
Psychology: “ವಯಸ್ಸು” ಆಯ್ತು ಬಿಡು; ಈ ವಯಸ್ಸಿಗೆ (ಬ್ರಾಕೆಟ್) ಬೇಕೇ?
''ಇಲ್ಲಾ .. ಅವರಿಗೆ ವಯಸ್ಸಾಗಿದೆ, ಅಜ್ಜ ಅಜ್ಜಿಯರು ಚಾಕಲೇಟನ್ನು ತಿನ್ನುವುದಿಲ್ಲ,'' ಎಂದು ಕೇಳಿಸಿಕೊಂಡ ವರುಣ್... ವಯಸ್ಸಾದವರು ಯಾರೂ ಸಹ ಚಾಕಲೇಟನ್ನು ತಿನ್ನುವುದೇ ಇಲ್ಲ ಎಂದುಕೊಂಡಿದ್ದ. ಚಾಕಲೇಟು ತಿನ್ನುವ ಆಸೆ ಇದ್ದರೂ ಅಜ್ಜ ಅಜ್ಜಿ ''ಈ ವಯಸ್ಸಲ್ಲಿ ಯಾರು ಚಾಕಲೇಟು ತಿನ್ನುತ್ತಾರೆ'' ಎಂದು ಆಸೆಯನ್ನು ಮನಸ್ಸಲ್ಲೇ ಮುಚ್ಚಿಕೊಳ್ಳಲಾಯಿತು.
ಮೂವತ್ತಾಯಿತು ಇನ್ನೇನು ಅವನು ಆಡುವುದನ್ನು ನಿಲ್ಲಿಸಬೇಕು, ಕ್ರೀಡೆ ಇಂದ ರಿಟೈರ್ಮೆಂಟ್ ಪಡೆಯುತ್ತಾನೆ ಆ ಆಟಗಾರ ಎಂದು ಮಾತನಾಡುವುದನ್ನು ಕಂಡು, ನಲವತ್ತೇ ಕೊನೆ, ನಂತರ ಎಲ್ಲಾ ಆಟಗಾರರು ರಿಟೈರ್ಮೆಂಟ್ ಪಡೆದುಬಿಡಲೇ ಬೇಕು ಎಂದೇ ಶ್ವೇತ ಎಂದುಕೊಂಡಿದ್ದಳು.
ಆದರೆ ಮೂವತ್ತೈದರೊಳಗೆ ಮದುವೆಯಾಗಿಬಿಡೇಕು, ಆಮೇಲೆ ಅದರ ಬಗ್ಗೆ ಯೋಚನೆ ಮಾಡುಬಾರದು ಎನ್ನುವುದನ್ನು ಕೇಳಿದಾಗ ಹೌದಾ! ಎಂದುಕೊಳ್ಳುತ್ತಾ 35ರ ಹರೆಯದ ರಾಮು ಗೊಂದಲಕ್ಕೀಡಾದ.
ವಯಸ್ಸು ಐವತ್ತೈದು ಆಗಿದೆ, ಈಗ ಹೊಸ ವ್ಯಾಪಾರಕ್ಕೆ ಕೈ ಹಾಕಿದ್ದಾರೆ. ಈ ವಯಸ್ಸಲ್ಲಿ ಇದೆಲ್ಲಾ ಬೇಕಿತ್ತಾ? ಎಂದು ಜನ ಮಾತಾಡಿಕೊಳ್ಳುತ್ತಿದ್ದದ್ದನ್ನು ನೋಡಿ, ಮೊಮ್ಮಗ ತಾತ ಬೇಡ ಇದೆಲ್ಲಾ ಬಿಟ್ಟುಬಿಡು ಎನ್ನುತ್ತಿದ್ದ.
ಒಸಿಡಿ ಲಕ್ಷಣಗಳೇನು? ಒಸಿಡಿಗೆ ಔಷಧ ಹಾಗು ಮನೋಚಿಕಿತ್ಸೆ ಏನಿದೆ?
ನಿಮಗೂ ಹೀಗೆ ಆಗಿದೆಯೇ? ಈ ರೀತಿಯ ಪ್ರಶ್ನೆ ಗಳು ಗೊಂದಲಗಳು ಯಾರಿಗಾದರೂ , ಬದುಕಿನ ಯಾವುದೇ ಹಂತದಲ್ಲಿಯೂ ಎದುರಾಗಬಹುದು. ಏನೋ ಮಾಡಬೇಕು ಸಾಧಿಸಬೇಕು ಎಂಬ ಆಸೆ ಆದರೆ, ವಯಸ್ಸಿನ ಸರಪಣಿ ನಮ್ಮ ಕಾಲನ್ನು ಕಟ್ಟಿ ಹಾಕಿಬಿಡುತ್ತದೆ.
ನಮ್ಮ ಜೀವನದ ಆಗುಹೋಗುಗಳಿಗೆ ಸಮಾಜದ ''ವಯಸ್ಸಿನ'' ನಿಯಮಗಳು, ಅಭಿಪ್ರಾಯಗಳು ಹಾಗು ಅನಿಸಿಕೆಗಳು ಬಹಳವಾಗಿ ಪ್ರಭಾವ ಬೀರುತ್ತವೆ. ಮನುಷ್ಯನ ಜೀವನದಲ್ಲಿ ಅನೇಕ ಮೈಲುಗಲ್ಲುಗಳಿವೆ. ದೈಹಿಕ, ಬೌಧಿಕ, ಸಾಮಾಜಿಕ ಹಾಗು ಮಾನಸಿಕ ಬೆಳವಣಿಗೆ ಹೀಗೆ. ಆದರೆ ಈ ಎಲ್ಲಾ ಬೆಳವಣಿಗೆ ಹಾಗೂ ವಿಕಸನಗಳು ಎಲ್ಲರಿಗೂ ಒಂದೇ ರೀತಿಯಲ್ಲಿ ಆಗುವುದಿಲ್ಲ.

ವಯಸ್ಸಾಯಿತು ಎಂದು ನಿರ್ಧಾರ
- ಆಹಾರದ ಪೋಷಕಾಂಶಗಳು
- ಬೆಳೆಯುವ ಪರಿಸರ, ಮನೆಯ ವಾತಾವರಣ
- ಭಾವನಾತ್ಮಕ ಸ್ಪಂದನ
- ಜೀವನದ ಸವಾಲುಗಳು
- ಸಂದರ್ಭಗಳು
- ಕಿರಿಯ ವಯಸ್ಸಲ್ಲಿನ ಜವಾಬ್ದಾರಿಗಳು
- ಹತ್ತಿಕ್ಕಿಕೊಂಡ ಆಸೆ ಆಕಾಂಕ್ಷೆಗಳು
- ದೊರೆಯುವ ಮಾರ್ಗದರ್ಶನ ಎಲ್ಲವೂ ಮುಖ್ಯವಾಗುತ್ತವೆ.
ಜೀವನದ ಅನೇಕ ಮಜಲುಗಳಿಗೆ ವ್ಯಕ್ತಿಯು, ದೈಹಿಕ, ಬೌಧಿಕ, ಮಾನಸಿಕ, ಸಾಮಾಜಿಕ ಹಾಗು ಆರ್ಥಿಕವಾಗಿ ಸಿದ್ಧರಾಗಿರಬೇಕಾಗುತ್ತದೆ. ಇನ್ನೂ ಪೂರ್ವ ಸಿದ್ಧತೆ ಬೇಕು ಅಥವಾ ಜೀವನದ ಕೆಲವು ಬದಲಾವಣೆಗಳಿಗೆ ಹೊಂದಿಕೊಳ್ಳುವ ಆತ್ಮಸ್ಥೈರ್ಯ ಬೇಕು ಎನಿಸಿದಾಗ, ಸಮಯ ಕೂಡ ತೆಗೆದುಕೊಳ್ಳಬಹುದು. ಒತ್ತಡದಲ್ಲಿ ವಯಸ್ಸಾಯಿತು ಎಂದು ನಿರ್ಧಾರ ತೆಗೆದುಕೊಂಡು ಆಗುವ ಮಾನಸಿಕ ಹೊಯ್ದಾಟಕ್ಕಿಂತ ಎಷ್ಟೋ ಒಳಿತು ಅಲ್ವೇ?

ಇನ್ನಷ್ಟು ಪ್ರಸಂಗಗಳು
* ಇಪ್ಪತ್ತೊಂದನೇ ವಯಸ್ಸಿನಲ್ಲಿಯೇ ಪದವಿ ಪಡೆದರೂ, ಸರಿಯಾದ ಕೆಲಸ ಸಿಗಲು ಆರು ವರ್ಷ ಕಾದಿರಬಹುದು
* ಮತ್ತೊಬ್ಬನಿಗೆ ಯಾವುದೇ ಪದವಿ ಇಲ್ಲದಿದ್ದರೂ, ತನ್ನ ಕೌಶಲ್ಯದಿಂದ ಇಪ್ಪತ್ತನೇ ವಯಸ್ಸಿಗೇ ವ್ಯಾಪಾರ ಮಾಡಬಹುದು
* ಹತ್ತೊಂಭತ್ತನೇ ವಯಸ್ಸಿಗೆ ಮದುವೆಯಾಗಿ, ಮಕ್ಕಳಾದ ಮೇಲೂ ಎಷ್ಟೋ ಮಹಿಳೆಯರು ತಮ್ಮ ಇಷ್ಟದ ಪದವಿ ಪಡೆದು ಕೆಲಸಕ್ಕೆ ಸೇರಿದ್ದಾರೆ.
* ಅರವತ್ತರ ಆಸುಪಾಸಿನಲ್ಲಿ ಮದುವೆಯಾದ ಅನೇಕರು ಸಂತೋಷವಾಗಿಯೇ ಇದ್ದಾರೆ.
* ಅಕ್ಕಪಕ್ಕದವರು ಏನು ಎಂದುಕೊಳ್ಳುತ್ತಾರೋ, ರಿಟೈರ್ ಆದರೂ ಸಹ ತಂದೆಯನ್ನು ಅರ್ಧ ದಿನ ಕೆಲಸಕ್ಕೆ ಕಳುಹಿಸುತ್ತಾರೆ ಎನ್ನುವ ಮಕ್ಕಳು ಒಂದು ಕಡೆ ಆದರೆ, ಆರೋಗ್ಯ ವಾಗಿದ್ದೇನೆ, ಕೆಲಸ ಮಾಡುವ ಉತ್ಸಾಹವಿದೆ, ಏಕಾ ಏಕಿ ಮನೆಯಲ್ಲಿ ಕುಳಿತು ಬಿಡಲಾಗುವುದಿಲ್ಲ ಎನ್ನುವ ತಂದೆಯರೂ ಇದ್ದಾರೆ.
* ಅತೀ ಚಿಕ್ಕ ವಯಸ್ಸಿಗೆ ಸಚಿನ್ ತೆಂಡೂಲ್ಕರ್ ಚೆನ್ನಾಗಿ ಆಟ ಆಡಲಿಲ್ಲವೇ. ಎದುರಿಸಬೇಕಾದ ಸವಾಲುಗಳು ಹಾಗು ಟೀಕೆಗಳೂ ಇದ್ದವು. ಆಟ ಆಡುತ್ತಾ ಆಡುತ್ತಾ ಅನೇಕ ವಿಚಾರಗಳನ್ನು ಕಲಿತು ಎಲ್ಲರ ಮನ ಗೆದ್ದಿದ್ದೂ ನಿಜ.

ವಯಸ್ಸಿನ ಕಾರಣ ಕೊಟ್ಟು ಕೈ ಚೆಲ್ಲಿಬಿಡಲಾಗುತ್ತದೆ
ಜೀವನದ ಗುರಿಗಳು ಹಾಗು ಮೈಲಿಗಲ್ಲುಗಳನ್ನು ಸಾಧಿಸಲು ಅಥವಾ ಬದಲಾವಣೆಗಳನ್ನು ನಮ್ಮದಾಗಿಸಿಕೊಳ್ಳಲು, ಭಾವನೆಗಳಿಗೆ ಇದೇ ಸರಿಯಾದ ವಯಸ್ಸು ಎಂಬುದು ಒಂದು ರೀತಿಯ (unsaid rule) ಹೇಳದೆಯೇ ಬಹಳ ಸಹಜ ಎಂಬಂತೆ ನಡೆದುಕೊಂಡು ಬರುತ್ತಿರುವ ನಿಯಮಗಳಾಗಿವೆ. ಬದುಕಿನ ಹಲವಾರು ಮಜುಲುಗಳನ್ನು ದಾಟುವಲ್ಲಿ ''ವಯಸ್ಸು'' ಆಯಿತು ಬಿಡು ಎಂದುಕೊಳ್ಳುತ್ತಾ ವಯಸ್ಸಿನ ಕಾರಣ ಕೊಟ್ಟು ಕೈ ಚೆಲ್ಲಿಬಿಡಲಾಗುತ್ತದೆ.
ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಈಗ ವಯಸ್ಸು ಮೀರಿತು ಅಥವಾ ಇನ್ನೂ ಬಹಳ ಕಿರಿಯರು ಎಂದು ಕೊಳ್ಳುತ್ತಾ ನಮಗೆ ನಾವೇ ಮಾನಸಿಕ ಗೋಡೆಗಳನ್ನು ಕಟ್ಟಿಕೊಳ್ಳುತ್ತೇವೆ. ಅಲ್ಲದೇ ಬೇರೆಯವರ ಮೇಲೂ ಈ ಅನಿಸಿಕೆ ಅಭಿಪ್ರಾಯಗಳನ್ನು ಹೇರಿಬಿಡಲಾಗುತ್ತದೆ. ಆಸೆ ಆಕಾಂಕ್ಷೆಗಳಿದ್ದರೂ ನಮಗೆ ಮತ್ತು ಬೇರೆಯವರಿಗೆ ಕಡಿವಾಣ ಹಾಕಲಾಗುತ್ತದೆ.

ಏನಾದರೂ ಸಾಧಿಸಬೇಕೆಂಬ ಛಲ
ಒತ್ತಡದ ಕಾರಣದಿಂದಾಗಿ ದೈಹಿಕ ಹಾಗು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒತ್ತಡ ರಹಿತ ಅಥವಾ ಕಡಿಮೆ ಒತ್ತಡದಲ್ಲಿ ದೇಹ ಹಾಗು ಮನಸ್ಸು ಉತ್ತಮವಾಗಿ ಕೆಲಸ ಮಾಡಬಲ್ಲದು.
ತನ್ನ ಎಪ್ಪತ್ತೇಳನೇ ವಯಸ್ಸಿಗೆ ರಾಜಸ್ಥಾನದ ಶಿವ ಚರಣ್ ಯಾದವ್ ನಲವತ್ತೇಳನೇ ಬಾರಿಗೆ ಹತ್ತನೇ ತರಗತಿಯ ಪರೀಕ್ಷೆ ಬರೆದರು. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಸತತ ಪ್ರಯತ್ನ ಹಾಗೂ ಏನಾದರೂ ಸಾಧಿಸಬೇಕೆಂಬ ಛಲ. ಈಗ ಓದಿ ಏನಾಗಬೇಕು? ಎಂದು ಹೊರಗಿನವರು ಅಂದುಕೊಳ್ಳಬಹುದು ಆದರೆ ಪರೀಕ್ಷೆ ಪಾಸು ಮಾಡಿಕೊಳ್ಳುವುದು ಅವರಿಗೆ ಖುಷಿ ತಂದುಕೊಡುತ್ತದೆ. ತನ್ನ ಸಂತೋಷ ಯಾವುದರಲ್ಲಿದೆ, ಅದಕ್ಕಾಗಿ ತಾನೇನು ಮಾಡಬೇಕು ಎಂಬ ಅರಿವು ಇರುವುದೇ ಯಶಸ್ಸಿನ ಮೊದಲ ಹೆಜ್ಜೆ. ವಯಸ್ಸಿನ ಸರಪಣಿ ಕಳಚಿ ಪ್ರಯತ್ನಿಸಿದ್ದು ಇತರರಿಗೆ ಇದು ಮಾದರಿ ಕೂಡ. ವಯಸ್ಸು ದೇಹಕ್ಕೆ ಅಷ್ಟೇ ಮನಸ್ಸಿಗಲ್ಲ. ವಯಸ್ಸು ಕೇವಲ ಅಂಕೆಯಾಗಿ ಉಳಿಯಿತು .
ಮತ್ತೊಂದೆಡೆ ಕರ್ನಲ್ ಸ್ಯಾಂಡರ್ಸ್ ''ಕೆಂಟಕಿ ಫ್ರೈಡ್ ಚಿಕನ್'' KFC ಯನ್ನು ಪ್ರಾರಂಭಿಸಿದಾಗ ವಯಸ್ಸು ಅರವತ್ತು. ಹೆಚ್ಚಿನ ಜನರು ನಿವೃತ್ತ ರಾಗುವ ಸಮಯದಲ್ಲಿ ದಲ್ಲಿ ಕರ್ನಲ್ ಸ್ಯಾಂಡರ್ಸ್ ಜಾಗತಿಕ ಸಾಮ್ರಾಜ್ಯವನ್ನು ನಿರ್ಮಿಸುವಲ್ಲಿ ನಿರತನಾಗಿದ್ದ.

ನಿರ್ಣಯಗಳು ಭಿನ್ನವಾಗಿರುತ್ತದೆ
ನಾವು ತಿಳಿಯಬೇಕಾದ ಅಂಶವೆಂದರೆ ಪ್ರತಿಯೊಬ್ಬರ ಸಮಯ, ಸಂದರ್ಭ, ಬದುಕಿನ ಸವಾಲುಗಳು, ಆಸಕ್ತಿ, ಛಲ, ಉತ್ಸಾಹ, ಸಂತೋಷ, ಕೌಶಲ್ಯಗಳು, ನಿರ್ಣಯಗಳು ಭಿನ್ನವಾಗಿರುತ್ತದೆ. ಅದನ್ನು ಗೌರವಿಸುವುದು ಬಹಳ ಮುಖ್ಯ.
ಎಲ್ಲಾ ಯುವಕರಲ್ಲಿ ಉತ್ಸಾಹ ಹೆಚ್ಚು, ವಯಸ್ಸಾದವರಿಗೆ ಉತ್ಸಾಹ ಕಡಿಮೆ ಎಂದು ಸಾಮಾನ್ಯೀಕರಿಸುವುದು ಸರಿಯಲ್ಲ. ಕಿರಿಯ ವಯಸ್ಸಿನಲ್ಲಿನ ಸಾಧನೆ ಬಹಳ ದಿನ ಮುಂದುವರೆಯಲಾಗದು ಎಂದು ನಿರ್ಧರಿಸುವುದು ಎಷ್ಟು ಸರಿ? ಬದಲಾಗುತ್ತಿರುವ ಜೀವನದಲ್ಲಿ ವಿದ್ಯಾಭ್ಯಾಸ, ವೃತ್ತಿ ಆಯ್ಕೆ, ಎದುರಿಸಬೇಕಾದ ಸವಾಲುಗಳು, ಮುಂದಿರುವ ಕನಸುಗಳು ಮಾನಸಿಕ ಬದಲಾವಣೆಗಳು ಜನರ ವೈಯುಕ್ತಿಕ ಬದುಕಿನ ವಯೋ ಸಹಜ ಮಜಲುಗಳ ಮೇಲೂ ಪರಿಣಾಮ ಬೀರಿದೆ. ಬದುಕಿನ ದೃಷ್ಟಿ ಕೋನವೂ ಭಿನ್ನವಾಗಿದೆ.

ನಮ್ಮ ಸಾಮರ್ಥ್ಯ ದ ಅರಿವು ಇರುತ್ತದೆ
ಧನಾತ್ಮಕವಾಗಿ ಯೋಚಿಸುವುದಾದರೆ, - self awareness, ನಮ್ಮ ಬಗೆಗಿನ ಅರಿವಿನಿಂದ
* ನಮ್ಮ ಸಾಮರ್ಥ್ಯ ದ ಅರಿವು ಇರುತ್ತದೆ.
* ಸೋಲು ಎಂಬುದು ಮತ್ತೊಂದು ಪ್ರಯತ್ನ ಎಂಬ ಧನಾತ್ಮಕ ಅಂಶವಾಗುತ್ತದೆ.
*. ಭಾವನೆಗಳನ್ನು ಸಂಕೋಚವಿಲ್ಲದಂತೆ ವ್ಯಕ್ತಪಡಿಸಬಹುದು.
* ಪ್ರಯತ್ನ ಮುಖ್ಯ.
* ವಯಸ್ಸಾದಂತೆ ನಾವು ನಮ್ಮ ಜೀವನವನ್ನು ಸುತ್ತಮುತ್ತಲಿನವರೊಂದಿಗೆ ಹೋಲಿಸುವುದು ಕಡಿಮೆಯಾಗುತ್ತದೆ.
* ಅವರ ಆದ್ಯತೆ ಜೀವನವನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ.
* ಸಾಮಾಜಿಕ ಹಾಗು ಭಾವನಾತ್ಮಕ ಹೊಂದಾಣಿಕೆ ಉತ್ತಮ ಸಂಬಂಧ ಕಾಪಾಡುವಲ್ಲಿ ಸಹಕಾರಿಯಾಗುತ್ತದೆ.
* ಹೊಸ ಉತ್ಸಾಹವೂ ಇರುತ್ತದೆ.
* ಹೊಸ ಆಸಕ್ತಿ ಬೆಳೆಯಬಹುದು.
* ಕಂಡ ಕನಸನ್ನು ನನಸಾಗಿಸಿಕೊಳ್ಳಬಹುದು.
* ಜವಾಬ್ದಾರಿಯುತವಾದ ನಿರ್ಣಯಗಳನ್ನು ತೆಗೆದುಕೊಂಡು ಉತ್ತಮ ಜೀವನ ನಡೆಸಲೂಬಹುದು.
* ಕಿರಿಯ ಸಾಧಕರನ ಜ್ನಾನ, ಆತ್ಮ ವಿಶ್ವಾಸ, technology ಬಳಕೆ ಹಾಗು ವಿಶಿಷ್ಟ ಯೋಜನೆಗಳು ಮಾದರಿಯನ್ನಾಗಿಸಿಕೊಳ್ಳೋಣ.
* ಏನೇ ಬಂದರೂ ಎದುರಿಸುವ ಧೈರ್ಯ ಹಾಗು ಪ್ರಬುದ್ದತೆ ಇರುತ್ತದೆ.

ಕನಸುಗಳನ್ನು ನನಸು ಮಾಡಿಕೊಳ್ಳುವ ಪ್ರಯತ್ನ
ಹಸಿವು, ನೋವು, ನಲಿವು, ಆಸಕ್ತಿ, ಉತ್ಸಾಹ, ಛಲ, ಕನಸುಗಳು ಎಲ್ಲಾ ವಯಸ್ಸಿನವರಿಗೂ ಇವೆ. ಆದರೆ ಅದರ ಡಿಗ್ರಿ ಬೇರೆ ಬೇರೆ. ಅತೀ ಕಿರಿಯ ವಯಸ್ಸಿನಲ್ಲೇ ಪ್ರಬುದ್ಧತೆ ಬರಬಹುದು,ಮಧ್ಯ ವಯಸ್ಕರು ಉತ್ತಮ ಮೊಂದಾವಣಿಕೆಯ ಜೀವನ ನಡೆಸಬಹುದು. ಜೀವನದ ಇಳಿ ವಯಸ್ಸಲ್ಲಿ ಕನಸೊಂದು ಚಿಗುರೊಡೆಯಬಹುದು. ''ವಯಸ್ಸಿನ ಮಿತಿ'' ಯ ಕಾವು ತಾಗಿಸಿಕೊಳ್ಳದೆ ಬೇರೆಯವರ ಆಕಾಂಕ್ಷೆಗಳಿಗೂ ಕಡಿವಾಣ ಹಾಕದೆ, ಮುಕ್ತ ಸಮಾಜ ನಿರ್ಮುಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮನ್ನು ನಾವು ವಯಸ್ಸಿನ ಬ್ರಾಕೇಟಿನೊಳಗೆ ಹಾಕಿಕೊಳ್ಳುವುದೂ ಸಹ ಬೇಡ.
ವಯಸ್ಸು ಎಂದಿಗೂ ತಡೆಗೂಡೆ ಅಲ್ಲ. ಇದು ನಾವು ನಮ್ಮ ಮನಸ್ಸಿಗೆ ಹಾಕಿಕೊಳ್ಳುವ ಮಿತಿ ಅಷ್ಟೇ.
ಆನೆ ಎಷ್ಟೇ ಬಲಿಷ್ಟವಾಗಿದ್ದರೂ ಸಹ ತನ್ನ ಶಕ್ತಿ ಮರೆತು, ಮರಕ್ಕೆ ಕಟ್ಟಿದ ಸರಪಣಿಯ ಶಕ್ತಿ ಯೇ ಮೇಲು ಎಂದು ತಿಳಿದು , ಸರಪಣಿ ಇಂದ ಬಿಡಿಸಿಕೊಳ್ಳುವ ಪ್ರಯತ್ನವೇ ಮಾಡುವುದಿಲ್ಲ. ಒಮ್ಮೆ ತನ್ನ ಶಕ್ತಿಯ ಅರಿವಾದಾಗ, ಸರಪಣಿ ಇಂದ ಬಿಡಿಸಿಕೊಳ್ಳಲು ಕ್ಷಣ ಮಾತ್ರ ಸಾಕು. ಹಾಗೆಯೇ ''ವಯಸ್ಸಿ''ನ ಸರಪಣಿಯಲ್ಲಿ ಬಂಧಿಯಾಗದೇ, ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಪ್ರಯತ್ನ ಮಾಡಬಹುದಲ್ಲವೇ?