ದುಬೈನಲ್ಲಿ ವಿಶ್ವ ತುಳು ಸಮ್ಮೇಳನ ಲಾಂಛನ ಲೋಕಾರ್ಪಣೆ
ದುಬೈ, ಜುಲೈ 30 : ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ವಿಶ್ವ ತುಳು ಸಮ್ಮೇಳನ ದುಬೈ 2018 ನವೆಂಬರ್ 23 ಮತ್ತು 24ರಂದು ದುಬೈನ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಆ ನಿಮಿತ್ತ ವಿಶ್ವ ತುಳು ಸಮ್ಮೇಳನದ ಸಲಹಾ ಸಮಿತಿಯ ಸರ್ವ ಸದಸ್ಯರ ಸಭೆ ಕಳೆದ ಶುಕ್ರವಾರ ದುಬೈ ಮಾರ್ಕೊಪೋಲ್ ಹೋಟೆಲ್ ಸಭಾಂಗಣದಲ್ಲಿ ಸಾಗರೋತ್ತರ ತುಳುವರ ಮುಖ್ಯ ಸಂಘಟಕ ಸರ್ವೋತ್ತಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಸರ್ವೋತ್ತಮ ಶೆಟ್ಟಿ ಮಾತನಾಡಿ ವಿಶ್ವ ತುಳು ಸಮ್ಮೇಳನ ದುಬೈ-2018ರ ವಿವರಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಅಖಿಲ ಭಾರತ ತುಳು ಒಕ್ಕೂಟ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಭಾಗಿತ್ವದಲ್ಲಿ ದುಬೈನಲ್ಲಿ ವಿಶ್ವ ತುಳು ಸಮ್ಮೇಳನ ಜರುಗಲಿದೆ.

ಸಭೆಯಲ್ಲಿ ಸಲಹಾ ಸಮಿತಿ ಸದ್ಯರುಗಳಾದ ಬಿ.ಕೆ ಗಣೇಶ್ ರೈ, ಶೋಧನ್ ಪ್ರಸಾದ್, ದೇವ್ಕುಮಾರ್ ಕಾಂಬ್ಲಿ, ಅಜ್ಮಲ್, ಸತೀಶ್ ಪೂಜಾರಿ, ಯೋಗೇಶ್ ಪ್ರಭು, ನೋವೆಲ್ ಡಿಅಲ್ಮೇಡಾ, ಜ್ಯೋತಿಕಾ ಹರ್ಷ ಶೆಟ್ಟಿ, ಸ್ಮಿತಾ ಪ್ರಸನ್ನ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಲಹಾ ಸಮಿತಿಯ ಸದಸ್ಯ ಶೋಧನ್ ಪ್ರಸಾದ್ ಸ್ವಾಗತಿಸಿದರು.
ಯು.ಎ.ಇ ಎಕ್ಸೇಂಜ್ ಗ್ಲೋಬಲ್ ಆಪರೇಷನ್ಸ್ ಅಧ್ಯಕ್ಷ ಸುಧೀರ್ ಕುಮಾರ ಶೆಟ್ಟಿ, ವಿಶ್ವ ತುಳು ಸಮ್ಮೇಳನ ದುಬೈ 2018 ಅಧಿಕೃತ ಲಾಂಛನ ಲೋಕಾರ್ಪಣೆ ಮಾಡಿ ಸಮ್ಮೇಳನದ ಪೂರ್ವತಯಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಯಶಸ್ಸಿಗೆ ಶುಭವನ್ನು ಹಾರೈಸಿದರು.
ಸ್ಮರಣ ಸಂಚಿಕೆಗೆ 'ವಿಶ್ವ ತುಳು ಐಸಿರಿ' ಆಯ್ಕೆ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ ವಿಶ್ವ ತುಳು ಸಮ್ಮೇಳನ ದುಬೈ - 2018 ಸಮ್ಮೇಳನದ ಸವಿ ನೆನಪಿಗಾಗಿ ಲೋಕಾರ್ಪಣೆಗೊಳ್ಳಲಿರುವ ಸ್ಮರಣ ಸಂಚಿಕೆಗೆ ಹೆಸರು ಸೂಚಿಸಲು ಆಹ್ವಾನಿಸಲಾಗಿದ್ದು ಈ ವರೆಗೆ 166 ಹೆಸರುಗಳನ್ನು 22 ಮಂದಿ ತುಳು ಅಭಿಮಾನಿಗಳಿಂದ ಸ್ವೀಕರಿಸಲಾಗಿತ್ತು.
ಹಿರಿಯ ಸಾಹಿತಿಗಳು ತುಳು ಜ್ಞಾನ ಭಂಡಾರ ಡಾ|ಬಿ.ಎ ವಿವೇಕ್ ರೈ ಮತ್ತು ಮುಂಬಯಿಯಲ್ಲಿ ನೆಲೆಸಿರುವ ಡಾ| ಸುನಿತಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಬಿ. ಕೆ ಗಣೇಶ್ ರೈ ಸೂಚಿಸಿದ್ದ 'ವಿಶ್ವ ತುಳು ಐಸಿರಿ' ಹೆಸರನ್ನು ಆಯ್ಕೆ ಮಾಡಲಾಯಿತು.












Click it and Unblock the Notifications