ಏ... ಎಂ.ಬಿ.ಪಾಟೀಲ ನಿನ್ನನ್ನು ಜೈಲಿಗೆ ಕಳಿಸಿಯೇ ತೀರುತ್ತೇನೆ: ಯಡಿಯೂರಪ್ಪ
ವಿಜಯಪುರ, ಡಿಸೆಂಬರ್: 02: ನಗರದಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಮೇಲೆ ಅಕ್ಷರ ಹರಿಹಾಯ್ದರು.
ಎಂ.ಬಿ.ಪಾಟೀಲರನ್ನು ಏಕವಚನದಲ್ಲಿ ಸಂಭೋದಿಸಿ ಮಾತನಾಡಿದ ಯಡಿಯೂರಪ್ಪ ಅವರು 'ನಿನ್ನನ್ನು ಜೈಲಿಗೆ ಕಳಿಸದಿದ್ದರೆ ನನ್ನ ಹೆಸರು ಯಡಿಯೂರಪ್ಪನೇ ಅಲ್ಲ' ಎಂದು ಸವಾಲ್ ಎಸೆದರು.
ಬಿಜೆಪಿಗೆ ಸೇರ್ಪಡೆಯಾಗಲಿರುವವರ ಹೆಸರು ಸದ್ಯದಲ್ಲೇ ಪ್ರಕಟ
ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೆ ನೀರಾವರಿ ಹಗರಣಗಳನ್ನು ಬಯಲಿಗೆಳೆದು ಎಂ.ಬಿ.ಪಾಟೀಲರನ್ನು ಜೈಲಿಗೆ ಕಳಿಸಿಯೇ ತೀರುವುದಾಗಿ ಯಡಿಯೂರಪ್ಪ ಅವರು ವೇದಿಕೆ ಮೇಲೆ ಅಬ್ಬರಿಸಿದರು.
'ಎಂ.ಬಿ.ಪಾಟೀಲ್ ಸೊಕ್ಕಿನಿಂದ ಮೆರೆಯುತ್ತಿದ್ದಾನೆ, ಮುಖ್ಯಮಂತ್ರಿಯನ್ನು ಕಮಿಷನ್ ಏಜೆಂಟ್ ಎಂದರೆ ನೀನು ಮಾನನಷ್ಟ ಕೇಸ್ ಹಾಕ್ತೀಯಾ' ಏ.. ಎಂ ಬಿ ಪಾಟೀಲ ನಿಮ್ಮಂತವರನ್ನು ಬಾಳ ಜನರನ್ನು ನೋಡಿದ್ದೇನೆ ಇಂತಹ ಬೆದರಿಕೆಯನ್ನು ಬಿಟ್ಟುಬಿಡು ಮರಳಿನ ಜೊತೆಗೆ ಮಣ್ಣು ಸೇರಿಸಿ ಕೆಲಸ ಮಾಡಿಸಿರುವ ನಿನ್ನನ್ನು ದೇವರು ಕ್ಷಮಿಸೊದಿಲ್ಲ' ಎಂದು ರೋಷಾವೇಶದಲ್ಲಿ ಮಾತನಾಡಿದರು.
ಭಾಷಣದಲ್ಲಿ ಎಂ.ಬಿ.ಪಾಟೀಲರಿಗೆ ಎಚ್ಚರಿಕೆಯನ್ನೂ ನೀಡಿದ ಯಡಿಯೂರಪ್ಪ "ಎಂ.ಬಿ.ಪಾಟೀಲ ರಾಜಕೀಯ ದೊಂಬರಾಟ ನಿಲ್ಲಿಸಬೇಕು, ಇದು ಕೊನೆಯ ಎಚ್ಚರಿಕೆ, ಈ ಬಾರಿ ಚುನಾವಣೆಯಲ್ಲಿ ಎಂ.ಬಿ.ಪಾಟೀಲ್ ಮನೆಗೆ ಹೋಗುವುದು ನಿಶ್ಚಿತ, ನಮ್ಮ ಬಿಜೆಪಿ ಅಭ್ಯರ್ಥಿ ವಿಜಯಗೌಡ ಜಯಭೇರಿ ಬಾರಿಸುವುದು ನಿಶ್ಚಿತ ' ಎಂದರು. ಆ ಮೂಲಕ ವಿಜಯಗೌಡ ಅವರು ಅಧಿಕೃತ ಅಭ್ಯರ್ಥಿ ಎಂಬುದನ್ನೂ ಘೋಷಣೆ ಮಾಡಿಬಿಟ್ಟರು.
ತಾಕತ್ತಿದ್ದರೆ ಇಲಾಖೆಯ ಭ್ರಷ್ಟಾಚಾರ ದಾಖಲೆ ಬಿಡುಗಡೆ ಮಾಡಲಿ
''ತನ್ನ ಮತ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕ್ರಮ ಇದೆ ಎಂದಿದ್ದಕ್ಕೆ ಎಂ.ಬಿ.ಪಾಟೀಲ್ ಕಾರ್ಯಕರ್ತನ್ನು ಸೆಳೆಯುವುದಕ್ಕೆ ತಾವು ಕಾಂಗ್ರೆಸ್ ಕಾರ್ಯಕ್ರಮ ಇಟ್ಕೊಂಡಿದ್ದಾರೆ, ಎಂ ಬಿ ಪಾಟೀಲ್ ರೇ ನಿಮಗೆ ಸವಾಲ್ ಹಾಕ್ತೆನೆ, ಮೋದಿ ಅವರ ಕಾಲು ಹಿಡಿದಾದ್ರೂ ಈ ಭಾಗದ ಕೃಷಾ ಕೊಳ್ಳದ ಯೋಜನೆ ಪೂರ್ಣಗೊಳಿಸುತ್ತೆವೆ' ಎಂದರು.
ಭಾಷಣದುದ್ದಕ್ಕೂ ಎಂ.ಬಿ.ಪಾಟೀಲರ ಮೇಲೆ ಹರಿಹಾಯ್ದ ಯಡಿಯೂರಪ್ಪ ಸಿದ್ದರಾಮಯ್ಯನವರನ್ನು ಮರೆತು ಪಾಟೀಲರನ್ನೇ ಗುರಿಯಾಗಿಸಿಕೊಂಡಿದ್ದು ಆಶ್ಚರ್ಯಕರ.
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪಾಟೀಲರು, ಲಿಂಗಾಯತರ ಏಕೈಕ ನಾಯಕ ಎನಿಸಿಕೊಂಡಿದ್ದ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿರುವುದೇ ಯಡಿಯೂರಪ್ಪ ಅವರ ಸಿಟ್ಟಿಗೆ ಕಾರಣ ಎನ್ನಲಾಗುತ್ತಿದೆ.
ಪ್ರತ್ಯೇಕ ಧರ್ಮ ಬೇಡಿಕೆಯಿಂದಾಗಿ ಲಿಂಗಾಯತರಲ್ಲಿ ಎರಡು ಬಣ ಉಂಟಾಗಿದ್ದು, ಯುಡಿಯೂರಪ್ಪ ಅವರ ಮತ ಬ್ಯಾಂಕ್ ಒಡಿದಿದೆ ಹೀಗಾಗಿ ಯಡಿಯೂರಪ್ಪ ಅವರು ಪಾಟೀಲರ ಮೇಲೆ ಸಿಟ್ಟಾಗಿದ್ದಾರೆ ಎನ್ನಲಾಗುತ್ತಿದೆ.
ಮಾತಿನ ಮಧ್ಯೆ ಭಾವುಕರಾದ ಯಡಿಯೂರಪ್ಪ "ನಾನು ಸಣ್ಣ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡವನು, ನಿಮ್ಮೆಲ್ಲರನ್ನು ತಾಯಿ ಎಂದು ತಿಳಿದಿದ್ದೇನೆ, ನಿತ್ಯ ಯಡಿಯೂರಪ್ಪನಿಗೆ ಒಳ್ಳೆದಾಗಲಿ ಎಂದು ಎರಡು ಹೂ ಹಾಕಿ ಪೂಜೆ ಸಲ್ಲಿಸಿ ತಾಯಂದಿರೆ' ಎಂದು ಕೈ ಮುಗಿದು ಬೇಡಿಕೊಂಡರು.