ಅಮ್ಮ
ಅವಳಿಗೆ ಎಲ್ಲವೂ ಮುಖ್ಯ, ಇವನದು ದಿವ್ಯ ನಿರ್ಲಕ್ಷ್ಯ. ಹೀಗಿದೆ ನೋಡಿ ನಮ್ಮ ಸಂಸಾರ
ಚಂದ್ರಮ, ಸ್ವಿಟ್ಜರ್ಲಂಡ್[email protected]
ಅಪ್ಪ, ಟಿವಿ ನೋಡ್ತಾ ಕೂತಿದ್ದರು. ಹೇಳಿದಳು,‘ನನಗೆ ತುಂಬಾ ಸುಸ್ತಾಗಿದೇರಿ, ರಾತ್ರಿ ಹನ್ನೊಂದಾಯ್ತು, ಬೆಳಿಗ್ಗೆ ಬೇಗಾನೇ ಏಳಬೇಕು, ನಾನು ಮಲಗಲು ಹೋಗ್ತಾ ಇದ್ದಿನಿ’. ಅಪ್ಪ ತಲೆ ಅಲ್ಲಾಡಿಸಿ ಟಿವಿ ನೋಡೋದರಲ್ಲಿ ಮಗ್ನರಾದರು.
ಅಲ್ಲಿಂದ ನಡೆದದ್ದು ಸೀದಾ ಅಡಿಗೆ ಮನೆಗೆ. ಮರುದಿನದ ಬೆಳಗಿನ ತಿಂಡಿಗಾಗಿ ಅಕ್ಕಿ, ಉದ್ದಿನಬೇಳೆ ನೆನೆಹಾಕಿದಳು. ಫ್ರಿಜ್ಜಿನಲ್ಲಿ ಹಾಲು, ಜ್ಯೂಸ್ ಎಲ್ಲಾ ಇದೆಯಲ್ಲ ? ಅಂತ ಒಂದು ಸಾರಿ ಕಣ್ಣು ಹಾಯಿಸಿದಳು. ಆಗಲೇ ಊಟ ಮಾಡಿದ್ದ ಟೇಬಲ್ ಸ್ವಚ್ಚಗೊಳಿಸಿ ಬೆಳಗಿನ ತಿಂಡಿಗಾಗಿ ಟೇಬಲ್ ಅಣಿಗೊಳಿಸಿದಳು.
ಹೊರಗಡೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತಂದೇ ಇರಲಿಲ್ಲ. ಅವನ್ನೆಲ್ಲ ತಂದು ಮಡಿಸಿ ಕಬೋರ್ಡಿನಲ್ಲಿ ಒಪ್ಪವಾಗಿ ಜೋಡಿಸಿಟ್ಟಳು. ಅಪ್ಪನ ಒಂದು ಅಂಗಿಯ ಗುಂಡಿ ಕಿತ್ತು ಹೋಗಿತ್ತು. ಕಣ್ಣಿಗೆ ಕನ್ನಡಕ ತೂರಿಸಿ, ಸೂಜಿ ದಾರ ಪೋಣಿಸಿ ಆ ಕೆಲಸ ಮುಗಿಸಿದಳು. ಅಪ್ಪ ಮರುದಿನ ಹಾಕಿಕೊಂಡು ಹೋಗಲು ಅವರ ಬಟ್ಟೆಯನ್ನು ತೆಗೆದು, ಬೆಳಿಗ್ಗೆ ಅವರ ಕೈಗೆ ಸಿಗುವಂತಿಟ್ಟಳು.
ನೆಲದ ಮೇಲೆ ಚೆಲ್ಲಾಪಿಲ್ಲಿ ಹರಡಿದ್ದ ಮಕ್ಕಳು ಆಡಿ ಬಿಟ್ಟಿದ್ದ ಆಟಿಕೆಗಳನ್ನೆಲ್ಲ ಸೇರಿಸಿ ಬುಟ್ಟಿಯಲ್ಲಿ ತುಂಬಿ ಬದಿಗಿಟ್ಟಳು. ಫೋನ್ ಮಾಡಿ ಡೈರೆಕ್ಟರಿಯನ್ನು ಅದರ ಹತ್ತಿರವೆ ಯಾರೋ ಬಿಟ್ಟಿದ್ದರು. ಅದಕ್ಕೂ ಒಂದು ಜಾಗ ತೋರಿಸಿದಳು.
ಒಂದು ಸಲ ಆಕಳಿಸಿ, ಮೈ ಮುರಿದು ಮಲಗೋ ಕೋಣೆಯೆಡೆ ನಡೆದಳು. ಒಂದು ಕ್ಷಣ ಏನೋ ನೆನಪಾಗಿ ತನ್ನ ಡೆಸ್ಕಿನ ಹತ್ತಿರ ಹೋಗಿ ಅವತ್ತಿನ ಎಲ್ಲಾ ಖರ್ಚುಗಳನ್ನು ಡೈರಿಯಲ್ಲಿ ಬರೆದಿಟ್ಟಳು. ಮರುದಿನ ಏನೇನು ಸಂತೆ ಮಾಡಬೇಕೆಂದು ಒಂದು ಚೀಟಿಯಲ್ಲಿ ಬರೆದಿಟ್ಟಳು. ಅದಕ್ಕೆ ಬೇಕಾಗುವಷ್ಟು ದುಡ್ಡನ್ನು ಎಣಿಸಿ ತನ್ನ ಪರ್ಸಿನಲ್ಲಿಟ್ಟುಕೊಂಡಳು. ಸಂಬಂಧಿಕರೊಬ್ಬರಿಗೆ ಕಳುಹಿಸಲು ತಂದಿದ್ದ ಶುಭಾಶಯ ಪತ್ರಕ್ಕೊಂದು ಸಾಲು ಗೀಚಿ ಪಾಕೇಟಿನಲ್ಲಿಟ್ಟು ಅಂಟಿಸಿದಳು.
ನ ಸಪ್ಪಳ ಕೇಳಿ ಅಪ್ಪ ಕೂತಲ್ಲಿಂದಲೇ ಕೂಗಿದರು,‘ಮಲಗೊಕೆ ಹೋಗ್ತೀನಿ ಎಂದೆ, ಇನ್ನೂ ಹೋಗಿಲ್ವೆನೆ?’
‘ಹಾಂ, ಹೋಗ್ತಾ ಇದ್ದಿನಿ’ ಅಲ್ಲಿಂದಲೇ ಕೂಗಿ ಹೇಳಿದಳು. ನಾಯಿಗೆ ಕುಡಿಯಲು ಅದರ ತಟ್ಟೆಯಲ್ಲಿ ಸ್ವಲ್ಪ ನೀರು ಸುರಿದಳು. ಎಲ್ಲ ಬಾಗಿಲು, ಕಿಟಕಿಗಳು ಭದ್ರವಾಗಿವೆಯಾ ಎಂದು ನೋಡಿ ಬಂದಳು.
ಎಲ್ಲ ಮಕ್ಕಳ ಕೋಣೆಗೆ ಹೋಗಿ, ಅಲ್ಲಲ್ಲಿ ಬಿದ್ದಿದ್ದ ಸಾಕ್ಸು, ಶೂಸು ಮತ್ತು ಪುಸ್ತಕಗಳೆನ್ನೆಲ್ಲ ಜೋಡಿಸಿ, ಅವರಿಗೆ ಮೈಮೇಲೆ ಹೊದಿಸಿ, ಕೋಣೆಯ ದೀಪವಾರಿಸಿ ಬಂದಳು.
ತಾನು ಮಲಗುವ ಕೋಣೆಗೆ ಹೋಗಿ, ಬೆಳಿಗ್ಗೆ ಬೇಗ ಏಳಲು ಅಲಾರಾಂ ಗಡಿಯಾರದ ಗುಂಡಿಯಾತ್ತಿದಳು. ಅಷ್ಟರಲ್ಲಿ ಅಪ್ಪ ಟಿವಿ ನಿಲ್ಲಿಸಿ ‘ನಾನು ಬಂದೆ ಕಣೆ’ ಅಂತ ಕೋಣೆಯಾಳಗೆ ಕಾಲಿಟ್ಟರು.
ಇದನ್ನು ಓದಿದಿರಲ್ಲ, ನಿಮಗೇನಾದರೂ ಅನ್ನಿಸ್ತಾ?
ವಿ.ಸೂ : ನನ್ನ ಈಮೇಲಿಗೆ ಬಂದ ಒಂದು ಪ್ರಸಂಗವನ್ನು ಕನ್ನಡೀಕರಿಸಿ ದಟ್ಸ್ಕನ್ನಡ ಓದುಗರೊಡನೆ ಹಂಚಿಕೊಂಡಿದ್ದೇನೆ-ಲೇಖಕ












Click it and Unblock the Notifications