ಯಾದಗಿರಿಯ ಗಡಿ ಭಾಗಗಳಲ್ಲಿ ಕನ್ನಡದ ಸ್ಥಿತಿಗತಿ ಅಯೋಮಯ
ಯಾದಗಿರಿ, ನವೆಂಬರ್ 1: ಅವು ಜಿಲ್ಲೆಯ ಗಡಿ ಗ್ರಾಮಗಳು. ಅಲ್ಲಿ ಆಡಳಿತ ಭಾಷೆ ಕನ್ನಡವಾದರೂ ಮಾತೃ ಭಾಷೆ ಮಾತ್ರ ತೆಲುಗು ಎನ್ನುವಂತಾಗಿದೆ. ಕನ್ನಡ ಭಾಷೆ ಜೊತೆಗೆ ಸಾಹಿತ್ಯವೂ ಇಲ್ಲಿ ಅಳಿವಿನಂಚಿನಲ್ಲಿದೆ. ಇದು ಗಡಿ ಭಾಗದಲ್ಲಿ ಕನ್ನಡದ ಸ್ಥಿತಿಗೆ ಹಿಡಿದ ಕನ್ನಡಿ.
ಕೌದಿ ಕಲೆಯ ಶಾಣಮ್ಮಗೆ ಒಲಿದು ಬಂತು ರಾಜ್ಯೋತ್ಸವ ಪ್ರಶಸ್ತಿ
ಕರ್ನಾಟಕ ಏಕೀಕರಣಕ್ಕೆ 62ರ ಸಂಭ್ರಮ. ಆದರೆ ಗಡಿ ಭಾಗದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಸ್ಥಿತಿ ಮಾತ್ರ ಶೋಚನೀಯವಾಗಿದೆ. ಗಡಿ ಜಿಲ್ಲೆ ಯಾದಗಿರಿಯಿಂದ ಕೇವಲ 20 ಕಿಲೋ ಮೀಟರ್ ಅಂತರದಲ್ಲಿ ತೆಲುಗು ಭಾಷೆ ಪ್ರಚಲಿತದಲ್ಲಿದೆ.
30 ಗ್ರಾಮಗಳಲ್ಲಿ ತೆಲುಗಿನದ್ದೇ ಪಾರುಪತ್ಯ
ಗುಂಜನೂರು, ಪರಮೇಶಪಲ್ಲಿ, ಮುಸ್ಲೆಪಲ್ಲಿ, ಮಿನಾಸಪೂರ, ಕುಂಟಿಮರಿ, ನಸಲವಾಯಿ, ಮಾಧ್ವಾರ, ಅನಪುರ, ಕಣೆಕಲ್, ಚಿಲ್ಲಾಪುರ, ಗೋರೆನೂರು, ಚೆಲ್ಹೇರಿ, ಜೈಗ್ರಾಮ ಸೇರಿದಂತೆ ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬಹುತೇಕರು ತೆಲುಗು ಮಾತನಾಡುತ್ತಾರೆ. ಇಲ್ಲಿ ಆಡಳಿತ ಭಾಷೆ ಕನ್ನಡವಾದರೂ ಮಾತೃ ಭಾಷೆ ತೆಲುಗು ಎನ್ನುವಂತಾಗಿದೆ.
ಭಾಷೆ ನಾಶಕ್ಕೆ ಕೊಡುಗೆ ನೀಡಿದ ವ್ಯವಹಾರ
ಯಾದಗಿರಿ ಜಿಲ್ಲೆಯ ಗಡಿ ಭಾಗದಲ್ಲಿ ಕನ್ನಡಕ್ಕಿಂತ ತೆಲುಗು ಭಾಷೆ ಪ್ರಮುಖವಾಗಲು ಇಲ್ಲಿನ ಸಾಮಾಜಿಕ ಸಮಸ್ಯೆಗಳು ಮುಖ್ಯವಾಗುತ್ತವೆ. ನೆರೆ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯ ಜನರೊಂದಿಗೆ ಸ್ಥಳೀಯರ ಜನರು ವೈವಾಹಿಕ ಸಂಬಂಧಗಳನ್ನು ಹೊಂದಿದ್ದಾರೆ.
ಜತೆಗೆ ಉದ್ಯೋಗ, ವ್ಯವಹಾರಿಕ ಕಾರಣಕ್ಕಾಗಿ ನಾರಾಯಣ ಪೇಟ್ ಸೇರಿದಂತೆ ವಿವಿಧೆಡೆ ನೆಲೆಸಿದ್ದಾರೆ. ಅಲ್ಲದೇ ಗಡಿ ಭಾಗದಲ್ಲಿ ಹಳ್ಳ ಹಿಡಿದಿರುವ ಶಿಕ್ಷಣ ವ್ಯವಸ್ಥೆ, ಮರಿಚಿಕೆಯಾದ ಅಭಿವೃದ್ಧಿ, ಅನಾನುಕೂಲವೂ ಇದಕ್ಕೆ ಕಾರಣವಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಇವತ್ತು ಗಡಿಯಲ್ಲಿ ತೆಲುಗು ಪ್ರಭಾವವಾಗುತ್ತಿದ್ದು ಕನ್ನಡ ಭಾಷೆ ಮತ್ತು ಸಾಹಿತ್ಯ ನಶಿಸುತ್ತಿದೆ.
ಕನ್ನಡವನ್ನು ತೆಲುಗಿಗೆ ಅನುವಾದಿಸುವ ಪರಿಸ್ಥಿತಿ
ತೆಲುಗು ಭಾಷೆಯ ಪ್ರಭಾವದಿಂದ ಪ್ರಾಥಮಿಕ ಹಂತದ ಮಕ್ಕಳಿಗೆ ಕನ್ನಡವನ್ನು ತೆಲುಗಿಗೆ ಅನುವಾದಿಸಿ ಭೋದನೆ ಮಾಡಲಾಗುತ್ತಿದೆ. ಈಗಾಗಲೇ ಕನ್ನಡ ಭಾಷೆ ಸಂಪೂರ್ಣವಾಗಿ ಮೂಲೆಗೆ ಸರಿದಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಯಾದಗಿರಿ ಜಿಲ್ಲೆಯ ಗಡಿಯಲ್ಲಿ ಕನ್ನಡ ಸಾಹಿತ್ಯವೂ ಮರೆಯಾಗುವ ಸ್ಥಿತಿ ದಟ್ಟವಾಗಿದೆ.
ಇನ್ನಾದರೂ ಎಚ್ಚೆತ್ತುಕೊಂಡರೆ ಪುಣ್ಯ
ಇನ್ನಾದರೂ ಎಚ್ಚೆತ್ತುಕೊಂಡು ರಾಜ್ಯ ಸರ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಗಡಿನಾಡು ಅಭಿವೃದ್ಧಿ ಪ್ರಾಧಿಕಾರಗಳು ಕನ್ನಡ ಭಾಷೆ, ಸಾಹಿತ್ಯವನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.