ಕನ್ನಡದ ಗೊಣಗಾಟ, ಕಿರುಚಾಟ ಕೊನೆಯಾಗಲಿ!
ಕನ್ನಡಕ್ಕೆ ಜೈಜೈ, ಕನ್ನಡ ಕಣ್ಮರೆಯಾಗುತ್ತಿದೆ ಎಂಬ ಕಾಗೆ-ಗುಬ್ಬಿ ಕತೆ ನಮಗೆ ಬೇಡ. ಅದರಿಂದ ಪ್ರಯೋಜನವೂ ಇಲ್ಲ. ಕನ್ನಡ ಮತ್ತು ಕನ್ನಡಿಗರ ಉಳಿವಿಗೆ ಮೂಲಭೂತವಾಗಿ ಬೇಕಾದದ್ದು ಏನು?
- ಪುಲಿಕೇಶಿ, ಸಿಂಚಿನಟಿ, ಓಹಾಯೋ
[email protected]
ನಂಜುಂಡಯ್ಯನವರ ಕಳಕಳಿ ಒಪ್ಪತಕ್ಕದ್ದೇ. ಆದರೆ ಅವರು ಬೇಕೆಂದಿರುವ ಶಾಸನ ಕಾನೂನು ಆಗುವುದಿಲ್ಲ. ಕಾರಣ: ಕೇಂದ್ರ ಸರ್ಕಾರವನ್ನು ಓಲೈಸುವ ರಾಜ್ಯ ಸರ್ಕಾರ, ಕನ್ನಡದಲ್ಲಿ ಆಸಕ್ತಿಯಿಲ್ಲದಿರುವ ಪ್ರಾದೇಶಿಕ ರಾಜಕಾರಣಿಗಳು, ಸಿದ್ಧಾಂತವಿಲ್ಲದ ಹೋರಾಟಗಾರರು ನಮ್ಮಲ್ಲಿದ್ದಾರೆ.
ಜಾಗತೀಕರಣಕ್ಕೆ ನಮ್ಮನ್ನು ನಾವೇ ಮಾರಿಕೊಂಡಿರುವ ಸಮಯದಲ್ಲಿ ನಮ್ಮ ಮಕ್ಕಳು ಕನ್ನಡದಲ್ಲಿ ಕಲಿಯಲಿ ಎನ್ನುವ ಆಸೆ ಮರೀಚಿಕೆಯನ್ನು ಹುಡುಕಿ ಹೋದಂತೆ. ಜೊತೆಗೆ ಜಾತಿ ರಾಜಕಾರಣಕ್ಕೆ ನಮ್ಮಲ್ಲಿ ಭಾಷೆಗಿಂತ ಹೆಚ್ಚು ಪ್ರಾಶಸ್ತ್ಯ . ಹಾಗಾಗಿ ಈಗ ವಿದ್ಯಾಭ್ಯಾಸಕ್ಕೂ ಜಾತಿಗೂ ತಾಳೆ ಬಿದ್ದಿದೆ.
ಸ್ವಲ್ಪ ಆಪಥ್ಯವಾಗುವ ವಿಷಯ ಒಂದನ್ನು ನಾವು ಜೀರ್ಣಿಸಿಕೊಳ್ಳಲು ಪ್ರಯತ್ನ ಮಾಡಬೇಕು: ಕನ್ನಡಕ್ಕೆ ಕುತ್ತು ಬಂದಿರುವುದು ರಾಜ್ಯದ ಪ್ರಮುಖ ನಗರಗಳಲ್ಲಿ, ಮುಖ್ಯವಾಗಿ ಬೆಂಗಳೂರಿನಲ್ಲಿ. ಆದರೆ ಹಲವಾರು ಭಾಷೆಗಳಲ್ಲಿ ವ್ಯವಹಾರ ನಡೆಯುವ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕನ್ನಡಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಆಗಿಲ್ಲ ಇದು ಒಂದನ್ನು ನಾವು ಗಮನದಲ್ಲಿಟ್ಟುಕೊಳ್ಳೋಣ.
ಸದ್ಯಕ್ಕೆ ನಮ್ಮ ಮುಂದಿರುವ ಮುಖ್ಯ ಪ್ರಶ್ನೆಗಳು :
- ಕನ್ನಡ ಪ್ರಾಧಿಕಾರ, ಪರಿಷತ್ ಇತ್ಯಾದಿಗಳ ಸಾಧನೆಗಳನ್ನು ಅಳೆಯಲು ನಾವು ಯಾವ ಮಾಪನ ಉಪಯೋಗಿಸುತ್ತೇವೆ?
- ಕನ್ನಡದ ಗಂಧವಿಲ್ಲದ, ಅದರ ಉಳಿವಿಕೆಯಲ್ಲಿ ಯಾವ ರೀತಿಯ ಕಾಳಜಿಯೂ ಇಲ್ಲದ ಆಯಾ ಭಾಷಿಕರನ್ನು (ಕನ್ನಡಿಗರನ್ನು ಕೂಡಾ ಎಂದು ಅನ್ನಲೇಬೇಕಲ್ಲಾ?) ವಿಧಾನಸಭೆ, ಸಂಸತ್ತುಗಳಲ್ಲಿ ನಮ್ಮನ್ನು ಪ್ರತಿನಿಧಿಸುವುದನ್ನು ತಪ್ಪಿಸುವುದು ಹೇಗೆ?
- ಸಾಹಿತ್ಯ ಓದುವುದರಿಂದ, ವರ್ತಮಾನ ಪತ್ರಿಕೆಗಳನ್ನು ಕೊಳ್ಳುವುದರಿಂದ, ಚಲನಚಿತ್ರಗಳನ್ನು ನೋಡುವುದರಿಂದ ಭಾಷೆಯ ಉಳಿವು ಸಾಧ್ಯ ಎನ್ನುವ ತಪ್ಪು ನಂಬಿಕೆಗಳನ್ನು ಬೇರು ಸಹಿತ ಕಿತ್ತೊಗೆಯುವುದು ಹೇಗೆ? ಇವುಗಳಿಗೆ ಗಮನ ನೀಡುವರಿಗೆ ಭಾಷೆಯಲ್ಲಿ ಸಾಕಷ್ಟು ಪರಿಣಿತಿ ಇದ್ದೇ ಇರುತ್ತದೆ.
- ಆರ್ಥಿಕ ಉಪಯೋಗವಿಲ್ಲದ, ಕೇವಲ ಅಭಿಮಾನದಿಂದಾಗಿ ಯಾವ ಭಾಷೆಯೂ ಉಳಿಯದು. ಚಾರಿತ್ರಿಕವಾಗಿ ಮಹತ್ವದ ಭಾಷೆಗಳಾದರೂ ಸಂಸ್ಕೃತ ಅಥವಾ ಲ್ಯಾಟಿನ್ ಅನ್ನು ಮನೆ ಭಾಷೆಯಾಗಿಟ್ಟುಕೊಂಡಿರುವವರ ಸಂಖ್ಯೆ ಎಷ್ಟು ?(ಮತ್ತೂರಿನ ಕಾಗೆ ಗುಬ್ಬಿ ಕತೆ ಇಲ್ಲಿ ಬೇಡ) ಕನ್ನಡದಲ್ಲಿ ಕಲಿತರೆ ಬದುಕು ಸಾಗಿಸುವುದು ಅಸಾಧ್ಯವಲ್ಲ ಎಂಬ ಭರವಸೆಯನ್ನು ಕನ್ನಡಿಗರಿಗೆ ಕೊಡಲು ಏನು ಮಾಡಬೇಕು?












Click it and Unblock the Notifications