ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೃತ್ಯುಂಜಯ ಮಂತ್ರದಲ್ಲಿನ ‘ಮೃತ್ಯು’ ಯಾವುದು?

By Super
|
Google Oneindia Kannada News

'ಮೃತ್ಯು'ಎನ್ನುವ ಪದಕ್ಕೆ 'ಸಾವು' ಎಂಬ ಅರ್ಥವುಂಟು. ಆದರೆ ಮೃತ್ಯುವಿಗೆ ಸಂಬಂಧಿಸಿದ ವಿಚಾರಧಾರೆಗೆ ಎಂದಿಗೂ ಸಾವಿಲ್ಲ.

ಶ್ರೀವತ್ಸ ಜೋಶಿಯವರಿಗೆ ನಮಸ್ಕಾರಗಳು,
ನಿಮ್ಮ ಮೃತ್ಯುಂಜಯ ಮಂತ್ರದ ಕುರಿತಾದ ಲೇಖನ ಓದಿದೆ. ನನಗೆ ತಿಳಿದಿರುವಂತೆ ಆ ಮಂತ್ರದಲ್ಲಿ ಬರುವ ಮೃತ್ಯು ಶಬ್ದಕ್ಕೆ ಸಾವು ಅಥವಾ ದೇಹಾವಸಾನ ಎಂಬ ಅರ್ಥ ಸರಿಯಲ್ಲ. ವೈದಿಕ ಸಾಹಿತ್ಯದಲ್ಲಿ ಬರುವ ಸಂಸ್ಕೃತ ಶಬ್ದಗಳಿಗೆ ಇಂದಿನ ಸಂಸ್ಕೃತ ಸಾಹಿತ್ಯದಲ್ಲಿ ಪ್ರಚಲಿತದಲ್ಲಿ ರುವ ಅರ್ಥಗಳನ್ನು ಹೊಂದಿಸುವುದು ಸರಿಯಲ್ಲ. ನಾನು ಈ ವಿಷಯದಲ್ಲಿ ವಿಶೇಷ ಅಧ್ಯಯನವನ್ನೇನೂ ಮಾಡಿಲ್ಲದಿದ್ದರೂ, ಈ ಕುರಿತಾಗಿ ಆಗಾಗ ವಿದ್ವಾಂಸರ ವಿವರಣೆಗಳನ್ನೂ ಪ್ರವಚನಗಳನ್ನೂ ಕೇಳಿ ಹಲವಾರು ಸಂಶಯಗಳನ್ನು ದೂರ ಮಾಡಿಕೊಂಡಿದ್ದೇನೆ.

ಹೀಗೆಯೇ ತಪ್ಪು ಅರ್ಥದಲ್ಲಿ ಅಥವಾ ಸಮರ್ಪಕವಲ್ಲದ ಅರ್ಥದಲ್ಲಿ ಬಳಸಲ್ಪಡುತ್ತಿರುವ ಪದ 'ಪಾಪ'. ನೀವು ಮತ್ತಷ್ಟು ಅಧ್ಯಯನಮಾಡಿ ಇನ್ನೊಂದು ಲೇಖನವನ್ನು ಸಿದ್ಢಪಡಿಸಿದಲ್ಲಿ ಮೃತ್ಯುಂಜಯರಾಗುತ್ತೀರಿ.

ಇಂತು ಶುಭಾಶಯಗಳು,

-ಎಚ್‌.ವಿ. ಸೂರ್ಯನಾರಾಯಣ ಶರ್ಮಾ;
ಬಸವನಗುಡಿ, ಬೆಂಗಳೂರು-4

ಮಾನ್ಯ ಶ್ರೀ ಸೂರ್ಯನಾರಾಯಣ ಶರ್ಮಾ ಅವರಿಗೆ, ಸಾದರ ಪ್ರಣಾಮಗಳು.

ವಿಚಿತ್ರಾನ್ನ ಅಂಕಣದಲ್ಲಿ ಬಹಳಹಿಂದೆ ಪ್ರಕಟವಾಗಿದ್ದ 'ಮೃತ್ಯುಂಜಯ ಮಂತ್ರದಲ್ಲಿ ಮುಳ್ಳುಸೌತೆ' ಲೇಖನವನ್ನೋದಿ ಪ್ರತಿಕ್ರಿಯೆ ಬರೆದದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು.

ನೀವು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ನಾನೂ ಗೌರವಿಸುತ್ತೇನೆ. ತೀರಾ ಪಾರಮಾರ್ಥಿಕವಾಗಿ, ವಿದ್ವತ್‌ಮಟ್ಟದ ಯೋಚನಾ ಸರಣಿ ಯಿಂದ ಅವಲೋಕಿಸಿದರೆ ನೀವನ್ನುವುದು ನಿಜ - ಆ ಮಂತ್ರದಲ್ಲಿನ ಮೃತ್ಯು ಪದವು ಅಕ್ಷರಶಃ 'ಸಾವು'/'ಮರಣ'/'ದೇಹಾವಸಾನ' ಅಲ್ಲದಿರಬಹುದು. ಆದರೆ ಸರ್ವಸಾಮಾನ್ಯರಾದ (ಆಂಗ್ಲದಲ್ಲಿ layman ಎನ್ನುತ್ತೇವಲ್ಲ, ಅಂಥವರಾದ) ನಮ್ಮ ಬೌದ್ಧಿಕ ಮಟ್ಟಕ್ಕೆ 'ಮೃತ್ಯು' ಅಂದರೆ ಮರಣ. ಈ ದೃಷ್ಟಿಕೋನದಿಂದಷ್ಟೇ ಅಲ್ಲಿ ನನ್ನ ವಿವರಣೆ. (ಸಮರ್ಥಿಸುವುದಕ್ಕಾಗಿ ಹೀಗೆ ಬರೆದಿದ್ದೇನೆ ಎಂದು ದಯವಿಟ್ಟು ತಿಳಿಯ ಬೇಡಿ).

ಅದೂ ಅಲ್ಲದೆ, ಲೇಖನದ ಚೌಕಟ್ಟು, ಶೀರ್ಷಿಕೆ 'ಮೃತ್ಯುಂಜಯ ಮಂತ್ರದ ಮಹತ್ವ' ಎಂದಿದ್ದರೆ ಪ್ರಾಯಶಃ ನೀವು ವ್ಯಕ್ತಪಡಿಸಿರುವಷ್ಟು ಆಳ ಚಿಂತನೆ ನಡೆಸಿ ಪ್ರಸ್ತುತಪಡಿಸಬೇಕಿತ್ತು. ಆದರೆ ಅಲ್ಲಿ ನನ್ನ ಕೇಂದ್ರಬಿಂದು ಆಗಿದ್ದದ್ದು ಮುಳ್ಳುಸೌತೆ. ಆ 'ಉರ್ವಾರುಕ' ಹೇಗೆ ಬಂತು ಮಂತ್ರದಲ್ಲಿ, ನಮಗೆ ಗೊತ್ತಿರುವ ನಮ್ಮ ದೈನಂದಿನ ಜೀವನದ ಸಂಗತಿಗಳನ್ನು ರೂಪಕವಾಗಿರಿಸಿ (ಉದಾಹರಣೆಗೆ ನಮ್ಮ ಕರಾವಳಿ/ಮಲೆ ನಾಡುಗಳಲ್ಲಿ ಹಜಾರದಲ್ಲಿ ಬಿದಿರಿನ ತೊಲೆಗೆ ಸಾಲು ಸಾಲಾಗಿ ಸೌತೆ, ಮಂಗಳೂರುಸೌತೆ ಕಟ್ಟಿಟ್ಟು ಮಳೆಗಾಲದಲ್ಲಿ ತರಕಾರಿಯಾಗಿ ಬಳಸುವ ಕ್ರಮ ಈಗಲೂ ಇದೆ!) ಆ ಮಂತ್ರವನ್ನು ಹೇಗೆ ವಿಶ್ಲೇಷಿಸಬಹುದು ಎಂಬ ಒಂದು ಪ್ರಯತ್ನವನ್ನು ನಾನು ಮಾಡಿದ್ದು. ಅದ್ದಕ್ಕೆ ಸ್ವಲ್ಪ ಉಪ್ಪು ಖಾರವಿರಲಿ ಎಂದು ಆನಂದ್‌ ಚಿತ್ರದ ರಾಜೇಶ್‌ ಖನ್ನಾ - ಅಮಿತಾಭರನ್ನು ತಂದದ್ದು.

ಅದೇ ಸರಿ ಎಂದು ನಾನನ್ನುತ್ತಿಲ್ಲ. ಯಾವ ಪರಿಮಿತಿಯಾಳಗೆ ಬರೆದೆ ಎಂದು ಸ್ಪಷ್ಟಪಡಿಸಿದೆ ಅಷ್ಟೆ.

ಮತ್ತೆ ನೀವೆಂದಂತೆ 'ಪಾಪ'ದ ಬಗ್ಗೆಯೂ ಖಂಡಿತವಾಗಿ ಒಂದಿಷ್ಟು ಅಧ್ಯಯನ ನಡೆಸಿ, ವಿಚಿತ್ರಾನ್ನ ಅಂಕಣದ ಧಾಟಿಗೆ ಹೊಂದುವಂತೆ ಒಂದು ಲೇಖನವನ್ನು ಬರೆಯುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಸ್ಫೂರ್ತಿ, ಮಾರ್ಗದರ್ಶನಗಳಿಗಾಗಿ ಧನ್ಯವಾದಗಳು.

ಇತಿ,

-ಶ್ರೀವತ್ಸ ಜೋಶಿ
ವಾಷಿಂಗ್ಟನ್‌ ಡಿಸಿ.

English summary
Mrityunjaya Manthra : Clarification by Srivathsa Joshi on a question raised by Sharma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X