ಬೊಂಬೆಗಳಲ್ಲಿ ರಾಮಾಯಣ ಕೂಡಿಸಿದ ಸವಿತಾ ರವಿಶಂಕರ್
ಹಬ್ಬ ಹುಣ್ಣಿಮೆಗಳು ಒಂದು ಸಮಾಜಕ್ಕೆ ಎಷ್ಟು ಅಗತ್ಯವೆಂದರೆ, ಜಗತ್ತಿನ ಎಲ್ಲೆಡೆಗಳಲ್ಲೂ ಎಲ್ಲ ಜನಾಂಗದವರೂ ಹಲ ಬಗೆಯ ಹಬ್ಬಗಳನ್ನು ಆಚರಿಸುತ್ತಾರೆ. ಉದಾಹರಣೆಗೆ ಕೇವಲ ಕೆಲವು ನೂರು ವರ್ಷಗಳ ಇತಿಹಾಸವಿರುವ ಅಮೇರಿಕದಲ್ಲಿ ಮೂಲ ನಿವಾಸಿಗಳಿಗೆ ಕೃತಜ್ಞತೆ ಅರ್ಪಿಸುವುದಕ್ಕಾಗಿ "Thanks Giving" ಆಚರಿಸಿದರೆ, ಕ್ರೈಸ್ತ ಮತಕ್ಕೆ ಒಗ್ಗದಿದ್ದರೂ ಕೂಡ, "Hallowin" ಹೆಸರಿನಲ್ಲಿ, ಮಂತ್ರ ತಂತ್ರ ಮಾಟಗಳ ಹಬ್ಬವನ್ನಾಚರಿಸುತ್ತಾರೆ. ನಿರಾಕಾರ ಸ್ವರೂಪನಾದ ದೇವರ ಕಲ್ಪನೆ ಕೇಂದ್ರವಾಗಿದ್ದರೂ ಸಹ ಎಲ್ಲೆಡೆ ಕ್ರೈಸ್ತ ಮತೀಯರು ಕೈಗೆ ಸಿಕ್ಕ ಅವಕಾಶಗಳನ್ನೆತ್ತಿಕೊಂಡು "ಈಸ್ಟರ್", "ಕ್ರಿಸ್ಮಸ್" ಅಂತ ಹಬ್ಬಗಳ ಆಚರಣೆಯನ್ನು ಬಿಡುವುದಿಲ್ಲ.
ಇರಲಿ. ಈಗ ನಾನು ಹೇಳ ಹೊರಟಿದ್ದು ನಮ್ಮ ದಸರೆಯ ಸೊಬಗಿನ ಬಗ್ಗೆ. ಭಾರತೀಯ ಸಂಸ್ಕೃತಿಯಲ್ಲಂತೂ 33 ಕೋಟಿ ದೇವರಿರಬೇಕಾದರೆ ಹಬ್ಬ ಹರಿದಿನಗಳಿಗೆ ಕೊರತೆಯೆಲ್ಲಿ ಬರಬೇಕು ಹೇಳಿ! ಹಾಗೆಂದರೂ ಸಹ ಗಣಪನಿಗೆ ಅಗ್ರ ಪೂಜೆ ಸಿಕ್ಕರೆ ಕೃಷ್ಣನಿಗೆ ಸರ್ವಮಾನ್ಯತೆ. ವಿಷ್ಣುವಿನ ಹತ್ತು ಅವತಾರಗಳಲ್ಲಿ ಅವನದ್ದೇ ಸ್ವಲ್ಪ ಜೋರು. ಅಸಲು ಈ ಹಬ್ಬ ಹುಣ್ಣಿಮೆಗಳು ನಡೆಯೋದೆ ನಮ್ಮ ಹೆಣ್ಣು ಮಕ್ಕಳಿಂದ ನೋಡಿ. ನಮ್ಮಲ್ಲಂತೂ ಹಬ್ಬದಡಿಗೆ ಮಾಡುವ ಹೊಣೆ ಅವರದ್ದೇ ಅಲ್ಲವೆ. ಅಲ್ಲೂ ಸಂಭ್ರಮ ಭಕ್ತಿಗಳಿಂದ ಸಂಸಾರದ ಎಲ್ಲ ಬಾಯಿಗಳೂ ಚಪ್ಪರಿಸುವಂತೆ ಅಡಿಗೆ ಮಾಡಿ ಹಾಕಿ ಗಂಟೆಗಟ್ಟಲೆ ದೇವರ ಪೂಜೆ ನಡೆಯುವುದನ್ನು ನೋಡಲು ಪ್ರೇರಣೆ, ಸ್ಪೂರ್ತಿ ಕೊಡುವುದು ನಮ್ಮ ಹೆಂಗಳೆಯರ ಕೈ-ಪಾಕವೇ.
ಅದರಲ್ಲೂ ಒಂದು ಹಬ್ಬದ ತಿಂಡಿಗಳ "ಮೆನ್ಯು" ಇನ್ನೊಂದಕ್ಕಿಂತ ಬೇರೆ ನೋಡಿ. ಗಣಪನಿಗೆ ಕಡುಬು ಮೋದಕಗಳ ರಾಶಿ ಇತ್ತರೆ, ಕಳ್ಳ ಕೃಷ್ಣನಿಗೆ ಉಂಡೆ ಚಕ್ಕುಲಿ ಕೋಡುಬಳೆಗಳ ಸಮಾರಾಧನೆ. ಈಗ ಅದೆಲ್ಲ ಈ ವರ್ಷಕ್ಕೆ ಮುಗಿದು ಹೋಯಿತು ಅನ್ನುವಾಗ ದಸರೆಯ ಆಗಮನ. ವಿಜಯ ದಶಮಿಯಂದು "ಮಹಿಷನನ್ನು" ಸಂಹರಿಸಿದ ಚಾಮುಂಡಿಯನ್ನು ನಾವುಗಳು ಪೂಜಿಸಿದರೆ ಈಶಾನ್ಯದ ಕಲ್ಕತ್ತೆಯಲ್ಲಿ ಕಾಳಿಯ ಪೂಜೆ. ಒಟ್ಟಿನಲ್ಲಿ ಭಾರತದ ಎಲ್ಲೆಡೆ ಒಳಿತು ಕೆಡುಕನ್ನು ಸದೆ ಬಡೆಯುವ ಇನ್ನೊಂದು ಸಂಕೇತದ ಆಚರಣೆ.
ಈ ಸಂದರ್ಭದಲ್ಲಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಎಲ್ಲೆಡೆ ಹೆಂಗಳೆಯರು ಬೊಂಬೆಗಳನ್ನೇರಿಸಿ ಅಂದರೆ ಹಳೆಯ ಪೆಟ್ಟಿಗೆಯಿಂದ ತೆಗೆದಿರಿಸಿ ಅವುಗಳಿಗೆ ಜತನದಿಂದ ಅಲಂಕಾರ ಮಾಡುವಲ್ಲಿ ತಮ್ಮ ಕುಸುರಿ ಕೌಶಲ ತೋರಿಸುತ್ತಾರೆ. ಸಾವಿರಾರು ಮೈಲಿ ದೂರ ನಮ್ಮ ನಾಲಿಗೆಯ ರುಚಿಗಳನ್ನು ಪೋಷಿಸಿದಂತೆಯೇ ತಮ್ಮ ದಸರಾ-ಬೊಂಬೆಗಳ ಅಭಿರುಚಿಯನ್ನೂ ಹೊತ್ತು ತಂದ ಒಂದು ಒಳ್ಳೆಯ ಉದಾಹರಣೆ ನಮ್ಮ ಕೇರಿಯ ಸವಿತಾ ಮತ್ತು ರವಿಶಂಕರ್ ದಂಪತಿಗಳದ್ದು.
ಬೊಂಬೆಗಳ ಚಳಕವೆಲ್ಲ ಸವಿತಾಗೆ ಸಂದರೆ ಅದಕ್ಕೆ ಬೇಕಾದ ಪರಿಕರಗಳನ್ನು ಒದಗಿಸುವಲ್ಲಿ ಅಷ್ಟೇ ಉತ್ಸಾಹ ತೋರಿಸಿ ಕೊನೆಗೆ ಅವುಗಳ ಪ್ರತಿಷ್ಠಾಪನೆಗೆ ಸಹಾಯ ಮಾಡಿದ್ದಲ್ಲದೆ ಮನೆಗೆ ಬಂದ ಎಲ್ಲ ಅತಿಥಿಗಳಿಗೆ ಉತ್ಸಾಹದಿಂದ ಈ ಸಲದ "ಥೀಮ್" ಆದ ರಾಮಾಯಣದ ಸಂದರ್ಭಗಳನ್ನು ವಿವರಿಸಿದವರು ರವಿಶಂಕರ್. ಬನ್ನಿ ನೋಡುವಿರಂತೆ ರಾಮಾಯಣದ ಬೊಂಬೆಗಳ ಪ್ರದರ್ಶನವನ್ನು. ವನವಾಸ, ಸೀತಾಪಹರಣ, ಜಟಾಯುವಿನ ಮರಣ, ಲಂಕೆಗೆ ಸೇತುವಿನ ನಿರ್ಮಾಣ, ಕುಂಭಕರ್ಣನ ನಿದ್ರಾಹರಣ, ಕೊನೆಗೆ ರಾವಣನ ಪ್ರಾಣ ಹರಣ. ತಮ್ಮ ಮನೆಯ ದಿವಾನಖಾನೆಯಲ್ಲಿ ಆಳೆತ್ತರಕ್ಕೆ ಬೊಂಬೆಗಳನ್ನೇರಿಸಿ ಗೆಳೆಯರೊಡನೆ ಹಬ್ಬವನ್ನಾಚರಿಸಿದ ಸವಿತಾ-ರವಿಶಂಕರ್ ಅವರ ಪರಿ ಅಪ್ಪಟ ಭಾರತೀಯ. ಅಂದಹಾಗೆ ನಿಮಗೆಲ್ಲ ದಸರೆಯ ಶುಭಾಷಯಗಳು. ನಮಸ್ಕಾರ.
ದಸರಾ ಬೊಂಬೆಗಳಲ್ಲಿ ರಾಮಾಯಣ ದರ್ಶನ ಫೋಟೋ ಗ್ಯಾಲರಿ












Click it and Unblock the Notifications