ರವಿ ಕಾಣದ್ದು
‘ಪ್ಯಾಂಟ್ ಏರಿಸಿಕೊಳ್ಳುವಷ್ಟು ಸುಲಭವಾಗಿ ಕಚ್ಚೆ ಪಂಚೆ ಉಡಲಾಗುವುದಿಲ್ಲ’
- ಎಚ್.ವಿ. ಸೂರ್ಯನಾರಾಯಣ ಶರ್ಮಾ
ನಂ.56, ಸನ್ನಿಧಿ ರಸ್ತೆ, ಬಸವನಗುಡಿ. ಬೆಂ-4.
[email protected]
ರವಿ ಬೆಳಗೆರೆ ಎಂಬ ‘ಸರ್ವಜ್ಞನ’ ಲೇಖನ ಓದಿ ಸಖೇದಾಶ್ಚರ್ಯವಾಯಿತು. ಕನ್ನಡಕ್ಕೆ ಹೊಸ ಹೊಸ ಪದಗಳನ್ನು ಹುಡುಕುತ್ತಿರುವವರನ್ನು ಗೇಲೀಮಾಡುತ್ತಲೇ ಜರ್ಮನರ ಪ್ರಯತ್ನಗಳನ್ನು ಕೊಂಡಾಡಿರುವುದು ಅರ್ಥವಾಗುವಂತಿಲ್ಲ. ಆರಕ್ಷಕ, ಆಭಿಯಂತರು ಮುಂತಾದ ಪದಗಳು ಕನ್ನಡಿಗರು ಒಪ್ಪಿರುವಂಥದ್ದಲ್ಲ ಬದಲಾಗಿ ಸರಕಾರಿ ಇಲಾಖೆಗಳ ಮೂಲಕ ಹಿಂದಿಬಾಬುಗಳು ಬಲವಂತವಾಗಿ ಹೇರಿರುವ ಪದಗಳು. ಬಸ್ಸು, ಬ್ಯಾಂಕು, ರೈಲು, ಪೋಲೀಸು, ಇತ್ಯಾದಿ‘ ಉ’ ಸೇರಿಸಿ ಅನ್ಯಭಾಷಾಶಬ್ದಗಳನ್ನು ಕನ್ನಡೀಕರಿಸಿಕೊಳ್ಳಬಹುದೆಂದು ವಿದ್ವಾಂಸರು ಒಪ್ಪಿದ್ದಾರೆ. ಕನ್ನಡ ಭಾಷಾ ಪಂಡಿತರಾರೂ ಮಡಿಯುಟ್ಟು ಕೂತಿಲ್ಲ. ಭಾಷೆಯ ಬೆಳವಣಿಗೆಯಲ್ಲಿ ಆಯಾ ಭಾಷಿಗರ ಸಾಹಸ ಪ್ರವೃತ್ತಿ, ಆಕ್ರಮಣಶೀಲತೆ ಪ್ರಮುಖ ಪಾತ್ರವಹಿಸುತ್ತದೆ ಯೇ ಹೊರತು ಪಂಡಿತರ ಪಾತ್ರವಲ್ಲ. ಅಲ್ಪ ತೃಪ್ತರಾದ ಕನ್ನಡಿಗರಲ್ಲಿ ಹೊಸ ಹೊಸ ಪ್ರಯತ್ನಗಳ ಮುಂದೊಡಗು ಕಡಿಮೆ ಇರುವುದರಿಂದ ಹೊಸ ಪದಗಳ ಸೃಷ್ಟಿಯೂ ಮಂದಗತಿಯಲ್ಲಿದೆ. ಆಂಗ್ಲಭಾಷೆಯ ರಚನೆಯೇ ವಿಶಿಷ್ಟವಾದದ್ದು. KSRTC ಎಂದು ಉಚ್ಚರಿಸುವಷ್ಟು ಸುಲಭವಾಗಿ ಕ.ರಾ.ರ.ಸಾ.ಸಂ. ಎಂದು ಉಚ್ಚರಿಸಲಾಗುವುದಿಲ್ಲ. ಪ್ಯಾಂಟ್ ಏರಿಸಿಕೊಳ್ಳುವಷ್ಟು ಸುಲಭವಾಗಿ ಕಚ್ಚೆ ಪಂಚೆ ಉಡಲಾಗುವುದಿಲ್ಲ. ಇಂಗ್ಲಿಷ್ ಭಾಷೆಯಷ್ಟು ವೇಗವಾಗಿ ಕನ್ನಡ ಬೆಳೆಯಲಿ ಎಂದು ಬಯಸುವುದು ತಪ್ಪಲ್ಲ , ಪ್ರಮಾದ. ಈ ಹೋಲಿಕೆಯೇ ಅಧಿಕ ಪ್ರಸಂಗಿತನ. ನಮ್ಮ ರೀತಿಯಲ್ಲಿ ನಮ್ಮ ವೇಗದಲ್ಲಿ ನಾವು ಬೆಳೆಯೋಣ. ಆತಂಕಕ್ಕೆ ಕಾರಣವಿಲ್ಲ.
ಇಷ್ಟಾಗಿಯೂ ಕನ್ನಡಭಾಷೆಯೇ ಯಾರಿಗೂ ಬೇಡವೆನಿಸುವ ದಿನ ಬಂದಾಗ ಅದರ ಅಂತ್ಯಕ್ರಿಯೆಗೆ ಜನ ಬೇಕಿಲ್ಲ.












Click it and Unblock the Notifications