ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಹೂರ್ತದ ಮುನ್ನ : ಪಕಳೆ ಪಕಳೆಯಾಗಿ ಬಿಚ್ಚಿಕೊಳ್ಳುತ್ತಿವೆ ಕನ್ನಡ ದಳಗಳು

By Staff
|
Google Oneindia Kannada News

ಸಿ.ಆರ್‌.ಸಿಂಹ ಈಗಾಗಲೇ ಬಂದಿದ್ದಾರೆ. ಕಸ್ತೂರಿ ಶಂಕರ್‌, ಸಂಗೀತಾ ಕಟ್ಟಿ , ವೆಂಕಟೇಶ ಕುಮಾರ್‌, ಸಮರ್ಥನಂ ಅಂಧರಶಾಲೆಯ ಕಲಾವಿದರ ತಂಡ, ಮುದ್ದು ಮೋಹನ್‌ ಹಾಗೂ ಅವರ ಶ್ರೀಮತಿ, ಉಷಾ ಗಣೇಶ್‌, ಬರಗೂರು ರಾಮಚಂದ್ರಪ್ಪ , ದೊಡ್ಡರಂಗೇಗೌಡ, ಪ್ರೊ.ಅ.ರಾ.ಮಿತ್ರ, ಎಂ.ಎಸ್‌.ಶೀಲಾ, ಆನೂರು ಕೃಷ್ಣ ಶರ್ಮ, ಎಚ್‌.ಎಸ್‌.ಪಾರ್ವತಿ ಗೇಲಾರ್ಡ್‌ ಹೊಟೇಲ್‌ನಲ್ಲಿ ಉಳಕೊಂಡಿರುವ ಪ್ರಮುಖ ಅತಿಥಿಗಳು.

ಕಳೆದ ಎರಡು ಸಮ್ಮೇಳನಗಳಿಗೆ ವಿಮಾನ ತಪ್ಪಿಸಿಕೊಂಡ ಎಸ್ಸೆಂ.ಕೃಷ್ಣ ಗುರುವಾರ ಬೆಳಗ್ಗೆಯಷ್ಟೇ ಹೊಟೇಲ್‌ ತಲುಪಿಕೊಂಡಿದ್ದು ವಿಶ್ರಾಂತಿಯೋಗದಲ್ಲಿದ್ದಾರೆ. ಸಮ್ಮೇಳನ ಸಮಿತಿಯ ಪದಾಧಿಕಾರಿಗಳೊಂದಿಗ ಕೃಷ್ಣ ಅವರು ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ. ಕರ್ನಾಟಕದಲ್ಲಿನ ವಿದ್ಯಮಾನಗಳು ಹಾಗೂ ತಮ್ಮ ಪೂರ್ಣ/ಅಪೂರ್ಣ ಕನಸುಗಳನ್ನು ಕೃಷ್ಣ ಆತ್ಮೀಯವಾಗಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ವಿಂಬಲ್ಡ್‌ನ್‌ ಯಾತ್ರೆ ಮುಗಿಸಿಬಂದಿರುವ ಮಾಜಿ ಮುಖ್ಯಮಂತ್ರಿಗಳ ಮುಕದಲ್ಲೀಗ ಬಿಡುವಿನ ಉಲ್ಲಾಸ. ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾರತ ಬಿಟ್ಟ ಸುದ್ದಿ ತಲುಪಿದೆ ; ಒರ್ಲಾಂಡೊಗೆ ಬಂದಿಳಿದ ವರ್ತಮಾನ ಖಚಿತವಾಗಿಲ್ಲ . ಸಿದ್ಧರಾಮಯ್ಯ ಸಮ್ಮೇಳನವನ್ನು ಉದ್ಘಾಟಿಸುವ ನಿರೀಕ್ಷೆಯಿದೆ.

ಕರ್ನಾಟಕದಿಂದ ಬಂದ ಅನೇಕ ಪ್ರದರ್ಶಕರು ತಮ್ಮ ಸರಕು-ಉತ್ಪನ್ನಗಳ ಮಳಿಗೆಗಳೊಂದಿಗೆ ಜಾಗತಿಕ ಕನ್ನಡಿಗರ ಗಮನ ಸೆಳೆಯಲು ಸಜ್ಜಾಗಿದ್ದಾರೆ. ನವರತ್ನ ಜ್ಯೂವೆಲರ್ಸ್‌ , ಜ್ಯುವೆಲ್‌ ಡಿ-ಪಾರಾಗಾನ್‌, ಕಾವೇರಿ ಎಂಪೋರಿಯಂ, ಮೈಸೂರಿನ ಕಾವೇರಿ ಹ್ಯಾಂಡಿಕ್ರಾಫ್ಟ್ಸ್‌ , ಮೈಸೂರಿನದೇ ಆದ ಲಕ್ಷ್ಮಿ ಫೈನ್‌ ಆರ್ಟ್ಸ್‌ ಅಂಗಡಿಗಳು ಎದ್ದು ಕಾಣುತ್ತಿವೆ.

‘ಅಕ್ಕ’ ಸಮ್ಮೇಳನ ಸಮಿತಿಯ ಪದಾಧಿಕಾರಿಗಳಿಗಂತೂ ಬಿಡುವೆಂಬುದಿಲ್ಲ . ಅಮರನಾಥ್‌ ಗೌಡ, ಕುದೂರು ಮುರಳಿ, ಹಳೇಕೋಟೆ ವಿಶ್ವಾಮಿತ್ರ, ರೇಣುಕಾ ರಾಮಪ್ಪ , ಇಂದಿರಾಶಾಸ್ತ್ರಿ ಹಾಗೂ ಬಳಗ ಅತಿಥಿಗಳನ್ನು ಎದುರುಗೊಳ್ಳುತ್ತಿದ್ದಾರೆ.

ಅನೇಕರು ಸಂಸಾರ ಸಮೇತ ಸಮ್ಮೇಳನಕ್ಕೆ ಆಗಮಿಸಿದ್ದಾರೆ. ಹೊಟೇಲ್‌ನ ಉದ್ಯಾನದಲ್ಲಿ ಆಡುತ್ತಿರುವ ಮಕ್ಕಳನ್ನು ನೋಡುವುದೇ ಒಂದು ಸೊಬಗು. ಬೆಂಗಳೂರಿನಲ್ಲಿ ಸಮ್ಮೇಳನದ ಸಂಪರ್ಕ ಕೊಂಡಿಗಳಾಗಿ ಕಾರ್ಯ ನಿರ್ವಹಿಸಿದ ವೀರಮಾರೇ ಗೌಡ ಹಾಗೂ ಭಾರತಿ ಕೂಡ ಸಮ್ಮೇಳನ ಸ್ಥಳದಲ್ಲಿದ್ದಾರೆ. ಆದರೆ, ಮತ್ತೊಬ್ಬ ಸಂಪರ್ಕಾಧಿಕಾರಿ ಜಗದೀಶ್‌ಗೆ ವಿಮಾನ ತಪ್ಪಿದೆ ; ವೀಸಾ ಸಿಕ್ಕಿಲ್ಲ .

ಕಾವೇರಿ ಕನ್ನಡ ಸಂಘದ ಅಧ್ಯಕ್ಷ ಹರೀಶ್‌ ಹಿರೇಮಠ್‌, ಮಧ್ಯಪ್ರಾಚ್ಯ ಕನ್ನಡಕೂಟದ ಮನೋಜ್‌ ಕುಮಾರ್‌, ಪೋರ್ಟ್‌ವೇಯ್ನ್‌-ಇಂಡಿಯಾನದ ಡಾ.ರಾಮ್‌ಪ್ರಕಾಶ್‌ ಕೂಡ ಸಮ್ಮೇಳನದ ಆರಂಭದ ಮುನ್ನಾ ಗಳಿಗೆಗಳ ಸಂಭ್ರಮ ಸವಿಯುತ್ತಿದ್ದಾರೆ. ಈ ಪೈಕಿ ಡಾ.ರಾಮ್‌ಪ್ರಕಾಶ್‌ ಮೈಸೂರು ಮೆಡಿಕಲ್‌ ಕತಾಲೇಜು ಅಲ್ಯುಮಿನಿಯ ನಿಧಿ ಸಂಗ್ರಾಹಕರು.

ಶುಕ್ರವಾರ ಸಂಜೆಗೆ ಮುನ್ನಾ ಒರ್ಲಾಂಡೊಗೆ ಬಂದು ಹೋಟೇಲ್‌ ತಲುಪಿದವರು ಆರಾಮ. ಆನಂತರ ಒರ್ಲಾಂಡೊ ಹಾಗೂ ವಿಮಾನ ನಿಲ್ದಾಣದ ಚಿತ್ರಗಳೇ ಬದಲಾಗುವ ಸಾಧ್ಯತೆಗಳಿವೆ. ಅನಿಯಂತ್ರಿತ ಚಂಡಮಾರುತ ‘ಫ್ರಾನ್ಸಸ್‌’ ಸಮ್ಮೇಳನದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿರುವುದು ಸಹಜವೇ ಆಗಿದೆ. ಸಮ್ಮೇಳನಕ್ಕೆ ಆಗಮಿಸಿರುವವರು ಪರಸ್ಪರ ಭೇಟಿಯ ಸಂದರ್ಭದಲ್ಲಿ ‘ಫ್ರಾನ್ಸಸ್‌’ ಬಗ್ಗೆಯೇ ಚರ್ಚಿಸುತ್ತಿದ್ದಾರೆ. ಕೋಣೆಗೆ ತೆರಳಿದವರು ಟೀವಿ ಚಾನಲ್ಲುಗಳ ಬದಲಿಸುತ್ತ ಮುಂದಿನ ಎರಡು ಮೂರು ದಿನಗಳ ಹವಾಮಾನದ ಲೆಕ್ಕಾಚಾರದಲ್ಲಿದ್ದಾರೆ. ಹವಾಮಾನ ಇಲಾಖೆ ವರದಿಗಳ ಪ್ರಕಾರ- ಮುಂದಿನ ಕೆಲದಿನಗಳಲ್ಲಿ 10 ಇಂಚುಗಳಷ್ಟು ಮಳೆ ಸುರಿಯಲಿದೆ. ಗಾಳಿಯ ವೇಗ ಪ್ರತಿ ತಾಸಿಗೆ 80 ರಿಂದ 90 ಮೈಲು. ಅತಿವೃಷ್ಟಿಯ ಚಿತ್ರಗಳು ಕಣ್ಣಮುಂದೆ ಹಾದುಹೋಗುತ್ತಿವೆ.

ಫ್ಲಾರಿಡಾದ ಕೇಂದ್ರಭಾಗದಲ್ಲಿ ಚಂಡಮಾರುತ ಹಾದುಹೋಗುವುದು ಖಚಿತ. ಪರಿಣಾಮ ಆನಂತರವಷ್ಟೇ ಹೇಳಲು ಸಾಧ್ಯ. ಈ ನಡುವೆ ತಗ್ಗುಪ್ರದೇಶದ ಮಂದಿ ಸುರಕ್ಷಿತ ಸ್ಥಳಗಳಿಗೆ ತೆರಳುವ, ಬ್ಯಾಟರಿ-ಗ್ಯಾಸ್‌ ಹಾಗೂ ಅಗತ್ಯ ವಸ್ತುಗಳ ಖರೀದಿಗಾಗಿ ಉದ್ದನೆ ಸಾಲಿನಲ್ಲಿ ನಿಂತಿರುವ ಚಿತ್ರಗಳು ಎಲ್ಲೆಡೆ ಸಾಮಾನ್ಯವಾಗಿ. ಟೀವಿ ಹಾಗೂ ಪತ್ರಿಕೆಗಳಿಗಂತೂ ಕೈತುಂಬಾ ಕೆಲಸ. ಸಂತ್ರಸ್ತ ನಿರ್ವಹಣಾ ತಂಡದ ಮಂದಿಗಂತೂ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ . ಪರಿಸ್ಥಿತಿ ಹೀಗಿದ್ದರೂ, ಎತ್ತರದ ಪ್ರದೇಶದಲ್ಲಿರುವ ಗೇಲಾರ್ಡ್‌ ಹೊಟೇಲ್‌ ಸೇರಿಕೊಂಡವರಿಗೆ ನೆಮ್ಮದಿಯ ಭಾವ. ಚಂಡಮಾರುತ ನಿರೋಧಕ ಸೂಚನೆಗಳಿಗೆ ಅನುಗುಣವಾಗಿ ಈ ಹೊಟೇಲ್‌ ನಿರ್ಮಾಣವಾಗಿದೆ. ಇಂಥ ಕಟ್ಟಡಗಳು ಅಲ್ಲೊಂದು ಇಲ್ಲೊಂದು ಮಾತ್ರ.

ಚಂಡಮಾರುತದ ಸುದ್ದಿಗಳಿಗೆ ಬೆನ್ನುಹಾಕುವ ಕೆಲವರೂ ಇಲ್ಲಿದ್ದಾರೆ. ಇಂಥ ಕೆಲವರು, ಹೊಸಗಾಳಿಗಾಗಿ ಹೊಟೇಲ್‌ನಿಂದ ಹೊರನಿಂತವರು ಎದೆಗೂಡುಗಳ ಬಿಸಿಯಾಗಿಸಿಕೊಳ್ಳುತ್ತ ಕತ್ತು ಎತ್ತಿದರೆ ಮೋಡಗಳಾಟದ ನೀಲಾಕಾಶ... ವಾಹ್‌ ! ಒರ್ಲಾಂಡೊ !

ಅಂದಹಾಗೆ, ಒರ್ಲಾಂಡೊ ಸಮ್ಮೇಳನದ ಮೊದಲ ಕಾರ್ಯಕ್ರಮ ‘ಕವಿ ಸಮರ್ಪಣೆ’ ಸಂಗೀತ ಸಂಜೆ. ಶುಕ್ರವಾರ ಸಂಜೆ ಅಲ್ಲಿ ಹಾಡುಹಬ್ಬ ! ಎದೆತುಂಬಿ ಹಾಡಲು ಕಲಾವಿದರು ಸಜ್ಜಾಗಿದ್ದಾರೆ ; ಕಿವಿಗಳು ಕಾತರಗೊಂಡಿವೆ.

ಸಮ್ಮೇಳನದೊಂದಿಗೆ ಕನ್ನಡದ ಪುಟಗಳಲ್ಲಿ ಅಜರಾಮರವಾಗಲಿರುವ ಓ ‘ಫ್ರಾನ್ಸಸ್‌’ , ನಿನಗೂ ತೆರೆದಿದೆ ಸಮ್ಮೇಳನದ ಬಾಗಿಲು ; ತಂಗಾಳಿಯಾಗಿ ಬಾ, ಸಮ್ಮೇಳನಕೆ ಶುಭಕೋರಲು ಬಾ ಬಾ...

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X