ಭಾರತದಲ್ಲಿ ರೈತರ ಪ್ರತಿಭಟನೆ: ಧ್ವನಿ ಎತ್ತಿದ ಅಮೆರಿಕದ ಸಂಸದರು
ವಾಷಿಂಗ್ಟನ್, ಡಿಸೆಂಬರ್ 25: ಭಾರತ ಮೂಲದ ಅಮೆರಿಕನ್ ಸಂಸದೆ ಪ್ರಮೀಳಾ ಜಯಪಾಲ್ ಸೇರಿದಂತೆ ಅಮೆರಿಕದ ಏಳು ಮಂದಿ ಪ್ರಭಾವಿ ಸಂಸದರ ಗುಂಪು ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರಿಗೆ ಪತ್ರ ಬರೆದಿದ್ದು, ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತಾದ ಸಂಗತಿಯನ್ನು ಭಾರತದ ವಿದೇಶಾಂಗ ಸಚಿವರ ಮುಂದೆ ಪ್ರಸ್ತಾಪಿಸುವಂತೆ ಆಗ್ರಹಿಸಿದ್ದಾರೆ.
ಇದು ನಿರ್ದಿಷ್ಟವಾಗಿ ಪಂಜಾಬ್ನೊಂದಿಗೆ ಸಂಪರ್ಕ ಹೊಂದಿರುವ ಸಿಖ್ ಅಮೆರಿಕನ್ನರ ಕಳವಳದ ಸಂಗತಿಯಾಗಿದೆ. ಜತೆಗೆ ಇದು ಭಾರತದ ಇತರೆ ರಾಜ್ಯಗಳಿಗೆ ಸೇರಿದ ಭಾರತೀಯ ಅಮೆರಿಕನ್ನರ ಮೇಲೆಯೂ ತೀವ್ರವಾಗಿ ಪ್ರಭಾವ ಬೀರುತ್ತದೆ ಎಂದು ಡಿ. 23ರಂದು ಪೊಂಪಿಯೊ ಅವರಿಗೆ ಬರೆದ ಪತ್ರದಲ್ಲಿ ಸಂಸದರು ಹೇಳಿದ್ದಾರೆ.
ಒಂದು ದೇಶವಾಗಿ ಅಮೆರಿಕವು ರಾಜಕೀಯ ಪ್ರತಿಭಟನೆಗಳ ಬಗ್ಗೆ ಚೆನ್ನಾಗಿ ತಿಳಿವಳಿಕೆ ಹೊಂದಿದೆ. ಪ್ರಸ್ತುತ ಭಾರತದಲ್ಲಿನ ಸಾಮಾಜಿಕ ತಳಮಳದ ಸ್ಥಿತಿಯಲ್ಲಿ ಅದಕ್ಕೆ ನೆರವಾಗಲು ಅಮೆರಿಕವು ಆಹ್ವಾನ ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ಮುಂದೆ ಓದಿ.

ನೇರ ಪರಿಣಾಮ ಬೀರುತ್ತಿದೆ
'ಪಂಜಾಬ್ನಲ್ಲಿ ತಮ್ಮ ಪೂರ್ವಜರ ಭೂಮಿ ಮತ್ತು ಕುಟುಂಬದ ಸದಸ್ಯರು ಇರುವುದರಿಂದ ಅನೇಕ ಭಾರತೀಯ ಅಮೆರಿಕನ್ನರ ಮೇಲೆ ಇದು ನೇರ ಪರಿಣಾಮ ಬೀರುತ್ತಿದೆ. ಭಾರತದಲ್ಲಿನ ತಮ್ಮ ಕುಟುಂಬದವರ ಸುರಕ್ಷತೆ ಬಗ್ಗೆ ಅವರು ಕಳವಳಗೊಂಡಿದ್ದಾರೆ. ಈ ಗಂಭೀರ ಸನ್ನಿವೇಶದಲ್ಲಿ ಅಮೆರಿಕವನ್ನು ಬಲಪಡಿಸಲು ನೀವು ಭಾರತದಲ್ಲಿನ ನಿಮ್ಮ ಸಮಸ್ಥಾನಿಕರನ್ನು ಸಂಪರ್ಕಿಸಬೇಕು. ವಿದೇಶಗಳಲ್ಲಿನ ರಾಜಕೀಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬದ್ಧವಾಗಿರಬೇಕು' ಎಂದು ಸಲಹೆ ನೀಡಿದ್ದಾರೆ.

ಭಾರತದ ಹಕ್ಕು ಗೌರವಿಸುತ್ತೇವೆ
'ರಾಷ್ಟ್ರೀಯ ಸಂಸದರಾಗಿ ನಾವು, ರಾಷ್ಟ್ರೀಯ ನೀತಿಯನ್ನು ನಿರ್ಧರಿಸುವ ಭಾರತ ಸರ್ಕಾರದ ಅಧಿಕಾರವನ್ನು ಗೌರವಿಸುತ್ತೇವೆ. ಹಾಗೆಯೇ ತಮ್ಮ ಆರ್ಥಿಕ ಭದ್ರತೆಯ ಮೇಲೆ ದಾಳಿ ನಡೆಯುತ್ತಿದೆ ಎಂದು ಭಾರತದ ಅನೇಕ ರೈತರು ಕೃಷಿ ಕಾಯ್ದೆಗಳ ವಿರುದ್ಧ ಭಾರತದಲ್ಲಿ ಮತ್ತು ವಿದೇಶದಲ್ಲಿ ಇರುವವರು ನಡೆಸುತ್ತಿರುವ ಶಾಂತಯುತ ಪ್ರತಿಭಟನೆಯ ಹಕ್ಕನ್ನು ಕೂಡ ಗುರುತಿಸುತ್ತೇವೆ' ಎಂದಿದ್ದಾರೆ.

ಸಹಿ ಹಾಕಿದ ಸಂಸದರು
ಪ್ರಮೀಳಾ ಜಯಪಾಲ್, ಡೊನಾಲ್ಡ್ ನೋರ್ಕ್ರಾಸ್, ಬ್ರೆಂಡನ್ ಎಫ್ ಬೋಯ್ಲೆ, ಬ್ರಿಯಾನ್ ಫಿಟ್ಸ್ಪ್ಯಾಟ್ರಿಕ್, ಮೇರಿ ಗೇ ಸ್ಕ್ಯಾನ್ಲನ್, ಡೆಬ್ಬಿ ಡಿಂಗೆಲ್ ಮತ್ತು ಡೇವಿಡ್ ಟ್ರೋನ್ ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಕಳೆದ ಕೆಲವು ವಾರಗಳಿಂದ ಅಮೆರಿಕದ ಅನೇಕ ಸಂಸದರು ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇದು ಆಂತರಿಕ ಸಂಗತಿ
ಭಾರತದಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಮತ್ತು ಇತರೆ ಕೆಲವು ಸಂಸದರು ಹೇಳಿಕೆ ನೀಡಿದ್ದು, ಭಾರತವನ್ನು ಕೆರಳಿಸಿದ್ದು. ಇದು ಭಾರತದ ಆಂತರಿಕ ವಿಷಯ. ರೈತರ ಪ್ರತಿಭಟನೆ ವಿಚಾರದಲ್ಲಿ ಅವರಿಗೆ ತಪ್ಪು ಮಾಹಿತಿ ನೀಡಲಾಗಿದೆ ಮತ್ತು ಅವರ ಹೇಳಿಕೆಗಳು ಅನಪೇಕ್ಷಿತ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದರು.












Click it and Unblock the Notifications