ಅಕ್ಕ ಸಮ್ಮೇಳನಕ್ಕೆ ಡೆಪ್ಯುಟಿ ಸಿದ್ಧರಾಮಯ್ಯ ಹಾಗೂ ಇತರ 19 ಮಂದಿ ತಂಡ
ಬೆಂಗಳೂರು : ಫ್ಲಾರಿಡಾದಲ್ಲಿ ಸೆ.3ರಿಂದ ನಡೆಯುವ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನಕ್ಕೆ ರಾಜ್ಯದ ಸಾಹಿತಿಗಳು, ಕಲಾವಿದರನ್ನೊಳಗೊಂಡ 19ಮಂದಿಯ ತಂಡ ಮಂಗಳವಾರ ರಾತ್ರಿ ಅಮೆರಿಕಕ್ಕೆ ತೆರಳಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಉಷಾ ಗಣೇಶ್ ಹಾಗೂ ನಿರ್ದೇಶಕ ಮುದ್ದು ಮೋಹನ್ತಂಡದ ನೇತೃತ್ವ ವಹಿಸುವರು. ಫ್ಲಾರಿಡಾದ ಶ್ರೀಗಂಧ ಕನ್ನಡಕೂಟ 3ನೇ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸುತ್ತದೆ.
ಸಮ್ಮೇಳನಕ್ಕೆ ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ದೊಡ್ಡರಂಗೇಗೌಡ, ರಂಗ ನಾಯಕಿ ಸುಭದ್ರಮ್ಮ ಮನ್ಸೂರ್, ಹೋರಾಟದ ಹಾಡುಗಳ ಪಿಚ್ಚಳ್ಳಿ ಶ್ರೀನಿವಾಸ್, ನೃತ್ಯಗಾರ್ತಿ ಡಾ. ವಸುಂಧುರಾ ದೊರೆ ಸ್ವಾಮಿ, ರಂಗನಟ ಸಿ.ಆರ್.ಸಿಂಹ, ಕರ್ನಾಟಕ ಶಾಸ್ತ್ರೀಯ ಸಂಗೀತಗಾರ್ತಿ ಎಂ.ಎಸ್.ಶೀಲಾ, ಸುಗಮ ಸಂಗೀತ ಕಲಾವಿದೆ ಕಸ್ತೂರಿ ಶಂಕರ್, ತಬಲಾ ವಾದಕ ಎಂ.ನಾಗೇಶ್, ಹಿಂದೂಸ್ತಾನಿ ಗಾಯಕ ಎಂ.ವೆಂಕಟೇಶ ಕುಮಾರ್, ಕೀಬೋರ್ಡ್ ಕಲಾವಿದ ಶಬ್ಬೀರ್ ಅಹ್ಮದ್, ಮೃದಂಗ ವಾದಕ ಆನೂರು ಅನಂತ ಕೃಷ್ಣಶರ್ಮ, ಕಥಕ್ ನೃತ್ಯಗಾರರಾದ ನಿರುಪಮಾ ಮತ್ತು ರಾಜೇಂದ್ರ, ಯಕ್ಷಗಾನದ ಮುರಳಿ, ನೀಲಾವರ ಮಹಾಬಲ ಶೆಟ್ಟಿ, ಕಿದಿಯೂರು ಜನಾರ್ದನ ಕೃಷ್ಣ , ಹಿಂದೂಸ್ತಾನಿ ಸಂಗೀತದ ವ್ಯಾಸಮೂರ್ತಿ ಕಟ್ಟಿ ಸರಕಾರದ ವತಿಯಿಂದ ತೆರಳುತ್ತಿದ್ದಾರೆ.
ಸಚಿವರ ಅಮೆರಿಕ ಪ್ರವಾಸಕ್ಕೆ ಕತ್ತರಿ
‘ಅಕ್ಕ’ ಸಮ್ಮೇಳನದಲ್ಲಿ ಪಾಲ್ಗೋಳ್ಳಲು ಅಣಿಯಾಗಿದ್ದ ಸಚಿವರು ಹಾಗೂ ಅಧಿಕಾರಿಗಳ ಪ್ರವಾಸಕ್ಕೆ ಕೇಂದ್ರ ಸರಕಾರ ಕತ್ತರಿ ಹಾಕಿದೆ. ತಲಾ ಒಬ್ಬ ಸಚಿವರು ಹಾಗೂ ಅಧಿಕಾರಿಗೆ ಮಾತ್ರವಿದೇಶ ಪ್ರವಾಸಕ್ಕೆ ತೆರಳಲು ಕೇಂದ್ರ ವಿದೇಶಾಂಗ ಸಚಿವಾಲಯ ಅನುಮತಿ ನೀಡಿದೆ.
ಇದರಿಂದ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಾತ್ರ ಅಮೆರಿಕ ಪ್ರವಾಸ ಕೈಗೊಳ್ಳುವುದು ನಿಶ್ಚಿತವಾಗಿದೆ. ಈ ಹಿಂದೆ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಯಲ್ಲಿ ಸಚಿವರಾದ ಎಂ.ಪಿ.ಪ್ರಕಾಶ್, ಶ್ರೀನಿವಾಸಗೌಡ ತೆರಳುವುದೆಂದು ನಿರ್ಧರಿಸಲಾಗಿತ್ತು. ಅಧಿಕಾರಿಗಳ ತಂಡ ಕೂಡ ಪ್ರಸ್ತಾವನೆ ಕಳುಹಿಸಲಾಗಿತ್ತು. ಇದನ್ನು ಕಂದಾಯ ಎಂ.ಪಿ. ಪ್ರಕಾಶ್ ಖಚಿತಪಡಿಸಿದ್ದಾರೆ.
(ಇನ್ಫೋ ವಾರ್ತೆ)