ಮನ್ಮಥನ ಸ್ವಾಗತಿಸಲು ಕೆಕೆಎನ್ಸಿಯಲ್ಲಿ ಭರದ ಸಿದ್ಧತೆ
ಜಯನಾಮ ಸಂವತ್ಸರ ಮುಗಿದು ಮನ್ಮಥನ ಲೀಲೆ ಆರಂಭವಾಗಲು, ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಳಿಬರಲು ಇನ್ನು ಕೆಲವೇ ದಿನಗಳು ಬಾಕಿಯಿವೆ. ಚೈತ್ರ ಮಾಸವನ್ನು ಭರ್ಜರಿಯಾಗಿ ಸ್ವಾಗತಿಸಲು ಅಮೆರಿಕದ ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾ (ಕೆಕೆಎನ್ಸಿ) ಸಿದ್ಧತೆ ನಡೆಸಿದೆ. ಹಾಗೆಯೆ ಚೈತ್ರದ ಚಿಗುರಿನಂಥ ಪ್ರತಿಭೆಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕೂಡ ತಯಾರಾಗುತ್ತಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೆಕೆಎನ್ಸಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರ ಕೆಳಗಿನಂತಿವೆ.

ಸಂಗೀತ ನಾಟಕ ನಿರ್ದೇಶಕರಿಗೆ ಅವಕಾಶ:
ನಿಮಗೆ ಯುಗಾದಿ ಕಾರ್ಯಕರ್ಮದಲ್ಲಿ ಒಂದು ಸಂಗೀತ ನಾಟಕ ನಿರ್ದೇಶನ ಮಾಡಲು ಆಸಕ್ತಿ ಇದೆಯಾ? ಹಾಗಿದ್ದಲ್ಲಿ, ನಿಮ್ಮ ವಿವರಗಳನ್ನು ಇಲ್ಲಿ ತಿಳಿಸಿರಿ. ಯುಗಾದಿ ಕಾರ್ಯಕ್ರಮದಲ್ಲಿ ವರ್ಣಮಯ "ಸಂಗೀತ ನಾಟಕ"ವನ್ನು ಮಾಡಿಸಲು ನಮ್ಮ ಕಮಿಟಿಗೆ ಆಸೆಯಿದೆ. ಇದನ್ನು ಕಾರ್ಯರೂಪಕ್ಕೆ ತರಲು ನಿರ್ದೇಶಕರೊಬ್ಬರು ಬೇಕು. ನಿಮಗೆ ಇಷ್ಟವಿದೆಯೇ? ನಿಮಗೆ ಇದನ್ನು ಮಾಡಿಸಲು ಅನೇಕ ರೀತಿಯಲ್ಲಿ ನಮ್ಮ ಕಮಿಟಿ ಸಹಾಯ ಮಾಡಲಿದೆ. ನಿಮ್ಮ ಬಗ್ಗೆ ನಾವು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.
ಪ್ರಕಾರ : ಸಂಗೀತ ನಾಟಕ
ಕಾಲಾವಕಾಶ : 15 ನಿಮಿಷ
ಕಲಾವಿದರ ಮಿತಿ : 15ರಿಂದ 20
ಪ್ರವೇಶಕ್ಕೆ ಕಡೆಯ ದಿನಾಂಕ : 13ನೇ ಮಾರ್ಚ್, ಶುಕ್ರವಾರ
ಆದರ್ಶ ದಂಪತಿಗಳಿಗೆ ವಿಶೇಷ ಆಹ್ವಾನ:
ಬ್ರಹ್ಮಚಾರಿಗಳ ಜೀವನ ಸಾಕು ಎಂದು ಅದನ್ನು ದೂರಕ್ಕೆ ತಳ್ಳಿ ದಾಂಪತ್ಯ ಜೀವನವನ್ನು ಸ್ವೀಕರಿಸಿರುವ ಎಲ್ಲಾ ದಂಪತಿಗಳಿಗೂ ಇದೊಂದು ವಿಶೇಷ ಆಹ್ವಾನ. ನಿಮಗೆ ಬಹಳ ಆತ್ಮವಿಶ್ವಾಸ, ನಿಮ್ಮ ಜೀವನ ಸಂಗಾತಿಯನ್ನು ಚೆನ್ನಾಗಿ ಅರಿತಿದ್ದೇನೆ ಎಂದು. ನಿಜವೇ? ಇಷ್ಟು ಕಡಿಮೆ ಸಮಯದಲ್ಲಿ ಸಂಗಾತಿಯ ಬಗ್ಗೆ ಎಲ್ಲಾ ತಿಳಿದುಕೊಂಡಿರಾ? ಇನ್ನೇನು ಮತ್ತೆ, ಬನ್ನಿ ಇಬ್ಬರು. ನಾವು ಕೇಳುವ ಸರಳ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಮೊದಲ ಬಹುಮಾನ ದೋಚಿಕೊಂಡು ಹೋಗಿ. ನೋಡಿ, ಇಲ್ಲಿದೆ ಅಂತಹ ಅವಕಾಶ. ನೀವು ಈಗ ಮಾಡಬೇಕಿರುವುದು ಇಷ್ಟೇ. ನಿಮ್ಮ ಬಗ್ಗೆ ನಾವು ತಿಳಿಯಲು ಈ ವೆಬ್ ಲಿಂಕ್ ಅನ್ನು ಕ್ಲಿಕ್ ಮಾಡಿ.
ಪ್ರವೇಶ ಕಳಿಸಲು ಕೊನೆಯ ದಿನಾಂಕ 27ನೇ ಮಾರ್ಚ್. ಹೇವರ್ಡ್ ನಲ್ಲಿರುವ ಚಾಬೋಟ್ ಕಾಲೇಜ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ನಲ್ಲಿ ಏಪ್ರಿಲ್ 19ರಂದು, ಭಾನುವಾರ ಆದರ್ಶ ದಂಪತಿ ಕಾರ್ಯಕ್ರಮ ಜರುಗಲಿದೆ.
ಬಹುಭಾಷಾ ನಾಟಕೋತ್ಸವದ ಸಂಭ್ರಮ
ಇವುಗಳೆಲ್ಲದರ ಜೊತೆಗೆ ಮೇ 30 ಮತ್ತು 31ರಂದು ಬಹುಭಾಷಾ ನಾಟಕೋತ್ಸವ ನಡೆಯಲಿದ್ದು, ಕನ್ನಡದ ಖ್ಯಾತ ನಿರ್ದೇಶಕರಾದ ಟಿಎಸ್ ನಾಗಾಭರಣ ಮತ್ತು ರಂಗಕರ್ಮಿ 'ಪದ್ಮಶ್ರೀ' ಬಿ ಜಯಶ್ರೀ ಅವರು ಮುಖ್ಯ ಅತಿಥಿಗಳಾಗಿ ಈ ನಾಟಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬಂಗಾಳಿ ಭಾಷೆಗಳಲ್ಲಿ ಬೀದಿ ನಾಟಕ, ಮಕ್ಕಳ ನಾಟಕ ಮತ್ತು ಏಕಪಾತ್ರಾಭಿನಯಗಳು ರಂಗೋತ್ಸಾಹಿಗಳನ್ನು ರಂಜಿಸಲಿವೆ.












Click it and Unblock the Notifications