ನ್ಯೂಜಿಲೆಂಡ್ ಪ್ರಧಾನಿಯಿಂದ ಕನ್ನಡ ಪುಸ್ತಕ ಬಿಡುಗಡೆ
ನಾಲ್ಕು ವರ್ಷದ ಹಿಂದೆ ತಮ್ಮ ಮಗಳು ಸ್ಮಿತಾ ಮತ್ತು ಅಳಿಯ ಕುಮಾರ್ ರಾಮಸ್ವಾಮಿ ಅವರ ಆಹ್ವಾನದ ಮೇಲೆ ನ್ಯೂಜಿಲೆಂಡಿಗೆ ಬಂದಿದ್ದ ಗೌರಿ ಸತ್ಯ ಅವರು ಸುಮಾರು ಎಂಟು ತಿಂಗಳ ಕಾಲ ಎಲ್ಲೆಡೆ ಪ್ರವಾಸಿಯಾಗಿ ಸುತ್ತಿ ತಮ್ಮ ಅನುಭವವನ್ನು ಅನನ್ಯ ಶೈಲಿಯಲ್ಲಿ ಈ ಪುಸ್ತಕದಲ್ಲಿ ವ್ಯಕ್ತಪಡಿಸಿದ್ದಾರೆ. ಈ ನಾಡಿನ ಮೂಲ ಜನಾಂಗ ಮಾವೋರಿಗಳ ಬದುಕು, ಕಲೆ, ಸಂಸ್ಕೃತಿಗಳ ಬಗ್ಗೆ ಸೊಗಸಾದ ವ್ಯಾಖ್ಯಾನ ನೀಡಿದ್ದಾರೆ. ಕೇಪ್ ರೀಯಾಂಗ ನ್ಯೂ ಪ್ಲಿಮತ್ ಮೌಂಟ್ ರೂಪೆಹು ರೊಟೊರೊವ ಹ್ಯಾಮಿಲ್ಟನ್ ಮುಂತಾದ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಓದುತ್ತಿದ್ದರೆ ನಾವು ಅಲ್ಲಿಯೇ ಇರುವಂತೆ ಭಾಸವಾಗುತ್ತದೆ. ಆದರೆ ಅವರಲ್ಲಿನ ಪತ್ರಕರ್ತ ಸದಾ ಜಾಗ್ರತನಾಗಿರುವುದಕ್ಕೆ ಅವರು ನಮ್ಮ ಅಕ್ಲೆಂಡಿನ ಕಾಮಾಟಿಪುರ ಎನಿಸಿದ ಕರಂಗಹಪೆ ರಸ್ತೆಯ ಕೊಳಕು ಜೀವನದ ಬಗ್ಗೆ ನಿಷ್ಪಕ್ಷಪಾತದಿಂದ ವರದಿ ಮಾಡಿರುವುದು ಸಾಕ್ಷಿಯಾಗುತ್ತದೆ.
ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ಜಸ್ಟೀಸ್ ಆಫ್ ಪೀಸ್ ಡಾ. ಲಿಂಗಪ್ಪ ಕಲ್ಬುರ್ಗಿ[ಕನ್ನಡ ಕೂಟದ ಮಾಜಿ ಅಧ್ಯಕ್ಷರು], ಪ್ರಸಕ್ತ ಅಧ್ಯಕ್ಷ ರವಿ ಶಂಕರ್ ರಾವ್ ಮತ್ತು ಇತರರು ಲೇಖಕರನ್ನು ಅಭಿನಂದಿಸಿದರು. ಈಗ ಮತ್ತೊಮ್ಮೆ ಇಲ್ಲಿಗೆ ತಮ್ಮ ಪತ್ನಿ ನಿರ್ಮಲಾ ಅವರೊಡನೆ ಗೌರಿ ಸತ್ಯ ಇಲ್ಲಿಗೆ ಬಂದಿದ್ದಾರೆ.