ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಯಾಟಲ್ ಕನ್ನಡಿಗರ ಯುಗಾದಿ ಸಂಭ್ರಮ

By * ಕುಂಭಾಸಿ ಶ್ರೀನಿವಾಸ ಭಟ್, ಸಿಯಾಟಲ್
|
Google Oneindia Kannada News

Sunder, TV artist, at Sahyadri Ugadi celebrations
ಸಿಯಾಟಲ್ ನಗರವನ್ನು ಪಚ್ಚೆ (ಎಮರಾಲ್ಡ್ )ನಗರವೆಂತಲೂ ಕರೆಯುತ್ತಾರೆ. ಇದು ವಾಷಿಂಗ್ಟನ್ ಸಂಸ್ಥಾನದ ಅತೀ ದೊಡ್ಡ ನಗರ. ಬೋಯಿಂಗ್, ಮೈಕ್ರೊಸಾಫ್ಟ್, ಸ್ಟಾರ್ ಬಕ್ಸ್ ಗಳಂತಹ ಹಲವಾರು ಕಂಪೆನಿಗಳಲ್ಲಿ ಕೆಲಸ ಮಾಡುವ ಹಲವು ಪ್ರತಿಭಾವಂತ ಕನ್ನಡಿಗರು ಇಲ್ಲಿ ಸಹ್ಯಾದ್ರಿ ಕನ್ನಡ ಸಂಘವನ್ನು ಕಟ್ಟಿ, ಬೆಳೆಸಿದ್ದಾರೆ. ಶಾಮ್ ಪ್ರಸಾದ್ ಬೆಂಗಳೂರು ಅವರು ಒಂದು ಕನ್ನಡ ಶಾಲೆಯನ್ನೂ ನಡೆಸುತ್ತಿದ್ದರು. ಈ ವರ್ಷದಿಂದ ರಮ್ಯ, ಸುಮ, ಮತ್ತು ವಿದ್ಯಾ, ಅವರು ಈ ಶಾಲೆಯನ್ನು ಶಾಮ್ ಅವರ ಮಾರ್ಗದರ್ಶನದಲ್ಲಿ ನಡೆಸುತ್ತಿದ್ದಾರೆ. ವರುಷಕ್ಕೆ ಐದಾರು ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸುವ ನಮ್ಮ ಕನ್ನಡ ಬಂಧುಗಳು, ಯುಗಾದಿ ಮತ್ತು ದೀಪಾವಳಿಗಳನ್ನು ಅತ್ಯಂತ ಉತ್ಸಾಹದಿಂದ, ಉತ್ತಮವಾದ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ನಡೆಸುತ್ತಾರೆ.

ಈ ವರ್ಷದ ಯುಗಾದಿ ಕಾರ್ಯಕ್ರಮವನ್ನು ರೆಡ್ಮಂಡ್ ಪ್ರೌಢಶಾಲೆಯ ರಂಗಮಂದಿರದ ಆವರಣದಲ್ಲಿ ಮಾರ್ಚ್ 27ರ ಸಂಜೆ ಯೋಜಿಸಲಾಗಿತ್ತು. ಇದು 2010 ನೇ ಸಾಲಿನ ಆಡಳಿತ ಸಮಿತಿಯ ಮೊದಲನೇ ಕಾರ್ಯಕ್ರಮವಾದುದರಿಂದ, ಆಹ್ವಾನಪತ್ರಿಕೆ, ಕಾರ್ಯಕ್ರಮದ ರೂಪರೇಷೆಗಳು, ಸ್ವಾಗತ ವಿಧಾನ, ಎಲ್ಲದರಲ್ಲೂ ಸ್ವಲ್ಪ ನವ್ಯತೆ ಎದ್ದು ಕಾಣುತ್ತಿತ್ತು. ಮೊದಲ 100 ಮಂದಿ ಅತಿಥಿಗಳಿಗೆ ಕನ್ನಡದಲ್ಲಿ ಸಂದೇಶವಿರುವ ಟೀ ಶರ್ಟ್ ಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಿದುದು ಸಮಿತಿಯ ಸಮಯ ಪಾಲನೆಗೆ ಸಂದ ಪಾರಿತೋಷಕವೆಂದು ಪರಿಗಣಿಸುತ್ತೇನೆ.

ವಿದ್ಯಾ ಬ್ಯಾಡ್ಗಿ, ವಿಜಯಾ ಬ್ಯಾಡ್ಗಿ, ಪ್ರಿಯಾಂಕ ನಾಗರಹಳ್ಳಿ, ಅಶ್ವಿನ್ ಕರುಹಟ್ಟಿ ಯವರು ಕಾರ್ಯಕ್ರಮದ ನಿರೂಪಕರಾಗಿ ಲವಲವಿಕೆಯಿಂದ ನಡೆಸಿಕೊಟ್ಟರು. ಮಕ್ಕಳಿಂದ ಪುಣ್ಯಕೋಟಿ ಕಥಾರೂಪಕ ಮತ್ತು ಬೆಂಗಳೂರಿನ ಲಕ್ಷ್ಮೀ ಚಂದ್ರಶೇಖರ್ ಮತ್ತು ಸುಂದರ್ ಅವರ, "ಹೀಗಾದರೆ ಹೇಗೆ" ಎಂಬ ನಾಟಕ ಕಾರ್ಯಕ್ರಮಗಳು ಗಮನ ಮನಸೆಳೆದವು. ಭಾಗ್ಯದ ಲಕ್ಶ್ಮಿ ಬಾರಮ್ಮ, ಕಂದನ ಕಾವ್ಯಮಾಲೆ (ರಾಜರತ್ನಮ್ ಅವರಿಗೆ ಶ್ರದ್ಧಾಂಜಲಿ), ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಕೆ.ಎಸ್. ಅಶ್ವಥ್ ಅವರಿಗೆ ಶ್ರದ್ಧಾಂಜಲಿ, ಮತ್ತು ಹಲವಾರು ಮಕ್ಕಳ ಮತ್ತು ವಯಸ್ಕರ ಮನೋರಂಜನೆ ಕಾರ್ಯಕ್ರಮ ಜತೆಗೆ ಯುಗಾದಿಯ ಔತಣ ಕನ್ನಡಿಗರ ಹಬ್ಬದ ಸಂಭ್ರಮಕ್ಕೆ ಹಿಡಿದ ಕನ್ನಡಿಯಾಗಿತ್ತು.

ಕಾರ್ಯಕ್ರಮದ ಕೊನೆಯಲ್ಲಿ ಆಡಿದ "ಹೀಗಾದರೆ ಹೇಗೆ" ನಾಟಕ ಪ್ರೇಕ್ಷಕರನ್ನು ಹೊಸಲೋಕಕ್ಕೆ ಕರೆದೊಯ್ಯಿತೆಂದರೆ ತಪ್ಪಾಗಲಾರದು. ಅನೇಕ ಕಾಲ್ಪನಿಕ ಸನ್ನಿವೇಶಗಳನ್ನು ಸೃಷ್ಟಿಸಿ ಇಬ್ಬರೇ ಕಲಾವಿದರು, ಬಹು ವಿಧವಾದ ಪಾತ್ರಗಳನ್ನು ಮಿಂಚಿನ ವೇಗದಿಂದ ಪ್ರದರ್ಶಿಸಿ, ಪ್ರೇಕ್ಷಕರನ್ನು ಹಾಸ್ಯ ಲೋಕದಲ್ಲಿ ವಿಹರಿಸುವಂತೆ ಮಾಡಿದರು. ಹಿಮ್ಮೇಳದ ಸಂಗೀತ, ಬೆಳಕು, ಧ್ವನಿ, ಸಂಭಾಷಣೆ, ಸಂದರ್ಭಕ್ಕೆ ಒಪ್ಪುವ ವೇಷಭೂಷಣಗಳನ್ನು ಚಾಕಚಕ್ಯತೆಯಿಂದ ಬೆರೆಸಿ, ತಮ್ಮ ಅಪ್ರತಿಮ ಪ್ರತಿಭೆಯಿಂದ ಸಹ್ಯಾದ್ರಿ ಕನ್ನಡಿಗರನ್ನು, ಒಂದುವರೆ ಘಂಟೆಗಳ ಕಾಲ ಸೆರೆಹಿಡಿದು ರಂಜಿಸಿದರು. ನಾಟಕ ಎಲ್ಲರನ್ನೂ ನಕ್ಕು ನಗಿಸಿದರೆ ಮಕ್ಕಳ ಕಾರ್ಯಕ್ರಮಗಳು ಎಲ್ಲರಿಗೂ ನಮ್ಮ ಕರು ನಾಡಿನ ಸಂಗೀತ, ಕಲೆ, ನೃತ್ಯಗಳ ರಸದೌತಣವನ್ನೇ ಒದಗಿಸಿತೆಂದರೆ ಅತಿಶಯೋಕ್ತಿ ಆಗಲಾರದು.

ಸಹ್ಯಾದ್ರಿ ಕನ್ನಡ ಸಂಘದ ಸಮಿತಿ ಸದಸ್ಯರಾದ ನಾಗೇಂದ್ರ ಹೊನ್ನವಳ್ಳಿ, ಚಂದ್ರಶೇಖರ ಕೆ.ಎನ್., ಮಲ್ಲಿಕಾರ್ಜುನ ಗುಮ್ಮ, ಪ್ರತಿಮಾ ಸುನೀಲ್, ರಮ್ಯ ರಾಜಶೇಖರ್, ಶ್ರೀನಿವಾಸ ರಾವ್ ಎಲ್, ವೆಂಕಟೇಶ ಗೌಡ, ವಿದ್ಯಾ ಬ್ಯಾಡ್ಗಿ, ಕುಮಾರ ರಾವ್, ರಾಗಿಣಿ ಶ್ರೀನಿವಾಸ ಮೂರ್ತಿ, ಜಯಂತ್ ಹೊಸಕೇರಿ, ರಮೇಶ್ ಬೆಂಗಳೂರ್, ಇವರೆಲ್ಲರ ಉತ್ಸಾಹ, ಮತ್ತು ಪ್ರಯತ್ನಗಳು ಶ್ಲಾಘನೀಯವಾದದ್ದು.

ಬಿಡುವಿಲ್ಲದ ಕೆಲಸದ ನಡುವೆಯೂ ಇಂತಹ ಉತ್ತಮ ಕಾರ್ಯಕ್ರಮವನ್ನು ಸಂಯೋಜಿಸಿ, ನಡೆಸಿಕೊಡುವುದು ಬಹಳ ಪರಿಶ್ರಮದ ಕೆಲಸ. ಇವರೆಲ್ಲರ ಶ್ರಮ ಮತ್ತು ಕಾರ್ಯಕ್ರಮ ಶ್ರದ್ಧೆ ಅತಿಥಿಗಳನ್ನು ತೃಪ್ತಿ ಪಡಿಸಿತೆನ್ನುವುದರಲ್ಲಿ ಯಾವುದೇ ಸಂಶಯ ಕಾಣಲಿಲ್ಲ. ಸಹ್ಯಾದ್ರಿ ಕನ್ನಡ ಸಂಘ ಇಂತಹ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಮುಂದೆಯೂ ನೀಡುತ್ತಿರಲೆಂದು ಆಶಿಸುತ್ತೇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X