ಕವಿ ಕವಿಯಾಗಿದ್ದರೆ ಸಾಕು, ಹಣೆಪಟ್ಟಿಯ ಅಗತ್ಯವಿಲ್ಲ

ಮಹಾಬಲ ಶಾಸ್ತ್ರಿಯವರು ಕೇಳಿದ ಪ್ರಶ್ನೆ ‘ಭಾರತೀಯ ಸಾಹಿತ್ಯದ ಚೌಕಟ್ಟಿನಲ್ಲಿ ಕನ್ನಡದ ವಿಶೇಷಗಳೇನು ?’- ಎಂಬುದು. ಇದಕ್ಕೆ ಉತ್ತರಿಸಿದ ಜಿ.ಎಸ್‌.ಎಸ್‌. ಅವರು, ಕನ್ನಡದ ಪ್ರತಿಭೆ ಯಾವತ್ತೂ ಕೂಡ ಪ್ರತಿಸೃಷ್ಟಿ ಮತ್ತು ಅನುಸೃಷ್ಟಿಗಳಲ್ಲಿ ತೊಡಗಿದಂಥದ್ದು . ಹಳೆಯ ಕವಿಗಳು ಅದೇ ರಾಮಾಯಣ ಮತ್ತು ಮಹಾಭಾರತವನ್ನು ತಮ್ಮ ಕಾವ್ಯಗಳಲ್ಲಿ ಉಪಯೋಗಿಸಿಕೊಂಡರೂ ತಮ್ಮ ಪ್ರಾದೇಶಿಕತೆಗೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಉದಾಹರಣೆಗೆ, ಶಿಶುಪಾಲ ವಧೆಯ ಪ್ರಸಂಗದಲ್ಲಿ , ತನಗೆ ಅಗ್ರಪೂಜೆಗಾಗಿ ಇಟ್ಟಿದ್ದ ಹರಿವಾಣವನ್ನೇ ಕೃಷ್ಣ ಚಕ್ರವನ್ನಾಗಿ ಬಳಸಿದ್ದನ್ನು ಪಂಪ ಹೇಗೆ ಹೊಸದಾಗಿ ಅಳವಡಿಸಿಕೊಂಡ, ಮೂಲ ವ್ಯಾಸಭಾರತದಿಂದ ಭಿನ್ನನಾದ; ಇಪ್ಪತ್ತನೇ ಶತಮಾನದಲ್ಲಿ ಕುವೆಂಪುರವರು ತಮ್ಮ ರಾಮಾಯಣದರ್ಶನಂನಲ್ಲಿ ಪರಿಸರಕ್ಕೆ, ಕಾಲಕ್ಕೆ ತಕ್ಕ ಬದಲಾವಣೆಗಳನ್ನು ಹೇಗೆ ಮಾಡಿಕೊಂಡರು, ಉದಾಹರಣೆಗೆ, ಕಾವ್ಯದ ಮೊದಲಲ್ಲೇ ಪರಂಪರಾಗತ ನಾಂದೀ ಪದ್ಯಗಳ ದೇವತಾಸ್ತುತಿಗಳ ಬದಲು, ತನ್ನ ಕಾವ್ಯರಚನೆಗೆ ಸ್ಫೂರ್ತಿಯಿತ್ತ ಪಾಶ್ಚಾತ್ಯ ಹಾಗೂ ಪೌರ್ವಾತ್ಯ ಪೂರ್ವಸೂರಿಗಳನ್ನು ನೆನೆಯುವ ಹೊಸಬಗೆಯನ್ನು ಪ್ರಯೋಗಿಸಿದರು- ಎಂಬುದನ್ನು ರಸವತ್ತಾಗಿ ವಿವರಿಸಿದರು. ಹನ್ನೆರಡನೆಯ ಶತಮಾನದ ಕನ್ನಡದ ವಚನ ಸಾಹಿತ್ಯ ಭಾರತೀಯ ಸಾಹಿತ್ಯಕ್ಕೆ, ಏಕೆ ವಿಶ್ವ ಸಾಹಿತ್ಯಕ್ಕೇನೆ ಕನ್ನಡದ ವಿಶಿಷ್ಟ ಕೊಡುಗೆ- ಎಂದರು.

ಕೃಷ್ಣ ಉಪಾಧ್ಯಾಯರು, ‘ಭಾಷೆಯ ಮೂಲಭೂತವಾದದಿಂದ ಆಗುವ ಅನರ್ಥ ಪ್ರಕ್ರಿಯೆಗಳು ಮತ್ತು ಬೇರೆ ಭಾಷೆಗಳೊಡನೆ ಸಂಪರ್ಕ ಸಾಧಿಸದೆ ಕೂಪಮಂಡೂಕವಾಗುವ ಸ್ಥಿತಿ’ಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವರುದ್ರಪ್ಪನವರು, ಕನ್ನಡ ಯಾವತ್ತೂ ಯಾವ ಭಾಷೆಯ ಆಕ್ರಮಣವನ್ನು ಒಪ್ಪಿಕೊಂಡಿಲ್ಲ . ಹಾಗೆಯೇ ತೆಗೆದುಕೊಳ್ಳಬಹುದಾದ ಸ್ವಾರಸ್ಯವನ್ನು ಯಾವತ್ತೂ ಬಿಟ್ಟುಕೊಟ್ಟಿಲ್ಲ . ಮೂಲಭೂತವಾದದಿಂದ ಯಾರೂ ಬೆಳೆಯಲಾರರು- ಎಂದರು.

ಜ್ಯೋತಿ ಮಹಾದೇವ ಮತ್ತು ವಿಶ್ವನಾಥ ಹುಲಿಕಲ್‌ರವರು ಕೇಳಿದ ‘ಕನ್ನಡ ಉಳಿವಿನ ಪ್ರಶ್ನೆ ಮತ್ತು ಯುವಜನಾಂಗದಲ್ಲಿ ಬತ್ತುತ್ತಿರುವ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಕಳಕಳಿ, ಕನ್ನಡ ಪುಸ್ತಕಗಳನ್ನು ಓದದಿರುವುದು’ ಮುಂತಾದವುಕ್ಕೆ ಉತ್ತರಿಸಿದ ಕವಿಗಳು, ಯಾವ ಭಾಷೆ ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿದೆಯೋ ಅದು ಅಷ್ಟು ಸುಲಭವಾಗಿ ನಾಶ ಹೊಂದಲಾರದು. ಇವೆಲ್ಲಾ ತಾತ್ಕಾಲಿಕ ಆತಂಕಗಳಷ್ಟೆ- ಎಂದು ಆಶಾವಾದವನ್ನು ವ್ಯಕ್ತಪಡಿಸಿದರು. ರಾಜಕೀಯ ಪರಿಸ್ಥಿತಿಗಳು ಹೇಗೆ ಪರಿಸ್ಥಿತಿಯನ್ನು ಮತ್ತಷ್ಟು ಹಾಳುಗೆಡವಿದೆ ಎನ್ನುವುದಕ್ಕೆ ತಮ್ಮ ‘ದೊಡ್ಡಪ್ಪ ಹೇಳಿದ್ದು ’ ಎಂಬ ಕವನವನ್ನು ವಾಚಿಸಿದರು; ‘ಒಂದೋ ಕುರಿಯಾಗುವ, ಇಲ್ಲವೇ ನರಿಯಾಗುವ’ ರಾಷ್ಟ್ರಕನ ದ್ವಂದ್ವವನ್ನು ಮನಗಾಣಿಸಿದರು.

ಮುಂದಿನ ಪ್ರಶ್ನೆಯಾಗಿ ಬಂದದ್ದು ‘ಸಾಹಿತ್ಯ ಪ್ರಕಾರಗಳಲ್ಲಿ ನಿಮಗೆ ಕಾವ್ಯ ಅತಿ ಪ್ರಿಯವಾದದ್ದು ಏಕೆ?’ ಎನ್ನುವುದು. ಇದಕ್ಕೆ ಉತ್ತರಿಸುತ್ತಾ ಕವಿಗಳು, ಸಾಹಿತ್ಯದಲ್ಲಿ ಕಾವ್ಯದ ಆಕರ್ಷಣೆ ವಿಶೇಷ ಬಗೆಯದು ಎಂದರು. ಮೊತ್ತಮೊದಲಿಗೆ ಸಾಹಿತ್ಯದಲ್ಲಿ ಆಸಕ್ತಿಯನ್ನು ಹುಟ್ಟಿಸುವುದು ಹಾಗೂ ಸಾಹಿತ್ಯ ಲೋಕದ ಮೊದಲ ಬಾಗಿಲಾಗಿ ನಿಲ್ಲುವುದು ಪದ್ಯ. ಬಹುತೇಕ ನೆನಪಿನಲ್ಲಿ ಉಳಿಯುವುದೂ ಪದ್ಯವೇ. ಮಿಗಿಲಾಗಿ ನನಗೆ ಒಲಿದದ್ದು ಕಾವ್ಯಕ್ಷೇತ್ರ, ಹಾಗಾಗಿ ಕಾವ್ಯ ನನಗೆ ಪ್ರಿಯವಾಯಿತು ಎಂದು ಉತ್ತರಿಸಿದರು.

‘ನಿಮ್ಮ ಕಾವ್ಯ ರಚನೆಯ ಈ 5 ದಶಕಗಳಲ್ಲಿ ಕಾವ್ಯ ಭಾಷೆ ಮತ್ತು ಕವಿತೆಯ ಆಕೃತಿಗಳು ಯಾವ ರೂಪಾಂತರಗಳನ್ನು ಕಂಡಿವೆ ಮತ್ತು ಈ ಅಂಶಗಳನ್ನು ಕವನದ ವಸ್ತು ನಿರ್ಧರಿಸುತ್ತದೆಯೇ?’ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಕಾವ್ಯ ಭಾಷೆ ಕವಿಯಿಂದ ಕವಿಗೆ ಬದಲಾವಣೆಗಳನ್ನು ಕಾಣುತ್ತದೆ ಹಾಗೆಯೇ ಸಾಹಿತ್ಯಿಕ ಚಳವಳಿಗಳೂ ಇದರ ಮೇಲೆ ಪ್ರಭಾವ ಬೀರುತ್ತವೆ. ನಾನು ಪ್ರಾರಂಭಿಸಿದ್ದು ನವೋದಯ ಕಾಲದಲ್ಲಿ , ಆಗ ಭಾವಕ್ಕೆ ಮತ್ತು ಪ್ರಾಸಕ್ಕೆ ಕವನದಲ್ಲಿ ಬಹಳ ಪ್ರಾಶಸ್ತ್ಯವಿತ್ತು . ಆ ನಂತರ ನವ್ಯದ ಪ್ರವೇಶದಿಂದ ಮುಕ್ತ ಛಂದಸ್ಸಿನ (ಫ್ರೀ ವರ್ಸ್‌ನ) ಪರಿಚಯವಾಯಿತು, ಪ್ರಯೋಗ ಮಾಡಿದೆ. ಹಾಗೆಯೇ ಕವಿತೆಯ ವಸ್ತು ಕೂಡ ಪ್ರಭಾವಶಾಲಿಯಾಗಿ ಕವಿತೆಯ ರೂಪರೇಷೆಗಳನ್ನು ನಿರ್ಧರಿಸುತ್ತದೆ- ಎಂದರು.

ಜ್ಯೋತಿ ಮಹಾದೇವರ ಮತ್ತೊಂದು ಪ್ರಶ್ನೆಗೆ ಉ್ತತರಿಸುತ್ತಾ, ಕವಿ ಕವಿಯಾಗಿದ್ದರೆ ಸಾಕು, ನವೋದಯ, ನವ್ಯ, ದಲಿತ ಎಂಬ ಹಣೆಪಟ್ಟಿಯ ಅಗತ್ಯವಿಲ್ಲ ಎಂದರು.

ಸುಧೀರ್‌ ಬೆಂಗಳೂರುರವರ ‘ಕನ್ನಡದಲ್ಲಿ ಲ ಮತ್ತು ಳ ಅಕ್ಷರ ಪ್ರಯೋಗ’ದ ಬಗ್ಗೆ (ಉದಾ, ಸಮ್ಮೇಲನ ಸರಿಯೋ ಸಮ್ಮೇಳನ ಸರಿಯೋ) ಪ್ರಶ್ನೆಗೆ ಉತ್ತರಿಸುತ್ತಾ , ಎರಡೂ ಪ್ರಯೋಗಗಳು ಸರಿ, ‘ಕನ್ನಡದಲ್ಲಿ ಹಿಂದಿನಿಂದಲೂ ಲ-ಳಯೋರ್‌ ಅಭೇದ:’ ಎಂದರು, ಉದಾಹರಣೆಗಳನ್ನಿತ್ತರು.

‘ನಿಮ್ಮ ಸಮಕಾಲೀನರಲ್ಲಿ ನೀವು ಮೆಚ್ಚುವ ಕವಿಗಳು ಯಾರು?’ ಎಂಬ ಪ್ರಶ್ನೆಗೆ ಶಿವರುದ್ರಪ್ಪನವರು ಚೆನ್ನವೀರ ಕಣವಿ, ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಮತ್ತು ಮೈಸೂರಿನ ಸುಜನಾ ಅವರನ್ನು ಹೆಸರಿಸಿದರು.

ಡಾ.ಜಿ.ಎಸ್‌.ಎಸ್‌. ತಮ್ಮ ‘ನಾನೇಕೆ ಬರೆಯುತ್ತೇನೆ? ಸ್ವರ್ಗ ಲೋಕ, ನಿನಗೂ, ಚಂದ್ರನಿಗೆ, ಯುಗಾದಿಯ ಪ್ರಶ್ನೆಗಳು, ಎಲ್ಲೋ ಮಗು ಅಳುತ್ತಾ ಇದೆ, ಜಡೆ, ದಾಟಿ ಬಾ ನಿರ್ಭಯದ ನಿಲುವಿಗೆ ಮತ್ತು ನನ್ನ ಹಣತೆ’ ಕವನಗಳನ್ನು ವಾಚಿಸಿದರು.

ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ವಹಿಸಿದ್ದ ಹರಿಹರೇಶ್ವರರ ವಂದನಾರ್ಪಣೆಯಾಂದಿಗೆ ಸಮಾರಂಭ ಮುಕ್ತಾಯವಾಯಿತು.

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+