ವಾಡಿ - ಗದಗ ರೈಲ್ವೆ ಯೋಜನೆ, ಸ್ವಾಧೀನಗೊಂಡ ಜಮೀನಿಗೆ ಬೆಲೆ ನಿಗದಿ
ಯಾದಗಿರಿ, ಜನವರಿ 28: ವಾಡಿ-ಗದಗ ರೈಲ್ವೆ ಯೋಜನೆಗಾಗಿ ಸುರಪುರ ಹಾಗೂ ಶಹಾಪೂರ ತಾಲ್ಲೂಕಿನ ಹಳಿಗಳಲ್ಲಿ ಸ್ವಾಧೀನಪಡಿಸಿದ ಹೆಚ್ಚುವರಿ ಜಮೀನಿಗೆ ಭೂ ಬೆಲೆಯನ್ನು ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯಾ ಆರ್ ಅವರು ನಿಗದಿಗೊಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ (ಜನವರಿ 28) ನಡೆದ ವಾಡಿ-ಗದಗ ರೈಲ್ವೆ ಯೋಜನೆಗಾಗಿ ಸ್ವಾಧೀನಪಡಿಸಿದ ಜಮೀನಿಗಳಿಗೆ ಭೂಬೆಲೆ ನಿರ್ಧರಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುರಪುರ ತಾಲ್ಲೂಕಿನ ವಿವಿಧ ಹಳ್ಳಿಗಳ 14.28 ಎಕರೆ ಹಾಗೂ ಶಹಾಪೂರ ತಾಲ್ಲೂಕಿನ 8.35 ಎಕರೆ ಹೆಚ್ಚುವರಿ ಜಮೀನಿಗೆ ಬೆಲೆ ನಿಗಧಿಗಿರುವ ಮಾರ್ಗಸೂಚಿಗಳನ್ನು ಬಳಸಿಕೊಂಡು ಬೆಲೆಯನ್ನು ನಿಗಧಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಬೆಲೆಗಳ ಬಗ್ಗೆ ಜಮೀನಿನ ಮಾಲೀಕರು(ರೈತರು) ಕೇಳಿದ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿಗಳು ಸ್ವವಿಸ್ತಾರವಾಗಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಭೂಸ್ವಾಧೀನ ಅಧಿಕಾರಿಯಾದ ಶರಣಪ್ಪ, ರೈಲ್ವೆ ಅಧಿಕಾರಿಗಳು ಸೇರಿದಂತೆ ರೈತರು ಶಹಾಪೂರ ಮತ್ತು ಸುರಪುರ ತಾಲ್ಲೂಕಿನ ಅಧಿಕಾರಿಗಳಿದ್ದರು.
ಗದಗ - ವಾಡಿ ಹೊಸ ಗೆರೆ ನಡುವಿನ 252. 5 ಕಿ.ಮೀ ದೂರದ ಹೊಸ ಮಾರ್ಗ 2013ರಿಂದ ಕಾಮಗಾರಿ ನಡೆದಿದೆ. ಇದರಿಂದಾಗಿ ಉತ್ತರ ಕರ್ನಾಟಕದ 4 ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಅಂದಾಜು 1922 ಕೋಟಿ ವೆಚ್ಚವಾಗಲಿದೆ. ಈ ಮಾರ್ಗ ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳನ್ನು ಸಂಪರ್ಕಿಸಲಿದೆ. ಯಲಬುರ್ಗಾ, ಕುಷ್ಟಗಿ, ಲಿಂಗಸಗೂರು, ಸೊಲ್ಹಾಪುರ ಮೂಲಕ ಈ ಮಾರ್ಗ ಹಾದು ಹೋಗಲಿದೆ.
ಗದಗ-ವಾಡಿ ಯೋಜನೆ ಮೊದಲ ಹಂತದಲ್ಲಿ 57 ಕಿ. ಮೀ. ಮಾರ್ಗದ ಕಾಮಗಾರಿ ಕೊಪ್ಪಳದಿಂದ ಆರಂಭವಾಗುತ್ತದೆ. 2ನೇ ಹಂತದಲ್ಲಿ 47 ಕಿ. ಮೀ. ಮಾರ್ಗ ವಾಡಿಯಿಂದ ಆರಂಭವಾಗಲಿದೆ. ಕೆಲವು ಪ್ರದೇಶದಲ್ಲಿ ರೈತರಿಗೆ ಇನ್ನೂ ಪರಿಹಾರವನ್ನು ವಿತರಣೆಗೆ ಸಿದ್ಧತೆ ನಡೆದಿದೆ.












Click it and Unblock the Notifications