'ಜಿಎಸ್ಟಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ'
Recommended Video

ಯಾದಗಿರಿ, ಅಕ್ಟೋಬರ್ 23 : 'ಜಿಎಸ್ಟಿ ವಿಚಾರದಲ್ಲಿ ನ್ಯಾಯಬದ್ಧವಾಗಿ ತೆರಿಗೆ ಹಾಕಲಾಗಿಲ್ಲ ಆದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಜಿಎಸ್ಟಿ ಜಾರಿಯ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ' ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಯಾದಗಿರಿಯಲ್ಲಿ ಭಾನುವಾರ ಮಾತನಾಡಿದ ಅವರು, 'ಜಿಎಸ್ಟಿ ಜಾರಿ ವಿಚಾರದಲ್ಲಿ ಕೆಲವು ವಸ್ತುಗಳ ಮೇಲೆ ತೆರಿಗೆ ಬೇಡ ಎಂದು ಹಲವು ರಾಜ್ಯಗಳು ಹೇಳಿದ್ದವು. ಆದರೆ, ರಾಜ್ಯಗಳ ಮನವಿಗೆ ಸ್ಪಂದಿಸದೇ ಕೇಂದ್ರ ಸರ್ಕಾರ ಜಾರಿಗೆ ತಂದಿತು' ಎಂದು ಆರೋಪಿಸಿದರು.

'ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆರ್ಎಸ್ಎಸ್ನ ಒಂದು ವಿಂಗ್ ನವರು ಮನವಿ ಕೊಡುತ್ತಿದ್ದಾರೆ. ಬಳಿಕ ಕೇಂದ್ರ ಸರ್ಕಾರ ಸಭೆ ಕರೆದು ಬಡವರ ಪರ ಕ್ರಮ ಕೈಗೊಂಡಿದ್ದೇವೆ ಎನ್ನುತ್ತಾರೆ. ಜಿಎಸ್ಟಿ ಬಗ್ಗೆ ಮಾತನಾಡಲು ಹೋದ ತಮಿಳು ಚಿತ್ರಕ್ಕೆ ಸೆನ್ಸಾರ್ ಕತ್ತರಿ ಹಾಕಲಾಗಿದೆ' ಎಂದು ದೂರಿದರು.
'ಜಿಎಸ್ಟಿಇಂದ ಆದ ಮುಖಭಂಗ ತಪ್ಪಿಸಿಕೊಳ್ಳಲು ಗುಜರಾತ್ ಚುನಾವಣೆ ಮುಂದಕ್ಕೆ ತಳ್ಳಲಾಗುತ್ತಿದೆ. ಹಿಮಾಚಲ ಪ್ರದೇಶ ಚುನಾವಣೆ ಮೊದಲು ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಸ್ವಾಯತ್ತತೆ ಎಲ್ಲಿ ಕಳೆದುಕೊಂಡಿದೆ ಗೊತ್ತಿಲ್ಲ. ಚುನಾವಣೆ ದಿನಾಂಕವನ್ನು ಆಯೋಗ ನಿಗದಿ ಮಾಡುವ ಸ್ಥಿತಿಯಲ್ಲಿಲ್ಲ. ಮೋದಿ ಹೇಳಿಕೆ ಮೇಲೆ ದಿನಾಂಕ ನಿಗದಿ ಮಾಡುವ ಸ್ಥಿತಿಗೆ ಬಂದಿರುವ ಸಂಶಯ ಕಾಡುತ್ತಿದೆ' ಎಂದರು.
'ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತ. ಶೀಘ್ರದಲ್ಲಿಯೇ ಅವರು ಅಧ್ಯಕ್ಷರಾಗುತ್ತಾರೆ. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಗಳು ನಡೆಯುತ್ತವೆ. ಈಗಾಗಲೇ ಸಾಕಷ್ಟು ಕೆಲಸಗಳನ್ನು ರಾಹುಲ್ ಮಾಡುತ್ತಿದ್ದಾರೆ' ಎಂದು ಹೇಳಿದರು.












Click it and Unblock the Notifications