ಮಹಾರಾಷ್ಟ್ರ ಏಕೀಕರಣ ಸಮಿತಿ, ಶಿವಸೇನೆಗೊಂದು ಪತ್ರ

ಮಾನ್ಯರೇ,
ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆಯ ಮರಾಠಿ ಭಾಷಿಕರಿಗೆ ನಮ್ಮ ವಂದನೆಗಳು. ನೀವು ಮಹಾರಾಷ್ಟ್ರದ ಏಳಿಗೆಗಾಗಿ, ಮರಾಠಿಗರ ಸ್ವಾಭಿಮಾನ ರಕ್ಷಣೆಗಾಗಿ ಕಟಿಬದ್ಧರಾಗಿರುವುದಾಗಿ ಭಾವಿಸಿದ್ದೇವೆ. ನಾಡು ನುಡಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಕಾಳಜಿಯಿಂದ ಸ್ಪಂದಿಸಿ, ಯೋಜನಾಬದ್ಧವಾಗಿ ಅವುಗಳ ನಿವಾರಣೆಗೆ ಆದ್ಯತೆ ನೀಡುತ್ತಿರುವಿರೆಂದು ಭಾವಿಸಿದ್ದೇವೆ.
ನಿಮ್ಮ ರಾಜಧಾನಿ ಮುಂಬೈಯನ್ನೊಮ್ಮೆ ನೋಡಿ. ಅಲ್ಲಿ ಮರಾಠಿ ದ್ವಿತೀಯ ದರ್ಜೆಯ ಭಾಷೆಯಾಗಿರುವುದು ನಿಮಗೆ ಕಾಣಿಸುತ್ತಿದೆಯೆ? ಎಲ್ಲೆಡೆ ನೋಡಿದರೂ ಹಿಂದಿ, ಇಂಗ್ಲಿಷ್ಗಳದ್ದೇ ನಾಮಫಲಕಗಳು. ಮುಂಬೈನಲ್ಲಿ ಹಿಂದಿ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ನೀವು ಬಲ್ಲಿರಲ್ಲವೇ?
ನಿಮ್ಮ ನಾಡಿನ ವ್ಯಾಪಾರ ವಹಿವಾಟು ಉದ್ದಿಮೆಗಳೆಲ್ಲ ಪರಭಾಷಿಕರ ಕೈಯ್ಯಲ್ಲಿರುವುದು ಎದ್ದು ಕಾಣುತ್ತದೆ. ನಿಮ್ಮ ಜನ ಹಿಂದಿ ಭಾಷೆಗೆ ಗುಲಾಮರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದರೆ ನೀವು ಸಿಟ್ಟಾಗುವುದಿಲ್ಲವಷ್ಟೆ ?
ಹಿಂದಿ, ಇಂಗ್ಲಿಷ್ ಬಲ್ಲವನಷ್ಟೇ ವಿದ್ಯಾವಂತನೆಂಬ ಅಪಾಯಕಾರಿ ಗೀಳಿಗೆ ನೀವು ಬಲಿಯಾಗಿರುವುದು ಸತ್ಯ ತಾನೆ ? ಔದ್ಯಮಿಕ ಕ್ಷೇತ್ರದಲ್ಲಿ ಬಂಡವಾಳ ಹೂಡಿದವರಲ್ಲಿ ಹೆಚ್ಚಿನವರು ಪರಭಾಷಿಗರೇ ಅಲ್ಲವೆ? ಅಷ್ಟೇಕೆ, ಕಡೆಗೆ ನಿಮ್ಮ ಮುಂಬೈಭೂಗತ ಜಗತ್ತು ಕೂಡಾ ಪರಭಾಷಿಗರ ಕೈಯ್ಯಲ್ಲಿರುವುದು ಸತ್ಯವಲ್ಲವೆ?
ನಿಮ್ಮ ಚಿತ್ರೋದ್ಯಮದ ಪರಿಸ್ಥಿತಿಯಂತೂ ಮತ್ತಷ್ಟು ಭೀಕರವಾಗಿದೆ. ಇಡೀ ಮಹಾರಾಷ್ಟ್ರ ರಾಜ್ಯದಲ್ಲಿ ಶೇಕಡಾ 5ರಷ್ಟು ಸಿನಿಮಾ ಮಂದಿರಗಳಲ್ಲಾದರೂ ಮರಾಠಿ ಚಿತ್ರ ಪ್ರದರ್ಶಿತವಾಗುತ್ತದೆಯೇ? ಪಾಪ, ಬಾಲಿವುಡ್ನ ನೆರಳಿನಲ್ಲಿ ಮಾಲಿವುಡ್ ಮಲಗಿದ ಹಾಗೆ ತೋರುತ್ತದೆ. ಇವೆಲ್ಲ ಮರಾಠಿ ಚಿತ್ರರಂಗ ಜೀವಂತವಾಗಿ ಇಲ್ಲವೇನೋ ಎಂಬ ಭಾವನೆ ಮೂಡಿಸುತ್ತವೆ.
ಜಾಗತೀಕರಣ ಮತ್ತು ವಲಸೆಯೆಂಬ ಪೆಡಂಭೂತಗಳಿಂದ - ಮಹಾರಾಷ್ಟ್ರದಲ್ಲಿ ಮರಾಠಿಗನಿಗೆ ನಿರುದ್ಯೋಗ, ಸಂಸ್ಕೃತಿ ವಿನಾಶ, ಪರಭಾಷಾ ಹೇರಿಕೆ, ಪಬ್-ಕ್ಲಬ್ ಸಂಸ್ಕೃತಿ, ಡ್ಯಾನ್ಸ್ ಬಾರ್ ಹಾವಳಿ, ವೇಶ್ಯಾವಾಟಿಕೆ, ಬೆಲೆ ಏರಿಕೆಯಂತಹ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿಲ್ಲವೇ ?
ಇದು ಬರಿಯ ರಾಜಧಾನಿಯಾಳಗಿನ ಸಮಸ್ಯೆಯಾದರೆ, ಇನ್ನು ಗಡಿ ನಾಡುಗಳಲ್ಲಿ ? ಉತ್ತರದ ಗಡಿಯಲ್ಲಿ ಗುಜರಾಥಿ, ಹಿಂದಿಗಳ ಪ್ರಭಾವವಾದರೆ, ದಕ್ಷಿಣದ ಸೊಲ್ಲಾಪುರ, ಅಕ್ಕಲಕೋಟೆಗಳಲ್ಲಿ ಕನ್ನಡದ ಪ್ರಭಾವವಿರುವುದು ಸತ್ಯ ತಾನೆ? ಅಕ್ಕ ಪಕ್ಕದಲ್ಲಿ ಕೊಂಕಣಿ, ತೆಲುಗುಗಳೂ ವ್ಯಾಪಕವಾಗಿವೆ ತಾನೆ ?
ಮುಂಬೈನ ಜನತೆಗೆ ಇವೆಲ್ಲ ಸಂಕಷ್ಟಗಳಿಗೆ ಕಳಶವಿಟ್ಟಂತೆ ಭಯೋತ್ಪಾದನೆಯೆಂಬ ಭೂತದ ನೆರಳಲ್ಲೆ ಬದುಕಬೇಕಾದ ಅನಿವಾರ್ಯತೆ. ಈಗ ಹೇಳಿ . . . . ನಿಜವಾದ ಏಕೀಕರಣ ಆಗಬೇಕಿರುವುದು ಮಹಾರಾಷ್ಟ್ರದ ಪ್ರಸ್ತುತ ಗಡಿಯ ಒಳಗೆ ಅಲ್ಲವೇ? ಇರುವ ಜಾಗದಲ್ಲೇ ಸಾವಿರ ಸಮಸ್ಯೆಗಳಿರುವಾಗ, ಮಹಾ-ಮಹಾರಾಷ್ಟ್ರದ ಕನಸಾದರೂ ಏಕೆ? ಬೆಳಗಾವಿ, ಗೋವಾ, ಕಾರವಾರಗಳ ಗೊಡವೆ ಏಕೆ ? ಅಧಿಕಾರದ ಗದ್ದುಗೆ ಏರಲು, ಜನರ ಭಾಷಾಭಿಮಾನವನ್ನು ಉದ್ದೀಪನಗೊಳಿಸುವ ಕುಟಿಲ ತಂತ್ರದಂತೆ ಇವು ಗೋಚರಿಸುತ್ತವೆ.
ಇಲ್ಲೆಲ್ಲಾ ಮರಾಠಿ ಭಾಷಿಕರು ಹೆಚ್ಚಾಗಿದ್ದಾರೆ ಎಂಬ ನಿಮ್ಮ ವಾದ ಒಪ್ಪಿದರೆ, ನೀವೂ ಕೂಡಾ ಅದೇ ಮಾನದಂಡದ ಆಧಾರದ ಮೇಲೆ ಅಕ್ಕಲಕೋಟೆ, ಸೊಲ್ಲಾಪುರ ಬಿಟ್ಟು ಕೊಡಲು ಸಿದ್ಧರಿದ್ದೀರೇನು ? ಜೊತೆಗೆ ಮಹಾರಾಷ್ಟ್ರದ ಬಹುಭಾಗ ಗುಜರಾತ್ ಮತ್ತು ಮಧ್ಯಪ್ರದೇಶದ ಪಾಲಾಗುತ್ತದೇನೋ?
ಮರಾಠಿ ಭಾಷಿಕರು ಬೆಳಗಾವಿಯಲ್ಲಿ ಹೆಚ್ಚಾಗಿ ಇದ್ದಾರೆ ಎಂಬ ನಿಮ್ಮ ವಾದ ಎಷ್ಟು ಅರ್ಥಹೀನ ನೋಡಿ. ಯಾವುದೇ ನಗರ ಪ್ರದೇಶಕ್ಕೆ ಉದ್ಯೋಗಾರ್ಥವಾಗಿ ವಲಸೆ ಬರುವ ಜನಸಂಖ್ಯೆಯನ್ನು ಹೇಗೆ ಗಡಿಯನ್ನು ನಿರ್ಣಯಿಸಲು ಪರಿಗಣಿಸಲಾಗುತ್ತದೆ? ಹೇಳಿ. ಇದೇ ಆಧಾರದ ಮೇಲೆ, ಮುಂಬೈನಲ್ಲಿ ಮರಾಠಿಗರು ಅಲ್ಪಸಂಖ್ಯಾತರೆಂದು, ಮುಂಬೈಯನ್ನು ಗುಜರಾತಿಗೆ ಸೇರಿಸುವುದೋ, ಕೇಂದ್ರಾಡಳಿತ ಪ್ರದೇಶವೆಂದೋ ಘೋಷಿಸುವುದೋ ಮಾಡಿದರೆ ನಿಮ್ಮ ಆಕ್ಷೇಪಣೆ ಏನು ಇಲ್ಲ ತಾನೆ ?
ಮಹಾರಾಷ್ಟ್ರದ ಉನ್ನತಿಗಾಗಿ, ಮರಾಠಿ ಭಾಷೆ, ಸಂಸ್ಸೃತಿಯ ಉಳಿವಿಗಾಗಿ ಮಹಾರಾಷ್ಟ್ರದೊಳಗೆ ನೀವು ಕಾರ್ಯ ಪ್ರವೃತ್ತರಾದರೆ ಅದು ನಿಜಕ್ಕೂ ಶ್ಲಾಘನೀಯ. ಆದರೆ... ಪರರ ತಟ್ಟೆಗೆ ಕೈ ಹಾಕಿದರೆ ಅದು ಅಕ್ಷಮ್ಯ.












Click it and Unblock the Notifications