‘ಅಕ್ಕ’ಗೊಂದು ಸಮರ್ಥನೆ, ಜತೆಗಿಷ್ಟು ಸಿಡಿಮಿಡಿ!
ಸಂಪಾದಕರಿಗೆ,
‘ನಾಲ್ಕನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅಧ್ಯಾತ್ಮ ಗೋಷ್ಠಿ’ಯ ಮೊದಲನೇ ದಿನದ ಕಾರ್ಯಕ್ರಮದ ಬಗ್ಗೆ ನಿಮ್ಮಲ್ಲಿ ಬಂದ ವರದಿಯ ಬಗ್ಗೆ ಸತ್ಯ ಸಂಗತಿಗಳನ್ನು ತಿಳಿಸಲು ಈ ಪತ್ರ ಬರೆಯುತ್ತಿರುವೆ. ‘ದಟ್ಸ್ ಕನ್ನಡ ಕಾಂ’ ಸತ್ಯ ಸಂಗತಿಯ ವರದಿಗಳನ್ನು ಪ್ರಕಟಿಸುವುದರಲ್ಲಿ ಪ್ರಸಿದ್ಧವಾಗಿದೆ. ಇದರಲ್ಲಿ ಈ ಬಗೆಯ ಅಸತ್ಯ ಸಂಗತಿಗಳನ್ನು ಒಳಗೊಂಡ ವರದಿ ಬಂದಿರುವುದು ವಿಷಾದನೀಯವಾಗಿದೆ.
ಮೊದಲನೆಯದಾಗಿ, ಉಪನ್ಯಾಸಕಾರರಿಗೆ 5 ನಿಮಿಷ ನೀಡಲಾಗಿತ್ತು ಎಂದು ವರದಿಗಾರರು ಬರೆದಿದ್ದಾರೆ. ಇದು ಅಪ್ಪಟ ಸುಳ್ಳು. ಪ್ರತಿ ಭಾಷಣಕಾರರಿಗೂ ಎರಡೂ ಅಧ್ಯಾತ್ಮ ಗೋಷ್ಠಿಗಳಲ್ಲಿ 20 ನಿಮಿಷಗಳನ್ನು ನೀಡಲಾಗಿತ್ತು. ಇನ್ನು ಮೊದಲ ದಿನದ ಅಧ್ಯಾತ್ಮ ಗೋಷ್ಠಿಯಲ್ಲಿ 60-70 ಜನರೂ, ಎರಡನೆಯ ದಿನದ ಗೋಷ್ಠಿಯಲ್ಲಿ 200ಕ್ಕೂ ಹೆಚ್ಚು ಜನ ಇದ್ದರು. ಅತಿ ಹೆಚ್ಚು ಜನ ಬಂದ ಗೋಷ್ಠಿಗಳಲ್ಲಿ ಅಧ್ಯಾತ್ಮ ಗೋಷ್ಠಿ ಒಂದಾಗಿದೆ.
ಅಧ್ಯಯನಪೂರ್ಣ ಪ್ರಬಂಧಗಳ ಮಂಡನೆ ಆಗಿದ್ದು ಅಧ್ಯಾತ್ಮ ಗೋಷ್ಠಿಗಳಲ್ಲೇ ಎಂದರೆ ಅತಿಶಯೋಕ್ತಿಯಲ್ಲ. ಸಮ್ಮೇಳನದ ಅತಿ ಯಶಸ್ವಿ ಗೋಷ್ಠಿಗಳಲ್ಲಿ ಒಂದಾಗಿ, ಪ್ರಮುಖ ಗಣ್ಯರೂ ವಿದ್ವಾಂಸರೂ ಭಾಗವಹಿಸಿದ ಅಧ್ಯಾತ್ಮಗೋಷ್ಠಿಯ ಬಗ್ಗೆ ಸಂಚಾಲಕರಾದ ಗೋಪಿನಾಥ್ ಬೋರೆ ಮತ್ತು ನಾಗೇಂದ್ರ ಅವರು ಅತಿಶ್ರಮವಹಿಸಿ ಸುವ್ಯವಸ್ಥೆ ಮಾಡಿದ್ದರು.
ಸುತ್ತೂರು ಮಠದ ಜಗದ್ಗುರುಗಳು, ಸಿದ್ಧೇಶ್ವರ ಸ್ವಾಮಿಗಳು, ಗುರುಮಾತಾ ಅಮ್ಮನವರು, ತುಮಕೂರಿನ ಸ್ವಾಮಿಗಳು, ದೈವಜ್ಞ ಸೋಮಯಾಜಿಗಳು ಇವರೇ ಮೊದಲಾದ ಧಾರ್ಮಿಕ ಶ್ರೇಷ್ಠರೂ ವಿದ್ವಾಂಸರೂ ಭಾಗವಹಿಸಿದ ಅಧ್ಯಾತ್ಮಗೋಷ್ಠಿ ಅರ್ಥಪೂರ್ಣವಾಗಿತ್ತು.
ಇನ್ನೂ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು, ವ್ಯವಸ್ಥಾಪಕರು ವೇದಿಕೆ ಮೇಲೆ ಉಪನ್ಯಾಸಕಾರರೆಲ್ಲರೂ ಕೂಡಲು ಸ್ಥಳಾವಕಾಶವಿಲ್ಲದ್ದನ್ನು ಕಂಡು, ಕುರ್ಚಿ ತೆಗೆಯುತ್ತಿದ್ದುದನ್ನು ವರದಿಗಾರರು ತಪ್ಪಾಗಿ ತಿಳಿದಿದ್ದಾರೆ. ಓದುಗರಿಗೆ ಮತ್ತು ಸಮ್ಮೇಳನದಲ್ಲಿ ಭಾಗವಹಿಸಿದವರಿಗೆ ಸತ್ಯ ಸಂಗತಿ ತಿಳಿಯಲು ಈ ಪತ್ರವನ್ನು ತಾವು ಪ್ರಕಟಿಸುವಿರೆಂದು ನಂಬಿದ್ದೇನೆ.
- ಪ್ರೊ.ಜಿ.ಅಶ್ವತ್ಥನಾರಾಯಣ, ಅಧ್ಯಾತ್ಮ ಸಮಿತಿ ಸದಸ್ಯ, ವಿಶ್ವಕನ್ನಡ ಸಮ್ಮೇಳನ-06.
*
ಮಾನ್ಯರೇ,
‘ಅಕ್ಕ’ ಸಮ್ಮೇಳನಕ್ಕೆ ಕರ್ನಾಟಕದಿಂದ ಒಂದು ದಂಡು!
ಅಮ್ಮನನ್ನು ಉದ್ಧರಿಸದೆ, ಅವಳಿಂದ ಉದ್ಧಾರಗೊಳ್ಳದೆ ‘ಅಕ್ಕ’ನನ್ನು ಉದ್ಧರಿಸಲು ‘ನಾ ಮುಂದು, ತಾ ಮುಂದು’ ಎಂದು ಹೋದ ತಮ್ಮಂದಿರನ್ನು ತಂಗಿಯರನ್ನು ಕುರಿತು ಏನು ಹೇಳೋಣ? (ಕನ್ನಡಿಗರನ್ನು ಕಾಯುವವಳು ಕನ್ನಡಮ್ಮನೇ ಹೊರತು ಅಮೆರಿಕದ ಅಕ್ಕ, ಭಾವಂದಿರಲ್ಲ!)
‘ಕನ್ನಡತನವೊಂದಿದ್ದರೆ ನೀನೆಮಗೆ ಕಲ್ಪತರು’ -
- ಸಿ.ಪಿ.ಕೆ., ಮೈಸೂರು
*
ಆತ್ಮೀಯ ಶ್ಯಾಮ್ಸುಂದರ್,
ತಾವು ಸಮ್ಮೇಳನಕ್ಕೆ ಆಗಮಿಸಿದ್ದು ಬಹಳ ಸಂತೋಷ ತಂದಿತು. ಅಲ್ಲದೆ ಇತರ ಪತ್ರಕರ್ತರನ್ನು ಸಹ ವೇದಿಕೆಗೆ ಕರೆತಂದು ಸನ್ಮಾನಿಸಿದ್ದು ಇನ್ನೂ ಸಂತೋಷವಾಯ್ತು.
ವಿಷಾದದ ಸಂಗತಿ ಎಂದರೆ, ಎರಡು ವರುಷಗಳ ಕಾಲ ಅವಿರತವಾಗಿ ದುಡಿದ ಸ್ವಯಂ ಸೇವಕರನ್ನು ಈ ಸಭೆ ಗುರುತಿಸಲಿಲ್ಲ. ರವಿ ಡಂಕಣಕೋಟೆ ಅವರಿಗೆ ಕೆಲವರ ಹೆಸರುಗಳನ್ನು ಕೂಡ ಸರಿಯಾಗಿ ಉಚ್ಚರಿಸಲಾಗಲಿಲ್ಲ. ಸಾವಿರಾರು ಜನರು ತಂಗಲು, ಊಟ ಉಪಚಾರ ಮಾಡಿಸಲು, ವಾಹನ ಸೌಕರ್ಯ ಕಲ್ಪಿಸಲು ಈ ನಗುಮೊಗದ ಸೇವಕರು ಕಳೆದ ನಿದ್ದೆಯಿಲ್ಲದ ರಾತ್ರಿಗಳೆಷ್ಟೋ.
ಕೆಲಸದಿಂದ ರಜಾ ದಿನಗಳನ್ನು ತೆಗೆದುಕೊಂಡು, ತಮ್ಮ ಸಂಸಾರವನ್ನು ಮರೆತು, ಊಟ-ತಿಂಡಿ ಮಾಡದೆ, ಯಾವ ಕಾರ್ಯಕ್ರಮಗಳನ್ನೂ ನೋಡದೆ, ನಮ್ಮೆಲ್ಲರನ್ನೂ ಕಾವೇರಿ ಬಳಗಕ್ಕೆ ಸೇರಿಸಿಕೊಂಡವರನ್ನು ಸ್ಮರಿಸಲು, ಸಮ್ಮೇಳನದಲ್ಲಿ ಸಮಯವಿಲ್ಲದೇ ಹೋಯ್ತಲ್ಲ!!
ಈ ಕಾರ್ಯಕ್ರಮ ಯಶಸ್ವಿಯಾಗಲು ದುಡಿದವರ ಹೆಸರು ಹಾಗೂ ಅವರ ಭಾವಚಿತ್ರಗಳೊಂದಿಗೆ ಸಭಾಂಗಣದಲ್ಲಿ ಪ್ರದರ್ಶಿಸಬಹುದಿತ್ತು.
ಇವರಲ್ಲಿ ಯಾರಿಗೂ ತಮ್ಮ ಪರಿಶ್ರಮವನ್ನು ತೋರಿಸಿಕೊಳ್ಳಬೇಕೆಂಬ ಆಸೆ ಇದ್ದಂತೆ ಕಾಣದಿದ್ದರೂ ಧನ್ಯತೆ ತೋರಿಸುವುದು ಸಮ್ಮೇಳನದ ಉದ್ದೇಶವಾಗಬೇಕಿತ್ತು.
ಕನ್ನಡ ಭಾಷಾಭಿಮಾನವನ್ನು ನಮ್ಮ ಕನ್ನಡಿಗರೇ ಕಳೆದಿರುವುದು ಅತಿ ನೋವಿನ ಸಂಗತಿ. ಆದ್ದರಿಂದಲೇ ನಾವು ಭಾಷೆಯನ್ನು ಉಳಿಸಿಕೊಳ್ಳಲು ಪರದೇಶವಾದರೂ ಸರಿ ಕಷ್ಟ ಪಡಬೇಕಾಗಿದೆ.
ಕನ್ನಡದವರು ಬೆಂಗಳೂರಿನಲ್ಲಿ ಬೇಕಾದ್ದು ಮಾತಾಡಲಿ, ನಾವು ನಮ್ಮತನವನ್ನು ಉಳಿಸಿಕೊಳ್ಳಲು ಹೋರಾಡೋಣ. ಅದು ಪರಕೀಯರ ಸ್ವತ್ತಲ್ಲ. ನಮ್ಮ ನಾಡು, ನಮ್ಮ ನುಡಿ ಎಂಬ ಗರ್ವ ನಮಗಿರಬೇಕು. ಇದು ನನ್ನ ಅನಿಸಿಕೆ.
ಮತ್ತೊಮ್ಮೆ ಧನ್ಯವಾದಗಳು...
ವಿಶ್ವಾಸದಲ್ಲಿ,
- ಅನುರಾಧಾ ಅರುಣ್, ಬೋಲಿಂಗ್ಬ್ರೂಕ್, ಇಲಿನಾಯ್ಸ್
ನುಡಿ ಹಬ್ಬದ ಚಿತ್ರಪಟಗಳು :
ಮತ್ತೆ ಸಿಗೋಣ - 3ನೇ ದಿನ
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |











Click it and Unblock the Notifications