆಗೆ ವಿರೋಧವಾಗಿ ಅಲ್ಲಿ ಕನ್ನಡ ಸ್ವತ್ತುಗಳಿಗೆ ಅಲ್ಲಿನ ಜನರಿಂದ ಆದ ಅನಾಹುತ ನಮ್ಮನ್ನೆಲ್ಲಾ ಚಿಂತೆಗೀಡುಮಾಡುವಂತಿದೆ.
ಇದೆಲ್ಲಾ ನೋಡಿದರೆ ಆ ಜನರ ಮನಸ್ಸಿನಲ್ಲಿರುವುದು ಏನು ಎಂಬುವುದು ಸ್ಪಷ್ಟವಾಗುತ್ತಿದೆ. ಅಲ್ಲಿನ ಪ್ರಾಥಮಿಕ ಶಿಕ್ಷಣವು ಸಹ ಮರಾಠಿಯಲ್ಲಿಯೇ ನಡೆಯುತ್ತದೆಂದು ಕೇಳಿದ್ದೇನೆ. ಈ ರೀತಿಯ ಹಲವಾರು ಬಗೆಯ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಅವರ ಮೇಲೆ ಈ ಹಿಂದೆಯೇ ನಾವುಗಳು ಕ್ರಮಕೈಗೊಳ್ಳಬೇಕಿತ್ತು.
ಬೆಂಗಳೂರು ಮತ್ತು ನಮ್ಮ ಮಧ್ಯ ಕರ್ನಾಟಕ ಪ್ರದೇಶಗಳಲ್ಲಿ ನಡೆಯುವ ಕನ್ನಡ ಪ್ರೀತಿ ಸಮ್ಮೇಳನಗಳನ್ನು, ಕಳಕಳಿಗಳನ್ನು ಅಲ್ಲಿಯು ಸಹ ಹಮ್ಮಿಕೊಳ್ಳಬೇಕಾಗಿತ್ತು. ಜನರ ನಡುವೆ ನಮ್ಮ ಸರ್ಕಾರ ಮತ್ತು ಹತ್ತು ಹಲವಾರು ಸಂಘಟನೆಗಳು ಅವರ ಅಹವಾಲು, ಕೊಂದುಕೊರತೆಗಳನ್ನು ಆಲಿಸ ಬೇಕಿತ್ತು. ಬೇರು ಮಟ್ಟದಲ್ಲಿ ಕನ್ನಡವನ್ನು ಅಲ್ಲಿ ಬೆಳೆಸಬೇಕಿತ್ತು.
ಕೆಲವೊಂದು ವಿಷಯಗಳಲ್ಲಿ ಎಲ್ಲರಿಂದಲೂ ಎಲ್ಲಾರಿಗೂ ಪೂರ್ಣವಾಗಿ ಸಮಾನವಾಗಿ ಯಾವುದೇ ಕಾರ್ಯಗಳು ಜಾರಿಯಾಗಲಾರವು. ಹಲವು ಅಸಮಾನತೆಗಳು ಕಾಣಬಹುದು, ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಇದೆ ಪುನರಾವರ್ತನೆಯಾಗಬಾರದು.
ಮುಂದಾದರೂ ನಮ್ಮ ಅಧಿಕಾರ, ಉದ್ಯೋಗ, ಅಭಿವೃದ್ಧಿ, ಕೇಂದ್ರಿಕರಣಗೊಳ್ಳದೇ ಎಲ್ಲಾ ಪ್ರಾಂತ್ಯಗಳಲ್ಲೂ ಸಮಾನಾಂತರವಾಗಿ ಹಂಚಿಕೊಂಡು ಸಮಗ್ರ ಕರ್ನಾಟಕ ಒಂದೇ ಎಂಬ ಭಾವನೆ ಪ್ರತಿಯೊಬ್ಬ ಸಾಮಾನ್ಯ ಕನ್ನಡ ಪ್ರಜೆಯಲ್ಲಿ ಮೂಡಲಿ.