ಪೂರಕ ಓದಿಗೆ-
ಮವಾಸು
(ಅಮೇರಿಕೆಯಲ್ಲಿ
ಕನ್ನಡದ
ಸೇವಕ)
[email protected]
ಇತ್ತೀಚೆಗೆ ರಾಮಚಂದ್ರ ಶರ್ಮರು ಅಮೇರಾಕಾಗೆ ಭೇಟಿ ಕೊಟ್ಟಂತಿಲ್ಲ. ಕೊಟ್ಟಿದ್ದಿದ್ದರೆ ಹೀಗೆಲ್ಲ ಮಾತನಾಡುತ್ತಿರಲಿಲ್ಲ, ನಮ್ಮನ್ನು ವಿನಾಕಾರಣ ತರಾಟೆಗೆ ತೆಗೆದುಕೊಳ್ಳುತ್ತಿರಲಿಲ್ಲ.
ಅಮೇರಿಕಾಗೆ ನಾವುಗಳು ಬಂದಿದ್ದು ನಮ್ಮ ಕರ್ನಾಟಕದ ಉದ್ಧಾರಕ್ಕಾಗಿಯೇ. ಸಾಹಿತಿಗಳು, ಗಾಯಕರು, ಮತ್ತು ನಮ್ಮ ಸಂಸ್ಕೃತಿಯ ಕೆಲವು ವಕ್ತಾರರು ನಾಡು ನುಡಿ ಸೇವೆ ಮಾಡುತ್ತಿರುವುದು ಅವರ ಪ್ರತಿಭಾ ಸಂಪತ್ತಿಂದ; ನಮ್ಮ ಅಳಿಲು ಸೇವೆ ಅಷ್ಟೂ ಇಷ್ಟು ಧನ ಸಂಪತ್ತಿನ ಮೂಲಕ ನಡೆಯುತ್ತದೆ. ಅದು ಹೇಗೂ ಇರಲಿ, ಇಷ್ಟಕ್ಕೂ ಯಾರಿಗೆ ತಾನೇ ತಮ್ಮ ಊರು ತಮ್ಮ ಮನೆ ಬಿಟ್ಟು ಬರಲು ಇಷ್ಟ ವಿರುತ್ತೆ ಹೇಳಿ. ವಿಧಿ ಇಲ್ಲದೇ ಬರಬೇಕಾಗುತ್ತದೆ. ರಾಮಚಂದ್ರಶರ್ಮರಿಗೂ ಕೂಡ ವಿದೇಶಕ್ಕೆ ಹೋಗಲು ಇಂಥದೇ ಒಂದು ಕಾರಣವಿತ್ತು ಎನ್ನುವುದನ್ನು ಮರೆಯಬಾರದು.
ಅಮೇರಿಕಾದಲ್ಲಿ ಈಗ ನಡೆಯುತ್ತಿರುವ ಕನ್ನಡದ ಕೆಲಸದ ಬಗ್ಗೆ ಹರಿಹರೇಶ್ವರ ಮತ್ತು ನಾಗ್ ಐತಾಳ್ರಿಗಿಂತ ಇನ್ನೆಲ್ಲಿಂದ ಮಾಹಿತಿ ಬೇಕು ಹೇಳಿ? ಕನ್ನಡದ ಸೇವೆ ಕನ್ನಡ ಸಾಹಿತಿಗಳ biodata ತಿಳಿದುಕೊಳ್ಳುವುದರಿಂದ ಉದ್ಧಾರ ಆಗದು. ಪ್ರಗತಿ ಎಲ್ಲ ಮುಖಗಳಲ್ಲೂ ಆಗುವುದು ಒಳ್ಳೆಯದೂ ಸಹ.
ಕನ್ನಡಿಗರ ಸಮ್ಮೇಳನ, ಕನ್ನಡ ಸಂಘಗಳಲ್ಲಿ ಕನ್ನಡದ ಭಾಷಣ, ನಾಟಕಗಳು, ಹಾಡುಗಳು, .. ಇತ್ಯಾದಿ ಚಟುವಟಿಕೆಗಳ ಅಮೆರಿಕದಲ್ಲಿ ಸದಾ ನಡೆಯುತ್ತಲೇ ಇರುತ್ತವೆ. ಇದೆಲ್ಲಕ್ಕಿಂತ ಹೆಚ್ಚಾಗಿ ನಡೆಯುವಂತಹದು ಮಕ್ಕಳಿಗೆ ಕನ್ನಡ ಕಲಿಸುವ ಕೆಲಸ. ಅಮೇರಿಕಾದ ಹಲವಾರು ಪ್ರದೇಶಗಳಲ್ಲಿ ಕನ್ನಡ ಕಲಿಸುವ ಕಾರ್ಯಕ್ರಮಗಳಿವೆ. ಉದಾಹರಣೆಗೆ ಚಿಕಾಗೋ, ಉತ್ತರ ಕ್ಯಾಲಿಫೋರ್ನಿಯ, ದಕ್ಷಿಣ ಕ್ಯಾಲಿಫೋರ್ನಿಯ ಹಾಗೂ ಇತರೆ ಪ್ರದೇಶಗಳಲ್ಲಿ ವಾರಕ್ಕೊಂದು ಸಲ ಕನ್ನಡ ಕಲಿ ಶಾಲೆಗಳು ಪ್ರಾರಂಭಗೊಂಡಿವೆ.
ಕಳೆದ ಹದಿನೈದು ವರ್ಷಗಳಿಂದ ನಾನು ಭಾರತದ ಹೊರಗಿದ್ದೂ ಕನ್ನಡಿಗನಾಗೇ ಉಳಿದಿದ್ದೇನೆ. ಭಾರತದ ಹೊರಗೆ ಹುಟ್ಟಿದ ನನ್ನ ಹತ್ತು ವರ್ಷದ ಮಗಳ ಅಪ್ಪಟ ಕನ್ನಡ ಕೇಳಿ ನನ್ನ ಕವಿ, ಪತ್ರಕರ್ತ ಸ್ನೇಹಿತರೆಲ್ಲಾ ದಂಗಾಗಿದ್ದಾರೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು ಈಗ ಬಾಂಬೆಯಲ್ಲಿರುವ ನನ್ನ ತಂಗಿಯ ಮಕ್ಕಳಿಗೆ ಅವರ ಹೆಸರುಗಳನ್ನು ನನ್ನ ಮಗಳು ಕನ್ನಡದಲ್ಲಿ ಬರೆದಾಗ ಅವರಿಗೆ ಆದ ಆಶ್ಚರ್ಯ ನೋಡಿ ನನಗೆ ಹೆಮ್ಮೆಯೆನಿಸಿತು. ಇದು ನನ್ನ ಮಗಳ ಒಬ್ಬಳ ಬಗ್ಗೆ ಹೇಳುತ್ತಿಲ್ಲ. ಈಗಿನ ಪೀಳಿಗೆಯ ಮಕ್ಕಳ ಕನ್ನಡದ ಮೇಲಿನ ಅಭಿಮಾನಕ್ಕೆ ಹೇಳುತ್ತಿದ್ದೇನೆ. ಈ ಮಕ್ಕಳ ಕನ್ನಡ ಉಚ್ಚಾರ ನಮ್ಮ ಬೆಂಗಳೂರಿನ ಬಂಧುಗಳ ಮಕ್ಕಳಿಗಿಂತ ಚೆನ್ನಾಗಿದೆ. ಕನ್ನಡದ ಸಿನೇಮಾ ವಿಸಿಡಿ/ಕ್ಯಾಸೆಟ್ ಲೈಬ್ರರಿಗಳು, ಸಾಹಿತ್ಯ ಗುಂಪುಗಳು, ಕನ್ನಡ ಹಾಡಿನ ತರಗತಿಗಳು, ಕನ್ನಡ ನಾಟಕಗಳ ಗುಂಪುಗಳು ಇಲ್ಲಿ ಸಾಕಷ್ಟಿವೆ. ಕರ್ನಾಟಕದಿಂದ ದೂರವಿರುವ ನಮ್ಮ ಈ ಪೀಳಿಗೆಯ ಮಕ್ಕಳಿಗೆ ದೂರದ ನೆಂಟಾದ ಕನ್ನಡದ ಮೇಲೆ ಪ್ರೀತಿ ಇದೆ.
ನಿಜ, ಶರ್ಮರಂತಹ ಸಾಹಿತಿಗಳ ಮಟ್ಟದಲ್ಲಿ ಕನ್ನಡ ಬೆಳೆಯಬೇಕಾದರೆ ಅನಂತಮೂರ್ತಿಯವರು ಹೇಳಿದಂತೆ ಒಂದು ರುಪಾಯಿಗೆ ಒಂದು ಡಾಲರ್ ಆಗಬೇಕು. ಅದಕ್ಕೆ ಸಮಯ ಬೇಕು. ಸದ್ಯಕ್ಕೆ- ಇಲ್ಲಿಯ ಜನತೆಗೆ ಕನ್ನಡದ ಕಥೆಗಳು, ನಾಟಕಗಳು, ಕವಿತೆಗಳು ತಲುಪುವ ಹಾಗೆ ಮಾಡಿ ಅದರ ಕರ್ತೃಗಳಾದ ಸಾಹಿತಿಗಳು, ಕವಿಗಳನ್ನು ಕರೆಸಬಹುದು. ಅಲ್ಲಿಯವರೆಗೆ ನಮ್ಮ ಅಳಿಲು ಸೇವೆಗೆ ಸೀಮಿತ.
ಇತ್ತೀಚೆಗೆ ಇಲ್ಲಿಗೆ ಬಂದು ಹೋಗಿರುವ ಸಾಹಿತಿಗಳನ್ನಾಗಲಿ, ಕವಿಗಳನ್ನಾಗಲಿ, ಗಾಯಕರನ್ನಾಗಲಿ, ರಂಗ ನಟರನ್ನಾಗಲಿ, ಚಿತ್ರ ನಟರನ್ನಾಗಲಿ ಕೇಳಿ, ಇಲ್ಲಿನ ಕನ್ನಡ ವ್ಯಾಮೋಹ ಹೇಗಿದೆ ? ಎಂದು. ನಮಗೆ ಕರ್ನಾಟಕದಿಂದ ಕನ್ನಡಕ್ಕೆ ಸಂಬಂಧ ಪಟ್ಟ ಯಾರೇ ಬರಲಿ ಅದು ನಮ್ಮ ಊಟಕ್ಕೆ ತುಪ್ಪವಿದ್ದಂತೆ. ಅಷ್ಟರಮಟ್ಟಿಗಾದರೂ ಕನ್ನಡ ಮಕ್ಕಳ ಕಿವಿಗೆ ಕನ್ನಡ ಬೀಳಲಿ, ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಕನ್ನಡದಲ್ಲಿ ಆಸಕ್ತಿ ಬರಲಿ ಎಂದು.
ಕೆಲವು ಸ್ನೇಹಿತರುಗಳು ಸೇರಿ ತವರಿನ ಕೆಲವು ಸಾಹಿತಿಗಳನ್ನು ಕಲಾವಿದರನ್ನು ಕರೆಸಿ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಆದರೆ ಎಲ್ಲರಿಗೂ ಇದು ಸಾಧ್ಯವೇ? ಇಷ್ಟಕ್ಕೂ ಹೊರನಾಡಿನಲ್ಲಿ ಕನ್ನಡ ಉಳಿಸಿ ಬೆಳೆಸಲು ನಮ್ಮ ಸರಕಾರ ಮಾಡುತ್ತಿರುವುದಾದರೂ ಏನು? ಇಪ್ಪತ್ತಕ್ಕೂ ಹೆಚ್ಚು ಎಂಎಲ್ಎಗಳನ್ನು ಡೆಟ್ರಾಯಿಟ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಕಳುಹಿಸಲು ಸರ್ಕಾರಕ್ಕೆ ಬರಗಾಲ ಇರಲಿಲ್ಲ . ಇಪ್ಪತ್ತು ಕಲಾವಿದರನ್ನು ಕಳುಹಿಸಲು ಸರ್ಕಾರಕ್ಕೆ ಬರಗಾಲ ಬಂತು. ಎಂಥ ಬರಗಾಲವೇ ಬರಲಿ, ಸಾಂಸ್ಕೃತಿಕ-ಬೌದ್ಧಿಕತೆಗೆ ಬರ ಬೀಳಬಾರದು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಾನು ರಜೆಯಲ್ಲಿ ಬೆಂಗಳೂರಿಗೆ ಬಂದಾಗಲೆಲ್ಲಾ ಕೇಳಿಕೊಳ್ಳುವುದು ಇಷ್ಟೇ- ಕನ್ನಡನಾಡಿನ ಬಗ್ಗೆ ಮಕ್ಕಳಿಗೆ ತೋರಿಸುವ ಇರುವ ಎರಡು ಟೇಪುಗಳನ್ನು ಕೊಡಿ ಎಂದು. ಬಕಪಕ್ಷಿಯಂತೆ ಕಾಯುತ್ತಿದ್ದೇನೆ. ಸಂಸ್ಕೃತಿ ಇಲಾಖೆ ನಮ್ಮ ತಾಳ್ಮೆ ಪರೀಕ್ಷಿಸುತ್ತದೆ ! ಇಂಥ ವಿಷಯಗಳ ಬಗ್ಗೆ ಯಾಕೆ, ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ ?
ಇತ್ತೀಚೆಗೆ ನಮ್ಮ ಸ್ನೇಹಿತರೊಬ್ಬರು ಮಾತಿನ ನಡುವೆ ಹೇಳಿದರು : ‘ಎಷ್ಟನೇ’, ‘ಲಜ್ಜೆ’ ಯಂತಹ ಪದಗಳಿಗೆ ಇಂಗ್ಲೀಷ್ನಲ್ಲಿ ಪದ ಸಿಗುವವರೆವಿಗೂ ಕನ್ನಡ ಉಳಿಯುತ್ತದೆ.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಜಾನಕಿ
ಲೇಖನ
ಇಷ್ಟಪಟ್ಟೆ
-ಅನಂತಮೂರ್ತಿ
ಬೆನ್ನು
ತಟ್ಟಬೇಕಾದವರಿಂದ
ಬರೆ
ಕಡಲಾಚೆಗಿನ
ಕನ್ನಡತನ
ಒರೆಗೆ
ಇಗೋ
ಕನ್ನಡ
:
ಬೆಂಗಳೂರಿನಲ್ಲಿ
ಅಮೆರಿಕನ್ನಡಿಗನ
ಪ್ರಾತ್ಯಕ್ಷಿಕೆ
ಎನ್ನಾರೈಗಳನ್ನೇಕೆ
ಬೀಳುಗಳೆವಿರಿ,
ನಿಮ್ಮ
ನಿಮ್ಮ
ಮನವ
ಸಂತೈಸಿಕೊಳ್ಳಿ
ಒಂದು
ಸುಳ್ಳಿನ
ಸುತ್ತ
ಮುತ್ತ
...