ಹಂಪನಕಟ್ಟಂ, ಮಂಗಳೂರಂ, ಅಯ್ಯೋ!
ಹಾಗೆಂದು ಕೇಳಿದ ಸೂಪರ್ ಮಾರ್ಕೆಟ್ನ ಆ ಸೇಲ್ಸ್ಮ್ಯಾನ್ ಮಾತು ಕೇಳಿದಾಗ ನಗಬೇಕೊ ಅಳಬೇಕೊ ತಿಳಿಯಲಿಲ್ಲ . 'ಹಾಂ ಮಂಗಳಾಪುರಂ.., ಮಂಗಳೂರು, ಅದರೂ ಮಳಯಾಳಂ ಬರುವುದಿಲ್ಲವೆ?' ಮಲಯಾಳಂನಲ್ಲಿ ಮಾತಾಡಲು ತೊಡಗಿದ ಶಾರ್ಜದ ಸೂಪರ್ ಮಾರ್ಕೆಟಿನ ಸೇಲ್ಸ್ ಮ್ಯಾನ್ಗೆ ಏನೆಂದು ಉತ್ತರಿಸುವುದು?
'ನಾನು ಮಲಯಾಳಿ ಅಲ್ಲ ಕನ್ನಡಿಗ, ಮಂಗಳೂರಿನವನು. ಮಲಯಾಳಂ ಬರುವುದಿಲ್ಲ' ಎಂದೆ. ಆದರೆ ಆತ ಸುಮ್ಮನಾಗಲಿಲ್ಲ - 'ಮಂಗಳೂರಿನವರಾದರೆ ಮಲಯಾಳಿ ಮಾತಾಡಬೇಕು, ಬೆಂಗಳೂರಿನವರಾದರೆ ತಮಿಳು ಮಾತಾಡಲು ಬರಲೇಬೇಕು, ಬಳ್ಳಾರಿಯವನಿಗೆ ತೆಲುಗು ಗೊತ್ತಿರಲೇಬೇಕು, ಉತ್ತರದಲ್ಲಿ ಬೆಳಗಾಂನಿಂದ ಹುಬ್ಬಳ್ಳಿವರೆಗೆ ಮರಾಠಿ ತಿಳಿದಿರಬೇಕು' ಎಂದ.
ನೆರೆಹೊರೆ ರಾಜ್ಯದ ಬಾಂಧವರು ನಮ್ಮಿಂದ (ಕನ್ನಡಿಗರಿಂದ) ಬಯಸುವುದು ಏನೆಂಬುದು ಗೊತ್ತಾಯಿತಲ್ಲವಾ? ಆದರೆ ಪರಭಾಷಿಗರ ನಡವಳಿಕೆ ಹೇಗಿದೆ ಗೊತ್ತಾ ? ಅವರು ಕರ್ನಾಟಕಕ್ಕೆ ಬಂದು ನೆಲೆಸಿದರೂ, ಕನ್ನಡ ಕಲಿಯುವ ಗೊಡವೆಗೆ ಹೋಗುವುದೇ ಇಲ್ಲ . ಅವರು ಕನ್ನಡ ಕಲಿಯಲೆಂದು ನಾವು ಬಯಸುವುದೂ ಇಲ್ಲ . ಯಾಕೆಂದರೆ ನಮಗೆ ನಮ್ಮ ಮಾತೃಭಾಷೆಗಿಂತ ಪರಭಾಷೆಯೇ ನೆಚ್ಚು. ನಮ್ಮ ನೆಚ್ಚು ಎಷ್ಟೆಂದರೆ ಸರ್ಕಾರದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಬಯಸುವ ಒಬ್ಬ ಸ್ಪರ್ಧಿ ಶೇ.38 ರಷ್ಟು ತಮಿಳಿಯನ್ನರು ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಬೆಂಗಳೂರಿನಿಂದ ಚುನಾವಣೆ ಕಣಕ್ಕೆ ಇಳಿದಿರುವುದುವುದನ್ನು ನಾವು ಉದಾಹರಿಸಬಹುದು. ಇನ್ನು ನಮ್ಮ ರಾಜಕಾರಣಿಗಳ ಇಂಗ್ಲಿಷ್ ಪ್ರೀತಿಯ ಬಗ್ಗೆ ಹೇಳುವುದೇ ಬೇಡ.
ಭಾಷೆಯ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಪ್ರಸಂಗವನ್ನು ನಿಮ್ಮ ಗಮನಕ್ಕೆ ತರಬಯಸುವೆ. ಮಂಗಳೂರಿನಿಂದ ನನ್ನ ವಿಳಾಸಕ್ಕೆ ಬರುವ ಅಂಚೆಯ ಮೇಲೆ ಅಂಚೆ ಇಲಾಖೆಯ ಮುದ್ರೆಯಲ್ಲಿ ಮಂಗಳೂರಿನ ಹಂಪನಕಟ್ಟೆ ಹಂಪನಕಟ್ಟಂ ಆಗಿರುವುದನ್ನು ಗಮನಿಸಿದ್ದೇನೆ. ಮಂಗಳೂರನ್ನು ಮಂಗಳಪುರಂ, ಹಂಪನಕಟ್ಟೆಯನ್ನು ಹಂಪನಕಟ್ಟಂ ಎಂದು ಬದಲಾಯಿಸುವ ಕೆಲಸ ಕಾಣದ ಕೈಗಳಿಂದ ನಡೆಯುತ್ತಲೇ ಇರುತ್ತದೆ. ಇದೆಲ್ಲವನ್ನು ಕಡೆಗಣಿಸಿ ನಾವು ನಾಡಗೀತೆಯ ವಿವಾದದಲ್ಲೋ ಅಥವಾ ಇನ್ನಾವುದಾದರೂ ವಿವಾದದಲ್ಲಿ ಮುಳುಗಿರುತ್ತೇವೆ. ಹೀಗೆಯೆ ಮುಂದುವರಿದರೆ ಗೀತೆ ಹಾಡಲು ನಾಡು ಉಳಿದೀತೆ ? ಎಂದು ಚಿಂತಿಸಬೇಕಾಗಿದೆ.
ನಮ್ಮ
ಹಿರಿಯರು
ಕಟ್ಟೋಣ
ಕನ್ನಡ
ನಾಡ
ಎಂದು
ಹಾಡಿದ್ದನ್ನು
ಮರೆತು
ಸದ್ಯವೇ
ಹುಡುಕೋಣ
ಕನ್ನಡನಾಡ
ಎಂದು
ಹಾಡಬೇಕಾಗುವ
ಕಾಲ
ಹತ್ತಿರದಲ್ಲಿದೆ
ಅನ್ನಿಸುತ್ತಿದೆ.
ಈ
ಅಭಿಮಾನ
ಶೂನ್ಯತೆಗೆ
ಏನು
ಮದ್ದು
?