‘ಸಮರ್ಥನ’ ಪ್ರತಿಭೆ ಮತ್ತು ಸಮಾಜಮುಖಿ ‘ಅಕ್ಕ’
- ಬಸವರಾಜ. ಸೂ. ಮುದೇನೂರ, ವೆಸ್ಟಬರೋ.
[email protected]
ಅಮೇರಿಕಾದಲ್ಲಿ ಅರಳಿದ ಅಕ್ಕಳ ಪ್ರೀತಿಯ ಅಕ್ಕರೆಯನ್ನು ನೆನೆಯುತ್ತಾ ಸಮ್ಮೇಳನದ ಸಭಾಂಗಣದಿಂದ ನನ್ನ ಗೂಡು ಸೇರಲು ವಾಪಸ್ಸು ಹೊರಟೆ. ಒರ್ಲಾಂಡೊ ನಗರದಲ್ಲಿ ಹರಡಿದ ಕನ್ನಡದ ಪರಿಮಳವನ್ನು ಎಷ್ಟು ವರ್ಣಿಸಿದರೂ ಸಾಲದು. ದಟ್ಸಕನ್ನಡ.ಕಾಮ್ ನಿಮಗೆಲ್ಲ ವಿಶ್ವಕನ್ನಡ ಮೇಳದ ವಾರ್ತೆಗಳನ್ನು ಶರವೇಗದಲ್ಲಿ ನೀಡಿದೆ.
‘ಫ್ರಾನ್ಸಿಸ್’ ಚಂಡಮಾರುತದಂತ ಸವಾಲುಗಳನ್ನು ಧೃತಿಗೆಡದೆ ಎದುರಿಸಿ ಯಶಸ್ಸು ಪಡೆಯುವುದು ಹೇಗೆ ಎಂಬುದನ್ನು ಡಾ.ರೇಣುಕಾ ರಾಮಪ್ಪ ಅವರ ತಂಡ ತೋರಿಸಿ ಕೊಟ್ಟಿದೆ. ಕೊನೆಗಳಿಗೆಯಲ್ಲಿ ಹಣಕಾಸು, ಸಾರಿಗೆ, ಆಹಾರ, ಅತಿಥಿ ಸತ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉಂಟಾಗಬಹುದಾದ ಅಡೆ-ತಡೆಗಳನ್ನು ವಿಶ್ಲೇಷಿಸಿ ಸಮ್ಮೇಳನ ನಡೆಸುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು ಕನ್ನಡಿಗರು ಅಮೇರಿಕಾದಲ್ಲಿ ಬರೀ ತಂತ್ರಜ್ಞರಾಗಿರದೆ ಕಾರ್ಯ ನಿರ್ವವಣೆಯಲ್ಲೂ (ಮ್ಯಾನೇಜಮೆಂಟ್) ಮುಂದಿದ್ದಾರೆ ಎಂಬುದನ್ನು ಸಾರುತ್ತದೆ. ಸ್ವಯಂ ಸೇವಕ ಕನ್ನಡ ಅಭಿಮಾನಿಗಳು ಒಂದು ತಂಡವಾಗಿ (ಟೀಮ ವರ್ಕ್) ಕೆಲಸ ಮಾಡಿದರು. ಬೆವರಿಳಿಸಿ ಗಳಿಸಿದ ಯಶಸ್ಸು ತುಂಬ ಹೆಮ್ಮೆಯದು. ಶ್ರಮವಹಿಸಿದ ಎಲ್ಲರಿಗೂ ಅಮೇರಿಕನ್ನಡಿಗರ ಅಭಿಮಾನದ ಧನ್ಯವಾದಗಳು.
ಭಲಾರೇ ಸಮರ್ಥನ !
ಕನ್ನಡ ಸಾಹಿತ್ಯ, ಕಲೆ, ಮನರಂಜನೆಗಳಿಗಾಗಿ ಅತ್ಯಂತ ಉತ್ತಮ ಕಾರ್ಯಕ್ರಮಗಳನ್ನು ಸಮ್ಮೇಳನದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಗಳ ಮುಖಾಂತರ ಅಕ್ಕ, ಕನ್ನಡದ ಶ್ರೇಷ್ಠ ಅಂಗವಿಕಲ ಕಲಾವಿದರನ್ನು ಗುರುತಿಸಿದ್ದು ಹೆಮ್ಮೆಯ ವಿಷಯ. ಪ್ರೇಕ್ಷಕರನ್ನು ರಂಜಿಸಿದ ಬೆಂಗಳೂರಿನ ಸಮರ್ಥನ ಕಲಾವಿದರ ತಂಡದ ನಾಟ್ಯ ರೂಪಕ ಸೊಗಸಾಗಿ ಮೂಡಿಬಂತು. ಅವರ ಆತ್ಮ ವಿಶ್ವಾಸ, ನಾಟ್ಯ ಶೈಲಿ, ಸಂದರ್ಭಾನುಚಿತವಾಗಿ ಮುಖದಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿದ ರೀತಿ ನಮ್ಮೆಲ್ಲರನ್ನು ಬೆರಗಾಗಿಸಿತು. ಇಷ್ಟೆಲ್ಲಾ ವಿವರಗಳನ್ನು ನಾನು ಯಾಕೆ ನಿಮಗೆ ಕೊಡುತ್ತಿದ್ದೇನೆಂದರೆ ನೃತ್ಯ ಮಾಡಿದ ಯುವತಿಯರಿಗೆ ದೇವರು ನೋಡಲು ಕಣ್ಣು ನೀಡಿಲ್ಲ. ದೃಷ್ಟಿಹೀನರಾದರೂ, ತಾಳಬದ್ಧವಾಗಿ ಹೆಜ್ಜೆ ಹಾಕಿದರು (ಸಿಂಕ್ರೊಮೈಜೇಷನ್). ಅದೊಂದು ಅದ್ಭುತ ಕಾರ್ಯಕ್ರಮ.
ಕು.ನಾಗವೇಣಿ ಮತ್ತು ಕು.ಸಾವಿತ್ರಿ ಯವರ ‘ಪುಷ್ಪಾಂಜಲಿ’ ಎನ್ನುವ ಶಾಸ್ತ್ರೀಯ ನೃತ್ಯ ನೋಡಿದ ಕಣ್ಣಿರುವ ನಮ್ಮ ಗೆಳೆಯರೆಲ್ಲರದು ಒಂದೇ ಪ್ರಶ್ನೆ ? ನೃತ್ಯವನ್ನು ಕೇಳಿ ಕಲಿಯಲು ಸಾಧ್ಯವಿಲ್ಲ . ಹಾಗಾದರೆ, ಈ ಸಮರ್ಥನ ಬಳಗದ ಕಲಾವಿದರು ಹೇಗೆ ಕಲಿಯುತ್ತಾರೆ? ಉತ್ತರ : ಆತ್ಮವಿಶ್ವಾಸ. ಈ ಕಾಲವಿದರ ಪ್ರತಿಭೆಯ ಬಗ್ಗೆ ಸಭಿಕರೆಲ್ಲರಿಗೆ ಅಭಿಮಾನ, ಹೆಮ್ಮೆ . ಜೊತೆಗೆ ಮಾತೇ ಹೊರಡದಷ್ಟು ಆಶ್ಚರ್ಯ.
ಮತ್ತೊಬ್ಬ ಕಲಾವಿದೆ ಕು. ನಮ್ರತ ಅವರ ‘ಶಿವ ತಾಂಡವ’ ನೃತ್ಯ ಕಣ್ಮನ ಸೆಳೆಯಿತು. ಸಾಕ್ಷಾತ್ ಶಿವನೇ ನಿಮ್ಮ ಮುಂದೆ ತಾಂಡವವಾಡುತ್ತಿದ್ದಾನೋ ಎನ್ನುವಷ್ಟು ರಮಣೀಯವಾಗಿತ್ತು. ಅವರ ಅಸಾಧಾರಣ ಪ್ರತಿಭೆಗೆ ಅಭಿನಂದನೆ ತಿಳಿಸಲು ಹೋದಾಗ ಅವರ ತಾಯಿಯಿಂದ ತಿಳಿದ ವಿಷಯ- ನಮ್ರತ ಅವರಿಗೆ ಮಾತನಾಡಲು ಬರುವುದಿಲ್ಲ. ಅವರ ಮುಗ್ದ ನಗು ಧನ್ಯವಾದ ಹೇಳಿತು. ಆ ಸೃಷ್ಟಿಕರ್ತನ ಮೇಲೆ ಕೋಪ ಬಂತು. ಮರುಕ್ಷಣವೇ ಈ ಕಲಾವಿದೆಗೆ ಯಶಸ್ಸು ಕೊಡು ಎಂದು ಬೇಡಿಕೊಂಡೆ.
ಸಮರ್ಥನ ಕಲಾವಿದರ ತಂಡದ ಮುಖ್ಯಸ್ಥರಾದ ೕ ಮಹಾಂತೇಶ (ಇವರು ಕೂಡ ಅಂಧರು) ಅವರನ್ನು ಭೇಟಿ ಮಾಡಿದೆ. ಆಗ ನನಗನ್ನಿಸಿದ್ದು - ‘ನಾವು ಯಾರಿಗೇನು ಕಮ್ಮಿ ಇಲ್ಲ, ಅವಕಾಶ ಕೊಡಿ ಅನುಕಂಪ ಬೇಡ’ ಎನ್ನುವ ಕಲಾವಿದರ ಮನದಾಳ. ಮಹಾಂತೇಶ ಅವರೊಂದಿಗಿನ ಸಂಭಾಷಣೆ ಹೊಸದೊಂದು ಸಾಧ್ಯತೆಯ ಲೋಕವನ್ನೇ ತೋರಿತು.
ಈ ತಂಡ ಅಮೇರಿಕದ ವಿವಿಧ ಸ್ಥಳಗಳಲ್ಲಿ ಅಕ್ಟೋಬರ 2004 ರವರೆಗೆ ಕಾರ್ಯಕ್ರಮ ನೀಡಲಿದೆ. ನಿಮ್ಮೂರಿಗೂ ಕರೆಸಿ, ಹರಸಿ, ಆನಂದಿಸಿ. ನಿಮ್ಮ ಕೈಲಾದ ಸಹಾಯಮಾಡಿ. ಸಂಪರ್ಕಿಸಿ : www.samarthanam.org , Email : [email protected] or [email protected]
ಸಮಾಜಸೇವೆ ಮಾಡುವುದು ಹೇಗೆ ?
ವಾಣಿಜ್ಯ ಅಭಿವೃದ್ದಿ ಸಂವಾದದಲ್ಲಿ (Business Forum) ವಿವೇಕಾನಂದ ಯುವ ಕೇಂದ್ರದ ಡಾ.ಬಾಲಸುಬ್ರಮಣ್ಯ ವ್ಯವಹಾರದೊಂದಿಗೆ ಸಮಾಜಸೇವೆಯನ್ನು ಹೇಗೆ ಮಾಡಬಹುದು ಎಂಬುದನ್ನು ಅಂಕಿ-ಅಂಶಗಳಿಂದ ವಿವರಿಸಿದರು. ಅಮೇರಿಕನ್ನಡಿಗರು ಹೇಗೆ ಲಂಚವನ್ನು ನಿರ್ಮೂಲನೆ ಮಾಡುವಲ್ಲಿ ಸಹಕರಿಸಬಹುದು ಎಂಬುದನ್ನು ಮನವರಿಕೆ ಮಾಡಿದರು. ಕಂಪನಿಗಳ ಕಾರ್ಯನಿರ್ವಹಣಾ ವಿಧಾನವನ್ನು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯನ್ನು ಒತ್ತಿಹೇಳಿದರು.
ಅಕ್ಕನ ಸಾಮಾಜಿಕ ಕಳಕಳಿ (AKKA Charitable Foundation) ಒಂದು ಮಹತ್ತರ ಹೆಜ್ಜೆಯೆಂದು ಭಾವಿಸುತ್ತೇನೆ. ಅಕ್ಕಳ ಮೂಲಕ ಕರ್ನಾಟಕದಲ್ಲಿರುವ ಅವಕಾಶ ವಂಚಿತರ ವಿಧ್ಯಾಬ್ಯಾಸ, ಆರೋಗ್ಯ ಇನ್ನಿತರ ಸಾಮಾಜಿಕ ಕಾರ್ಯಕ್ರಮಗಳು ಸಾಧ್ಯವಾಗಬೇಕು. ಪ್ರಾಥಮಿಕ ಶಿಕ್ಷಣದ ಅಭಿವೃದ್ದಿಗಾಗಿ ಸಮರೋಪಾದಿಯ ಕಾರ್ಯಕ್ರಮಗಳನ್ನು ಹಾಕಿಕೊಂಡು ಅಮೇರಿಕನ್ನಡಿಗರು ಕರ್ನಾಟಕದ ಬೆಳವಣಿಗೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕೆಂಬುದು ನನ್ನ ಬಯಕೆ.
ಕನ್ನಡದ ತೇರಿನ ಪಯಣ ನಿರಾತಂಕವಾಗಿರಲಿ.











Click it and Unblock the Notifications