ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಮತ್ತು ಕವಿ ನಮನ
ಕನ್ನಡ ಸಾಹಿತ್ಯ ರಂಗದ ಸದಸ್ಯರಾಗಿದ್ದು ನಮ್ಮನ್ನಗಲಿದ ಅಶ್ವತ್ಥನಾರಾಯಣ ರಾವ್, ವೈ. ಆರ್. ಮೋಹನ್, ಎಚ್.ಕೆ. ನಂಜುಂಡ ಸ್ವಾಮಿ ಮತ್ತು ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕಣ್ಮರೆಯಾದ ಕನ್ನಡ ಕವಿ/ಬರಹಗಾರರಾದ ಜಿಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ ಮತ್ತು ಯಶವಂತ ಚಿತ್ತಾಲ ಇವರುಗಳಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ನಳಿನಿ ಕುಕ್ಕೆ, ಮಾನಸಾ, ಸುಮತಿ ಮತ್ತು ಕಾವ್ಯಾ ಅವರ ಸಹಾಯದಿಂದ ಅಚ್ಚುಕಟ್ಟಾಗಿ ನಿರ್ವಹಿಸಿದರು. ಈ ಕಾರ್ಯಕ್ರಮದ ಕಿರೀಟವಾಗಿ ಸಂಗಮದ ಅರ್ಚನ ಮೂಡ್ ಅವರ ನಿರ್ದೇಶನದಲ್ಲಿ ನರ್ತಕಿಯರು ಹಲವು ಪ್ರಸಿದ್ಧ ಕವಿಗಳಿಗೆ ನಮನ ಸಲ್ಲಿಸಿದ್ದು ಮಧ್ಯಾಹ್ನದ ಇತರ ಕಾರ್ಯಕ್ರಮಕ್ಕೆ ಪೂರಕವಾಗಿತ್ತು.
ಮನರಂಜನಾ ಕಾರ್ಯಕ್ರಮ : ಸಂಜೆಯ ಮನರಂಜನೆಯ ಕಾರ್ಯಕ್ರಮದಲ್ಲಿ ಸಂಗಮದ ಪ್ರತಿಭೆಗಳು ತಮ್ಮ ಕೈಚಳಕವನ್ನು ತೋರಿಸಿದರು! ಸುಮಧುರ ಗಾಯನ, ಸುಂದರ ನರ್ತನ ಮತ್ತು ಮನೋಜ್ಞ ನಾಟಕಗಳಿಂದ ಕೂಡಿದ ರಸದೌತಣವನ್ನೇ ನೀಡಿದರು. ಸಾಹಿತ್ಯದ ಕಾರ್ಯಕ್ರಮಕ್ಕೆ ಅನುಗುಣವಾಗಿ ಡಿವಿಜಿ ಅವರ ಅಂತಃಪುರ ಗೀತೆಗಳಿಗೆ ಅಳವಡಿಸಿದ ನಾಟ್ಯ ಮತ್ತು ಮಧ್ಯ-ಪಶ್ಚಿಮ ವಲಯದ ಪ್ರಸಿದ್ಧ ನಾಟ್ಯಾಚಾರ್ಯ ಪ್ರಸನ್ನ ಕಸ್ತೂರಿ ಅವರು ಮಾಸ್ತಿಯವರ ಸಣ್ಣ ಕಥೆಗಳನ್ನಾಧರಿಸಿ ಬರೆದು ನಿರ್ದೇಶಿದ "ಚಿತ್ತಾರ" ಎಲ್ಲರ ಮನಸ್ಸನ್ನೂ ಸೂರೆಗೊಂಡಿತು.
ಸಂಜೆಯ ಕಾರ್ಯಕ್ರಮದಲ್ಲಿ ಪರ ಊರುಗಳಿಂದ ಬಂದವರೂ ಸೇರಿ ಒಟ್ಟು ನಲವತ್ತಕ್ಕೂ ಹೆಚ್ಚು ಕಲಾವಿದರು, ಪುರುಷರು, ಸ್ತ್ರೀಯರು ಮತ್ತು ಮಕ್ಕಳೂ ಸೇರಿದಂತೆ, ಅತ್ಯಂತ ಸ್ಫೂರ್ತಿಯಿಂದ ಭಾಗವಹಿಸಿದರು. ದೀಪ, ಧ್ವನಿ ಮತ್ತು ರಂಗಸಜ್ಜಿಕೆ ಸಹ ಮೆಚ್ಚುವ ಮಟ್ಟದಲ್ಲಿತ್ತು. ಕಣ್ಣು ಕಿವಿಗಳಿಗೆ ಹಬ್ಬವಾದಮೇಲೆ ಹೊಟ್ಟೆಗೂ ಒಳ್ಳೆಯ ಹಬ್ಬ ಕಾದಿತ್ತು, ಉತ್ತಮ ಭೋಜನದೊಂದಿಗೆ ಮೊದಲ ದಿನದ ಕಾರ್ಯಕ್ರಮ ಕೊನೆಗೊಂಡಿತು.
ಸಮ್ಮೇಳನದ ಎರಡನೆಯ ದಿನ
ಅನುವಾದ ಕಮ್ಮಟ : ಈ ಬಾರಿಯ ಸಮ್ಮೇಳನದಲ್ಲಿ ಮೂಡಿಬಂದ ಒಂದು ವಿಶಿಷ್ಟ ಕಾರ್ಯಕ್ರಮ ಅನುವಾದ ಕಮ್ಮಟ. ಈ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಗುರುಪ್ರಸಾದ ಕಾಗಿನೆಲೆ. ಈ ಬಾರಿಯ ಕಾರ್ಯಕ್ರಮದ ಆಶಯವೇ ಅನುವಾದ ಸಾಹಿತ್ಯವಾದ್ದರಿಂದ ಈ ಕಮ್ಮಟ ಸಂದರ್ಭೋಚಿತವಾಗಿತ್ತು. ಮೊದಲಿಗೆ ನನ್ನ ಮೆಚ್ಚಿನ ಅನುವಾದಿತ ಕಥೆ 'ಎಂಬ ವಿಷಯವನ್ನು ಆಯ್ದುಕೊಂಡು ಟಿ. ಎನ್. ಕೃಷ್ಣರಾಜುರವರು ತೇಜಸ್ವಿಯವರ 'ಮಾಯಾಮೃಗ'ದ ಇಂಗ್ಲಿಷ್ ಅವತರಣಿಕೆ (ಅನು: ರಾಘವೇಂದ್ರರಾವ್) ಬಗ್ಗೆ ಮಾತನಾಡಿದರು.
ನಂತರ ನಾಗ ಐತಾಳರು ವರ್ಡ್ಸ್ವರ್ತ್ನ 'ಸಾಲಿಟರಿ ರೀಪರ್'ನ ಕನ್ನಡಾನುವಾದ 'ಹೊಲದ ಹುಡುಗಿ'(ಅನುವಾದ: ಕುವೆಂಪು)ಯ ಬಗ್ಗೆ ಮಾತನಾಡಿದರು. ತ್ರಿವೇಣಿ ಶ್ರೀನಿವಾಸರಾವ್ ಅವರು ಸಿಂಗರನ ಕಥೆ 'ಗಿಂಪೆಲ್ ದ ಫೂಲ್' ಕನ್ನಡದ ಎರಡು ಅನುವಾದಗಳನ್ನು ಉದಾಹರಿಸಿ ಎರಡೂ ಅನುವಾದಗಳ ವಿಶಿಷ್ಟತೆಯನ್ನು ಗುರುತಿಸಿದರು.
ನಂತರ ಮಾತಾಡಿದ ಶ್ರೀವತ್ಸ ಜೋಶಿಯವರ ವಿಷಯ 'ಅನುವಾದದ ಅಧ್ವಾನಗಳು'. ಮೂಲ ಕೃತಿಯ ಅರ್ಥ, ಆಶಯಗಳನ್ನು ಅರಿತುಕೊಳ್ಳದೇ ಇರುವುದು, ಉಚಿತ ಪದಗಳ ಆಯ್ಕೆ ಮಾಡದೇ ಇರುವುದು, ಎರಡೂ ಭಾಷೆಗಳ ವ್ಯಾಕರಣದ ಬಗ್ಗೆ ಮೂಲಭೂತ ಅರಿವಿಲ್ಲದಿರುವುದು ಇನ್ನೂ ಇತರೇ ಕಾರಣಗಳು ಎಂತೆಂತಹ ಅಧ್ವಾನಗಳಿಗೆ ಕಾರಣವಾಗಬಹುದು ಎಂದು ಶ್ರೀವತ್ಸ ಜೋಶಿಯವರು ಸೋದಾಹರಣವಾಗಿ ವಿವರಿಸಿದರು.