ಅಕ್ಕ ಚುನಾವಣೆ ಮತ್ತು ಭವಿಷ್ಯ
ಸುರೇಶ್ ರಾಮಚಂದ್ರ
[email protected]
ಇತ್ತೀಚೆಗೆ ನಡೆದ ಅಕ್ಕ ಚುನಾವಣೆ ವಿಷಯ ನಿಮಗೆಲ್ಲ ತಿಳಿದಿದೆ. ನಾವೆಲ್ಲ ಕೂಡಿ ಚುನಾವಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದಿಸೋಣ. ಅಧ್ಯಕ್ಷರಾಗಿ ಆಯ್ಕೆಯಾದ ಕುದೂರು ಮುರಳಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ರೇಣುಕ ರಾಮಪ್ಪ , ಶರಣಬಸವರಾಜುರ್, ಪ್ರಭುದೇವ್, ಜಂಟಿ ಕಾರ್ಯದರ್ಶಿಗಳಾದ ಹರೀಶ್ ಹಿರೇಮಠ್, ಶಾಂತರಾಜು ಕೆಂಪಯ್ಯ, ಜಂಟಿ ಕೋಶಾಧಿಕಾರಿಗಳಾದ ವಿಜಯ ಭಟ್, ಶಾಮಯ್ಯ ಶೆಟ್ಟಿ ಅವರಿಗೆ ಹಾರ್ದಿಕ ಶುಭಾಶಯಗಳು. ನಿಮಗೆ ನಮ್ಮೆಲ್ಲರ ಸಂಪೂರ್ಣ ಬೆಂಬಲ ಮತ್ತು ಸಹಕಾರ ಇದೆ.
ಅಕ್ಕನ ಭವಿಷ್ಯದ ಬಗೆಗೆ ಉತ್ತರ ಅಮೆರಿಕದ ಎಲ್ಲ ಕನ್ನಡಿಗರಿಗೂ ಅಪಾರ ಕಾಳಜಿ ಇದೆ. ಈ ಬಗ್ಗೆ ನನ್ನ ಚಿಂತನೆಯನ್ನು ಹಂಚಿಕೊಳ್ಳುವುದು ಈ ಪತ್ರದ ಉದ್ದೇಶ. ಪಾರದರ್ಶಕವಾಗಿ ಚುನಾವಣೆ ನಡೆಸಿದ ಅಂಜನಪ್ಪ ಮತ್ತು ತಂಡದವರು ಚುನಾವಣೆಗೆ ಶೋಭೆ ತಂದು ನಾವೆಲ್ಲ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಪ್ರಸ್ತುತ ನಮ್ಮೆಲ್ಲರ ಮುಂದಿರುವ ಪ್ರಮುಖ ಕರ್ತವ್ಯ ವಿಶ್ವ ಕನ್ನಡ ಸಮ್ಮೇಳನಕ್ಕೆ ಮನಃಪೂರ್ವಕ ಬೆಂಬಲ ನೀಡುವುದು. ಕನ್ನಡದ ಕೆಲಸ ಯಾರು ಮಾಡಿದರೆ ಏನಂತೆ? ಕನ್ನಡದ ತೇರು ಎಳೆಯಲು ಎಷ್ಟು ಕೈಗಳಾದರೂ ಸಾಲವು! ಕೆಲಸ ಮಾಡುವವರಿಗೆ ನಾವೆಲ್ಲ ಒಮ್ಮತದಿಂದ ಬೆಂಬಲ ನೀಡೋಣ. ಕನ್ನಡ ಕಾಯಕದಲ್ಲಿ ನಮ್ಮ ಪಾಲೂ ಸಲ್ಲಿಸೋಣ. ಅತಿ ಮುಖ್ಯವಾಗಿ ನಮ್ಮೆಲ್ಲರ ಮುಂದಿನ ಕೆಲಸ ಫ್ಲೋರಿಡ ವಿಶ್ವ ಕನ್ನಡ ಸಮ್ಮೇಳನವನ್ನು ಯಶಸ್ವಿಗೊಳಿಸುವುದು. ಈ ಮಹತ್ತರ ಕಾರ್ಯದ ನೇತೃತ್ವ ವಹಿಸಿರುವ ಡಾ. ರೇಣುಕ ಮತ್ತು ತಂಡಕ್ಕೆ ಸಮಸ್ತ ಕನ್ನಡಿಗರು ಪ್ರೋತ್ಸಾಹ ನೀಡಿ ಎಂದು ನಾನು ಕೋರಿಕೊಳ್ಳುತ್ತೇನೆ.
ವ್ಯಕ್ತಿಗಿಂತ ಸಂಸ್ಥೆ ಮುಖ್ಯ. 'ಯಾರೇ ಬರಲಿ, ಕನ್ನಡ ಉಳಿಯಲಿ, ಅಕ್ಕ ಬೆಳೆಯಲಿ ಕನ್ನಡ ಸೇವೆ ಮಾಡುವವರಿಗೆಲ್ಲ ಒಳಿತಾಗಲಿ" ಎಂದು ತಾಯಿ ಭುವನೇಶ್ವರಿಯನ್ನು ಪ್ರಾರ್ಥಿಸಿ, ನಿಮ್ಮೆಲ್ಲರ ಅನುಗ್ರಹ, ಕೃಪೆ, ವಾತ್ಸಲ್ಯ ಅಕ್ಕ ಸಮ್ಮೇಳನದ ಮೇಲಿರಲಿ ಎಂದು ಕೋರುತ್ತೇನೆ.
ನೂತನ ಅಧ್ಯಕ್ಷರಿಗೆ ಕರೆ
ಸಂಸ್ಥೆ ಎಂದ ಮೇಲೆ ನ್ಯೂನತೆಗಳು, ಕೊರತೆಗಳು, ಅಭಿಪ್ರಾಯ ವೈವಿಧ್ಯಗಳು ಇದ್ದೇ ಇರುತ್ತವೆ. ಅಕ್ಕ ಇನ್ನಷ್ಟು ಬೆಳೆದು ಮಾದರಿ ಸಂಸ್ಥೆಯಾಗಲು ಎಲ್ಲರ ಸಹಕಾರ ಅಗತ್ಯ. ಕ್ರಿಯಾತ್ಮಕ ಚಟುವಟಿಕೆ, ಒಗ್ಗಟ್ಟು, ಸಂವಹನ, ಪಾರದರ್ಶಕ ಆಡಳಿತವನ್ನು ರೂಢಿಸಿಕೊಂಡರೆ ಮಾತ್ರ ಅಕ್ಕ ಮಾದರಿ ಸಂಸ್ಥೆಯಾಗಬಲ್ಲದು. ಈ ದಿಸೆಯಲ್ಲಿ ನಮ್ಮ ನೂತನ ಅಧ್ಯಕ್ಷರು ಕಾರ್ಯಪ್ರವೃತ್ತರಾಗುವರೆಂದು ಆಶಿಸೋಣ. ಈ ಬಗ್ಗೆ ಕೆಲವು ಸಲಹೆಗಳನ್ನು ಮುಂದಿಡುತ್ತೇನೆ.
* ಅಕ್ಕ ಬೆಳೆಯಲು ಒಗ್ಗಟ್ಟು ಅತ್ಯಗತ್ಯ. ಸಮ್ಮೇಳನ ಮುಗಿದು 3 ತಿಂಗಳೊಳಗೆ ಒಂದು ಕೂಟ (ಸಮ್ಮಿತ್) ನಡೆಸಿ. ಈ ಕೂಟಕ್ಕೆ ಎಲ್ಲ ಗುಂಪಿನವರನ್ನು ಆಹ್ವಾನಿಸಿ. (ಜ್ಞಾನ ಎಲ್ಲೆಡೆಯಿಂದಲು ಹರಿದು ಬರಲಿ)
* ಇದುವರೆವಿಗೂ ಪರಿಹಾರವಾಗದಿರುವ ಎಲ್ಲ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಿ, ಸಂದೇಹಗಳು ಎದುರಾದರೆ ಸಮರ್ಪಕವಾಗಿ ಉತ್ತರಿಸಿ, ಸಮಾಪ್ತಿಗೊಳಿಸಿ.
* ಅಕ್ಕ ಕನ್ನಡದ ಸಂಸ್ಥೆ ಎಂದು ಗಾಢವಾಗಿ ನಂಬಿರುವವರಲ್ಲಿ ನಾನೂ ಒಬ್ಬ. ಅಕ್ಕದ ಎಲ್ಲ ಕಾರ್ಯಕಲಾಪಗಳನ್ನು ದಯಮಾಡಿ ಕನ್ನಡದಲ್ಲೇ ನಡೆಸಿ. ಕನ್ನಡ ಮಾತಾಡಲು ಹಾಗೂ ಬರೆಯಲು ಪ್ರೋತ್ಸಾಹಿಸಿ.
* ಸಮ್ಮೇಳನದ ಜೊತೆಗೆ ಕನ್ನಡ ಸಂಘಗಳು ಹಾಗು ಇತರ ಕನ್ನಡ ಸಂಸ್ಥೆಗಳೊಂದಿಗೆ ಸೇರಿ ಮಕ್ಕಳಿಗೆ ಕನ್ನಡ ಕಲಿಸುವ, ಬೆಳೆಸುವ ಪುಣ್ಯ ಕಾರ್ಯವನ್ನು ಮಾಡಿ. ಕನ್ನಡ ಸಂಸ್ಕೃತಿ ಮುಂದಿನ ಜನಾಂಗಕ್ಕೂ ಉಳಿಯಲಿ. ಈ ದಿಸೆಯಲ್ಲಿ ಕನ್ನಡ ಕತೆ, ಪ್ರಬಂಧ, ಹಾಡು, ನಟನೆ, ಭಾಷಾಂತರದ ಸ್ಪರ್ಧೆ ಏರ್ಪಡಿಸಿ.
* ಸಮಯಕ್ಕೆ ಸರಿಯಾಗಿ 2 ವರ್ಷಕೊಮ್ಮೆ ಚುನಾವಣೆ ನಡೆಸಿ. ಎಲ್ಲ ಕಾರ್ಯಕ್ರಮಗಳನ್ನು ಸಮಯಕ್ಕೆ ಸರಿಯಗಿ ನಡೆಸಿ. ಇತ್ತೀಚೆಗೆ ನಡೆದ ಫಿಲಡೆಲ್ಫಿಯ ಕುವೆಂಪು ಸಾಹಿತ್ಯ ಸಮ್ಮೇಳನದಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಈ ಗುರುತರವಾದ ಜವಾಬ್ದಾರಿ ಹೊತ್ತಿರುವ ನಿಮಗೆ ನಮ್ಮೆಲ್ಲರ ಬೆಂಬಲ ಹಾಗು ದೇವರ ಆಶೀರ್ವಾದ ಖಂಡಿತ ಇದೆ.
ಈ ಸಂದರ್ಭದಲ್ಲಿ ನಮ್ಮೆಲ್ಲರ ಒಗ್ಗಟ್ಟು ಮುಖ್ಯ. ಅದಕ್ಕಾಗಿ ಮಡಕೆಯನ್ನು ಸಂಕೇತವಾಗಿಟ್ಟುಕೊಂಡು ಒಂದು ಕವನ ರಚಿಸಿದ್ದೇನೆ. ಓದುವಂತವರಾಗಿ ..
ಅಕ್ಕನ ಮಡಕೆ
ಮಡಕೆ ಒಡೆದರೆ ತಪ್ಪು
ಯಾರದ್ದು ? ಮಾಡಿದವನ ತಪ್ಪೊ ?
ಉಪಯೋಗಿಸುವವನ ತಪ್ಪೊ ?
ಇಷ್ಟು ಮಾತ್ರ ಸತ್ಯ, ಮಡಕೆ ಒಡೆದದ್ದು ತಪ್ಪು
ಕನ್ನಡದ ಮಡಕೆ ಒಡೆದದ್ದು ತಪ್ಪು
ಇದು ಅಕ್ಕನ ತಪ್ಪೊ ? ಅಮ್ಮನ ತಪ್ಪೊ ?
ಮಡಕೆ ಒಡೆದವರಿಗೆ ತಿಳಿಯಲಿಲ್ಲ ಸತ್ಯ
ಒಡೆದ ಮಡಕೆ ಕೂಡುವುದಿಲ್ಲ ಮತ್ತೆ
ಮಡಕೆ ಯಾರದ್ದದಾದರೇನು
ಯಾರು ಮಾಡಿದ್ದರೇನು
ಎಲ್ಲರಿಗೂ ನೀಡಿತು ನೀರು, ಅನ್ನ, ತಡಿಕೆ
ಹರಿಸಿತು ಕನ್ನಡಿಗರೆಲ್ಲರ ಬಾಯಾರಿಕೆ.
ಬನ್ನಿರಿ, ಬನ್ನಿರಿ, ಕೂಡಿ ಮಾಡೋಣ ಮಡಕೆ
ಕನ್ನಡದ ಹೊಸ ಮಡಕೆ, ಒಡೆಯಬಾರದ,
ಯಾರು ಒಡೆಯಲಾಗದ ಮಡಕೆ
ಮತ್ತೆ ಚಿಗುರಲಿ ಕನ್ನಡಿಗರೆಲ್ಲರ ಆಸೆ











Click it and Unblock the Notifications