ಭಾರತಕ್ಕೆ ಗಡಿಪಾರು: ಮುಂಬೈ ದಾಳಿ ಆರೋಪಿ ರಾಣಾ ವಿರೋಧ
ವಾಷಿಂಗ್ಟನ್, ಫೆಬ್ರವರಿ 5: ಮುಂಬೈನಲ್ಲಿ 2008ರಲ್ಲಿ ನಡೆದ ಭಯೋತ್ಪಾದನಾ ದಾಳಿಯ ಪ್ರಮುಖ ಆರೋಪಿ, ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾ, ತನ್ನನ್ನು ಭಾರತಕ್ಕೆ ಗಡಿಪಾರು ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾನೆ. ತನ್ನ ಗಡಿಪಾರಿಗೆ ಕೋರಿರುವ ಅಪರಾಧ ಪ್ರಕರಣದಲ್ಲಿ ಈ ಹಿಂದೆಯೇ ತನ್ನನ್ನು ಖುಲಾಸೆಗೊಳಿಸಲಾಗಿದೆ ಎಂದು ಆತ ವಾದಿಸಿದ್ದಾನೆ.
2008ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಆರು ಮಂದಿ ಅಮೆರಿಕನ್ನರು ಸೇರಿದಂತೆ 166 ಮಂದಿ ಬಲಿಯಾಗಿದ್ದರು. ತಹವ್ವೂರ್ ರಾಣಾ ಇದರ ಪ್ರಮುಖ ಸಂಚುಕೋರನಾಗಿರುವ ಡೇವಿಡ್ ಕೋಲ್ಮನ್ ಹೆಡ್ಲಿಯ ಸ್ನೇಹಿತ. 59 ವರ್ಷದ ರಾಣಾನನ್ನು ಭಾರತದ ಮನವಿ ಮೇರೆಗೆ ಜೂನ್ 10ರಂದು ಲಾಸ್ ಏಂಜಲಿಸ್ನಲ್ಲಿ ಪುನಃ ಬಂಧಿಸಲಾಗಿತ್ತು.
ಪಾಕಿಸ್ತಾನದ ಲಷ್ಕರ್ ಎ ತಯಬಾ ಸಂಘಟನೆಯ ಉಗ್ರ ಹೆಡ್ಲಿ, ಈ ದಾಳಿಗಾಗಿ ಅಮೆರಿಕದಲ್ಲಿ 35 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಲಾಸ್ ಏಂಜಲಿಸ್ನ ಅಮೆರಿಕ ಜಿಲ್ಲಾ ನ್ಯಾಯಾಲಯದಲ್ಲಿ ರಾಣಾ, ತನ್ನ ಗಡಿಪಾರು ಮನವಿಗೆ ವಿರೋಧ ವ್ಯಕ್ತಪಡಿಸಿದ್ದಾನೆ.

ಭಾರತದೊಂದಿಗಿನ ಅಮೆರಿಕದ ಗಡಿಪಾರು ಒಪ್ಪಂದದ 6ನೇ ವಿಧಿ ಅಡಿಯ ಪ್ರಕಾರ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಲು ಸಾಧ್ಯವಿಲ್ಲ. ಏಕೆಂದರೆ ಗಡಿಪಾರು ಮಾಡುವ ಮನವಿಯಲ್ಲಿನ ಅಪರಾಧ ಪ್ರಕರಣದಲ್ಲಿ ಈ ಹಿಂದೆ ಆತನನ್ನು ಖುಲಾಸೆ ಮಾಡಲಾಗಿತ್ತು. ಒಪ್ಪಂದದ 9ನೇ ವಿಧಿ ಅಡಿಯಲ್ಲಿ ಆರೋಪಿಸಿರುವಂತೆ ರಾಣಾ ಅಪರಾಧ ಎಸಗಿದ್ದಾನೆ ಎಂಬುದನ್ನು ನಂಬಲು ಸರ್ಕಾರ ಸೂಕ್ತ ಕಾರಣಗಳನ್ನು ನೀಡಿಲ್ಲ. ಆದರೆ ಆತನ ಗಡಿಪಾರಿನ ಪರವಾಗಿ ಇರುವ ಅಮೆರಿಕ, ಶೀಘ್ರದಲ್ಲಿಯೇ ಈ ಕುರಿತು ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications