ಅಮೆರಿಕಾದಲ್ಲಿ 3 ದಿನಗಳ 4ನೇ ನಾವಿಕ ವಿಶ್ವ ಕನ್ನಡ ಸಮ್ಮೇಳನ ಸಂಪನ್ನ
ಅಮೆರಿಕಾದ ನಾವಿಕ ಸಂಸ್ಥೆ ಎರಡು ವರ್ಷಗಳಿಗೊಮ್ಮೆ 'ನಾವಿಕ ವಿಶ್ವ ಕನ್ನಡ ಸಮಾವೇಶ' ಎಂಬ ಮೂರು ದಿನಗಳ ಸಾಂಸ್ಕೃತಿಕ ಉತ್ಸವವನ್ನು ಅಮೆರಿಕಾದಲ್ಲಿ ಆಯೋಜಿಸುತ್ತಿದೆ. ವಿಶ್ವ ಕನ್ನಡಿಗರ ಸಹಕಾರದಿಂದ ಯಶಸ್ವಿಯಾಗಿ ಮೂರು ಬಾರಿ ನಡೆದ "ವಿಶ್ವ ಕನ್ನಡ ಸಮಾವೇಶ' ವಿಶ್ವದಾದ್ಯಂತ ಕನ್ನಡಿಗರ ಮನೆಮಾತಾಗಿದೆ.
'ನಾವಿಕ' ಕನ್ನಡ ಹಬ್ಬಕ್ಕೆ ಮುಖ್ಯ ಅತಿಥಿಯಾಗಿ ಸಿದ್ದರಾಮಯ್ಯ
ಈ ವರ್ಷ ಸೆಪ್ಟೆಂಬರ್ ತಿಂಗಳು 1, 2 ಹಾಗೂ 3ನೇ ತಾರೀಖಿನಂದು ನಾವಿಕ 4ನೇ ವಿಶ್ವ ಕನ್ನಡ ಸಮ್ಮೇಳನ ಅತ್ಯಂತ ವಿಜೃಂಭಣೆಯಿಂದ ವಿಶ್ವ ಕನ್ನಡಿಗರನ್ನೆಲ್ಲ ಒಂದುಗೂಡಿಸಿ 'ಸಂಸ್ಕೃತಿ - ಸಂಭ್ರಮ - ಸಮ್ಮಿಲನ' ಎಂಬ ಧ್ಯೇಯೋದ್ದೇಶಗಳೊಂದಿಗೆ ವಿಶ್ವ ಕನ್ನಡ ಪರ್ವ ಡಲ್ಲಾಸ್ ನಗರಿಯಲ್ಲಿ ಡಾ. ರೇಣುಕಾ ರಾಮಪ್ಪ (ನಾವಿಕ, ಅಧ್ಯಕ್ಷರು) ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು.
ಅಕ್ಕ ಸಮ್ಮೇಳನದಲ್ಲಿ ಬೃಂದಾವನ ಸಂಘದ ಉತ್ಕೃಷ್ಟ ಪ್ರದರ್ಶನ
ನಾವಿಕ 4ನೇ ವಿಶ್ವ ಕನ್ನಡ ಸಮಾವೇಶದಲ್ಲಿ ಜಗತ್ತಿನ ವಿವಿಧ ಮೂಲೆಯಲ್ಲಿ ನೆಲೆಸಿರುವ ಕನ್ನಡ ಸಂಘ ಸಂಸ್ಥೆಗಳು, ಕಲಾವಿದರು, ಗಣ್ಯರು ಪಾಲ್ಗೊಂಡಿದ್ದರು. ಈ ಬಾರಿ ನಮ್ಮ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಕಾರ್ಯಕ್ರಮ ಉದ್ಘಾಟನೆ ಮಾಡಬೇಕಿತ್ತು ಆದರೆ ಅವರ ಗೈರು ಹಾಜರಿಯಲ್ಲಿ ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ಸರ್ಕಾರ ಉಪಾಧ್ಯಕ್ಷರಾದ ಆರತಿ ಕೃಷ್ಣರವರು ವಿಶೇಷ ಅತಿಥಿಯಾಗಿ ನಾವಿಕ ವಿಶ್ವ ಕನ್ನಡ ಸಮ್ಮೇಳನ ಸಮಾರಂಭವನ್ನು ಉದ್ಘಾಟಿಸಿದರು.
ಸಂವಾದದಲ್ಲಿ ಪಾಲ್ಗೊಂಡ ಆರತಿ ಕೃಷ್ಣ
ಆರತಿ ಕೃಷ್ಣ ಅವರು ವಾಣಿಜ್ಯ ವೇದಿಕೆಯಲ್ಲಿ ಹಲವಾರು ವಿಶಯಗಳ ಚರ್ಚೆ ಮತ್ತು ಕರ್ನಾಟಕ ಸರ್ಕಾರದ ಯೋಜನೆಗಳ ಸಂವಾದದಲ್ಲಿ ಪಾಲ್ಗೊಂಡಿದ್ದರು. ಅಮೆರಿಕಾ ನೆಲದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ "ಕನ್ನಡ ಕಲಿ" ಕಾರ್ಯಕ್ರಮಕ್ಕೆ ಆರತಿ ಕೃಷ್ಣರವರಿಂದ ಪ್ರಶಂಸನೀಯ ಪತ್ರ ಕೊಟ್ಟು ಗೌರವಿಸಿ ಇನ್ನು ಹೆಚ್ಚು ಹೆಚ್ಚು ಮಕ್ಕಳು ಕನ್ನಡ ಕಲಿಯಲು ಆಹ್ವಾನಿಸಲಾಯಿತು.
ಕರ್ನಾಟಕದ ಕಲಾವಿದರಿಂದ ಭರ್ತಿ ಮನರಂಜನೆ
ಕರ್ನಾಟಕದಿಂದ ಪ್ರಮುಖ ಕಲಾವಿದರಾದ ರಾಜೇಶ್ ಕೃಷ್ಣನ್, ಅನುರಾಧಾ ಭಟ್ ರವರಿಂದ ಕನ್ನಡ ಚಿತ್ರಗಳ ಸಂಗೀತ ಕಾರ್ಯಕ್ರಮ, ಖಾನ್ ಸಹೋದರರಿಂದ ಸಿತಾರ್ ಸಂಜೆ, ನಾಗಾಭರಣರವರ ನೇತೃತ್ವದಲ್ಲಿ ಬಿವಿ ಕಾರಂತರ "ಸತ್ತವರ ನೆರಳು" ನಾಟಕ ಮತ್ತು ಬಿ ಸುರೇಶ್ ನಿರ್ದೇಶನದ "ಉಪ್ಪಿನ ಕಾಗದ" ಚಲನಚಿತ್ರ ಪ್ರದರ್ಶನ, ರಿಚರ್ಡ್ ಲೂಯಿಸ್ ರವರ ಹಾಸ್ಯ, ರತ್ನಮಾಲಾ ಪ್ರಕಾಶ್ ಮತ್ತು ಸುಚೇತನ್ ತಂಡದವರಿಂದ ಭಾವಗೀತೆ ಮತ್ತು ಸಂಗೀತ ರಸಸಂಜೆ ಕಾರ್ಯಕ್ರಮಗಳು ನಾವಿಕ ವಿಶ್ವ ಕನ್ನಡ ಸಮಾವೇಶಕ್ಕೆ ಮೆರಗು ನೀಡಿದವು.
ವಿಶ್ವದೆಲ್ಲೆಡೆಯಲಿ ಕನ್ನಡದ ಕೀರ್ತಿ ಪತಾಕೆ
ವಿಶ್ವ ಕನ್ನಡ ಪಥದ ರಾಜರಥದಲ್ಲಿ ವಿಶ್ವ ಮಾನವ ಸಂದೇಶ ಹೊತ್ತು ಕನ್ನಡಿಗರೆಲ್ಲ ಸೇರಿ ವಾಣಿಜ್ಯ ವೇದಿಕೆ, ವೈದ್ಯಕೀಯ ಚರ್ಚೆ, ಆಧಾತ್ಮ ಚಿಂತನೆ, ಮಹಿಳಾಗೋಷ್ಠಿ, ಯುವಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಶ್ವದೆಲ್ಲೆಡೆಯಲಿ ಕನ್ನಡದ ಕೀರ್ತಿ ಪತಾಕೆಯನ್ನ ನಾವಿಕರು(ನಾವು ವಿಶ್ವ ಕನ್ನಡಿಗರು) ಮತ್ತೊಮ್ಮೆ ಉತ್ತುಂಗ ಶಿಖರಕ್ಕೇರಿಸಿದ್ದಾರೆ.
31ನೇ ವೈದ್ಯಕೀಯ ಸಮಾವೇಶ
ಈ ಬಾರಿಯ ಮತ್ತೊಂದು ವಿಶೇಷವೇನೆಂದರೆ KSMD (Karnataka State Medical and Dental Alumni Association of America) ಸಂಸ್ಥೆ ತನ್ನ 31ನೇ ವೈದ್ಯಕೀಯ ಸಮಾವೇಶವನ್ನು ಡಾ. ಶ್ರೀಕಾಂತ್ ದೇವಾಂಗಿ (KSMD, ಅಧ್ಯಕ್ಷರು) ಅವರ ನೇತೃತ್ವದಲ್ಲಿ ವೈದ್ಯಕೀಯ ಚರ್ಚೆ ಮತ್ತು ಹಲವಾರು ಆರೋಗ್ಯಕರ ಸಂವಾದಗಳಿಗೆ ನಾವಿಕ 4ನೇ ವಿಶ್ವ ಕನ್ನಡ ಸಮ್ಮೇಳನ ಸಾಕ್ಷಿಯಾಯಿತು.
ಕನ್ನಡ ಪರಂಪರೆ ಉಳಿಕೆಗೆ ಯುವಸೂಚಿ
ನಾವಿಕ ಸಂಸ್ಥೆಯು ಯುವಕರನ್ನ ಒಂದು ಗೂಡಿಸಿ ನಮ್ಮ ಕನ್ನಡ ದಿವ್ಯ ಪರಂಪರೆಯನ್ನು ಉಳಿಸಿ ಬೆಳೆಸಲು "ಯುವಸೂಚಿ" ಎಂಬ ನೂತನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆದ ನಾವಿಕೋತ್ಸವ 2016ರ ವಿಶ್ವ ಕನ್ನಡ ಉತ್ಸವದಲ್ಲಿ ಉದ್ಘಾಟಿಸಲಾಗಿತ್ತು. ನಾವಿಕ ಸಂಸ್ಥೆಯ ಬಹು ದೊಡ್ಡ ಹೆಜ್ಜೆಯಾದ ಯುವಸೂಚಿ ನಿಧಿಗೆ ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ಸರ್ಕಾರದ ಸಹಾಯದೊಂದಿಗೆ ಚಾಲನೆ ದೊರೆಯಿತು. ನಾವಿಕ ಸಂಸ್ಥೆಯ ವತಿಯಿಂದ ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಕನ್ನಡದ ಸೇವೆಗೆ ತನು - ಮನ - ಧನದೊಂದಿಗೆ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಅನಂತ ಅನಂತ ವಂದನೆಗಳು.
ನಾವಿಕ ಸಮ್ಮೇಳನದ ರೂವಾರಿಗಳು
ನಾವಿಕ 4ನೇ ವಿಶ್ವ ಕನ್ನಡ ಸಮ್ಮೇಳನದ ಯಶಸ್ಸಿಗೆ ಡಾ. ರೇಣುಕಾ ರಾಮಪ್ಪ, ಹರ್ಷ ಗೋಪಾಲ್, ವಲ್ಲೀಶ ಶಾಸ್ತ್ರಿ, ಅನು ಬೆನಕ್ಕಟ್ಟಿ, ಶಿವಕುಮಾರ್, ಮಂಜುನಾಥ್, ಮಧು, ಡಾ. ವೀಣಾ ರಾಜ್, ಸುರೇಶ ರಾಮಚಂದ್ರ, ಡಾ. ಕೇಶವ್ ಬಾಬು, ಗೌರಿ ಶಂಕರ್, ಗಿರೀಶ್ ನಿಂಬೆಕಾಯಿ, ರಾಜೂರ್, ಆರತಿ ರಾಮಪ್ಪ ಮತ್ತು ಅರುಣಕುಮಾರ್ ರವರ ಪರಿಶ್ರಮ ಮತ್ತು ನಿಸ್ವಾರ್ಥ ಸೇವೆಯೇ ಕಾರಣ. ವಿಶ್ವ ಕನ್ನಡ ಪರ್ವ ಅಮೆರಿಕಾ ನೆಲದಲ್ಲಿ ವೈಭವ ಮತ್ತು ವಿಜೃಂಭಣೆಯಿಂದ ನಾವು ವಿಶ್ವ ಕನ್ನಡಿಗರು ಎಂಬ ಮಂತ್ರ ಜಪದೊಂದಿಗೆ ಬಹಳ ಯಶಸ್ವಿಯಾಗಿ ನೆರವೇರಿತು.