ಸಡಗರದಿಂದ ಸಿಂಗರಿಸಿ ಸಜ್ಜಾಗುತ್ತಿದೆ ಸಿಂಗಪುರದ 'ಸಿಂಗಾರ'
ಕನ್ನಡ ಸಂಘ(ಸಿಂಗಪುರ)ವು ಈ ವರ್ಷ ತನ್ನ ಇಪ್ಪತ್ತನೆಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ , ಇದೇ 2016ರ ಅಕ್ಟೋಬರ್ 29-30ರಂದು ಸಿಂಗಪುರ ಪಾಲಿಟೆಕ್ನಿಕ್ ಕನ್ವೆನ್ಷನ್ ಸೆಂಟರ್ನ ಸಭಾಂಗಣದಲ್ಲಿ ನಡೆಯಲಿರುವ "ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ"ವನ್ನು ವೈಭವದಿಂದ ಆಚರಿಸಲು ಎಲ್ಲಾ ಸಿದ್ದತೆಗಳನ್ನು ನಡೆಸುತ್ತಿದೆ.
ಇಂತಹ ಅಮೋಘ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಬೇಕೆಂದರೆ ಅದಕ್ಕೆ ಬೇಕಾಗುವ ಯೋಜನೆ, ವಿನ್ಯಾಸ ಹಾಗು ಸಿದ್ದತೆಗಳು ಅನೇಕ. ಯಾವುದೇ ಕಾರ್ಯಕ್ರಮದ ಯಶಸ್ಸಿಗೆ ಅದರ ಪೂರ್ವ ಸಿದ್ಧತೆಗಳು ಮತ್ತು ವಿವರವಾದ ಯೋಜನೆಗಳು ಅತ್ಯವಶ್ಯ. ಬೃಹತ್ ಕಾರ್ಯಕ್ರಮದ ಈ ಕಾರ್ಯವನ್ನು ಸಾಕಾರ ಗೊಳಿಸಲು ಸಿಂಗನ್ನಡಿಗರ ವಿವಿಧ ತಂಡಗಳು ಸಜ್ಜಾಗಿ ನಿಂತಿವೆ.
ತಮಗೆ ನಿರ್ವಹಿಸಿದ ಕಾರ್ಯವನ್ನು ಯಶಸ್ವಿಯಾಗಿಸಲು ಪ್ರತೀ ತಂಡದ ಸದಸ್ಯರು ತಮ್ಮ ತಂಡದೊಂದಿಗೆ ವಿವರವಾದ, ವಿವಿಧ ಯೋಜನೆಗಳನ್ನು ಮುಂದಿಟ್ಟು, ವಿಮರ್ಶಿಸಿ ಅದರ ಸಕಲ ಸಿದ್ಧತೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ವಾರಕ್ಕೊಮ್ಮೆ ಎಲ್ಲಾ ತಂಡಗಳು ಒಟ್ಟುಗೂಡಿ ತಮ್ಮ-ತಮ್ಮ ಕಾರ್ಯ ಯೋಜನೆಯನ್ನು ಎಲ್ಲರೊಂದಿಗೆ ಹಂಚಿಕೊಂಡು, ಬೇರೊಂದು ತಂಡದ ಸಲಹೆ-ಸಹಕಾರಗಳನ್ನು ಪಡೆದು ನಿರ್ವಹಿಸುತ್ತಿರುವ ರೀತಿಯನ್ನು ನೋಡಿದರೆ, ಮುಂಬರುವ ದಿನಗಳ ಹಬ್ಬದ ವಾತಾವರಣದ ಕಂಪು ಈಗಾಗಲೇ ಸಿಂಗಪುರದ ಕನ್ನಡಿಗರನ್ನು ಪಸರಿಸುತ್ತಿದೆಂದರೆ ಅತಿಶಯೋಕ್ತಿಯಲ್ಲ.[ಇಪ್ಪತ್ತರ ಹರೆಯದ ಹೊಸ್ತಿಲಲ್ಲಿ ಸಿಂಗಪುರ ಕನ್ನಡ ಸಂಘ]
ಈ ಪರಿಮಳವು ಕಡಲಾಚೆಯ ತಾಯಿನಾಡಿಗೂ ಹರಿದು, ಅನೇಕ ಉದ್ಯಮಿಗಳು, ಪ್ರಾಯೋಜಕರು ತಮ್ಮ ಸಹಕಾರ ಮತ್ತು ಉಪಸ್ಥಿತಿಯ ಅನುಮತಿಯನ್ನು ಬಯಸಿ, ನಮ್ಮ ಪ್ರಾಯೋಜಕ ತಂಡವನ್ನು ಸಂಪರ್ಕಿಸಿತ್ತಿರುವುದು ನಿಜಕ್ಕೂ ಸ್ವಾಗತಾರ್ಹ. ಇದೇ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಬೆಂಬಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರೋತ್ಸಾಹ, ಅನೇಕ ಹಿರಿಯ ನಾಯಕರ ಸಹಕಾರ ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದೆ.
ನಮ್ಮ ಪ್ರಚಾರ ಮಾಧ್ಯಮ ತಂಡವು ಈಗಾಗಲೆ ಅನೇಕ ಸುರುಳಿ ಚಿತ್ರಗಳು, ವಿಜ್ಞಾಪನೆ, ಬಿತ್ತಿಪತ್ರ, ಚಿತ್ರಣಗಳನ್ನು ಸುದ್ದಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಅದರಿಂದ ಬರುತ್ತಿರುವ ಅಭಿಪ್ರಾಯ-ಅನಿಸಿಕೆಗಳು ಹಾಗೂ ಅಪೂರ್ವವಾದ ಬೆಂಬಲ ಅವರ ದಿನನಿತ್ಯದ ಈ ಸೇವಾಕಾರ್ಯಕ್ಕೆ ಹೊಸ ಹುರುಪನ್ನು ನೀಡುತ್ತಿದೆ.
ವಿಶೇಷವಾಗಿ ಅಂತರ್ಜಾಲದ ಹಾಗೂ ಸಾಮಾಜಿಕ ತಾಣಗಳಲ್ಲಿನ ಪ್ರಚಾರದಿಂದ ಸಾಂಸ್ಕೃತಿಕ ವಿಭಾಗಕ್ಕೆ ಬರುತ್ತಿರುವ ಕಲಾವಿದರು ಸಮ್ಮೇಳನದಲ್ಲಿ ಪಾಲ್ಗೊಳ್ಳುವರ ಆಸಕ್ತಿ, ಆಹ್ವಾನಗಳನ್ನು ನಿಭಾಯಿಸಿ ಅದರ ಕಾರ್ಯ ಯೋಜನೆಯನ್ನು ಸಿದ್ದಪಡಿಸಿ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ದಪಡಿಸುವುದು ಸವಾಲಾಗಿದೆಂಬುದು ಹೆಮ್ಮೆಯ ವಿಷಯ.
ಕನ್ನಡ ಸಂಘ(ಸಿಂಗಪುರ)ದ ಸಿಂಚನ ಮಾಸಪತ್ರಿಕೆಯ ಸಂಪಾದಕ ಮಂಡಳಿ ಈ ಒಂದು ಕಾರ್ಯಕ್ರಮದ ಸಲುವಾಗಿ, ಕನ್ನಡ ಸಾಹಿತ್ಯ ಬಾಂಧವರಿಗೆಂದೇ ಮೀಸಲಾಗಿಟ್ಟ ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನದ "ಸಾಹಿತ್ಯ ಸ್ಪರ್ಧೆ"ಯನ್ನು ವಿಶೇಷವಾಗಿ ಹಮ್ಮಿ ಕೊಂಡಿದೆ. ಈ ಸಾಹಿತ್ಯ ಸ್ಪರ್ಧೆಗೆ ವಿಶ್ವ ಕನ್ನಡಿಗರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಸಾಹಿತ್ಯ ತಂಡವನ್ನು ಹುರಿದುಂಬಿಸಿದೆ. ಆಸಕ್ತರು ತಮ್ಮ ಬರಹಗಳನ್ನು ಅಕ್ಟೋಬರ್ 5ರ ವರೆಗೂ ಕಳಿಸಲು ಅವಕಾಶವಿದೆ. ಇದೇ ಸಂದರ್ಭದಲ್ಲಿ "ಸಿಂಚನ ವಿಶೇಷ ಪತ್ರಿಕೆ"ಯನ್ನು ಹೊರತರಲು ಎಲ್ಲಾ ಸಿದ್ದತೆಗಳನ್ನು ನಡೆಯುತ್ತಿವೆ. [ಸಿಂಗಪುರದ 'ಸಿಂಚನ'ದಿಂದ ಕಥೆ ಮತ್ತು ಕವನ ಸ್ಪರ್ಧೆ]
ಹೀಗೆ, ಕನ್ನಡ ಸಂಘ (ಸಿಂಗಪುರ) "ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ"ವು ತನ್ನೆಲ್ಲ ಸದಸ್ಯರನ್ನು ಒಗ್ಗೂಡಿಸಿ, ಒಂದು ಹಬ್ಬದ ವಾತಾವರಣ ಸೃಷ್ಟಿಸಿದೆ. ಪ್ರತಿಯೊಂದು ತಂಡಗಳು ಅವರ ಕಾರ್ಯ ಯೋಜನೆಯ ಭರದಲ್ಲಿ ತಮ್ಮ ತನು-ಮನಗಳನ್ನು ಸಮರ್ಪಿಸಿ ಮುಂಬರುವ ಈ ಕಾರ್ಯಕ್ರಮಕ್ಕೆ ಸತತ ಶ್ರಮಿಸುತ್ತಿದ್ದಾರೆ. ಅವರೆಲ್ಲರ ಈ ಪರಿಶ್ರಮ ಒಂದು ಅದ್ಭುತ ಕಾರ್ಯಕ್ರಮವಾಗಿ ಯಶಸ್ವಿಯಾಗುವಲ್ಲಿ ಯಾವುದೇ ಸಂದೇಹ ಇಲ್ಲ.
ಬನ್ನಿ, ನೀವುಗಳೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕನ್ನಡ ಹಬ್ಬದ ವಾತಾವರಣದಲ್ಲಿ ಪಾಲ್ಗೊಂಡು ಆನಂದ ಪಡೆಯಿರಿ.
ವರದಿ
:
ಜಯ
ಪ್ರಕಾಶ್,
ಸಿಂಗಪುರ
ಕನ್ನಡ
ಸಂಘ
(ಸಿಂಗಪುರ)