'ಅಬ್ಬಾ ಜಾನ್' ಹೇಳಿಕೆ: ಯೋಗಿ ವಿರುದ್ದ ವಿಪಕ್ಷ ನಾಯಕರ ವಾಗ್ದಾಳಿ
ಬಿಹಾರ, ಸೆಪ್ಟೆಂಬರ್ 14: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರ "ಅಬ್ಬಾ ಜಾನ್" ಹೇಳಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಹಲವಾರು ವಿರೋಧ ಪಕ್ಷದ ನಾಯಕರುಗಳು ಯೋಗಿ ಆದಿತ್ಯನಾಥ್ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಈ ಧರ್ಮ ಆಧಾರಿತ ಟೀಕೆಗಳ ಹಿನ್ನೆಲೆಯಿಂದಾಗಿ ಈಗ ಉತ್ತರ ಪ್ರದೇಶ ಬಿಜೆಪಿ ಸರ್ಕಾರವು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಖುಷಿ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾನುವಾರ ಮಾತನಾಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "2017 ಕ್ಕೂ ಮುನ್ನ ಜನರಿಗೆ ಈಗ ಲಭಿಸುವಷ್ಟು ಪಡಿತರ ದೊರೆಯುತ್ತಿರಲಿಲ್ಲ. ಅಲ್ಲಿ ಅಬ್ಬಾ ಜಾನ್ ಎಂದು ಹೇಳುವವರು (ಮುಸ್ಲಿಮರು ಉರ್ದು ಭಾಷೆಯಲ್ಲಿ ತಂದೆಯನ್ನು ಕರೆಯಲು ಬಳಸುವ ಪದ) ಬಡವರ ಪಾಲಿನ ಪಡಿತರವನ್ನು ತಿನ್ನುತ್ತಿದ್ದರು. ಖುಷಿ ನಗರದ ರೇಷನ್ ನೇಪಾಳ, ಬಾಂಗ್ಲಾದೇಶಕ್ಕೆ ಹೋಗುತ್ತಿದ್ದವು. ಆದರೆ ಈಗ ಯಾರು ರೇಷನ್ ಅನ್ನು ಒಳಗೆ ಹಾಕಲು ನೋಡುತ್ತಾರೋ ಅವರು ಜೈಲಿಗೆ ಹೋಗುತ್ತಾರೆ," ಎಂದು ಹೇಳಿದ್ದರು. ಈ ಹೇಳಿಕೆಯ ಮೂಲಕ ಒಂದು ಧರ್ಮವನ್ನೇ ನಿರ್ದಿಷ್ಟವಾಗಿ ಒಂದು ರಾಜ್ಯದ ಮುಖ್ಯಮಂತ್ರ ಗುರಿಯಾಗಿಸಿಕೊಂಡ ಹಿನ್ನೆಲೆ ಯೋಗಿ ಆದಿತ್ಯನಾಥ್ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿದೆ.
'ಡಬಲ್ ಇಂಜಿನ್ ಸರ್ಕಾರ': ಯೋಗಿ ಸರ್ಕಾರವನ್ನು ಶ್ಲಾಘಿಸಿದ ಮೋದಿ
ಇನ್ನು ಟ್ವೀಟರ್ನಲ್ಲಿಯೂ ಈಗ "ಅಬ್ಬಾ ಜಾನ್" ಟ್ರೆಂಡ್ ಆಗಿದೆ. ಹಲವಾರು ಮಂದಿ ತಮ್ಮ ತಂದೆಯ ಫೋಟೋವನ್ನು ಹಾಕಿ ಅಬ್ಬಾ ಜಾನ್ ಅಥವಾ ಹಮಾರೆ ಅಬ್ಬಾ ಜಾನ್ ಎಂದು ಹ್ಯಾಷ್ ಟ್ಯಾಗ್ ಮಾಡುತ್ತಿದ್ದಾರೆ. ಇನ್ನು ರಾಜಕೀಯ ನಾಯಕರು ಮಾತ್ರವಲ್ಲೇ ಸಿನೆಮಾ ನಟರುಗಳು ಕೂಡಾ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರ ಈ ಹೇಳಿಕೆಗೆ ತೀವ್ರ ವಿರೋಧ ಪಕ್ಷ ಪಡಿಸಿದ್ದಾರೆ. ಇನ್ನು ಯೋಗಿ ಆದಿತ್ಯನಾಥ್ ವಿರುದ್ದ ಮುಜಫರ್ ಪುರ್ ನ ಮುಖ್ಯ ನ್ಯಾಯಾಧೀಶರ ನ್ಯಾಯಾಲಯಕ್ಕೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತೆ ತಮನ್ನಾ ಹಾಶ್ಮಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ಸ್ವಲ್ಪ ಪಿತಾ ಜಾನ್ ಬಗ್ಗೆಯೂ ಮಾತನಾಡಿ ಎಂದ ತೇಜಸ್ವಿ ಯಾದವ್
ಯೋಗಿ ಆದಿತ್ಯನಾಥ್ರ ಅಬ್ಬಾ ಜಾನ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಹಾರದ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್, "ಇದು ಅಸಂಬದ್ಧ ಹೇಳಿಕೆ" ಎಂದು ಹೇಳಿದ್ದಾರೆ. ಹಾಗೆಯೇ, "ಪಿತಾ ಜಾನ್ ಎಂದು (ತಂದೆಯನ್ನು ಕರೆಯುವ ಹಿಂದಿ ಪದ) ಜನರ ಬಗ್ಗೆಯೂ ಯೋಗಿ ಆದಿತ್ಯನಾಥ್ ಮಾತನಾಡಬೇಕು. ಎಷ್ಟು ಮಂದಿಗೆ ಶಿಕ್ಷಣ ಅಥವಾ ಉದ್ಯೋಗವನ್ನು ನೀಡಲಾಗಿದೆ," ಎಂದು ಪ್ರಶ್ನಿಸಿದ್ದಾರೆ. ಟ್ಟಿಟ್ಟರ್ನಲ್ಲಿ ತೇಜಸ್ವಿ ಯಾದವ್ ವಿಡಿಯೋವನ್ನು ಪೋಸ್ಟ್ ಮಾಡಿದ್ದು ಈ ವಿಡಿಯೋದಲ್ಲಿ ದೇಶದಲ್ಲಿ ಹಿಂದಿ ಮಾತನಾಡುವ ಜನರ ಬಗ್ಗೆ ಉಲ್ಲೇಖ ಮಾಡಿದ್ದಾರೆ. "ಇದು ಬಿಜೆಪಿಯ ಬರೀ ಧರ್ಮ, ಜಾತಿ ಆಧಾರಿತ ರಾಜಕೀಯ, ಚುನಾವಣೆ ಇನ್ನು ಬರಲಿದೆ ಎಂಬ ಕಾರಣದಿಂದಾಗಿ ಈ ರೀತಿಯ ಹೇಳಿಕೆಗಳು ಬರುತ್ತಿದೆ," ಎಂದು ಹೇಳಿದ್ದಾರೆ.
ಅಬ್ಬಾ ಜಾನ್ ಹೇಳಿಕೆ ಖಂಡಿಸಿದ ನಟ ನಾಸಿರುದ್ದೀನ್ ಶಾ
ಯೋಗಿ ಆದಿತ್ಯನಾಥ್ರ ಅಬ್ಬಾ ಜಾನ್ ಹೇಳಿಕೆಯನ್ನು ಹಿರಿಯ ನಟ ನಾಸಿರುದ್ದೀನ್ ಶಾ ಖಂಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ಸಂದರ್ಭದಲ್ಲಿ ಈ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಸಿರುದ್ದೀನ್ ಶಾ, "ಈ ಹೇಳಿಕೆ ಆಕ್ರಮಣಕಾರಿ," ಎಂದು ಹೇಳಿದ್ದಾರೆ. "ಯುಪಿ ಸಿಎಂರ ಅಬ್ಬಾ ಜಾನ್ ಹೇಳಿಕೆಯು ಅವಮಾನಕಾರಿಯಾಗಿದೆ ಮತ್ತು ಪ್ರತಿಕ್ರಿಯೆಗೆ ಅರ್ಹವಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ಆದರೆ ಅಬ್ಬಾ ಜಾನ್ ಹೇಳಿಕೆ ಯೋಗಿ ಆದಿತ್ಯನಾಥ್ರ ದ್ವೇಷಕಾರುವ ಹೇಳಿಕೆಗಳ ಸರಣಿಯ ಒಂದು ಭಾಗವಾಗಿದೆ. ಭಾರತದಲ್ಲಿ ಬೆಳೆಯುತ್ತಿರುವ ಬಲಪಂಥೀಯ ಧರ್ಮಾಂಧತೆಯ ವಿರುದ್ಧ ಹಿಂದೂಗಳು ಧ್ವನಿ ಎತ್ತಬೇಕು," ಎಂದು ನಾಸಿರುದ್ದೀನ್ ಶಾ ತಿಳಿಸಿದ್ದಾರೆ.
50 ಸಾವು: "ಉತ್ತರ ಪ್ರದೇಶದಲ್ಲಿ ಇದೇನಾ ನಂ.1 ಆಸ್ಪತ್ರೆಗಳ ಹಣೆಬರಹ!?"
ಯೋಗಿ ವಿರುದ್ದ ರಾಹುಲ್ ಗಾಂಧಿ ವಾಗ್ದಾಳಿ
ಉತ್ತರ ಪ್ರದೇಶದ ಆದಿತ್ಯನಾಥ್ ಯೋಗಿ ಆಗಿರುವ ಕಾರಣದಿಂದಾಗಿ ಕಾಂಗ್ರೆಸ್ ಮುಖಂಡ, ವಯನಾಡು ಸಂಸದ ರಾಹುಲ್ ಗಾಂಧಿ ಯೋಗಿ ಆದಿತ್ಯನಾಥ್ರ ಕಾಲೆಳೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಯಾರು ದ್ವೇಷವನ್ನು ಮಾಡುತ್ತಾರೋ, ಅವರು ಯೋಗಿ ಆಗಲು ಹೇಗೆ ಸಾಧ್ಯ," ಎಂದು ಪ್ರಶ್ನೆ ಮಾಡಿದ್ದಾರೆ.
ಅಲಿಗಢ ಇನ್ಮುಂದೆ ಹರಿಘರ್?: ಯುಪಿ ಸರ್ಕಾರದ ಮುಂದಿದೆ ಪಂಚಾಯತ್ ಪ್ರಸ್ತಾಪ
ಕಾಂಗ್ರೆಸ್ ನಾಯಕ ರಾಹುಲ್ ಹೇಳಿಕೆಗೆ ಬಿಜೆಪಿ ಖಂಡನೆ
ಉತ್ತರ ಪ್ರದೇಶದ ಆದಿತ್ಯನಾಥ್ ಯೋಗಿ ಆದಿತ್ಯನಾಥ್ರ ಅಬ್ಬಾ ಜಾನ್ ಹೇಳಿಕೆಯನ್ನು ಟೀಕೆ ಮಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, "ಯಾರು ದ್ವೇಷವನ್ನು ಮಾಡುತ್ತಾರೋ, ಅವರು ಯೋಗಿ ಆಗಲು ಹೇಗೆ ಸಾಧ್ಯ," ಎಂದು ಹೇಳಿದ್ದಾರೆ. ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಗೌರವ್ ಭಾಟಿಯಾ, "ರಾಜಕೀಯದಲ್ಲಿ ರಾಹುಲ್ ಗಾಂಧಿಯನ್ನು ಯಾರೂ ಕೂಡಾ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಗಲಭೆಯನ್ನು ಯಾರು ದ್ವೇಷಿಸುತ್ತಾರೋ, ಭ್ರಷ್ಟಾಚಾರವನ್ನು ಯಾರು ದ್ವೇಷಿಸುತ್ತಾರೋ, ಭಯೋತ್ಪಾದನೆಯನ್ನು ಯಾರು ದ್ವೇಷಿಸುತ್ತಾರೋ ಹಾಗೂ ರಾಷ್ಟ್ರ, ರಾಜ್ಯವನ್ನು ರಕ್ಷಣೆ ಮಾಡುತ್ತಾರೋ, ಅವರೇ ಯೋಗಿ. ಕಾಂಗ್ರೆಸ್ ಶಾಲೆಯಲ್ಲಿ ನಿಮಗೆ ಇದನ್ನು ಹೇಳಿಕೊಟ್ಟಿಲ್ಲ ಎಂದು ಕಾಣುತ್ತದೆ," ಎಂದು ಲೇವಡಿ ಮಾಡಿದ್ದಾರೆ.
(ಒನ್ ಇಂಡಿಯಾ ಸುದ್ದಿ)