Karnataka Budget 2023 Expectations: ಯಾದಗಿರಿ ಜಿಲ್ಲೆಯ ನಿರೀಕ್ಷೆಗಳೇನು?
ಫೆಬ್ರವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಿಸಲಿದ್ದಾರೆ. ಕರ್ನಾಟಕ ಬಜೆಟ್ 2023ರ ಮೇಲಿನ ಯಾದಗಿರಿ ಜಿಲ್ಲೆಯ ಜನತೆಯ ನಿರೀಕ್ಷೆಗಳೇನು ಎನ್ನುವುದು ಇಲ್ಲಿದೆ.
ಯಾದಗಿರಿ, ಜಿಲ್ಲೆಯಾಗಿ 11 ವರ್ಷಗಳಾದರೂ ಇನ್ನೂ ಮೂಲಸೌಕರ್ಯಗಳಿಲ್ಲದ ವಂಚಿತ ಜಿಲ್ಲೆಯಾಗಿದೆ. ಪ್ರತಿ ಬಾರಿಯೂ ಯಾದಗಿರಿ ಜಿಲ್ಲೆಯ ಜನತೆ ಜಿಲ್ಲೆಯ ಅಭಿವೃದ್ದಿ ಕುರಿತಾಗಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರೂ, ಅದು ಹುಸಿಯಾಗುತ್ತಲೇ ಬಂದಿದೆ.
ಈ ಬಾರಿಯ ಕರ್ನಾಟಕ ಬಜೆಟ್ನಲ್ಲಿ ಯಾದಗಿರಿ ಜಿಲ್ಲೆಯ ಜನರ ಬಹುದಿನಗಳ ಕನಸು, ಬೇಡಿಕೆ ಈಡೇರಿಲಿವೆಯೇ?. ಹಾಗಾದರೆ ಬಸವರಾಜ ಬೊಮ್ಮಾಯಿ ಅವರ ಕರ್ನಾಟಕ ಬಜೆಟ್ 2023 ಕುರಿತು ಯಾದಗಿರಿ ಜಿಲ್ಲೆಯ ಜನತೆಯ ನಿರೀಕ್ಷೆಗಳೇನು ಎಂಬ ಮಾಹಿತಿ ಇಲ್ಲಿದೆ:
ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ಬಳಿಕ ಎರಡನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದು, ಈಗಾಗಲೇ ಬಜೆಟ್ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯನ್ನು ನಡೆಸುವ ಮೂಲಕ ಎಲ್ಲಾ ಜಿಲ್ಲೆಯ ನಿರೀಕ್ಷೆಗಳೇನು ಎಂಬ ಬಗ್ಗೆ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಂದ ಮಾಹಿತಿ ಕಲೆ ಹಾಕಿದ್ದಾರೆ. ಇನ್ನೂ ಫೆಬ್ರವರಿ 17 ರಂದು ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಬಜೆಟ್ 2023 ಮಂಡಿಸಲಿದ್ದಾರೆ.

ಯಾದಗಿರಿ ಜಿಲ್ಲೆ ರಚನೆಯಾಗಿ 11 ವರ್ಷವಾದರೂ ಸರ್ಕಾರಿ ಕಟ್ಟಡಗಳು, ರಸ್ತೆ, ಕುಡಿಯುವ ನೀಡಿನ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳು ಇನ್ನೂ ಜೀವಂತವಾಗಿಯೇ ಇದೆ. ಈ ಬಾರೀ ರಾಜ್ಯ ಬಜೆಟ್ ಕುರಿತು ಯಾದಗಿರಿಯ ಜನರ ನಿರೀಕ್ಷೆಗಳು ಎನ್ನುವುದು ಈ ಕೆಳಗಿನಂತಿವೆ.
ಮೂಲಸೌಕರ್ಯ ಹಾಗೂ ಪ್ರವಾಸಿ ತಾಣಗಳ ಅಭಿವೃದ್ದಿಗೆ ಒತ್ತು
ಜಿಲ್ಲೆಯ ಜನತೆ ಮೂಲಭೂತ ಸೌಕರ್ಯಗಳಿಲ್ಲದೆ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಜಿಲ್ಲಾ ಕೇಂದ್ರದಿಂದ ಹಿಡಿದು ಗ್ರಾಮೀಣ ಭಾಗದಲ್ಲಿಯೂ ಉತ್ತಮ ಗುಣಮಟ್ಟದ ರಸ್ತೆಗಳಿಲ್ಲ. ಡಾಂಬರೀಕರಣ ರಸ್ತೆಗಳಿಲ್ಲಿದೆ ಮಣ್ಣಿ ರಸ್ತೆಗಳ ಮೇಲೆಯೇ ನಡೆದಾಡಬೇಕಿದೆ.
ಮಣ್ಣಿನ ರಸ್ತೆಯಿಂದಾಗಿ ಮಳೆಗಾಲದಲ್ಲಿ ಸಂಚಾರಕ್ಕೆ ಪರದಾಡುವಂತಾಗಿದೆ. ಇನ್ನೂ ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಅಭಿವೃದ್ದಿಗೆ ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಭೀಮಾ ನದಿಗೆ ಅಡ್ಡಲಾಗಿ ಎರಡು ಕಡೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಬೇಡಿಕೆ
ಯಾದಗಿರಿ ಜಿಲ್ಲೆಯಲ್ಲಿ ಭೀಮಾ ನದಿಗೆ ಅಡ್ಡಲಾಗಿ ಎರಡು ಕಡೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯನ್ನು ಹಿಂದಿನ ಬಜೆಟ್ ನಲ್ಲಿಯೇ ನೀಡಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿತ್ತು.
ಇನ್ನು ಯಾದಗಿರಿ ಮತಕ್ಷೇತ್ರ ಠಾಣಗುಂದಿ ಮತ್ತು ವಡಗೇರಾ ತಾಲೂಕಿನ ಗಡ್ಡೆಸೂಗುರು ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ಘೋಷಣೆ ಮಾಡಲಾಗುತ್ತಿದೆ ಎಂದು ಈ ಹಿಂದೆ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ್ ಭರವಸೆ ನೀಡಿದ್ದರು. ಆದರೆ ಅದು ಹುಸಿಯಾಗಿದೆ. ಅದರಂತೆ ಸಾಕಷ್ಟು ಯೋಜನೆಗಳು ಅನುಷ್ಠಾನವಾಗಿಲ್ಲ. ಈ ಬಾರಿ ಬೊಮ್ಮಾಯಿ ಬಜೆಟ್ ನತ್ತ ಜಿಲ್ಲೆಯ ಜನತೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ.
ಹತ್ತಿ ಮಿಲ್ ಗಳಿಗೆ ಪ್ರೋತ್ಸಾಹದ ಬೇಡಿಕೆ
ಹತ್ತಿ ಹೆಚ್ಚು ಬೆಳೆಯುವ ಮೆಗಾ ಟೆಕ್ಸ್ ಟೈಲ್ ಜಿಲ್ಲೆಯಲ್ಲಿ ಸ್ಥಾಪನೆ ಮಾಡುವುದರಿಂದ ಇಲ್ಲಿನ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ, ಅದನ್ನು ಕಲಬುರಗಿ ಮತ್ತು ವಿಜಯಪುರದಲ್ಲಿ ಸ್ಥಾಪಿಸಲು ಹಿಂದಿನ ಬಜೆಟ್ ನಲ್ಲಿ ಸಿಎಂ ನಿರ್ಧರಿಸಿದ್ದರಿಂದ, ಹತ್ತಿ ಹೆಚ್ಚು ಬೆಳೆಯುವ ರೈತರಿಗೆ ಅನಾನುಕೂಲವಾಗಿತ್ತು. ಈ ಬಾರಿಯ ಬಜೆಟ್ ನಲ್ಲಿ ಹತ್ತಿ ಮಿಲ್ ಗಳಿಗೆ ಪ್ರೋತ್ಸಾಹ ಸಿಗಲಿದೆ ಎನ್ನುವ ನಿರೀಕ್ಷೆಯನ್ನು ಜನತೆ ಇಟ್ಟುಕೊಂಡಿದ್ದಾರೆ.
ಇಸ್ರೇಲ್ ಮಾದರಿ ಯೋಜನೆ ನೆನೆಗುದಿಗೆ
ರಾಜ್ಯದಲ್ಲಿ ಅತಿ ಹೆಚ್ಚಾಗಿ ಗುಳೆ ಹೋಗುವ ಜಿಲ್ಲೆಯಲ್ಲಿ ಯಾದಗಿರಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಇದನ್ನುತಡೆಗಟ್ಟಲು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಇಸ್ರೇಲ್ ಮಾದರಿ ಯೋಜನೆ ಘೋಷಿಸಿದ್ದರು. ಆದರೆ, ಇದನ್ನು ಈ ಸರ್ಕಾರ ಜಾರಿಗೆ ತಂದಿಲ್ಲ. ಜನರು ಅತಿ ಹೆಚ್ಚು ಗುಳೆ ಹೋಗುವುದರಿಂದ ನೇರಗಾ ಯೋಜನೆಗೆ ಹೆಚ್ಚಾಗಿ ಬಲ ಕೊಡಬಹುದು ಎಂಬ ನಿರೀಕ್ಷೆಯಲ್ಲಿ ಜನರು ಇದ್ದಾರೆ.
ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಬೇಡಿಕೆ
ಮೂಲಸೌಕರ್ಯಗಳಲ್ಲಿ ಒಂದಾಗಿರುವ ಶುದ್ದ ಕುಡಿಯುವ ನೀರಿನ ಘಟಕಗಳಿಲ್ಲದೆ ಈ ಭಾಗದ ಜನರು ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದ್ದು, ಜಿಲ್ಲೆಯ ಕೆಲ ಭಾಗಗಳಲ್ಲಿ ಅರ್ಸೆನಿಕ್ ಸೇರಿದಂತೆ ಕುಡಿಯಲು ಯೋಗ್ಯವಿಲ್ಲದ ನೀರು ಸೇವನೆ ಮಾಡುವುದು ಅನಿವಾರ್ಯವಾಗಿದೆ. ಆದರೂ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಆಡಳಿತ ಮಂಡಳಿಗಳು ವಿಫಲವಾಗಿದೆ.
ಶೈಕ್ಷಣಿಕ ಕ್ಷೇತ್ರಕ್ಕೆ ಒತ್ತು
ಯಾದಗಿರಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿದ್ದು, ಈ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗಳಿಗೆ ತಕ್ಕಂತೆ ಶಿಕ್ಷಕರು ಇಲ್ಲದೇ ಇರುವುದರಿಂದ ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದು, ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಈ ಭಾಗದ ಶಾಸಕರು ಸರ್ಕಾರಕ್ಕೆ ಈಗಾಗಲೇ ಮನವಿಯನ್ನ ಮಾಡಿದ್ದಾರೆ.
ಈ ಬಜೆಟ್ ನಲ್ಲಿ ಈ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅಲ್ಲದೆ ಯಾದಗಿರಿ ಗಡಿ ಜಿಲ್ಲೆಗೆ ಹೊಂದಿಕೊಂಡಿರುವಂತದ್ದು, ಅಲ್ಲಿನ ಹಳ್ಳಿಗಳು ಸಾಕಷ್ಟು ಅಭಿವೃದ್ದಿಯಾಗಬೇಕು. ಹಾಗೂ ಗಡಿ ನಾಡು ಅಭಿವೃದ್ದಿಯಾಗಬೇಕು ಎಂಬ ಬೇಡಿಕೆಯನ್ನ ಇಟ್ಟಿದ್ದಾರೆ.
ಜವಳಿ ಪಾರ್ಕ್
ಯಾದಗಿರಿ ಜಿಲ್ಲೆಯಲ್ಲಿ ಕೈಗಾರಿಕ ಸಮಸ್ಯೆ ಹಾಗೂ ನಿರುದ್ಯೋಗ ನಿಮೂರ್ಲನೆ ಯಾಗಬೇಕು ಅಂದರೆ ಜವಳಿ ಪಾರ್ಕ್ ನಿರ್ಮಾಣವಾಗಬೇಕು ಎಂಬ ಬೇಡಿಕೆಯನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಜವಳಿ ಪಾರ್ಕ್ ಗೆ ಕಟ್ಟಡವೂ ಇದ್ದು, ನಿರ್ಲಕ್ಷದಿಂದಾಗಿ ಯಾವುದೇ ಯೋಜನೆ ಹಾಗೂ ಕಾರ್ಯಕ್ರಮಗಳು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ನಿರುದ್ಯೋಗ ಸಮಸ್ಯೆಯನ್ನ ನಿರ್ಮೂಲನೆ ಮಾಡಬೇಕು ಅಂದರೆ ಜವಳಿ ಪಾರ್ಕ್ ಬೇಡಿಕೆಯನ್ನ ಸರ್ಕಾರ ಈಡೇರಿಸಬೇಕು.
ಹೈಟೆಕ್ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆ
ಯಾದಗರಿ ಜಿಲ್ಲಾಸ್ಪತ್ರೆ ಹೈಟೆಕ್ ಆಗಿದೆ. ಆದರೆ ಇಲ್ಲಿ ನರ್ಸ್ ಗಳು ಹಾಗೂ ವೈದ್ಯರಿಲ್ಲ. ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ವೈದ್ಯರ ಕೊರತೆ ಹೆಚ್ಚಾಗಿದ್ದು, ವೈದ್ಯರ ಕೊರತೆಯನ್ನ ಹೊಗಲಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಾ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಇನ್ನೂ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿದ್ದು ಅಕಾಡೆಮಿಕ್ ಇಯರ್ ಸ್ಥಾಪನೆಯಾಗಿಲ್ಲ.
ಭೀಮಾ ನದಿ ದಂಡೆಯ ಮೇಲಿರುವ 125 ಹಳ್ಳಿಗಳು ಸ್ಥಳಾಂತರಕ್ಕೆ ಬೇಡಿಕೆ
ಪ್ರತಿ ಬಾರಿಯೂ ಅತಿ ಹೆಚ್ಚು ಮಳೆಯಿಂದಾಗಿ ಪ್ರವಾಹವಾದ ಸಂದರ್ಭದಲ್ಲಿ ಈ ಭಾಗದ ಜನರಿಗೆ ಸಮಸ್ಯೆಗಳು ತಪ್ಪಿದ್ದಲ್ಲ. ಹೀಗಾಗಿ ಭೀಮಾ ನದಿ ದಂಡೆಯ ಮೇಲಿರುವ 125 ಹಳ್ಳಿಗಳು ಸ್ಥಳಾಂತರ ಆಗಬೇಕು ಅಂತ ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಭರವಸೆಯನ್ನ ನೀಡಿದ್ದರು.
ಆದರೆ ಇದುವರೆಗೂ ಸ್ಥಳಾಂತರ ಮಾಡುವ ಕುರಿತು ಯಾವುದೇ ಚಿಂತನೆ ನಡೆದಿಲ್ಲ. ಹೀಗಾಗಿ ಈ ಕುರಿತು ರಾಜ್ಯ ಬಜೆಟ್ ನಲ್ಲಿ ಹಳ್ಳಿಗಳ ಸ್ಥಳಾಂತರದ ನಿರೀಕ್ಷೆಯನ್ನ ಯಾದಗಿರಿ ಜನತೆ ಎದುರು ನೋಡುತ್ತಿದ್ದಾರೆ.
ಸರಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ
ಶೈಕ್ಷಣಿಕವಾಗಿ ಅತಿ ಹಿಂದುಳಿದ ಜಿಲ್ಲೆಯಾಗಿರುವ ಯಾದಗಿರಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಈಗಾಗಲೇ ಸಾಕಷ್ಟು ಬಾರಿ ಬೇಡಿಕೆಯನ್ನ ಇಟ್ಟಿದ್ದು, ಈ ಬಾರಿಯ ಬಜೆಟ್ ನಲ್ಲಿ ಸರಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಯ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ ಇದ್ದಾರೆ.
ಸಮಗ್ರ ಅಭಿವೃದ್ಧಿ ಗೆ ವಿಶೇಷ ಅನುದಾನ
ಕೃಷ್ಣಾ ಮತ್ತು ಭೀಮಾ ನಡಿ ನೆರೆ ಬಂದಾಗ ಹೆಚ್ಚಾಗಿ ತುಂಬಿ ತುಳುಕುತ್ತದೆ. ಯಡಿಯೂರಪ್ಪ ಕಾಲದಲ್ಲಿ ತಿಂಥಣಿ ಬ್ರಿಡ್ಜ್ ಹತ್ತಿರ ಡ್ಯಾಮ್ ಕೊಟ್ಟಲು ಅನುಮತಿ ನೀಡಲಾಗಿತ್ತು.ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಅದಕ್ಕೆ ಯಾವುದೇ ರೀತಿಯ ಅನುದಾನ ಬಂದಿಲ್ಲ. ಹೀಗಾಗಿ ಈ ಬಾರಿಯ ಬಜೆಟ್ ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿರುವಂತದ್ದು. ಇನ್ನೂ ಜಿಲ್ಲೆಯಲ್ಲಿರುವ ಸಾಕಷ್ಟು ಸಮಸ್ಯೆಗಳ ಅಭಿವೃದ್ದಿಗಾಗಿ ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ವಿಶೇಷ ಅನುದಾನದ ನಿರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ.












Click it and Unblock the Notifications