ಮಗಳ ಮದುವೆ ಮಾಡಿದ ಮರುದಿನವೇ ತಂದೆ ಸಾವು; ಕೊರೊನಾ ಕಂಟಕದ ಕಥೆ
ಯಾದಗಿರಿ, ಜುಲೈ 1: ಮಗಳ ಮದುವೆ ಮಾಡಿದ ಮಾರನೇ ದಿನವೇ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಮಕ್ಕಳಿಗೆ, ಹೆಂಡತಿಗೆ ಈತನ ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗಿಯಾಗದಂಥ ದುಃಸ್ಥಿತಿಯನ್ನು ಕೊರೊನಾ ತಂದೊಡ್ಡಿದೆ.
ರಾಯಚೂರಿನಲ್ಲಿ 48 ವರ್ಷದ ವ್ಯಕ್ತಿ ಸೋಮವಾರ ಉಸಿರಾಟ ಸಮಸ್ಯೆದಿಂದ ಬಳಲಿ ಮೃತಪಟ್ಟಿದ್ದರು. ನಂತರ ವೈದ್ಯರು ಮೃತ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಮೃತನ ಊರಾದ ಯಾದಗಿರಿ ತಾಲೂಕಿನ ಹೊನಗೇರಾ ಗ್ರಾಮಕ್ಕೆ ಮೃತದೇಹವನ್ನು ತರಲಾಗಿತ್ತು. ಇವರ ಅಂತ್ಯಕ್ರಿಯೆಯನ್ನು ವಿಶ್ವ ಆರೋಗ್ಯ ಸಂಸ್ಥೆ ನಿಯಮದ ಪ್ರಕಾರ ಮಾಡಲಾಯಿತು.

ಮೃತನ ಸ್ವಂತ ಜಮೀನಿನಲ್ಲಿಯೇ ಅಂತ್ಯಸಂಸ್ಕಾರ
ರಾಯಚೂರಿನ ದೇವದುರ್ಗ ತಾಲೂಕಿನ ಸಿರವಾರ ಗ್ರಾಮದಲ್ಲಿ ವ್ಯಕ್ತಿ ಮೃತಪಟ್ಟಿದ್ದು, ಮೃತ ವ್ಯಕ್ತಿಯ ಊರಾದ ಹೊನಗೇರಾ ಗ್ರಾಮದ ಸ್ವಂತ ಜಮೀನಿನಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಯಿತು. ವಿಶ್ವ ಆರೋಗ್ಯ ಸಂಸ್ಥೆ ನಿಯಮದ ಪ್ರಕಾರ ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆ ಕಾರ್ಯದಲ್ಲಿ ಆತನ ಕುಟುಂಬಸ್ಥರು ಹಾಗೂ ಸಂಬಂಧಿಕರನ್ನು ಸೇರಿಸುವಂತಿಲ್ಲ. ಹೀಗಾಗಿ ಅಂತ್ಯಕ್ರಿಯೆಯನ್ನು ಆರೋಗ್ಯ ಇಲಾಖೆ ನೇತೃತ್ವದಲ್ಲಿಯೇ ನಡೆಸಲಾಯಿತು.

ಮಗಳ ಮದುವೆ ಮರುದಿನವೇ ಸಾವು
ಇದೇ ಜೂನ್ 28ರಂದು ಇವರು ತಮ್ಮ ಹಿರಿಯ ಮಗಳ ಮದುವೆ ಮಾಡಿದ್ದರು. ಆದರೆ ಮಗಳ ಮದುವೆ ಮರುದಿನವೇ ಸೋಂಕಿತ ವ್ಯಕ್ತಿಯು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಮೂವರು ಮಕ್ಕಳು, ಹೆಂಡತಿ ಹಾಗೂ ಕುಟುಂಬದ ಇನ್ನಿತರರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.

ಮಗಳಿಗೆ ಗಂಡನ ಮನೆಯಲ್ಲೇ ಕ್ವಾರಂಟೈನ್
ಮಗಳಿಗೆ ಮದುವೆ ಮರುದಿನವೇ ಅಪ್ಪ ಸತ್ತಿರುವ ದುಃಖ ಒಂದೆಡೆಯಾದರೆ, ಆತನ ಅಂತ್ಯಸಂಸ್ಕಾರದಲ್ಲೂ ಭಾಗಿಯಾಗದ ನೋವು ಮತ್ತೊಂದೆಡೆ. ಸದ್ಯಕ್ಕೆ ಮೃತ ವ್ಯಕ್ತಿಯ ಮಗಳನ್ನು ಆಕೆಯ ಗಂಡನ ಮನೆಯಲ್ಲಿ ಕ್ವಾರಂಟೈನ್ ನಲ್ಲಿಡಲಾಗಿದೆ. ಮೃತ ವ್ಯಕ್ತಿಯ ಹೆಂಡತಿ, ಇಬ್ಬರು ಮಕ್ಕಳನ್ನು ರಾಯಚೂರು ಜಿಲ್ಲಾಡಳಿತ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ.

ಕಣ್ಣೀರು ಹಾಕಿದ ಕುಟುಂಬ
ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದು ತಿಳಿಯುತ್ತಿದ್ದಂತೆ ರಾಯಚೂರಿನಲ್ಲಿಯೇ ಕುಟುಂಬದವರಿಗೆ ಹೋಂ ಕ್ವಾರಂಟೈನ್ ನಲ್ಲಿಡಲಾಗಿದೆ. ಆದರೆ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಯಾದಗಿರಿಯಲ್ಲಿ ನೆರವೇರಿಸಲಾಗಿದೆ. ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗಿಯಾಗದ ನೋವಿಗೆ ಇಡೀ ಕುಟುಂಬ ಕಣ್ಣೀರು ಹಾಕಿದೆ.












Click it and Unblock the Notifications