ಕನವರಿಕೆ
ವೈಯಕ್ತಿಕ ಜೀವನದ ಒಂದು ಪುಟ ಅಂತ ಬೇಕಿದ್ದರೆ ಅನ್ಕೊಳ್ಳಿ. ಪರವಾಗಿಲ್ಲ. ಯಾವತ್ತೋ ಒಂದು ದಿನದ ಆ ಅನುಭವ ಒಬ್ಬ ವ್ಯಕ್ತಿಯ ಇಡೀ ಬದುಕಿನ ಕಥೆ ಹೇಳುತ್ತದಾ? ಮೇಲ್ನೋಟಕ್ಕೆ ನಿಗೂಢವೆನಿಸುವ ಈ ಪುಟಾಣಿ ಪತ್ರದಲ್ಲಿ ‘ಎಲ್ಲ ’ ವನ್ನೂ ಹೇಳುವ ಯತ್ನವನ್ನು ಕಥಾನಾಯಕ ಮಾಡಿದ್ದಾನೆ. ಪ್ರೇಮಿಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಈ ಪತ್ರವನ್ನು ಓದಿಕೊಳ್ಳಬೇಕು..
- ಡಿ. ಎಂ. ಸಾಗರ್, ನೆದರ್ಲ್ಯಾಂಡ್ಸ್
ಮೈ ಡಿಯರ್ ಪುಟ್ಟಿ,
ಬಿಟ್ಟೂ ಬಿಡದೆ ಜ್ವರದಂತೆ ಕಾಡುತ್ತಿರುವುದೆಂದರೆ ನಿನ್ನ ನೆನಪು. ನೆದೆರ್ಲ್ಯಾಂಡ್ನಿಂದ ಹೊರಟೆನಲ್ಲ, ಟ್ಯಾಕ್ಸಿಯಲ್ಲಿ ಕುಳಿತು ಕಿಟಕಿಯ ಹೊರಗಿನ ಶೂನ್ಯವನ್ನು ನೋಡುತ್ತಿದ್ದರೂ, ಅಮ್ಸ್ಟೆಡರ್ಮ್ ಏರ್ಪೋರ್ಟ್ ನ ಕಾರಿಡಾರುಗಳಲ್ಲಿ, ಪ್ಲೇನ್ ಏರುವಾಗ, ಸ್ಟುಟ್ಗಾರ್ಟ್ ನ ಕಾವಳ ಸುರಿವ ರಾತ್ರಿಗಳಲ್ಲಿ, ಧಿಗ್ಗನೆ ಎಚ್ಚರವಾಗುವ ನಡು ನಿಶಿಗಳಲ್ಲಿ - ಅದಕ್ಕೇ ಅಂದಿದ್ದು ...ಜ್ವರದಂತೆ ಕಾಡುತ್ತಿದೆ ನಿನ್ನ ನೆನಪು ಅಂತ.
ನನಗೋಸ್ಕರ ಕಾದಿರಿಸಿದ್ದ ಅಪಾರ್ಟ್ಮೆಂಟ್ ಅದ್ಭುತವಾಗಿತ್ತು. ಸ್ಟುಟ್ಗಾರ್ಟ್ ಎನ್ನುವ ಪುಟ್ಟ ಊರು ನಿಧಾನವಾಗಿ ಒಲಿಯತೊಡಗಿತು. ಲಿವಿಂಗ್ ರೂಮ್ ನ ಕಿಟಕಿಯಲ್ಲಿ ನೋಡಿದರೆ ಬದುಕಿನ ಕತ್ತಲೆಯಲ್ಲಾ ಸಾಂದ್ರಗೊಂಡು ಗೌವ್ವೆನ್ನುವ ನಿಶೆಯ ಕರಿ ಸೆರಗು. ಅಫ್ಕೋರ್ಸ್ , ನೀನಿಲ್ಲದ ದಿನಗಳಲ್ಲಿ ಅದ್ಯಾವತ್ತು ಬೆಳಕಿತ್ತು ಹೇಳು ಗೆಳತಿ. ನೀನು ನನ್ನ ಬದುಕಿನ ಪ್ರಥಮ ಬೆಳಕ ಬೀಜ, ಸಮಸ್ತ ಕನಸುಗಳ ಕಣಜ. ಬಾಲ್ಕನಿಯ ಬಾಗಿಲು ತೆರೆದೆರೆ ಝೇಂಕರಿಸುವ ಹಿಮಗಾಳಿ. ಪಕ್ಕದಲ್ಲಿ ನೀನಿರಬೀಕಿತ್ತು ಎಂದು ತುಂಬಾ ಅನ್ನಿಸಿತು. ಆದರೆ ಜೊತೆಯಲ್ಲಿದ್ದಿದ್ದಿದ್ದು ನಿನ್ನ ನೆನಪು ಹಾಗು ನನ್ನ ಆಳದ ಕಂಗಳ ಕೊನೆಯಲ್ಲಿ ಪುಟ್ಟ ಸಮುದ್ರ ಮಾತ್ರ.
ರಾತ್ರಿ ದಿಗ್ಗನೆ ಎಚ್ಚರವಾಗುತ್ತದೆ, ನೀನು ಕೈಜಗ್ಗಿ ‘ನೂಡಲ್ಸ್ ಮಾಡಿಕೊಡೊ..’ ಎಂದು ಹಿತವಾಗಿ ಪೀಡಿಸಿದಂತಾಗುತ್ತದೆ.
‘ ಏ ರೇಶಮಿ ಝುಲ್ಫೆ, ಏ ಶರ್ಬತಿ ಆಂಖೆ
ಇನ್ಹೇ ದೇಖ್ ಕರ್ ಜೀರಹೇ ಹೈ ಸನಮ್’
ಎದ್ದು ಕಿಚನ್ ಕಡೆ ಹೋಗುತ್ತೇನೆ. ಅಲ್ಲಿ ನೀನಿದ್ದೀಯ. ಒಮ್ಮೊಮ್ಮೆ ನಿನ್ನನ್ನು, ಪುಟ್ಟ ಮಗು ಬೆಳಗ್ಗೆ ಕಣ್ಣುಜ್ಜಿಕೊಳ್ಳುತ್ತಾ ಅಮ್ಮನನ್ನು ಹುಡುಕಿಕೊಂಡು ಅಡುಗೆ ಮನೆಗೆ ಹೋಗಿ ಸೆರಗಿನ ಹಿಂದೆ ಹಿತವಾಗಿ ಮುಚ್ಚಿಕೊಳ್ಳತ್ತಲ್ಲ, ಹಾಗೆ ತಬ್ಬಿಕೊಳ್ಳುತ್ತಿದ್ದೆ. ನಿನಗೆ ಹುಸಿ ಮುನಿಸು ‘ ಪುಟ್ಟ ಮಗು ಇನ್ನೂ..’ ಎಂದು ಮುದ್ದಾಗಿ ಗದರುತ್ತಿದ್ದೆ. ಓಮ್ಮೆ ಹಾಗೆ ಅಕ್ಷರಶಃ ಮಗುವಿನ ಹಾಗೆ ತಬ್ಬಿಕೊಂಡು ತೆಕ್ಕೆ ಬಿಡಿಸಿಕೊಂಡರೆ ನಂತರ ನನ್ನ ಮುಂಜಾವುಗಳು ಏನೇನೂ ತಕರಾರಿಲ್ಲದೆ ಆರಂಭವಾಗುತ್ತಿದ್ದವು. ಓನ್ಸ್ ಅಗೈನ್, ದಿನದ ಮುಕ್ತಾಯವಾಗುವಾಗ ಮತ್ತೆ ನಿನ್ನ ತೆಕ್ಕೆ ಸೇರುತ್ತಿದ್ದೆ. ರಾತ್ರೆ ಅರಿವಿಲ್ಲದೇ ಹೆದೆಯೇರುವ ಕಾಮನಬಿಲ್ಲಿನಲ್ಲಿ ಅದೆಷ್ಟು ಮುದವಿತ್ತು!. ಸುಮ್ಮನೆ ಒಮ್ಮೆ ನಿನ್ನ ಹೆಗಲು ತಾಕಿದರೆ ನಿನ್ನೊಡಲ ರುದ್ರವೀಣೆ ಝೇಂಕರಿಸುತ್ತಿತ್ತು. ಪರಸ್ಪರ ಮೈ ಮನಸ್ಸುಗಳು ಶ್ರುತಿ ಹಿಡಿಯಲು ತವಕಿಸುತ್ತಿದ್ದರೆ ನಿನ್ನ ಉಸಿರಾಟಕ್ಕೆ ನೂರು ನದಿಗಳ ಅವೇಗ!. ನಿಧಾನವಾಗಿ ನನ್ನ ಬೆರಳುಗಳು ನಿನ್ನ ತನುವೀಣೆಯನ್ನು ಹಿತವಾಗಿ ಮೀಟುತ್ತಿದ್ದರೆ ನಿನ್ನ ಉದ್ಗಾರಗಳಲ್ಲಿ ಮಧ್ಯಮಾವತಿ ಯ ಇಂಪು. ಸಾಕಿನ್ನು .
ಊಹುಂ!, ನಿನಗೋಸ್ಕರ ಏನು ಬೇಕಾದರೂ ಬಿಡಲು ತಯಾರಿದ್ದವನಿಗೆ ಕೋಪ ಹಾಗೂ ಅಹಂ ಬಿಡುವುದು ಕಷ್ಟವೆ?!, ನೆವೆರ್, ಅವೆರಡನ್ನೂ ಬಿಸಾಡಿ ನಿನಗೋಸ್ಕರ ಕಾಯುತ್ತಿದ್ದೇನೆ. ಓಂದಿಡೀ ಬದುಕು ಕಾಯಬಲ್ಲೆ. ನಿಜ ಹೇಳು! ಕೋಪ ಒಂದನ್ನು ಬಿಟ್ಟರೆ ನಾನು ದೇವರಂತಹ ಮನುಷ್ಯ ಅಲ್ಲವೇನೆ!?.
ಈ ಪತ್ರದ ಬಗ್ಗೆ ನಿಮ್ಮ ಅನಿಸಿಕೆಗಳಿಗೆ ಸ್ವಾಗತ












Click it and Unblock the Notifications